ಬುಧವಾರ, ಆಗಸ್ಟ್ 4, 2010

ಕವಲು ಹೊಸಕಿರಣ





ಎಸ್. ಎಲ್ ಭೈರಪ್ಪರನವರ ಹೊಸ ಕಾದಂಬರಿ "ಕವಲು" ಕಳೆದ ಒಂದು ತಿಂಗಳಿನಿಂದ ಸಾಹಿತ್ಯ ಲೋಕದಲ್ಲಿ ವಿವಿಧ ರೀತಿಯಲ್ಲಿ ಚರ್ಚಿತವಾಗುತ್ತಿರುವ ವಸ್ತುವಾಗಿದೆ. ಭೈರಪ್ಪರನವರು ಬಹು ದಿನದ ನಂತರ "ಅವರಣ" ದ ಬಳಿಕ ತಮ್ಮ ಮತ್ತೊಂದು ಕೃತಿಯ ಮೂಲಕ ಕನ್ನಡ ಓದುಗರಿಗೆ ಹೊಸತನದ ಜೊತೆಗೆ ಓದುವ ಖುಷಿಯನ್ನು ಕೊಟ್ಟಿದ್ದಾರೆ.


ಕನ್ನಡದಲ್ಲಿ ಅತ್ಯಂತ ಬೇಡಿಕೆಯ ಕಾದಂಬರಿಗಳನ್ನು ರಚಿಸುವಲ್ಲಿ ಇವರು ಒಬ್ಬರು. ಕನ್ನಡದ ಸಾಮಾನ್ಯ ಓದುಗ ಇವರ ಹೊಸ ಕಾದಂಬರಿಗಾಗಿ ಜಾತಕ ಪಕ್ಷಿಯಂತೆ ಕಾದುಕೊಂಡಿದ್ದು ಬಿಡುಗಡೆಯಾದ ದಿನವೇ ಖರೀದಿಸಿ ಓದಬೇಕು ಎಂಬ ಮನಸ್ಸಿನಲ್ಲಿರುವನು ಎಂದರೇ ಅತಿಶಯೋಕ್ತಿಯಲ್ಲ. ಯಾಕೆಂದರೆ ಜನರ ಮನವನ್ನು ಎಲ್ಲಾ ರೀತಿಯಲ್ಲಿ ಸೆಳೆಯುವ ಜಾಣ್ಮೆಯನ್ನು ಅವರ ಕೃತಿಗಳಲ್ಲಿ ಕಾಣಬಹುದಾಗಿದೆ. ಅದ್ದರಿಂದಲೇ ಅಯಸ್ಕಾಂತದ ರೂಪದಲ್ಲಿ ಅವರ ಎಲ್ಲಾ ಕೃತಿಗಳು ಕನ್ನಡ ಮನೆ ಮನದಲ್ಲಿ ಇಂದಿಗೂ ರಾರಾಜಿಸುತ್ತಿವೆ.


ಭೈರಪ್ಪನವರ ಯಾವುದೇ ಕೃತಿ ಹೊರಬಂದರು ಅದು ಸಾಹಿತ್ಯ ವಲಯದಲ್ಲಿ ಸಂಚಲನವನ್ನುಂಟು ಮಾಡುವಂತಾಗುತ್ತದೆ. ಅತಿ ಹೆಚ್ಚು ವಿಮರ್ಶೆಗೆ ಒಳಪಡುವ ಲೇಖಕ ಮತ್ತು ಅವನ ಕೃತಿಯೆಂದರೇ ಅದು ಭೈರಪ್ಪನವರ ಕಾಂದಬರಿಗಳು. ಇವರ ಕೃತಿ ಹೊರ ಬಂದವೆಂದರೆ ಅದರ ಹಿಂದೆಯೇ ಹತ್ತು ಹಲವು ಲೇಖಕರ ಕೃತಿಗಳು ಇವರ ಕೃತಿಯ ವಿರುದ್ಧವೇ ರಚಿಸಲ್ಪಡುತ್ತವೆ. ಅಂದರೆ ಯೋಚಿಸಿ! ಅವರ ಸಾಹಿತ್ಯ ಹೇಗೆ ಎಲ್ಲಾ ರೀತಿಯಲ್ಲಿ ಕೇವಲ ಸುಮ್ಮನೆ ಓದುವ ವಿಷಯವಾಗುವುದಿಲ್ಲ. ಅದು ಹತ್ತು ಹಲವು ರೀತಿಯಲ್ಲಿ ವಿಮರ್ಶೆ ಮತ್ತು ಚರ್ಚೆಗೆ ಒಳಪಡುತ್ತದೆ. ಮತ್ತು ಈ ರೀತಿಯ ಒಂದು ಚಿಂತನ-ಮಂಥನವನ್ನು ಇದುವರೆಗೂ ಯಾರ ಕೃತಿಗಳು ಒಳಪಟ್ಟಿಲ್ಲ ಎನ್ನುವುದು ಹಲವು ವಾರಗಳಿಂದ ಅವರ "ಕವಲು" ಹೊಸ ಕಾದಂಬರಿಯ ಬಗ್ಗೆ ವಿಶ್ವದ್ಯಾಂತ ಬರುತ್ತಿರುವ ಋಣ ಮತ್ತು ಧನಾತ್ಮಕ ಅಭಿಪ್ರಾಯಗಳೇ ಸಾಕ್ಷಿ.


ಈ ಕವಲು ಕಾದಂಬರಿಯ ದಾಖಲೆಯನ್ನು ಗಮನಿಸಿದರೆ ಎಂಥವರಿಗೂ ಆಶ್ಚರ್ಯವಾಗುವುದು. ಕೃತಿ ಬಿಡುಗಡೆಗೆ ಮುನ್ನವೇ ಎರಡನೇ ಆವೃತ್ತಿ ಅಚ್ಚಾಗಿತ್ತು. ಮತ್ತು ಬಿಡುಗಡೆಯಾದ ದಿನವೇ ಮೊದಲ ಪ್ರಕಾಶನದ ಎಲ್ಲಾ ಪ್ರತಿಗಳು ಮಾರಾಟವಾಗಿವೆ. ಎರಡನೇ ದಿನವೇ ಮೂರನೇ ಮುದ್ರಣವನ್ನು ಕಂಡು, ನಾಲ್ಕನೇ ದಿನವೇ ಐದನೇ ಮುದ್ರಣವಾಗಿ ಒಂದು ವಾರಕ್ಕೇ ಆರನೇ ಮುದ್ರಣವನ್ನು ಕಂಡಿದೆ. ಮತ್ತು ಒಂದೇ ವಾರಕ್ಕೆ ಭಾರತದ ವಿವಿಧ ಭಾಷೆಗಳಿಗೆ ತರ್ಜುಮೆಯಾಗಲು ತಯಾರಗಿದೆ.


ಕನ್ನಡ ನೆಲವಲ್ಲದೇ ಭಾರತದ ಬೇರೆ ಬೇರೆ ರಾಜ್ಯಗಳಲ್ಲೂ ಅತಿ ಹೆಚ್ಚು ಬೇಡಿಕೆಯಿರುವ ಕನ್ನಡ ಕಾದಂಬರಿಗಳೆಂದರೇ ಅದು ಭೈರಪ್ಪನವರ ಕಾಂದಬರಿಗಳು. ಅತಿ ಹೆಚ್ಚು ಜನಪ್ರಿಯ ಕಾದಂಬರಿಕಾರರಲ್ಲಿ ಇವರು ಮೂದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇದು ನಮ್ಮ ಕರ್ನಾಟಕಕ್ಕೆ ಹೆಮ್ಮೆಯೇ ಸರಿ!


ಅವರ ಒಂದೊಂದು ಕಾದಂಬರಿಗಳು ಒಂದೊಂದು ರೀತಿಯಲ್ಲಿ ತಮ್ಮ ಛಾಪನ್ನು ಸ್ಥಾಪಿಸಿದ್ದಾವೆ. ಭಾರತ-ಭಾರತೀಯ ಸಂಸ್ಕೃತಿ,ನಮ್ಮ ಹಿಂದು ಸಂಸ್ಕೃತಿಯನ್ನು ,ಮಾನವ ಸಂಬಂಧಗಳು ಮತ್ತು ಕುಟುಂಬ ವ್ಯವಸ್ಥೆಯನ್ನು ಲೇಖಕರು ತಮ್ಮ ಕೃತಿಗಳ ಮೂಲಕ ಹೇಗೆ ನಿರೂಪಿಸಿದ್ದಾರೆ ಎಂದರೇ ಅದರ ಬಗ್ಗೆ ಎಂಥವರಿಗಾದರೂ ಕಾಳಜಿಯುಂಟಾಗುವಂತೆ ಮಾಡಿದ್ದಾರೆ.



ಅದಕ್ಕೆ ನಮ್ಮ ಜನಗಳು ಅಷ್ಟೊಂದು ಇಷ್ಟಪಟ್ಟು ಅವರ ಕಾದಂಬರಿಗಳನ್ನು ಮುಗಿ ಬಿದ್ದು ಓದುವುದು. ಅವರು ನೇಯುವ ಸಾಮಾಜಿಕತೆ ಮತ್ತು ಕೌಟಂಬಿಕ ನೆಲೆಯಲ್ಲಿ, ಮನುಷ್ಯ ಮನುಷ್ಯರ ನಡುವಿನ ಸಂಬಂಧ, ಸಂಸ್ಕೃತಿ ಮತ್ತು ಅದರ ನೀತಿ ಮೌಲ್ಯಗಳು. ನಮ್ಮ ಸಂಸ್ಕೃತಿಯ ಬಗ್ಗೆ ವ್ಯಕ್ತಿಯ ನೆಲೆಯಲ್ಲಿ ಹೇಗೆ ವೈರುಧ್ಯಗಳು ಉಂಟಾಗುವುವು ಎಂಬುದನ್ನು ಕಾದಂಬರಿಯ ವಿವಿಧ ಪಾತ್ರಗಳ ಪೋಷಣೆಯ ಮೂಲಕ ಮನನ ಮಾಡಿಸುತ್ತಾರೆ. ಅದಕ್ಕೆ ಸಾಕ್ಷಿಯೆಂದರೇ ವಂಶವೃಕ್ಷ, ದಾಟು, ತಂತು, ನಿರಾಕರಣ, ಗೃಹಭಂಗ ಇತ್ಯಾದಿ.


ಅವರ ಎಲ್ಲಾ ಹಳೆಯ ಕಾದಂಬರಿಗಳನ್ನು ಓದಿರುವ ಓದುಗ ಅವರಿಂದ ಇನ್ನೂ ಯಾವ ಯಾವ ಕೃತಿಗಳು ಬರುವುವೋ ಎಂದು ಕಾಯುವನು.


ಆದರೆ ನಾನು ಇತ್ತೀಚೆಗೆ "ಕವಲು" ಕಾದಂಬರಿಯ ಬಗ್ಗೆ ನಮ್ಮ ಬುದ್ಧಿವಂತ ಜನಗಳು ಮಾಡುತ್ತಿರುವ ವಿಮರ್ಶೆಯ ದಾಟಿಯನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಇಷ್ಟವಾಗಬಹುದು ಮತ್ತು ಅದೇ ಎಲ್ಲಾರ ಅಭಿರುಚಿಯಾಗಲಾರದು. ಕೆಲವು ವಿಮರ್ಶಕರು ಹೇಳುತ್ತಾರೆ ಭೈರಪ್ಪ ಸ್ತ್ರೀ ವಿರೋಧಿ,ಪ್ರಗತಿ ವಿರೋಧಿ, ಕಂದಾಚಾರ ಬೋಧಕ, ಸೆಕ್ಸ್ ವಿಜೃಂಭಕ ... ಹೀಗೆ ಹತ್ತು ಹಲವು ರೀತಿಯಲ್ಲಿ ಅವರ ಈ ಹೊಸ ಕಾದಂಬರಿಯ ಬಗ್ಗೆ ತಮ್ಮ ತಮ್ಮ ಬ್ಲಾಗ್, ಪತ್ರಿಕಾ ಲೇಖನಗಳಲ್ಲಿ ಚಿತ್ರಿಸುತ್ತಿರುವುದು ನಿಜವಾಗಿಯೂ ಬೇಸರದ ಸಂಗತಿ.


ಅವರು ಈ ಎಲ್ಲಾ ರೀತಿಯಲ್ಲಿ ತಮ್ಮ ವಿಚಾರಗಳನ್ನು ನಿರೊಪಿಸಲು ಕಾದಂಬರಿಯ ಮಾದ್ಯಮವನ್ನು ಬಳಸುವ ಅವಶ್ಯಕತೆಯಿರುವುದಿಲ್ಲ ಅಲ್ಲವಾ? ಕಾದಂಬರಿಯೇಂದರೆ ಅಲ್ಲಿ ಕೃತಿ ತನ್ನ ಪಾತ್ರಗಳ ಮೂಲಕ ಒಂದು ವಿಚಾರವನ್ನು ಸುತ್ತಲಿನ ಸನ್ನಿವೇಶ ಮತ್ತು ಪ್ರಸ್ತುತ ಭಾವನೆಗಳ ಸ್ಪಂದನೆಯ ಮುಖೇನ ಕೃತಿಕಾರನ ನಿರೀಕ್ಷೆಗೂ ಮೀರಿ ಬೆಳೆಯಬಹುದು ಮತ್ತು ಒಂದು ಸುಂದರ ಕಲಾಕೃತಿಯಾಗಿ ಅರಳಬಹುದು. ಇಲ್ಲಿ ಲೇಖಕನು ತನ್ನ ವಿಚಾರಗಳ ಭಾರವನ್ನು ಹಾಕಲು ಸಾಧ್ಯವಿಲ್ಲ. ಈ ರೀತಿ ಇರಬೇಕಾದರೇ ಇಡೀ ಕಾದಂಬರಿ ಕೇವಲ ಕೆಲವೇ ಕೆಲವು ವಿಚಾರಗಳ ಸುತ್ತ ಸುತ್ತಲು ಹೇಗೆ ಸಾಧ್ಯ? ಮತ್ತು ಅದು ಹೇಗೆ ಒಂದು ಕಾದಂಬರಿಯಾಗಿ ಮತ್ತು ಜನರ ಮೆಚ್ಚುಗೆಗೆ ಪಾತ್ರವಾಗಲು ಸಾಧ್ಯ?


ಕಾದಂಬರಿ ಓದುಗನನ್ನು ಹಿಡಿದಿಡುತ್ತದೆ ಎಂದರೇ ಯಾವುದೇ ಒಂದು ವಿಚಾರದಿಂದ ಅವನನ್ನು ಮಂತ್ರ ಮುಗ್ಧನಾಗಿ ಮಾಡಲು ಸಾಧ್ಯವಿಲ್ಲ. ಪಾತ್ರಗಳು ವಿವಿಧ ಸನ್ನಿವೇಶದಲ್ಲಿ ಹೇಗೆ ತಮ್ಮತನವನ್ನು ತೋರಿಸಿ ಅಲ್ಲಿ ಸಾಮಾಜಿಕ ಅಥವಾ ನೀತಿ ಮೌಲ್ಯಗಳನ್ನು ನಿರೂಪಿಸಿದಾಗ ಮಾತ್ರ ಅವುಗಳು ನಂಬಲರ್ಹ ವಿಚಾರವಾಗುತ್ತವೇ ವಿನಾಃ ಬರೀ ಯಾವುದೇ ಒಂದು ವಿಷಯದಿಂದಲ್ಲಾ.
ಇಷ್ಟಕ್ಕೂ ಕವಲಿನಲ್ಲಿರುವ ವಿಚಾರಗಳೇನೂ ಹೊಸ ಅಥವಾ ಅಪರಿಚಿತವಾದದ್ದಲ್ಲ. ಪಾತ್ರಗಳು ಸಹ ನಾವುಗಳು ನಮ್ಮ ಇಂದಿನ ಈ ಹೈಟೆಕ್ ಯುಗದಲ್ಲಿ ಕಾಣುವಂತ ಪಾತ್ರಗಳೇ. ಅವುಗಳ ಮಟ್ಟಿಗೆ ವೇಗದಲ್ಲಿ ಇಲ್ಲದಿದ್ದರೂ ಅವುಗಳ ಜಾಡನ್ನೇ ಹಿಡಿದಿರುವ ಎಷ್ಟೋ ಭಕ್ತರೂ ಇಂದು ಹೆರಳವಾಗಿ ಇಲ್ಲಿ ಕಾಣಬಹುದು ಅಲ್ಲವಾ?


ಕವಲು ಇಂದಿನ ನಮ್ಮಲ್ಲಿ ಕಾಣುತ್ತಿರುವ ಕತೆಯನ್ನೇ ಹೊಂದಿರುವುದರಿಂದ ನಮಗೆ ಅಷ್ಟೊಂದು ಗಂಭೀರವಾದ ಕತೆಯಾಗಿದೆ ಎಂದು ಅನಿಸುವುದಿಲ್ಲ. ತೀರ ಪ್ರಸ್ತುತ ಮತ್ತು ತೀರ ಮಾಮೊಲಿ ಕತೆಯಾಗಿ ಎಲ್ಲವೂ ನಮಗೆ ತಿಳಿದಿದೆಯೇನೂ ಎನಿಸುತ್ತದೆ. ಆದರೆ ಅಲ್ಲಿ ಲೇಖಕರು ತಾವು ಸೃಷ್ಟಿಸಿರುವ ಪಾತ್ರಗಳ ಮೂಲಕ ಕೊಡುತ್ತಿರುವ ಸಂದೇಶ ಮತ್ತು ಎಚ್ಚರಿಕೆಯ ಮಾತುಗಳು ನಮ್ಮ ಇಂದಿನ ಭಾರತೀಯ ಕೌಟಂಬಿಕ ವ್ಯವಸ್ಥೆಗೆ ಒಂದು ಕಿವಿಮಾತಾಗಿದೆ ಎಂದರೇ ತಪ್ಪಲ್ಲ.


ನಾವುಗಳು ಅತಿ ಮುಂದುವರೆಯುತ್ತ ಸಾಮಾನ್ಯವಾಗಿ ಅತಿ ಚಿಕ್ಕ ಚಿಕ್ಕ ವಿಷಯಗಳನ್ನು ಬಿಟ್ಟು ಕೊಡುತ್ತಾ, ಹೋಗುತ್ತಾ ನಗಣ್ಯಗೊಳಿಸುತ್ತಿರುವುದು ಮುಂದೊಂದು ದಿನ ಈ ನಮ್ಮ ಗಟ್ಟಿ ಕೌಟಂಬಿಕ ಬೇರನ್ನೇ ಅಲ್ಲಾಡಿಸುವ ದಿನಗಳು ಬರುವ ಮುನ್ಸೊಚನೆಯಾಗಿದೆ. ಹಾಗೆಯೇ ಕಾದಂಬರಿಯಲ್ಲಿ ಬರುವ ಇತ್ತೀಚಿನ ನವ ತರಣ/ತರುಣಿ ಜನಾಂಗ ನಮ್ಮ ಇಂದಿನ ಸ್ಥಿತಿಯ ಬಗ್ಗೆ ಅರಿವುಗೊಂಡು ಅದಕ್ಕಾಗಿ ನಮ್ಮ ಹಳ್ಳಿಯ ಕುಟುಂಬ ಮತ್ತು ಸಂಬಂಧಗಳ ವ್ಯವಸ್ಥೆಯನ್ನು ನೋಡಿ ಅದರ ನವೀಕರಣಕ್ಕೆ ಮತ್ತು ರಕ್ಷಣೆಗೆ ಮುಂದಾಗುತ್ತಿರುವುದು ಆಶದಾಯಕವಾದ ವಿಷಯ.


ಈ ರೀತಿಯ ಒಂದು ಅರಿವನ್ನುಂಟು ಮಾಡುವಲ್ಲಿ ಕವಲು ಹೊಸ ಸಾಧನವಾಗಿದೆ ಎಂದು ಮಾತ್ರ ಹೇಳಬಹುದು. ಸಾಕಷ್ಟು ವಿಷಯಗಳನ್ನು ಒಂದೇ ಕಡೆ ನಿರೀಕ್ಷಿಸುವುದು ತಪ್ಪು ಸಹ. ಆದರೆ ಅದರ ಎಳೆ ಮತ್ತು ನಮ್ಮ ಸಂಸ್ಕೃತಿ ಮತ್ತು ಮಾನವನ ಸಂಬಂಧಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಇರಬೇಕಾದ ಕಾಳಜಿ ಈ ಮೂಲಕ ಜಾಗೃತವಾಗಲಿ ಎಂಬುದು ಎಲ್ಲಾ ಓದುಗರ ಮತ್ತು ಭೈರಪ್ಪನವರ ಆಸೆಯಾಗಿದೆ ಅಲ್ಲವಾ!


ಅದು ಬಿಟ್ಟು ಕಾದಂಬರಿಗೆ ಸುಖ ಸುಮ್ಮನೇ ಒಂದು ಗಡಿ ರೇಖೆಯನ್ನು ಅಡ್ಡಪಟ್ಟಿಯನ್ನು ಕಟ್ಟುವುದು ಬೇಡ. ಇಲ್ಲವಾದರೇ ನಮ್ಮ ಜನಗಳು ಯಾಕೇ ಇನ್ನೂ ಭೈರಪ್ಪನವರಿಂದ ಉತ್ತಮ ಉತ್ತಮ ಕಾದಂಬರಿಗಳು ಬರಲಿ ಎಂದು ಕಾಯುತ್ತಿರುತ್ತಾರೆ. ಸಾಮಾನ್ಯ ಓದುಗನಿಗೆ ಯಾವ ಪಂಥ, ಸಾಹಿತ್ಯ ವಿಂಗಡಣೆಗಳು ಬೇಕಾಗಿಲ್ಲ. ಅವನಿಗೆ ಆ ಕ್ಷಣಕ್ಕೆ ಅದು ಇಷ್ಟವಾಗಿ ತನ್ನ ಮನಸ್ಸಿಗೆ ತಾಕಿ ತನ್ನ ಚಿಂತನೆಯ ದಾಟಿಗೆ ಮೀಟು ತಂತಿಯಾದರೆ ಸಾಕು. ಇಂಥ ಅದೇಷ್ಟೋ ಕೃತಿಗಳಿಗೆ ತನ್ನ ಮನದ ಮೂಲೆಯಲ್ಲಿ ಯಾವಾಗಲೂ ಒಂದು ಜಾಗವನ್ನು ಗಟ್ಟಿಯಾಗಿ ಇಟ್ಟಿರುತ್ತಾನೆ ಅಷ್ಟೇ.

ಮಂಗಳವಾರ, ಜುಲೈ 27, 2010

ನಾವೇಲ್ಲಿ ಇದ್ದೀವಿ!!

ಮೂನ್ನೆ ನಾನು ಕಳೆದ ವಾರದ ಪ್ರಜಾವಾಣಿ ಪತ್ರಿಕೆಗಳನ್ನು ತಿರುವಿ ಹಾಕುವ ಸಮಯದಲ್ಲಿ ಸವಣೂರಿನಲ್ಲಿ ನಡೆದ ಮಲವನ್ನು ಮೈ ಮೇಲೆ ಸುರಿದು ಕೊಂಡ ಘಟನೆಯ ಚಿತ್ರ-ವರದಿಯನ್ನು ಓದಿದಾಗ ನಿಜವಾಗಿಯೂ ನಾವು ಯಾವ ಜಗತ್ತಿನಲ್ಲಿ ಇದ್ದೀವಿ ಎಂದು ನನ್ನ ಮನಸ್ಸು ಕಸಿವಿಸಿಯಾಯಿತು. ಯಾರೇ ಆಗಲಿ ಮನುಷ್ಯತ್ವವಿರುವವರು ಬೇಸರ ಪಡುವ ಮತ್ತು ಮರುಗುವ ಘಟನೆ ಇದಾಗಿದೆ.

ನಾವುಗಳು ನಮ್ಮ ನಮ್ಮಲ್ಲಿಯೇ ನಾವು ಹಾಗೇ ಮುಂದುವರಿದ್ದೀವಿ. ಹೀಗೆ ಪ್ರಪಂಚದಲ್ಲಿಯೇ ನಮ್ಮ ಭಾರತ ಮತ್ತು ಕರ್ನಾಟಕ ಮಿಂಚಿನಂತೆ ಸೆಳೆಯುವ ಚಮತ್ಕಾರಗಳನ್ನು ಮಾಡಿಬಿಟ್ಟಿವಿ ಅಂದು ಕೊಳ್ಳುವ ಸಮದಲ್ಲಿಯೇ ಈ ರೀತಿಯ ಅನಾಗರೀಕತೆಯ ಮುಂದುವರಿಕೆಯೇನೋ ಎಂಬಂತೆ ಎಲ್ಲರೂ ತಲೆ ತಗ್ಗಿಸುವಂತೆ ಇರುವ ಸಮಾಜಿಕ ಅನಿಷ್ಟ ಪದ್ಧತಿಗಳು ಜೊತೆ ಜೊತೆಯಲ್ಲಿಯೇ ಸಾಗುತ್ತಿರುವುದು ವಿಪರ್ಯಾಸ.

ಹಾಯ್ ಬೆಂಗಳೂರಿನಲ್ಲಿ ಬಂದಿರುವ ರವಿಬೆಳೆಗೆರೆಯವರ ಲೇಖನವನ್ನು ಸಮಾಜದ ಎಲ್ಲಾ ಬುದ್ಧಿವಂತರು, ರಾಜಕರಣಿಗಳು, ಅಧಿಕಾರಿಗಳು, ಚಿಂತನ ಜೀವಿಗಳು ಓದುವುದು ಒಳಿತು."ರಾಮ ಭಕ್ತ ರಾಜ್ಯ ಕಂಡ ಮಲ ಸ್ನಾನ" ಅಗ್ರ ಲೇಖನ ಮತ್ತು "ರಾಜಕೀಯ ನಾಯಕರ ತಟ್ಟೆಗಳಲ್ಲಿ ಕಾಣಿಸಿದ್ದು ಸವಣೂರಿನ ಭಂಗಿಗಳ ಮಲ" ಸಂಪಾದಕೀಯದಲ್ಲಿ ಅವರು ತೋಡಿಕೊಂಡಿರುವ ನೋವು ಮತ್ತು ಕಳಕಳಿ ಎಲ್ಲಾ ನಾಗರಿಕರುಗಳಿಗೂ ಉಂಟಾಗಬೇಕು.

ನಾವು ನಮ್ಮ ಜೀವನದ ಉನ್ನತ ಮಟ್ಟವನ್ನು ಕೇವಲ ಎಲ್ಲಾ ಸೌಕರ್ಯಗಳನ್ನು ಹೊಂದಿರುವ ಕೆಲವೇ ಕೆಲವು ಪಟ್ಟಣಗಳನ್ನು ನೋಡಿ ನಿರ್ಧರಿಸಬಾರದು. ಇನ್ನೂ ಅದೇಷ್ಟೋ ಕುಗ್ಗ್ರಾಮಗಳು ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ ಅದು ನಮ್ಮ ಸರ್ಕಾರದ ಕಣ್ಣಿಗೆ ಬಿಳದ ರೀತಿಯಲ್ಲಿ ಅದೇ ಕಷ್ಟ ನಷ್ಟಗಳಲ್ಲಿ ಹಳ್ಳಿಯ ಜೀವನದಲ್ಲಿ ನರಳುತ್ತಿರುವುವೇನೋ ಬಲ್ಲವರಿಲ್ಲ. ಈ ರೀತಿಯ ಘಟನೆಗಳ ಮೂಲಕ ಅವುಗಳು ನಮ್ಮ ಕಣ್ಣಿಗೆ ಬಿಳುತ್ತವೆ.

ನಮ್ಮ ಸಮಾಜದಲ್ಲಿ ನಾವುಗಳು ಎಲ್ಲರೂ ಸುಖವಾಗಿರಬೇಕು ಎಂದು ಸರ್ಕಾರ ವಿವಿಧ ಯೋಜನೆಗಳ ಮಹಾಪೂರವನ್ನೇ ಹರಿಸಿದರೂ ಅವುಗಳ ಪ್ರಯೋಜನ ಯೋಗ್ಯರಿಗೆ ಸಮಯಕ್ಕೆ ಸರಿಯಾಗಿ ಸಿಗದೇ ಇರುವುದು, ಈ ರೀತಿಯ ಪದ್ಧತಿಗಳು ಇನ್ನೂ ಜೀವಂತವಾಗಿ ಜಾರಿಯಾಗಿ ಇರಲು ಸಾಧ್ಯ.

ನಾವುಗಳು ನಮ್ಮ ಸಾಕ್ಷರತೆಯನ್ನು ನೂರಕ್ಕೆ ನೂರು ಹಿಡೇರಿಸಿದ್ದೇವೆ ಎಂದು ಬಡಾಯಿ ಕೊಚ್ಚಿಕೊಂಡರೇ ಹಳ್ಳಿಗಳಲ್ಲಿ ಇನ್ನೂ ಅದೇಷ್ಟೋ ಮಕ್ಕಳು ವಿವಿಧ ಕಾರಣದಿಂದ ಶಾಲೆಯ ಮುಖವನ್ನೇ ಕಾಣದ ಸ್ಥಿತಿಯಲ್ಲಿ ಇರುವುದು ಬಹುಮುಖ್ಯ ಸಮಸ್ಯೆ.

ಹೌದು, ಈ ರೀತಿಯ ಅನಿಷ್ಟ ಪದ್ಧತಿಗಳ ಜೀವಂತಿಕೆಗೆ ನಮ್ಮ ಜನಗಳಲ್ಲಿ ಸಮಯಕ್ಕೆ ಸರಿಯಾಗಿ ಅರಿವು ಮೂಡದಿರುವುದು ಒಂದು ಕಾರಣ. ಅವರಲ್ಲಿ ಅರಿವು ಬರಬೇಕು ಅಂದರೆ ಅವರಲ್ಲಿ ಶಿಕ್ಷಣದ ಕ್ರಾಂತಿಯನ್ನು ಮೂಡಿಸಬೇಕಾದದ್ದು, ನಮ್ಮ ಸರ್ಕಾರ ಮತ್ತು ನಮ್ಮ ಬುದ್ಧಿವಂತ ಜನಗಳ ಕರ್ತವ್ಯ. ಇಲ್ಲವಾದರೇ ಅವರುಗಳಿಗೆ ತಾವು ಜೀವಿಸುತ್ತಿರುವುದೇ ಅಮೂಲ್ಯ ಬದುಕು ಎಂಬ ರೀತಿಯಲ್ಲಿ ಯಾವುದೇ ರೀತಿಯ ದಬ್ಬಾಳಿಕೆಯನ್ನು ಮತ್ತು ಅನಿಷ್ಟಕಾರಿ ಕೆಲಸಗಳನ್ನು ವಂಶಪಾರಂಪರ್ಯವಾಗಿ ಸಾಗಿಸಿಕೊಂಡು ಬದುಕುತ್ತಾರೆ. ಮತ್ತು ಅವರ ಮುಂದಿನ ಸಂತತಿಯು ಸಹ ಇಂದಿನ ಈ ಮುಂದುವರೆದ ಯುಗದಲ್ಲಿ ಬದುಕಲು ಅರ್ಹರಲ್ಲವೇನೋ ಎಂಬಂತೆ ಸಾವಿರ ವರ್ಷದ ಹಿಂದಿನ ಬದಕನ್ನು ಸಹನೀಯವಾಗಿ ಜೀವಿಸುವಂತಾಗುತ್ತದೆ.

ಮನುಷ್ಯನ ತಿಳುವಳಿಕೆ ಮತ್ತು ತನ್ನ ಸುತ್ತಲಿನ ಸಮಾಜದಲ್ಲಿನ ಈ ರೀತಿಯ ನೋವು ನಲಿವುಗಳನ್ನು ತಿಳುವಳಿಕೆ ಇರುವ ಮಂದಿಗಳು ಸರಿಪಡಿಸಲು ಕೈಲಾದ ಸಹಾಯ ಮಾಡಬೇಕಾದದ್ದು ಕರ್ತವ್ಯ. ಅಲ್ಲಿನ ಊರಲ್ಲಿ ಅಲ್ಲಿನ ಜನಗಳು ತಮ್ಮ ಜೊತೆಯಲ್ಲಿರುವ ತಮ್ಮ ಜನಗಳಿಂದಲೇ ತಮ್ಮ ಮಲವನ್ನು ಹೊರುವಂತೆ ಮಾಡಿಕೊಂಡಿರುವ ಪದ್ಧತಿಯನ್ನು ಕಂಡರೇ ನಿಜವಾಗಿಯೂ ನಾವುಗಳು ಯಾವ ರೀತಿಯಲ್ಲಿ ಬದುಕುತ್ತಿದ್ದೇವೆ ಎಂದಾಂತಾಗುತ್ತದೆ ಅಲ್ಲವಾ?

ನಮ್ಮಲ್ಲಿರುವ ಚಿಕ್ಕ ಚಿಕ್ಕ ಸಮಸ್ಯೆಗಳನ್ನೇ ದೊಡ್ಡದು ಮಾಡಿಕೊಂಡು ಬಡಿದಾಡುತ್ತಿರುವ ನಮ್ಮ ಜನಗಳು ಇಂಥ ರೀತಿಯ ನೋವುಗಳಿಗೆ ಸ್ಪಂದಿಸುವ ಮನಸ್ಸನ್ನು ಮಾಡಬೇಕು. ಮನುಷ್ಯರನ್ನು ಮನುಷ್ಯರಾಗಿ ನೋಡುವಂತಾಗಬೇಕು. ಆಗ ಮಾತ್ರ ಸುಖಿ ಸಮಾಜದ ಕನಸು ನನಸಾಗಲು ಸಾಧ್ಯ.

ಬುಧವಾರ, ಜುಲೈ 21, 2010

ಆಷಾಢದ ಮನ


ಒಂದು ತಿಂಗಳೂ ಆಷಾಢ ಹೊಸದಾಗಿ ಮದುವೆಯಾದ ಜೋಡಿಗಳಿಗೆ ಬೇರೆಯಾಗಿರಬೇಕಾದ ವಿರಹ. ಸಡಗರದಿಂದ ಮದುವೆಯಾಗಿ ಹೊಸ ಕ್ಷಣಗಳಿಗಾಗಿ ಕಾತುರತೆಯಿಂದ ಕಾದದ್ದು ಈ ಮಾಸಕ್ಕಾಗಿಯೇ ಎಂಬಂತೆ ತನ್ನ ಮನದನ್ನೆಯನ್ನು ತವರು ಮನೆಗೆ ಬಿಟ್ಟು ಬಂದು, ಪುನಃ ಹಳೆಯ ಬ್ಯಾಚಲರ್ ಲೈಪ್ ಎಂಬ ಜೀವನವನ್ನು ಕಳೆಯಬೇಕಾದ ಬೇಜಾರು. ಇದಕ್ಕೆ ಕೂಳ್ಳಿ ಇಡುವಂತೆ ಮೈ ಮನವನ್ನು ತಣ್ಣಾಗಿಸುವ ಚಳಿ. ಮನೆಯಲ್ಲಿ ಯಾವುದೇ ಸಡಗರವಿಲ್ಲದೆ ಮುಂಜಾನೆ ಎಷ್ಟು ಸಮಯದವರೆಗಾದರೂ ಮಲಗೋಣ ಎಂಬ ಸೋಮಾರಿತನ. ಯಾಕಾದರೂ ಈ ತಿಂಗಳು ಬರುತ್ತದೋ ಎಂಬ ಹುಸಿ ಮುನಿಸು. ಹಿರಿಯರ ಕಟ್ಟಾಪ್ಪಣೆ "ಏನಿದ್ದರೂ ಒಂದು ತಿಂಗಳು ಆದ ಮೇಲೆ" ಎಂಬ ಮಾತು. ಅವರುಗಳಿಗೆ ಖುಷಿ ಇಲ್ಲಿ ಇವನ/ಇವಳ ಮನದಲ್ಲಿ ಸುಮ್ಮನೆಯ ಸಣ್ಣ ನೋವು.






ಆಫೀಸ್ ಗೆ ಹೋದರೆ ಎಲ್ಲರ ಆಶ್ಚರ್ಯಕರ ನೋಟ. "ಇಷ್ಟು ಬೇಗ ಹೇಗೆ ನಿನ್ನ ಮದುವೆಯ ಎಲ್ಲಾ ಸಡಗರ ಮುಗಿದು ಹೋಯ್ತಾ?" ಎಂಬ ಮಾತು. "ಹನಿಮೊನ್ ಇಲ್ವ? ಇಷ್ಟು ಬೇಗ ವಾಪಸ್ಸ ಬಂದು ಬಿಟ್ಯಾ?" "ಇಷ್ಟು ಬೇಗ ಹೆಂಡ್ತಿ ಬೋರ್ ಆದಳಾ" ಎಂಬ ಪ್ರಶ್ನೇ. ಅವರಿಗೇನೂ ಗೊತ್ತು ಇವಳ/ಇವನ ತಳಮಳ, ಮನದಲ್ಲಿಯೇ ಕನಸು. ಹೀಗೆ ಹೊಸದಾಗಿ ಮದುವೆಯಾದ ಯುವತಿ/ಯುವಕರು ಈ ಒಂದು ತಿಂಗಳು ಅನುಭವಿಸುವ ಕಷ್ಟ ನಷ್ಟಗಳು ಯಾರಿಗೂ ಬೇಡಾ ಅನಿಸುವುದಿಲ್ಲವಾ? ನನಗೆ ಗೊತ್ತಿಲ್ಲಾ. ನಿಮಗೇ?


ಅದರೂ ಈ ಒಂದು ತಿಂಗಳು ಪ್ರಕೃತಿ ಒಂದು ಕ್ಷಣ ಬಿರು ಬೇಸಿಗೆಯ ಬೆವರು ಹನಿಗಳಿಗೆ ತಂಪು ತರುವಂತೆ ಎಲ್ಲೇ ಮೀರಿ ಕಾವುಗೊಂಡ ಮನಸುಗಳಿಗೆ ಪನ್ನೀರನ್ನು ಚೆಲ್ಲುವಂತೆ ಮಾಡಿ ಹಾಯ್ ಎನಿಸುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಈ ಒಂದು ತಿಂಗಳು ಹೊಸ ಅನುಭವವನ್ನು ಕೊಡುತ್ತದೆ.


ಪ್ರಕೃತಿ ತನ್ನ ಋತು ಚಕ್ರದಲ್ಲಿ ಯಾವುದನ್ನು ಚಾಚೂ ತಪ್ಪದೇ ಸಮಯಕ್ಕೆ ತಕ್ಕ ಹಾಗೇ ತನ್ನ ತನವನ್ನು ತನ್ನ ಜೀವನ ಮರ್ಮವನ್ನು ತೋರಿಸುತ್ತಾ ಸಾಗುತ್ತದೆ. ಅದಕ್ಕೆ ತಕ್ಕ ಹಾಗೇ ನಾವುಗಳು ಹೆಜ್ಜೆ ಹಾಕಬೇಕಾದದ್ದು ನಮ್ಮ ಕರ್ತವ್ಯ ಅಷ್ಟೇ.
ಬೆಚ್ಚಗೆ ಹಾಸಿಗೆಯ ಮೇಲೆ ಮಲಗಲು ಮುಂಜಾನೆಯನ್ನು ಕಳೆದು ಮದ್ಯಾನದವರೆಗೂ ನಿದ್ದೆಯ ಸವಿಯನ್ನು ಸವಿಯಲು ಸೊರ್ಯದೇವನ ಯಾವುದೇ ಅಡ್ಡಿ ಆಡಚಣೆಗಳು ಇರುವುದಿಲ್ಲ. ಯಾಕೆಂದರೆ ಅವನು ಸಹ ತನ್ನ ಸವಿ ನಿದ್ದೆಯ ಮಂಪರಿನಲ್ಲಿ ಜಗತ್ತನ್ನು ನೋಡುತ್ತಾ, ತನ್ನ ಕಾರ್ಯವನ್ನು ಮಾಡಬೇಕಲ್ಲಾ ಎಂಬಂತೆ ಕಪ್ಪು ಮೊಡಗಳ ಮರೆಯಲ್ಲಿ ಕಣ್ಣ ಮುಚ್ಚಾಲೆಯಾಡುತ್ತಾ ನಮಗೆಲ್ಲಾ ಸಹಕರಿಸುತ್ತಾನೆ.


ಈ ವಾತವರಣಕ್ಕೆ ಸ್ವಲ್ಪ ಮೆರಗನ್ನು ನೀಡೋಣವೇನೋ ಎಂಬಂತೆ ಅಲ್ಲಿ ಇಲ್ಲಿ ಇರುವ ಚಿಕ್ಕ ಚಿಕ್ಕ ಮೊಡಗಳು ಕರಗಿ ತುಂತುರು ಮಳೆಯ ಆಟವನ್ನಾಡುತ್ತಾವೆ. ನಿಜವಾಗಿಯೊ ಎನ್-ಜಾಯ್ ಮಾಡಲು ಇದಿಷ್ಟು ಸಾಕು ಎನಿಸುತ್ತದೆ. ಎನಾದರೂ ಸರಿ ಸ್ಪಲ್ಪ ಹಾಟ್ , ಬಿಸಿ ಬಿಸಿ ಇದ್ದರೆ ಸಾಕು ಅನ್ನುತ್ತಾ ಯಾವಗಲೂ ಬಾಯಿಯನ್ನು ಆಡಿಸುತ್ತಿರೋಣ ಎಂದು ಚುರುಕು ಮುರುಕು ತಿನ್ನುವುದು.
ಈ ಒಂದು ತಿಂಗಳು ಯಾವುದೇ ರೀತಿಯ ಹಬ್ಬ ಹರಿ ದಿನಗಳು ಇಲ್ಲದೇ ಯಾವುದೇ ಒಂದು ಕಾರ್ಯ ಕೆಲಸಗಳಿಗೂ ಒಂದು ತಿಂಗಳ ಚಿಕ್ಕದಾದ ಬ್ರೇಕ್.

ಆದರೂ ನಮ್ಮ ಹಳ್ಳಿಗಳ ಜನ ಬಹಳ ಬುದ್ಧಿವಂತರು ಕಣ್ರೀ! ಅವರು ಎಲ್ಲಾ ತಿಂಗಳಲ್ಲೂ ಒಂದು ಒಂದು ರೀತಿಯಲ್ಲಿ ಒಂದು ಹಬ್ಬ ಆಚರಣೆಗಳನ್ನು ಪ್ರತಿ ಮಾಸದಲ್ಲೂ ಜಾರಿಯಲ್ಲಿ ಇಟ್ಟು ಕೊಂಡಿರುತ್ತಾರೆ. ಹಾಗೆಯೇ ಈ ಆಷಾಡದ ಮಾಸದಲ್ಲೂ ಒಂದು ಹಬ್ಬವನ್ನು ಆಚರಿಸುತ್ತಾರೆ ಅದೆಂದರೇ "ಏಕಾದಸಿ". ಇಲ್ಲಿ ನಮ್ಮ ಪೇಟೆಯ ಜನಗಳಿಗೆ ಏಕಾದಸಿ ಅಂದರೇ ಉಪವಾಸ. ಆದರೆ ಅಲ್ಲಿ ಈ ತಿಂಗಳಲ್ಲಿ ಏಕಾದಸಿಯ ಹಬ್ಬದಲ್ಲಿ ಹುರಿ ಹಿಟ್ಟಿನಿಂದ ಮಾಡಿದ ಉಂಡೆಗಳ ಭಾರಿ ಬೋಜನ. ಆ ಉಂಡೆಗಳನ್ನು ಹೊಡೆಯಲು ಈ ತಿಂಗಳು ಹೇಳಿ ಮಾಡಿಸಿದ ತಿಂಗಳು. ಈ ಚಳಿಯಲ್ಲಿ ಅವುಗಳನ್ನು ತಿನ್ನುವುದೇ ಒಂದು ಖುಷಿಯ ವಿಚಾರ. ಏಕೆಂದರೆ ಅವುಗಳನ್ನು ಅಷ್ಟೊಂದು ಗಟ್ಟಿಯಾಗಿ ಬಾಯಿಂದ ಮುರಿಯಲು ಸಾಧ್ಯವಾಗುವುದಿಲ್ಲವೇನೋ ಎಂಬ ರೀತಿಯಲ್ಲಿ ಬೆಲ್ಲದ ಪಾಕದಿಂದ ಹದವರಿತು ತಯಾರಿಸುತ್ತಾರೆ. ಈ ವಿವರಣೆಯನ್ನು ಕೇಳಿ ಬಾಯಲ್ಲಿ ನೀರು ಬಂದಿತೇ? ಹಾಗದರೆ ಮರಳಿ ಹಳ್ಳಿಯ ಕಡೆ ಒಮ್ಮೆ ಬನ್ನಿ.


ಈ ರೀತಿಯ ವಿವಿಧ ಮಹತ್ವವನ್ನು ಹೊಂದಿರುವ ಈ ಮಾಸದಲ್ಲಿ, ಪ್ರಚಲಿತವಾಗಿ ಈಗಿನ ರಾಜಕೀಯ ದಿನ ಮಾನಗಳಲ್ಲಿ ಬೆಂಗಳೂರಲ್ಲಿ ಸಣ್ಣದಾಗಿ ನಮ್ಮ ಜನಪ್ರತಿನಿಧಿಗಳು ತಮ್ಮ ತಮ್ಮಲ್ಲಿಯೇ ತಲ್ಲಣಗೊಂಡಿದ್ದಾರೆ. ಗಣಿ ದಣಿಗಳು, ಗಣಿ ಹಗರಣಗಳು, ಅವುಗಳನ್ನು ಧೂಳು ಧೊಳ್ ಮಾಡೋಣ ಎಂಬಂತೆ ಪ್ರತಿಪಕ್ಷದವರು ಬೆಂಗಳೂರ್ ಟು ಬಳ್ಳಾರಿ ಪಾದಯಾತ್ರೆಯನ್ನು ಈ ಚುಮು ಚುಮು ಚಳಿಯಲ್ಲಿ ಹಾಕಿಕೊಂಡಿರುವುದು ಆರೋಗ್ಯಕರ. ಪ್ರಕೃತಿಯೇ (?) ಅವರ ಮನಸ್ಸಿಗೆ ಪ್ರೇರಣೆಯನ್ನು ಕೊಟ್ಟಿರುವಂತೆ ಇದೆ. ಅವರುಗಳು ಸಹ ಸಕತ್ತಾಗಿ ಸಂಭ್ರಮಿಸಿಕೊಳ್ಳಬಹುದು.


ಈ ರೀತಿಯ ಚಿಕ್ಕ ಚಿಕ್ಕ ಸಂತೋಷಗಳೇ ಜನ ಸಾಮಾನ್ಯರಿಗೆ ಪ್ರಕೃತಿಯಿಂದ ದೊರೆಯುವ ಚಿನ್ನದ ದಿನಗಳು. ಅದನ್ನು ನೋಡುವ ಮತ್ತು ಅದರ ಜೊತೆ ಸೇರಿ ಅನುಭವಿಸುವ ಮನಸ್ಸು ಮಾತ್ರ ನಮಗೆ ಬೇಕಾದಾದ್ದು. ಋತುಮಾನಗಳು ಯಾವ ರೀತಿಯಲ್ಲೂ ಬದಲಾವಣೆಯಾಗುವುದಿಲ್ಲ. ನಾವುಗಳು ಮಾತ್ರ ಬದಲಾಗಬಹುದು ಅಷ್ಟೇ. ಆದರೂ ಮನುಷ್ಯನ ಅತಿಯಾದ ದುರಾಸೆಯ ಫಲದಿಂದ ಈ ರೀತಿಯ ಉನ್ನತವಾದ ಪ್ರಕೃತಿಯ ಕೊಡುಗೆಗಳಿಗೆ ಧಕ್ಕೆ ತರುತ್ತಿರುವುದು ನಿಲ್ಲಬೇಕು. ಪರಿಸರ ಪ್ರೀತಿ ಇರಬೇಕು. ಅವುಗಳು ಯಾವ ಯಾವ ರೀತಿಯಲ್ಲಿ ಇರುವುದೂ ಆ ರೀತಿಯಲ್ಲಿಯೇ ನಾವುಗಳು ಅರ್ಪಿಸಿಕೊಳ್ಳಬೇಕು. ಆಗ ಮಾತ್ರ ನಾವುಗಳು ನಮ್ಮ ಸುತ್ತಲೂ ಇರುವ ಎಲ್ಲಾರೂ ಒಂದಾಗಿ ನಮ್ಮ ಪರಿಸರದಲ್ಲಿ ಒಂದಾಗಬಹುದು. ಅಲ್ಲವಾ?

ಮಂಗಳವಾರ, ಜುಲೈ 13, 2010

ಕೆಲವೇ ಸಜ್ಜನರುಗಳು




ನಮ್ಮ ಜನ ಯಾರನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಅವರುಗಳಿಗೆ ಮರೆವು ಜಾಸ್ತಿ. ಸಮಾಜ ಮುಖಿ ಚಿಂತನೆ ಇಲ್ಲವೇ ಇಲ್ಲ. ತಾವುಗಳು ಬರಿ ತಮ್ಮ ಬಗ್ಗೆ ಮಾತ್ರ ಯೋಚಿಸಿತ್ತಾರೆ.. ಇತ್ಯಾದಿ ಇತ್ಯಾದಿ ಅಭಿಪ್ರಾಯಗಳನ್ನು ನಮ್ಮ ಸಮಾಜದ ಬಗ್ಗೆ ನಮ್ಮ ದಿನ ನಿತ್ಯ ಮಾತನ್ನಾಡುತ್ತಾ ಇರುತ್ತೇವೆ.



ಈ ಮೇಲಿನ ನಮ್ಮೆಲ್ಲಾರ ನಂಬಿಕೆಗಳನ್ನು ಸುಳ್ಳು ಮಾಡುವ ರೀತಿ ಕಳೆದೆರಡು ವಾರಗಳಲ್ಲಿ ನಮ್ಮ ಜನ ತಮ್ಮ ಹಿತಾಸಕ್ತಿ ಏನೂ ಎಂಬುದನ್ನು ಪ್ರತಿಪಾದಿಸಿದ್ದಾರೆ. ಅದಕ್ಕೆ ಕಾರಣಕತೃಗಳು ನಮ್ಮ ನಿಮ್ಮೆಲ್ಲಾರ ಜನಪ್ರಿಯ ಅಧಿಕಾರಿಗಳಾದ ಲೋಕಾಯುಕ್ತ ಸಂತೋಷ ಹೆಗಡೆ. ಅವರುಗಳು ರಾಜೀನಾಮೆಯನ್ನು ಕೊಟ್ಟ ದಿನದಿಂದ ಪುನಃ ವಾಪಸ್ಸು ಪಡೆಯುವವರೆಗೆ ಪ್ರತಿಯೊಬ್ಬರು ಯಾವ ರೀತಿ ಕಳ ಕಳಿಯನ್ನುಂಟು ಮಾಡಿದರು ಎಂದರೆ. ಪುನಃ ನಮ್ಮ ಸಮಾಜದಲ್ಲಿ ಒಂದು ರೀತಿಯ ಆಶದಾಯಕವಾದ ವಾತವರಣದ ನಂಬಿಕೆಯನ್ನು ಬಲಿಷ್ಟ ಮಾಡಲು ಸಹಕಾರಿಯಾಯಿತು.



ನಮ್ಮ ಯೋಚನೆ ಮತ್ತು ನಾವುಗಳು ನಿರೀಕ್ಷಿಸುವುದು ಯಾವುದನ್ನು ಎಂಬುದನ್ನು ಪ್ರತಿಯೊಬ್ಬರಿಗೂ ಗೊತ್ತು ಮಾಡಿ ಕೊಟ್ಟಂತಾಯಿತು. ವ್ಯಕ್ತಿಯ ಒಳ್ಳೆಯತನವನ್ನು, ಒಳ್ಳೆಯ ಕೆಲಸವನ್ನು ಎಂದು ಮರೆಯಲಾಗುವುದಿಲ್ಲ. ಜನ ತಾವು ಅಂದುಕೊಂಡ ಆಸೆ ಆಕಾಂಕ್ಷೆಗಳನ್ನು ನಮಗೆ ಗೊತ್ತಿರುವವರು ನೆರವರಿಸುತ್ತಿದ್ದಾರೆ ಎಂದರೆ ಆ ಕ್ಷಣ ನಮಗೆ ಉಂಟಾಗುವ ಆನಂದ ನಿರಿಕ್ಷೆಗೂ ಮೀರಿದ್ದು. ಅದಕ್ಕೆ ಅಂದು ನಾವುಗಳು ಎಸ್. ಪಿ. ಸಾಂಗ್ಲಿಯಾನ ಎಂದರೆ ಸಾಕು ಒಂದು ರೀತಿಯ ಯಾವುದು ನೆಮ್ಮದಿ ಮತ್ತು ಹೆಮ್ಮೆ. ಅದಕ್ಕೆ ಆ ಹೆಸರಿನ ಚಲನಚಿತ್ರ ಕನ್ನಡ ನೆಲದಲ್ಲಿ ಸುಪ್ರಸಿದ್ಧಿಗೂಂಡಿದ್ದು. ಸಾಂಗ್ಲಿಯಾನ ಹಾಗೇ ಮಾಡುತ್ತಾರಂತೆ, ಹೀಗೆ ಬರುತ್ತಾರಂತೆ.. ಈ ರೀತಿಯ ಊಹಾ ಪೊಹಾವಾದ ಮಾತು ಕತೆಗಳು ಅವರನ್ನು ಆ ಮಟ್ಟಕ್ಕೆ ನಿಲ್ಲಿಸಿದ್ದವು.



ಹೀಗೆ ಸರ್ಕಾರಿ ಕೆಲಸದಲ್ಲಿ ಇದ್ದು ಕೊಂಡು ಆ ಮಟ್ಟಿಗೆ ಒಂದು ಸಿನಿಮಾದ ಕಥೆಯಾಗುವ ಮಟ್ಟಕ್ಕೆ ನಮ್ಮ ಜನ ಅವರ ಕೆಲಸಗಳನ್ನು ನೆನಪಿಸಿಕೊಳ್ಳುತ್ತಾ ಇದ್ದರು.



ಚುನಾವಣೆ ಆಯೋಗ ಎಂಬುದು ಒಂದು ಇದೆ ಎಂಬುದು ನಮಗೆಲ್ಲಾ ಗೊತ್ತಾಗಿದ್ದು, ಚುನಾವಣೆ ಆಯೋಗಕ್ಕೆ ಟಿ. ಎನ್. ಶೇಷನ್ ರವರು ಬಂದಾಗ. ಹೀಗೆ ಪ್ರತಿಯೊಂದು ಅಧಿಕಾರದ ಸ್ಥಳಗಳು ವ್ಯಕ್ತಿಗಳ ನಡಾವಳಿಗಳಿಂದ ಜನರುಗಳಿಗೆ ಹೆಚ್ಚು ಹೆಚ್ಚು ಹತ್ತಿರವಾಗಿವೆ. ಅದಕ್ಕೆ ಕಾರಣ ಅವರುಗಳು ತೆಗೆದುಕೊಳ್ಳುವ ಜನಪರ ನಿರ್ಧಾರಗಳು ಮತ್ತು ಯೋಜನೆಗಳು.



ಐ.ಪಿ.ಎಸ್ ಎಂಬುದು ಒಂದು ಇದೆ ಎಂಬುದು ಗೊತ್ತಾಗಿದ್ದು ಕಿರಣ್ ಬೇಡಿ ಎಂಬ ಕೆಚ್ಚದೆಯ ಮಹಿಳೆಯ ಪೋಲಿಸ್ ಕಾರ್ಯಚರಣೆಯಿಂದ. ರಾಷ್ಟ್ರಪತಿಗಳು ಹೀಗೆ ಇರುತ್ತಾರೆ ಎಂಬುದು ತಿಳಿದಿದ್ದು, ಸರ್ವಪಳ್ಳಿ ರಾಧಕೃಷ್ಣರವರು ಮತ್ತು ನಮ್ಮ ನೆಚ್ಚಿನ ಅಬ್ದುಲ್ ಕಲಾಂ ರವರಿಂದ. ಹೀಗೆ ಕೆಲವರುಗಳು ತಮ್ಮ ಇತಿ ಮಿತಿಯಲ್ಲಿ ಅಯಸ್ಕಾಂತದ ರೀತಿಯಲ್ಲಿ ಜನ ಮನದಲ್ಲಿ ಸ್ಥಿರಸ್ಥಾಯಿಯಾಗಿ ನೆಲಸುತ್ತಾರೆ. ಅವರುಗಳನ್ನು ಒಂದು ಇಡೀ ಜನಾಂಗ ದಿನ ನಿತ್ಯ ಅವರುಗಳು ಇದ್ದಾಗ ಹೀಗೆ ಇತ್ತು ಗೊತ್ತಾ ಎಂದು ತಮ್ಮ ತಮ್ಮಲ್ಲಿಯೇ ಮಾತನ್ನಾಡಿ ಕೊಳ್ಳುತ್ತಾರೆ.



ಸಾರ್ವಜನಿಕ ರಂಗದಲ್ಲಿ ಹೆಸರು ಮಾಡುವುದು ಸುಲಭ ಮತ್ತು ಕಷ್ಟ. ಅದರೆ ತಮ್ಮ ವಿಭಿನ್ನ ರೀತಿಯ ಬುದ್ಧಿವಂತಿಕೆ ಮತ್ತು ನೆರ ನಡೆ ನುಡಿಯಿಂದ ಅಪರೂಪವಾದ ಕೆಲಸಗಳಿಂದ ಒಂದು ರೀತಿಯ ಸಂಚಲನವನ್ನು ಕೆಲವೇ ವ್ಯಕ್ತಿಗಳು ಮಾಡುತ್ತಾರೆ ಅದು ಸದ್ದಿಲ್ಲದೆ. ಆ ರೀತಿಯ ಅವರ ಕಾರ್ಯಗಳು ಜನರುಗಳಿಗೆ ಪರಿಮಳೂಪಾದಿಯಲ್ಲಿ ಪಸರಿಸುತ್ತದೆ.



ಅದಕ್ಕೆ ಇರಬೇಕು ನಮ್ಮ ನಿತ್ಯ ಬದುಕಿನಲ್ಲಿ ಹಲವಾರು ಬದಲಾವಣೆಗಳನ್ನು ಕಂಡರು ಮತ್ತು ನಿರಾಸೆಯನ್ನು ಹೊಂದಿದರು ಅಪರೂಪಕ್ಕೆ ಇಂಥ ವ್ಯಕ್ತಿಗಳ ಆಗಮನ ಸರಿ ಸಮಯದಲ್ಲಿ ಸಮಾಜಕ್ಕೆ ಸಿಗುತ್ತಿರುತ್ತದೆ ಮತ್ತು ಬೇಕಾಗುತ್ತದೆ .



ಈ ರೀತಿಯ ದಕ್ಷ ಮತ್ತು ಉತ್ತಮ ಅಧಿಕಾರಿಗಳ ಸಂಖ್ಯೆ ಹೆಚ್ಚು ಹೆಚ್ಚು ಬೆಳೆಯಲಿ ಎಂಬುದು ನಮ್ಮೆಲ್ಲಾರ ಆರೈಕೆ.



ಇವರುಗಳ ಮಾರ್ಗದರ್ಶನ ಮತ್ತು ಅವರುಗಳು ತೋರಿಸಿದ ಹಾದಿ ಯುವ ಜನಾಂಗಕ್ಕೆ ದಾರಿ ದೀಪವಾಗಲಿ ಮತ್ತು ಅವರ ಆದರ್ಶ ನಮ್ಮೆಲ್ಲಾರ ಮಂತ್ರವಾಗಲಿ. ಇದಕ್ಕೆ ಉತ್ತೇಜನ ಎಂಬ ರೀತಿಯಲ್ಲಿ ನಮ್ಮ ಎಲ್ಲಾ ಯುವಕರುಗಳು, ವಿದ್ಯಾರ್ಥಿಗಳು ಇಂದು ನಮ್ಮ ರಾಜಕೀಯ, ಸಮಾಜಿಕ, ಆರ್ಥಿಕತೆ, ಭ್ರಷ್ಟತೆ, ದಬ್ಬಾಳಿಕೆ ಇತ್ಯಾದಿ ಯಾದ ವಿಚಾರಗಳ ಬಗ್ಗೆ ತಮ್ಮದೆಯಾದ ಚಿಂತನೆಯನ್ನು ಯೋಚನೆಯನ್ನು ಮತ್ತು ವಿಚಾರವನ್ನು ಹೊಂದಿರುವುದು ಆಶದಾಯಕ. ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು ಎಂಬ ರೀತಿಯಲ್ಲಿ ಮುಂದಿನ ಉತ್ತಮ ಬಾಳ್ವೆಗೆ ಇವರುಗಳ ಇಂದಿನ ಚಿಂತನೆ ಬೆಳಕಾಗಲಿ.



ನಾವುಗಳು ಯಾವ ರೀತಿಯಲ್ಲಿ ಸಜ್ಜನರುಗಳ ಬಗ್ಗೆ ಇಂದು ಅಪಾರವಾದ ನಂಬಿಕೆ ಮತ್ತು ವಿಶ್ವಾಸವನ್ನು ಇಟ್ಟುಕೊಂಡಿದ್ದೆವೂ ಅದನ್ನು ಉಳಿಸುವ ಸಲುವಾಗಿ ಪ್ರತಿ ಕುಟುಂಬದಲ್ಲಿ ಸಾಮಾಜಿಕ ಕಳ ಕಳಿಯ ಬೆಳಕು ಪ್ರತಿಯೊಂದು ಮಗುವಿಗೂ ದೊರೆಯಲಿ. ಮಗು ಕೆವಲ ಪುಸ್ತಕದ ಹುಳುವಾಗದೆ ತನ್ನ ಸುತ್ತಲಿನ ಜನ ಮನ ಮತ್ತು ರಾಜ್ಯ, ದೇಶದ ಆಗೂ ಹೋಗುಗಳ ಬಗ್ಗೆ ತಿಳುವಳಿಕೆಯನ್ನು ಹೊಂದುವಂತೆ ಮಾಡಬೇಕಾದ್ದು ಹೆತ್ತವರ ಕರ್ತವ್ಯ.



ಚಿಕ್ಕಂದಿನಲ್ಲಿ ಕಂಡ ಒಳ್ಳೆಯತನ ಮತ್ತು ಕೆಟ್ಟದ್ದು ಇವುಗಳೆ ಮುಂದೆ ಆ ಮಗುವಿಗೆ ಹೇಗೆ ತಾನು ತನ್ನ ಸಮಾಜಕ್ಕೆ ನೆರವು ಆಗಲಿ ಮತ್ತು ಮುಂದೆ ತಾನು ಇರುವ ರಂಗದಲ್ಲಿಯೇ ಹೇಗೆ ಹೊಸತನವನ್ನು, ಕೆಲವರಿಗೆ ಉಪಯೋಗವನ್ನುಂಟು ಮಾಡಬಹುದು ಎಂಬುದರ ಕಲ್ಪನೆಯ ಬೀಜವನ್ನು ಬಿತ್ತಿದಂತಾಗುತ್ತದೆ. ಆಗ ಮಾತ್ರ ನಾವುಗಳು ಹೆಚ್ಚು ಹೆಚ್ಚು ಭರವಸೆಯ ಇಂಥ ವ್ಯಕ್ತಿಗಳನ್ನು ಮುಂದೆ ನಿರಂತರವಾಗಿ ಕಾಣುತ್ತಿರಬಹುದು. ಅಲ್ಲವಾ?

ಶುಕ್ರವಾರ, ಜುಲೈ 2, 2010

ಯಾವ ಮೋಹನ ಮುರಳಿ ಕರೆಯಿತು

"ಮನವು ಮಲಗಿತ್ತು ಚಿತೆಯ ಮೇಲೆ "- ಹಿಮಗಿರಿ ಕಂದರ. ಪುಟ ೩

"ಸುಖ ದುಃಖ ಸಂಗಮವಾಟದ ಹೃದ್ ರಂಗವು ಪಾವನೆವೆಂಬೆನು ಎಂದೆಂದಿಗೂ" - ಸಖಿಗೀತ - ಬೇಂದ್ರೆ. ಪುಟ ೩

"ನಾನು ತಲೆ ತಗ್ಗಿಸುವುದು ಎರಡೇ ಸ್ಥಾನಗಳಲ್ಲಿ - ಒಂದು ನನ್ನ ಸಂಕಲ್ಪಕ್ಕೆ ಮತ್ತು ಸಾಧನೆ ಇವುಗಳ ನಡುವಿನ ಅಂತರಕ್ಕೆ ಮತ್ತು ಇನ್ನೊಂದು ಬೇಂದ್ರೆಯವರ ಪಾದಕ್ಕೆ". ಪುಟ ೪

"ಕಟ್ಟುವೆವು ನಾವು ಹೊಸ ನಾಡೊಂದನ್ನು, ರಸದ ಬೀಡೊಂದನ್ನು". ಪುಟ ೬

"ನಿನಗೆ ನೀನೇ ಗೆಳೆಯ, ನಿನಗೆ ನೀನೇ". ಪುಟ ೮

"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ". ಪುಟ ೯

"ಜಗತ್ತಿನಲ್ಲಿ ಧರ್ಮವೂ ಅಧರ್ಮವನ್ನಲಂಬಿಸದೇ ಗೆಲ್ಲಲಾರದು". ಪುಟ ೨೨

"ನೆನಪಿಗೆ ಭಾವನೆಯ ಬಲವಿದ್ದಾಗ ವಿವರಗಳ ಹಂಗೇಕೆ "- ಯಶವಂತ ಚಿತ್ತಾಲ. ಪುಟ ೩೮

"ಅಹಂಕಾರಕ್ಕೆಲ್ಲಿ ನಿಜದ ಪರಿವೆ" - ಯಶವಂತ ಚಿತ್ತಾಲ. ಪುಟ ೩೯

"ನನಗೆ ಒಳ್ಳೆಯದ್ದು ಕೆಟ್ಟದ್ದು ಇವುಗಳ ಬಗ್ಗೆ ವಿವೇಕ ಜ್ಞಾನ ಇಲ್ಲವೆಂದಲ್ಲ ಒಳ್ಳೆಯದರಲ್ಲಿ ನನಗೆ ರುಚಿಯಿಲ್ಲ "- ದುರ್ಯೊಧನ. ಪುಟ ೪೨

"ಚಟಕ್ಕಿರುವ ರುಚಿ ತಿಳುವಳಿಕೆಗೆ ಇಲ್ಲ". ಪುಟ


ಯಾವಾಗ ಅಂಥ ಗೊತ್ತಿಲ್ಲ ನಾನು ಗೋಪಾಲ ಕೃಷ್ಣ ಅಡಿಗರ ಬಗ್ಗೆ ತಿಳಿದಿದ್ದು. ಅವರ "ಯಾವ ಮೋಹನ ಮುರಲಿ ಕರೆಯಿತು, ದೂರ ತೀರಕೆ ನಿನ್ನನು" ಕವನವನ್ನು ರತ್ನಮಾಲ ಪ್ರಕಾಶರವರ ಕಂಠದಿಂದ ಹೊಮ್ಮಿದ ದ್ವನಿ ಸುರಳಿಯನ್ನು ಕೇಳಿದಾಗ ಬಹಳ ಇಷ್ಟವಾಯಿತು. ನಾಗತಿಹಳ್ಳಿ ಚಂದ್ರಶೇಖರವರ "ಅಮೆರಿಕಾ ಅಮೆರಿಕಾ " ಚಲನ ಚಿತ್ರದಲ್ಲಿ ಈ ಹಾಡಿಗೆ ದೃಶ್ಯ ಕಾವ್ಯವನ್ನು ಎಣೆದಾಗ ಇನ್ನೂ ತುಂಬ ಪ್ರೀತಿಯಾಯಿತು. ಇದೀಷ್ಟು ಅಡಿಗರ ಹೆಸರು ನನ್ನ ಮನದಲ್ಲಿ ನೆಲೆಸಲೂ ಕಾರಣವಾಯಿತು. ಅವಾಗ ಅವಾಗ ಈ ಒಂದು ಹಾಡನ್ನು ಸಮಯ ಸಿಕ್ಕಾಗೆಲ್ಲಾ ತಲ್ಲಿನನಾಗಿ ಕಿವಿ ತುಂಬಿಸಿಕೊಂಡು ಕವಿಯ ಕಾವ್ಯ ಚಮತ್ಕಾರವನ್ನು ಕಂಡು ಹರ್ಷಿಸಿಸುತ್ತಿದ್ದೆ.


ಇಷ್ಟು ಮಾತ್ರ ತಿಳಿದಿದ್ದು ಅವರು ದೊಡ್ಡ ಕವಿಯೆಂದು. ಅವರ ಬಗ್ಗೆ ಅಲ್ಲಿ ಇಲ್ಲಿ ಬಿಡಿ ಬಿಡಿ ಲೇಖನಗಳಲ್ಲಿ ಮಾತ್ರ ಓದಿದ್ದು ನೆನಪು. ಪುನಃ ಇತ್ತೀಚೆಗೆ ಟಿ. ಎನ್. ಸೀತರಾಮ್ ರವರ "ಮುಕ್ತ ಮುಕ್ತ" ಮೆಗಾ ದಾರವಾಹಿಯಲ್ಲಿ ಅವರ ಕವಿತೆಗಳನ್ನು ಕೇಳುವಂತಾಯಿತು.


ಸಾಹಿತ್ಯ ಲೋಕದ ನವ್ಯದ ಹರಿಕಾರರು ಇವರು ಎಂಬುದು ಸ್ವಲ್ಪ ಗೊತ್ತಾಯಿತು. ಇವರ ಪದ್ಯಗಳನ್ನು ನನ್ನ ಶಿಕ್ಷಣ ಸಮಯದಲ್ಲಿ ಕನ್ನಡ ಪಠ್ಯದಲ್ಲಿ ಓದಿರಬಹುದು, ಅದರೆ ಆಗ ಅದರ ಬಗ್ಗೆ ನನಗೆ ಮನನ ಮತ್ತು ಮಹತ್ವ ಆಗಿರಲಿಕ್ಕಿಲ್ಲ. ಆದರೆ "ಯಾವ ಮೋಹನ ಮುರಲಿ" ಹಾಡು ಅವರ ಪಕ್ಕ ಪ್ಯಾನ್ ಆಗುವಂತೆ ಮತ್ತು ಅವರ ಬಗ್ಗೆ ಕುತೂಹಲದಿಂದ ಸಾಹಿತ್ಯದಲ್ಲಿ ಹುಡುಕುವಂತೆ ಮಾಡಿತು.
ಆದರೆ ಅವರ ಬಗ್ಗೆ ಸಮಗ್ರವಾಗಿ ಅರಿವು ಉಂಟು ಮಾಡಿದ ಪುಸ್ತಕ ಎಂದರೆ, ಇತ್ತೀಚೆಗೆ ಎನ್. ವಿದ್ಯಾಶಂಕರ್, ಎಂ. ಜಯರಾಮ ಅಡಿಗ ರವರ ಸಂಪಾದಕತ್ವದಲ್ಲಿ ನುಡಿ ಪ್ರಕಾಶನದಿಂದ ಪ್ರಕಟಿತ "ಮೋಹನ ಮುರಲಿ" ಪುಸ್ತಕ.


ಇಷ್ಟೊಂದು ದೊಡ್ಡ ದೈತ್ಯ ಪ್ರತಿಭೆಯಾಗಿ ಕನ್ನಡ ಸಾಹಿತ್ಯ ರಂಗದಲ್ಲಿ ಹೊಸ ಅಲೆಯನ್ನು ಉಂಟು ಮಾಡಿದರು ಎಂಬುದನ್ನು ನಮ್ಮ ನಾಡಿನ ವಿವಿಧ ಸಾಹಿತಿಗಳು, ಗಣ್ಯರು ತಮ್ಮ ಆ ದಿನಗಳ ಅವರ ಜೊತೆ ಕಳೆದ ನೆನಪಿನ ಬುತ್ತಿಯನ್ನು ಈ ಪುಸ್ತಕದಲ್ಲಿ ಬಿಚ್ಚಿದಾಗ.
ಅವರ ಆತ್ಮೀಯ ಸುವರ್ಣ ಘಳಿಗೆಗಳನ್ನು ದ.ಬಾ. ಕುಲಕರ್ಣಿ, ಗೌರಿಶ್ ಕಾಯ್ಕಣಿ, ಯು.ಆರ್. ಅನಂತಮೂರ್ತಿ, ಪಿ. ಲಂಕೇಶ್, ಯಶವಂತ ಚಿತ್ತಾಲ ಇತ್ಯಾದಿಯವರಿಂದೊಡಗೂಡಿ ಶ್ರೀಶ್ರೀ ರವಿಶಂಕರವರಗಳು ಅವರ ಬಗ್ಗೆ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.


ಅವರ ಮತ್ತು ಅವರ ಒಡನಾಟದಲ್ಲಿ ಬಂದ, ಮೈಸೂರು, ಸಾಗರ, ಬೆಂಗಳೂರು, ಕಾಫಿ ಹೌಸ್, ಸೆಂಟ್ರಲ್ ಕಾಲೇಜು ಇತ್ಯಾದಿ ಸ್ಥಳಗಳು ಅವರಿಂದ ಇಂದು ಐತಿಹಾಸಿಕ ಜಾಗಗಳೇನೂ ಎಂಬಂತೆ ಒಬ್ಬ ಮಹಾನ್ ಕವಿಯೂಡನೆ ಹೇಗೆಲ್ಲಾ ಗುರುತಿಸಿಕೊಂಡು ಬಿಂಬಿತವಾಗುತ್ತವೆ ಎಂಬುದನ್ನು ತುಂಬ ಖುಷಿಯಾಗಿ ಓದಿಸಿಕೊಂಡು ಸ್ವಲ್ಪ ಅಡಿಗರ ಬಗ್ಗೆ ನನ್ನ ಮನದಲ್ಲಿ "ಅಡಿಗೆರೆ" ಎಳೆಯುವಂತಾಯಿತು.


ಆ ದಿನಮಾನದಲ್ಲಿ ಅಂಥವರ ಒಡನಾಟವನ್ನು ಅನುಭವಿಸಿದ ಈ ಎಲ್ಲಾ ಶಿಷ್ಯೊತ್ತಮರು ಅವರ ಸಕಾಲೀಕ ಮಾರ್ಗದರ್ಶನದಿಂದ ಇಂದು ಪ್ರಸಿದ್ಧ ಉತ್ತಮ ಕನ್ನಡ ಸಾಹಿತಿಗಳಾಗಿದ್ದಾರೆ ಎಂದರೇ ಅವರ ಪ್ರಭಾವ ಎಷ್ಟು ಇತ್ತು ಎಂಬುದು ನಮ್ಮ ಅರಿವಿಗೆ ಬರುವುದು. ಅಂದು ಈ ರೀತಿಯ ಗುರುಗಳು ಕಾಲೇಜುಗಳಲ್ಲಿ ಇದ್ದರು ಎಂದರೆ ನನಗೆ ಈಗ ಹೊಟ್ಟೆ ಕಿಚ್ಚು ಬರುತ್ತದೆ. ಏನೇ ಹೇಳಲಿ ಆ ದಿನಗಳಲ್ಲಿ ಅವರ ಸಂಪರ್ಕವನ್ನು ಹೊಂದಿದ ಎಲ್ಲಾ ಕನ್ನಡಪ್ರಿಯರು ಧನ್ಯರು.


ಈ ಪುಸ್ತಕ ಅಡಿಗರನ್ನು, ಅವರ ಜೀವನ ಪ್ರೀತಿಯನ್ನು, ಮಾನವೀಯತೆಯನ್ನು, ಸಾಮಾಜಿಕ ಕಳಕಳಿ, ದೇಶ ಪ್ರೇಮ, ಕನ್ನಡದ ಬಗ್ಗೆ ಇರುವ ದೋರಣೆಯನ್ನು, ಅವರಲ್ಲಿರುವ ತಿಳಿ ಹಾಸ್ಯ ಪ್ರಜ್ಞೆ ಮತ್ತು ಕಿರಿಯರ ಬಗ್ಗೆ ಇರುವ ಕಾಳಜಿಯನ್ನು ಹಲವಾರು ನಿದರ್ಶನಗಳ ಮೂಲಕ ತಿಳಿಯುವಂತಾಗುತ್ತದೆ. ಅವರ ಒಂದೊಂದು ಕಾವ್ಯಗಳು ಕನ್ನಡದಲ್ಲಿನ ಒಂದೊಂದು ರತ್ನಗಳೇ ಸರಿ. ಕನ್ನಡ ಸಾಹಿತ್ಯ ಲೋಕ ಇರುವವರೆಗೂ ಅವರ ಕೊಡುಗೆ ಇರುತ್ತದೆ ಮತ್ತು ಅವರ ಹೆಸರನ್ನು ಕನ್ನಡ ಪ್ರೇಮಿಗಳು ನೆನಪಿಸಿಕೊಳ್ಳುವವರು.
ನಮಗೆ ಯಾವಾಗಲೂ ನೆನಪಿಗೆ ಬರುವುದು ದೊಡ್ಡ ದೊಡ್ಡ ಪ್ರಶಸ್ತಿ, ಬಿರುದಾವಳಿಗಳನ್ನು ಪಡೆದವರು ಮಾತ್ರ. ಪ್ರಶಸ್ತಿ ಪ್ರಸಿದ್ಧಿಯ ಅಬ್ಬರವಿಲ್ಲದೆ ತಮ್ಮ ನೇರವಂತಿಕೆಯಿಂದ ಸುತ್ತಲಿನ ಇಡೀ ಒಂದು ಸಮೂಹವನ್ನು ಮಂತ್ರ ಮುಗ್ಧರನ್ನಾಗಿ ಮಾಡಿ ತಮ್ಮತ್ತಾ ಸೆಳೆದ ಅಡಿಗರ ಶಕ್ತಿಯನ್ನು ವರ್ಣಿಸಲು ಅಸಾಧ್ಯ.


ಈ ಹೊತ್ತಿಗೆ ನನಗೆ ಪುನಃ ಅವರ ಕವನ ಸಂಕಲನಗಳಾದ ಚಂಡೆ ಮದ್ದಾಳೆ, ಭಾವತರಂಗ, ಕಟ್ಟುವೆವು ನಾವು, ಭೂಮಿಗೀತ ಇತ್ಯಾದಿ ಓದುವಂತೆ ಪ್ರೇರಪಿಸಿತು ಎಂದರೇ ಅತಿಶಯೋಕ್ತಿಯಲ್ಲ.


ನಾವುಗಳು ನಾವು ಮೆಚ್ಚಿ ಓದುವ ಕೃತಿ ಕತೃವಿನ ಬಗ್ಗೆ ಅವರ ದಿನ ನಿತ್ಯದ ಖಾಸಗಿ ಜೀವನದ ಬಗ್ಗೆ ತುಂಬ ಕುತೂಹಲವನ್ನು ಹೊಂದಿರುತ್ತೇವೆ. ಅವರ ನಡಾವಳಿ, ಅವರು ಮನೆಯಲ್ಲಿ ತಮ್ಮ ಮಡದಿ ಮತ್ತು ಮಕ್ಕಳೊಂದಿಗೆ ಹೇಗೆ ಇರುವವರು ಎಂದು ತಿಳಿಯುವ ಆಸೆ ಬಲವಾಗಿರುವುದು. ಇದಕ್ಕೆ ಪೂರಕವಾಗಿದೆಯೇನೂ ಎಂಬಂತೆ, ಅಡಿಗರ ಮಕ್ಕಳಾದ ವಿದ್ಯಾಕೃಷ್ಣರಾಜ, ಅಂಜನಾರವರ ಲೇಖನಗಳು ಅಡಿಗರ ಇನ್ನೊಂದು ಅರ್ದ್ರ ಮುಖವನ್ನು ದರ್ಪಣ ಮಾಡಿರುವುದು ತುಂಬ ಮೆಚ್ಚುವಂತದ್ದು.


ನವ್ಯಕ್ಕೆ ಅಡಿಗಲ್ಲು ಇಟ್ಟ ಈ ಮಹಾನ್ ವ್ಯಕ್ತಿಯ ಬಗ್ಗೆ ಎಷ್ಟು ಓದಿದರೂ ಇನ್ನೂ ಓದಬೇಕು ಎನಿಸದೇ ಇರಲಾರದು. ಇಂದು ಈ ರೀತಿಯ ವ್ಯಕ್ತಿಗಳು ಕನ್ನಡ ನೆಲದ ಮೇಲೆ ಓಡಾದಿದ್ದಾರೆ ಎಂದರೇ ನಂಬಲಾರದಂತ ಸ್ಥಿತಿ ಇಂದು ನಿರ್ಮಿತವಾಗಿದೆ. ಅಂಥ ಒಳ್ಳೆಯ ಶಿಕ್ಷಕರು, ಶಿಕ್ಷಣ ಸಂಸ್ಥೆಗಳು, ಸ್ನೇಹ ಕೂಟ ಇಂದಿನ ದಿನಮಾನದಲ್ಲಿ ಕಲ್ಪನೆಗೂ ನಿಲುಕಲಾರದು ಅಲ್ಲವಾ?

ಶನಿವಾರ, ಜೂನ್ 26, 2010

ಮದುವೆಯ ಈ ಬಂಧ

ಇಂದು ನಮ್ಮ ಉತ್ತರ ಭಾರತದಲ್ಲಿ ನಡೆಯುತ್ತಿರುವ "ಮರ್ಯಾದಾ ಹತ್ಯೆ" ಒಂದು ಕ್ಷಣ ಎಂಥವರನ್ನು ಬೆಚ್ಚಿ ಬಿಳಿಸುತ್ತಿದೆ. ದಿನ ನಿತ್ಯ ವಿವಿಧ ಊರುಗಳಲ್ಲಿ ಜೋಡಿಗಳ ಮಾರಣ ಹೋಮ ನಡೆಸುತ್ತಿದ್ದಾರೆ. ಈ ವಿಷಯ ಇಂದು ಸಮೋಹ ಮಾಧ್ಯಮಗಳಲ್ಲಿ ಮತ್ತು ಸರ್ಕಾರದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ.

ಇದರ ಬಗ್ಗೆ ಹಲವಾರು ಪತ್ರಿಕೆಗಳಲ್ಲಿ ಹಲವಾರು ಪಂಡಿತರು ಬುದ್ಧಿಜೀವಿಗಳು ತಮ್ಮ ವಿಮರ್ಶೆ ಮತ್ತು ಅನಿಸಿಕೆಗಳನ್ನು ಜನರ ಮುಂದೆ ಇಡುತ್ತಿದ್ದಾರೆ. ಅದು ಸರಿ! ನಮ್ಮ ಜನಗಳು ಪ್ರೇಮಿಸಿ, ಅನ್ಯ ಜಾತಿ ಮತ್ತು ಅನ್ಯ ಗೋತ್ರದವರನ್ನು ಮದುವೆಯಾದರೆ ಅವರನ್ನು ಮುಗಿಸು ಮಟ್ಟಕ್ಕೆ ಹೋಗುತ್ತಿರುವುದು ಇಂದಿನ ಸಮಾಜದಲ್ಲಿ ನಮ್ಮ ಮನುಷ್ಯತ್ವವನ್ನೇ ಪ್ರಶ್ನೆ ಮಾಡುವಂತಾಗಿದೆ.
ಈ ಜಾತಿ ಪದ್ಧತಿ ಎಂದು ಶುರವಾಯಿತೋ, ಕಟ್ಟಳೆಗಳನ್ನು ಯಾರು ಜಾರಿ ಮಾಡಿದರೋ, ಇದು ಈ ಶತಮಾನದ ಅಂಟು ಜಾಡ್ಯವಾಗಿ ಅಂದಿನಿಂದ ಇಂದಿನವರೆಗೂ ನಿರಂತರವಾಗಿ ನಮ್ಮ ಸಮಾಜವನ್ನು ಕಾಡುತ್ತಿದೆ. ಒಂದೇ ಸೂರು ಎಂಬ ಭಾರತಮಾತೆಯ ಮಡಿಲಲ್ಲಿ ಜೀವಿಸುತ್ತಿರುವ ನಾವುಗಳೆಲ್ಲಾ ತುಂಬ ವೈಕ್ತಿಕವಾಗಿ ಈ "ಜಾತಿ" ಮಾತು ಬಂದಾಗ ತುಂಬ ಚಿಕ್ಕದಾಗಿ ಯೋಚಿಸಲು ತೊಡಗುತ್ತೇವೆ.

ಈ ರೀತಿಯ ಜಾತಿ ವಿಂಗಡಣೆ ನಮ್ಮ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದಿಂದ ಅರ್ಜಿ ಪಾರಂಗಳಲ್ಲಿ ಭರ್ತಿ ಮಾಡುವ ಮೂಲಕ ಪ್ರಾರಂಭಗೂಂಡು ನಾವು ಬೆಳೆಯುತ್ತಾ ಅದನ್ನು ಬೆಳೆಸುತ್ತಾ ಪುನಃ ನಮ್ಮ ಮಕ್ಕಳಿಗೆ ವರ್ಗಾವಣೆ ಮಾಡುತ್ತೇವೆ. ಯಾವ ರೀತಿಯಲ್ಲಿ ಉಚ್ಚರು, ನೀಚರು ಎಂದು ಕೇವಲ ವಿವಿಧ ಜಾತಿಗಳಲ್ಲಿ ಹುಟ್ಟಿದ ಕಾರಣದಿಂದ ನಿರ್ಧರಿಸಿ ಕೇವಲವಾಗಿ ಕಾಣುವುದು ವಿಪರ್ಯಾಸ. ಹಾಗೆಯೇ ಈ ಒಂದು ವ್ಯವಸ್ಥೆಯನ್ನು ನಮ್ಮ ರಾಜಕೀಯವಾಗಿ ನಾಯಕರುಗಳು ತಮ್ಮ ಓಟ್ ಬ್ಯಾಂಕ್ ಮಾಡಿಕೊಂಡು ಅದರ ಮೇಲೆ ತಮ್ಮ ಸವಾರಿ ಮಾಡುತ್ತಿರುವುದು ಇನ್ನೂ ಶೋಚನೀಯ. ಬಾಯಲ್ಲಿ ಮಾತ್ರ ಜಾತ್ಯಾತೀತತೆ ಎಂಬ ಬೊಗಳೆ ಬಿಡುವ ಇವರುಗಳು ತಮ್ಮ ಗೆಲುವಿಗಾಗಿ ಪುನಃ ಆ ಜಾತಿ ಈ ಜಾತಿ ಎಂಬ ಆಚರಣೆಯನ್ನು ಜೀವಂತವಾಗಿಟ್ಟು ತಮ್ಮ ಸಾಧನೆಯನ್ನು ಮೆರೆಯುತ್ತಾರೆ. ವಿವಿಧ ಜಾತಿಗೆ ವಿವಿಧ ರೀತಿಯ ನಾಯಕರುಗಳು, ಮಠ ಮಾನ್ಯಗಳು, ಶಿಕ್ಷಣ ಸಂಸ್ಥೆಗಳು, ಉದ್ಯೋಗಗಳು ಇತ್ಯಾದಿ ನಾನಾ ರೀತಿಯ ಸ್ಥಾವರಗಳನ್ನು ನಿರ್ಮಿಸಿ ಇಡೀ ಸಮುದಾಯವನ್ನು ಅದರಲ್ಲಿ ನರಳುವಂತೆ ಮಾಡುವವರು.

ಆದರೆ ಈ ನಮ್ಮ ಪ್ರಕೃತಿ ಹತ್ತು ಹಲವು ಉನ್ನತವಾದ ಮೌಲ್ಯಯುತವಾದ ಕೊಡುಗೆಗಳನ್ನು ದಯಪಾಲಿಸಿದೆ. ಮನುಷ್ಯ ತನ್ನ ಯೌವನಕ್ಕೆ ಕಾಲು ಇಟ್ಟಾಗ ತನಗಾಗಿ ಸಂಗಾತಿಯನ್ನು ಹುಡುಕುವ ವೇಳೆ "ಪ್ರೇಮ ಕುರುಡು" ಎಂಬಂತೆ ಈ ಮೇಲಿನ ಎಲ್ಲಾ ಜಾತಿಯ ಎಲ್ಲೆಗಳನ್ನು ಮೀರಿ, ತನ್ನವರು ರೂಪಿಸಿದ ಈ ಎಲ್ಲಾ ಕಟ್ಟುಪಾಡುಗಳನ್ನು ಜಾಡಿಸಿ ತನ್ನ ಜೀವನದ ಸಾಥಿಯನ್ನು ಆರಿಸಿಕೊಳ್ಳುವನು. ಆ ಸಮಯಕ್ಕೆ ಅವನಿಗೆ ಅದು ಯಾವುದೂ ಅವನ ಮನಸ್ಸಿಗೆ ಬರುವುದಿಲ್ಲ. ತಾನು ಅವನೊಡನೆ/ಅವಳೊಡನೆ ಮುಂದೆ ಚೆನ್ನಾಗಿ ಬಾಳಬಹುದು ಎಂದು ಅನಿಸಿದರೆ ಅದರಲ್ಲಿ ಮುಂದುವರಿಯುತ್ತಾರೆ ಅದಕ್ಕೆ ಹೇಳುವುದು ಅದನ್ನು "ಪ್ರೀತಿ" ಎಂದು.

ಪ್ರೀತಿಸಲ್ಪಟ್ಟವರು ಮುಂದೆ ಮದುವೆಯಾಗಲು ಪಡುವ ಪಾಡು ದೇವರಿಗೆ ಪ್ರೀತಿ. ತನ್ನ ಹೆತ್ತವರಿಂದ ಪ್ರಾರಂಭಿಸಿ ತನ್ನ ಸುತ್ತಲಿನ ನೆರೆಹೊರೆಯ ಸಮಾಜದವರಿಂದೆಲ್ಲಾ ಅಡ್ಡಿ ಆತಂಕಗಳನ್ನು ಅನುಭವಿಸಬೇಕಾಗುತ್ತದೆ.

ಈ ರೀತಿಯ ಆಡಚಣೆಗಳ ಮಧ್ಯೆ ಹಾಗೋ ಹೀಗೋ ಎರಡು ಕುಟುಂಬಗಳಿಂದ ಒಪ್ಪಿಗೆಯನ್ನು ಪಡೆದು ಮದುವೆಯಾದರೂ ತನ್ನ ಸುತ್ತಲಿನ ಸಂಬಂಧಿಕರು ಮತ್ತು ಸಮಾಜ ಆ ಜೋಡಿಗಳನ್ನು ದೊಡ್ಡ ವಿಲನ್ ಗಳಾಗಿ ಬಿಂಬಿಸುತ್ತಾರೆ. ಸಮಾಜ ಅದು ಎಂದು ಇವರುಗಳು ಮಾಡಿದ ಸಂಬಂಧ ಸರಿ ಎಂದು ಹೇಳುವುದಿಲ್ಲ. ಯಾಕೆಂದರೇ ಇದು ತೀರ ವಿಭಿನ್ನವಾಗಿ ಅವರುಗಳಿಗೆ ಕಾಣಿಸುತ್ತದೆ. ಕಾರಣ ಕೇವಲ "ಜಾತೀಕಾರಣ". ಈ ರೀತಿಯ ಕಷ್ಟ ಕಾರ್ಪಣ್ಯಗಳು, ವಿರೋಧಭಾಸಗಳು ನಮ್ಮ ಹಿಂದಿನ ವಚನಕಾರರ ದಿನಗಳಿಂದಲೂ ನಮ್ಮಲ್ಲಿ ಜೀವಂತವಾಗಿವೆ. ಈ ರೀತಿಯ ಭಾವನೆಗಳಿಗೆ ಹಲವಾರು ಕಾರಣಗಳು ಇರಬಹುದು. ಆದರೂ ಈ ರೀತಿಯ ಭಾವನೆಗಳ ಅಳಿವಿಗೆ ಮತ್ತು ನಾವುಗಳು ಯೋಚಿಸುವ ದಾಟಿಯ ಬದಲಾವಣೆಗೆಗೆ ಹಲವು ದಿನಗಳು ಹಿಡಿಯಬಹುದು ಮತ್ತು ಅದಕ್ಕೆ ಕಾಲವೇ ಉತ್ತರವಾಗಬಹುದು.

ಹಾಗೆಯೇ ನಾವುಗಳು ಸೂಕ್ಷ್ಮವಾಗಿ ಈ ವಿವಿಧ ಜಾತಿಗಳಲ್ಲಿರುವ ಹಲವು ದಿನಗಳಿಂದ ರೂಡಿಸಿಕೊಂಡು ಬಂದಿರುವ ಕುಟುಂಬದ ವಿವಿಧ ರೀತಿಯ ಸಂಸ್ಕೃತಿ ಮತ್ತು ಆಚರಣೆಗಳು ಏಕರೂಪವಾಗಿಲ್ಲದಿರುವುದು ಈ ರೀತಿಯ ವಿರೋಧಕ್ಕೆ ಮುಖ್ಯ ಕಾರಣವಾಗಿರಬಹುದು. ಮತ್ತು ಹೆತ್ತವರಿಗೆ ನಮ್ಮ ಮಕ್ಕಳು ಒಂದೇ ಕ್ಷಣ ಬೇರೊಂದು ಸಂಸ್ಕೃತಿ ಆಚರಣೆಯ, ಪದ್ಧತಿಯವರನ್ನು ವರಿಸಿದಾಗ ಅವರಿಗೆ ಅಘಾತವಾಗುವುದು ಸಹಜ. ಅಲ್ಲಿ ಈ ಸಂಸ್ಕೃತಿಗಳ- ರೀತಿ - ನೀತಿಗಳ ಹೊಂದಾಣಿಕೆಯ ಸಮಸ್ಯೆ ದೊಡ್ಡದಾಗಿ ಕಾಣಿಸಿ ಕಸಿವಿಸಿಯಾಗಬಹುದೇನೋ. ಮುಂದೆ ಹೀಗೆ ಬೇರೆ ಬೇರೆಯ ಕುಟುಂಬಗಳ ಹಿನ್ನೆಲೆಯನ್ನು ಹೊಂದಿರುವ ಹೆಣ್ಣು ಗಂಡುಗಳು ಯಾರ ಆಚರಣೆಯನ್ನು ಮತ್ತು ಸಂಸ್ಕೃತಿಯನ್ನು ಪಾಲಿಸಬೇಕು ಅಥವಾ ಬೇಡವೆ, ಅನ್ನಿಸಬಹುದು. ಇಲ್ಲು ಮತ್ತೆ ಅವರುಗಳು ನಮ್ಮದು ಮುಖ್ಯ ನಿಮ್ಮದು ಮುಖ್ಯ ಎಂಬ ರೀತಿಯಲ್ಲಿ ಕುಟುಂಬಗಳ ಮಧ್ಯೆ ಬಿನ್ನಬಿಪ್ರಾಯ ಬರಬಹುದು, ಹಾಗೆಯೇ ಈ ನವ ಜೋಡಿ ಯಾವುದಾದರೂ ಒಂದಕ್ಕೆ ಜೈ ಅನ್ನಬಹುದು. ಇದು ತಮಗೆ ಹುಟ್ಟಿದ ಮಕ್ಕಳವರೆಗೂ ಹೀಗೆ ದಂದ್ವ ಮುಂದುವರಿಯಬಹುದು.

ಇದು ಎಷ್ಟಾದರೂ ತಾನು ಹುಟ್ಟಿ ಬೆಳೆದ ತನ್ನತನದ ಕುಟುಂಬದ ಪದ್ಧತಿ,ಆಚರಣೆಯ ಬೇರಿಗೆ ತೀಲಾಂಜಲಿಯನ್ನು ಇಡಬೇಕಾದ ಸಂದರ್ಭ. ಆದರೆ ಆ ರೀತಿ ತಮ್ಮ ಮೂಲತನ, ಆಚರಣೆ, ಪದ್ಧತಿ, ಸಂಸ್ಕೃತಿಗಳನ್ನು ಆಷ್ಟೊಂದು ಸುಲಭವಾಗಿ ಬಿಡಲು ಆ ನವ ಜೋಡಿಗೆ ಎಷ್ಟರ ಮಟ್ಟಿಗೆ ಸಾಧ್ಯ?

ಗುರುವಾರ, ಜೂನ್ 17, 2010

ಜೂನ್ ೨೧ ವಿಶ್ವ ಸಂಗೀತ ದಿನ

ಜೂನ್ ೨೧ ವಿಶ್ವ ಸಂಗೀತ ದಿನ

ತನ್ಮಯನಾಗಿರುವುದು ಒಂದು ತಪಸ್ಸೆ ಎನ್ನಬಹುದು. ತನ್ನನ್ನೇ ತಾನು ಮರೆತು ಅದರಲ್ಲಿ ಲೀನವಾಗಿ ತನ್ನ ಸುತ್ತಲಿನ ಸಮಸ್ತವನ್ನು ಶೂನ್ಯವಾಗಿ ಮಾಡಿಕೊಂಡು ಜೀವಿಸುವುದು ಒಂದು ಘಳಿಗೆಯು ಸಾಧ್ಯವಾಗುವುದುದಿಲ್ಲ ನಮ್ಮ ನಿಮ್ಮಂತ ಸಾಮಾನ್ಯರಿಗೆ.


ಆದರೆ ನಾನು ಗಮನಿಸಿದಂತೆ ಆ ರೀತಿಯ ಏಕಾಗ್ರತೆಯನ್ನು ತಮ್ಮದಾಗಿಸಿಕೊಂಡು ಅದನ್ನು ಪ್ರತಿಯೊಂದು ನಿಮಿಷ ಅನುಭವಿಸುವವರು ಮುಖ್ಯವಾಗಿ ಕಲಾವಿದರೇ ಸರಿ.


ಕಲೆಯೆಂಬುದು ಮನುಷ್ಯನಿಗೆ ಉತ್ಸಾಹವನ್ನು ಪ್ರತಿ ನಿಮಿಷ ನಿಮಿಷವು ಹೊಸ ಹುಮ್ಮಸ್ಸನ್ನು ಕೊಡುವ ಸಾಧನವಾಗಿದೆ. ಅದ್ದರಿಂದ ನಮ್ಮ ನಾಡಿನ ಎಲ್ಲಾ ಮಹಾನ್ ಕಲಾವಿದರೆಲ್ಲಾ ಧನ್ಯರು.

ಈ ನಿದರ್ಶನಕ್ಕೆ ಸಾಕ್ಷಿ ಭೂತವಾಗಿ ನಾನೇ ಕಣ್ಣಾರೆ ಕಂಡ ಮನ್ನೆಯ (ನವಂಬರ ೨೦೦೮) ಸಿ. ಅಶ್ವತ್ಧರವರ ಸಂಗೀತ ಸಂಜೆ ಕಾರ್ಯಕ್ರಮವೇ ಸಾಕ್ಷಿ. ಅಶ್ವತ್ಥರವರು ಸುಮ್ಮನೆ ಕುಳಿತಿದ್ದಾಗ ನಮ್ಮ ನಿಮ್ಮಂತೆಯೇ ಸಾದ ಸೀದಾವಾಗಿ ಕಾಣುವರು. ಅವರು ಹಾಡಲು ಪ್ರಾರಂಭಿಸಿದ ಯಾವುದೇ ಶಿಶುನಾಳ ಶರೀಪರ, ಕುವೆಂಪುರವರ, ಬೇಂದ್ರಯವರ ಕವಿತೆಗಳ ಸಾಲುಗಳನ್ನು ತಮ್ಮ ವಿಶಿಷ್ಠ ಕಂಠದಿಂದ ಅದಕ್ಕೆ ಅವರು ನೀಡುವ ಮಂತ್ರ ಮುಗ್ಧ ಸಂಗೀತ ಸ್ಪರ್ಶದಿಂದ ಕವಿಯ ಹಾಡು ಇಷ್ಟೋಂದು ಕೂಮಲವಾಗಿ ಕರ್ಣಾನಂದವಗುತ್ತಿದ್ದರೆ.. ಹಾ! ಅಶ್ವತ್ಧರವರು ಎಷ್ಟೊಂದು ತನ್ಮಯತೆಯಿಂದ ಅದರಲ್ಲಿ ಮುಳುಗಿ ತಮ್ಮನ್ನೇ ತಾವು ಮರೆತು ಅದರೊಂದಿಗೆ ಲಯಕ್ಕೆ ತಕ್ಕ ಹಾಗೆಯೇ ಆ ಕೈ- ಮೈಯ ಹಾವಾ - ಭಾವಗಳು, ಕಾಲಿನ ಹೆಜ್ಜೆಗಳು ಅವರು ಎಷ್ಟರ ಮಟ್ಟಿಗೆ ತಮ್ಮನ್ನು ತಾವು ಮರೆತರು ಎಂಬುದಕ್ಕೆ ಚಿತ್ರದುರ್ಗದ ಸಮಸ್ತ ಕಲಾರಸಿಕರ ಮುಖದಲ್ಲಿ ಉಂಟದ ಮಹಾನಂದದ ಬೆಳಕೆ ಸಾಕ್ಷಿ. ಅಶ್ವತ್ಧರವರ ಅಮೋಘ ಸಂಗೀತದ ಮೊಡಿಯ ಪ್ರಭಾವವಳಿಯನ್ನು ಅನುಭವಿಸಿದರು ಎಂಬುದಕ್ಕೆ ಅಂದಿನ ಆ ಸಹಸ್ರಾರು ಜನರ ಚಪ್ಪಾಳೆ ಮತ್ತು ಉದ್ಗಾರವೇ ನಿದರ್ಶನವಾಗಿತ್ತು.

ಆಗಲೇ ನನಗೆ ಅನಿಸಿತು ಕಲಾವಿದರೇಷ್ಟು ಪುಣ್ಯವಂತರೂ! ಕೆಲ ಕ್ಷಣ ತಮ್ಮನ್ನು ತಾವು ಅಷ್ಟೊಂದು ಮಂದಿಯಲ್ಲಿ ತಾವೇ ಕಳೆದು ಹೋಗುವಂತೆ ಆ ಗಾಯನ ಲೋಕದಲ್ಲಿ ವಿರಮಿಸುವ ಸಮಯವೇ "ಸಮಾಧಿ". ಮತ್ತು ಆ ಪ್ರಭಾವಳಿಯೇ ಶಿವಮಯ ಎಂಬಂತೆ. ಸಂಗೀತಕ್ಕೆ ವಿಶಿಷ್ಟವಾದ ಶಕ್ತಿಯಿದೆ ಎಂಬುದು ಅಲ್ಲಿ ಇಲ್ಲಿ ಕೇಳಿದ್ದೆ ಅದರೆ ನಿಜವಾಗಿಯೂ ನೇರವಾಗಿ ನಾನು ಅಂದು ಪ್ರತ್ಯಕ್ಷ ಅನುಭವಿಸಿದೆ.

ಹಾಗೆಯೇ ನಮ್ಮ ಕಲಾವಿದರು ಯಾವುದೇ ಕಲಾಕೃತಿಯನ್ನು ರಚಿಸುವಾಗ ಅವರು ಅನುಭವಿಸುವ ಆ ಕ್ರಿಯಶೀಲ ಸಂತೋಷದ ಸಮಯವನ್ನು ಅವರ ಆ ಕಲಾಕೃತಿಗಳಲ್ಲಿ ನಾವು ಕಾಣಬಹುದು.

ಕಲಾವಿದರು ತಾವು ಬೇರೆಯವರಿಗಾಗಿ ರಚಿಸದೆ, ಹಾಡದೆ, ನುಡಿಸದೆ ಕಲಾದೇವತೆಯ ಉಪಾಸನೆಯನ್ನು ಮಾಡುತ್ತಿದ್ದಾರೆ ಎಂಬ ರೀತಿಯಲ್ಲಿ ಅದನ್ನು ಅನುಭವಿಸಿ ಹಾಡಿದಾಗ ಅದೇ ಸರ್ವ ಶ್ರೇಷ್ಠ ಕಲಾಕೃತಿಯಾಗುತ್ತದೆ. ಹಾಗೆಯೇ ಇಡಿ ಜಗತ್ತು ಸಹ ಮೆಚ್ಚುವಂತಾಗಿ ಎಲ್ಲಾರ ಮನಸ್ಸನ್ನು ಪ್ರಫುಲ್ಲತೆಯಿಂದ ಇಡುತ್ತದೆ.

ಅದಕ್ಕೆ ಇರಬೇಕು ನಮ್ಮ ಪುರಾಣ ಇತಿಹಾಸಗಳನ್ನು ಗಮನಿಸಿದಾಗ ಬೇರೆ ಯಾವ ರಂಗಕ್ಕೂ ನೀಡದ ಮನ್ನಣೆಯನ್ನು, ಸ್ಥಾನ ಮಾನವನ್ನು ನಾವುಗಳು "ಕಲಾ ಸಂಸ್ಕೃತಿಗೆ" ನೀಡಿದ್ದೇವೆ.

ನಮ್ಮ ಈ ಜಂಜಾಟದ ಜೀವನದ ಕೆಲವು ಸಮಯಗಳನ್ನು ಈ ರೀತಿಯ ಚಟುವಟಿಕೆಗಳಿಗೆ ಹಬ್ಬ ಹರಿದಿನ, ವಿಶೇಷ ಸಮಾರಂಭಗಳಲ್ಲಿ ಮೀಸಲಿಟ್ಟು ನಮ್ಮನ್ನು ನಾವುಗಳು ಮರೆಯುವ ಸಲುವಾಗಿ ನಮ್ಮ ಹಿರಿಯರು ಈ ರೀತಿಯ ಎಲ್ಲಾ ಕಲಾ ಆಚರಣೆಗಳನ್ನು ರೂಪಿಸಿರುವುದು ಪ್ರಶಂಸನೀಯ.

ಹಾಗೆಯೇ ಇಂದಿನ ನಮ್ಮ ಮುಂದುವರಿದ ತಂತ್ರಜ್ಞಾನ ಯುಗದಲ್ಲಿ ಅದರ ಮುಂದುವರಿಕೆಯೇನೂ ಎಂಬಂತೆ ವಿವಿಧ ಉಪಕರಣಗಳ ಸಹಾಯದಿಂದ ಆ ರಸ ಸಮಯಗಳನ್ನು ಮುದ್ರಿಸಿಕೊಂಡು ಪುನಃ ಪುನಃ ನಾವುಗಳು ಸವಿಯುವಂತಾಗಿದೆ.

ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲೂ ಇದಕ್ಕಾಗಿ ಪ್ರಮುಖ ಸ್ಥಾನವನ್ನು ನೀಡಿರುವುದು ನಮ್ಮ ಪೋಷಕರು ನಿಜವಾದ ಕಲಾ ಪ್ರತಿಭೆಗಳಿಗೆ ಸರಿಯಾದ ಸೌಲಭ್ಯಗಳನ್ನು ನೀಡಿ ಎಳೆ ವಯಸ್ಸಿನಿಂದಲೇ ಗುರುತಿಸಿ ಬೆಳೆಸಲು ಸಹಾಯಕವಾಗಿದೆ.

ಈ ರೀತಿಯ ಯಾವುದೇ ಕಲಾ ವ್ಯಕ್ತಿಗಳು ಒಂದು ಅಮೂಲ್ಯವಾದ ಗುಣ ವಿಶಿಷ್ಟವನ್ನು ಹೊಂದಿರುತ್ತಾರೆ. ನಿಜವಾದ ಕಲಾವಿದ ಈ ನಮ್ಮ ಸಣ್ಣತನ, ಸುಳ್ಳು, ಅಹಾಂಕರ, ಬೇದ, ವೈಷ್ಯಮ್ಯ ಎಲ್ಲವನ್ನು ಅವನು ಕ್ಷಣಕಾಲ ಮರೆತು ಆ ಕಲಾ ಸಂಗೀತ, ಸಾಹಿತ್ಯ, ಚಿತ್ರಣದಲ್ಲಿ ನಾವೇಲ್ಲಾ ಒಂದೇ ಮತ್ತು ಬೇರೆಲ್ಲಾ ರೀತಿಯ ಕ್ಷುಲ್ಲಕ ವಿಚಾರಗಳು ನಗಾಣ್ಯ ಎಂಬಂತೆ ತೋರಿಸಿ ನಮ್ಮ "ಮನೆ - ಮನಗಳ" ಪುನರಪಿ ಜನನಕ್ಕೆ ಕಾರಣೀ ಭೂತನಾಗುತ್ತಾನೆ.