ಬುಧವಾರ, ಸೆಪ್ಟೆಂಬರ್ 12, 2018

ಹಬ್ಬದ ಶುಭಾಶಯಗಳು

ಹಬ್ಬವೆಂದರೇ ನಮ್ಮ ಜಂಜಾಟದ ಬದುಕಿಗೆ ಒಂದು ಸಣ್ಣ ಬ್ರೇಕ್ ಕೊಟ್ಟು ಮನೆ ಮಂದಿಯೊಂದಿಗೆ ಸಂತೋಷದಿಂದ ಕೂಡಿ ಕಳೆಯುವ ಒಂದು ದಿನ. 

ನಮ್ಮ ದೇಶದ ಸಂಸ್ಕೃತಿ ಹಿರಿಮೆಯೆಂದರೇ ಪ್ರತಿ ಮಾಸದಲ್ಲೂ ಒಂದಲ್ಲ ಒಂದು ಹಬ್ಬವಿರುತ್ತದೆ. ಹಬ್ಬವೆಂದರೇ ಕೇಳಬೇಕೆ.. ? ಸಿಹಿ ತಿಂಡಿ, ಹೊಸ ಬಟ್ಟೆ, ಹೊಸ ಸಂತೋಷ ಮತ್ತು ಹೊಸ ಭರವಸೆಯ ನೋಟ.

ಮನಸ್ಸಿಗೆ ಖುಷಿಯನ್ನು ಕೊಡುವ ಹಬ್ಬಗಳ ಆಚರಣೆಯೇ ಚೆಂದ.  ಒಂದೊಂದು ಹಬ್ಬಕ್ಕೂ ಒಂದೊಂದು ಪುರಾಣ ಕಥೆ ಕಾರಣಗಳುಂಟು.

ನಾನಾ ಬಗೆಯ ಹಬ್ಬಗಳನ್ನು ಆಚರಿಸಲು ಮನೆಮಂದಿಯೆಲ್ಲಾ ಕಾತುರತೆಯಿಂದ ಕಾಯುತ್ತಿರುತ್ತಾರೆ. ಆ ಕೆಲಸ ಈ ಕೆಲಸಗಳೆಂದು ಮನೆಯವರೆಲ್ಲಾ ಎಲ್ಲೇಲ್ಲೊ ಹೋಗಿದ್ದರೇ ಮನೆಯಲ್ಲಿರುವ ಹೆತ್ತವರು ತನ್ನ ಮಗ ಮಗಳು ನಾಳೆಯ ಹಬ್ಬಕ್ಕೆ ಬರುತ್ತಾರೆ, ಬರುವರು ಎಂದು ಕಾಯುತ್ತಾರೆ.

ಅವರಿಗೆ ಅದರಲ್ಲಿಯೇ ಸಂತೋಷ.

ದೂರದ ಜೀವಗಳಿಗೆ ಹಬ್ಬಕ್ಕಾಗಿ ಊರಿಗೆ ಹೋಗುವ ತವಕ . ಒಂದು ರಜೆಯ ಜೊತೆಗೆ ಇನ್ನೊಂದೆರಡು ದಿನಗಳ ರಜೆಯನ್ನು ಗುಜರಾಯಿಸಿ ಹೋದರಾಯ್ತು ಎನ್ನುವ ಸಂಭ್ರಮ.

ಯಾರಿಗೆ ರಜಾ ದಿನಗಳು ಬೇಡಾ ಹೇಳಿ?

ಪ್ರತಿಯೊಂದು ಹಬ್ಬಕ್ಕೂ ಒಂದೊಂದು ವಿಶಿಷ್ಟ ಪದ್ಧತಿ. ಪ್ರತಿಯೊಂದು ಹಬ್ಬವೂ ವಿಭಿನ್ನ. ಈ ಹಬ್ಬಕ್ಕೆ ಈ ಅಡುಗೆಯನ್ನೇ ಮಾಡಬೇಕು. ಒಂದೊಂದು ದೇವರಿಗೂ ಒಂದೊಂದು ಹಬ್ಬವಿದೆ ನಮ್ಮ ಊರುಗಳಲ್ಲಿ. ಒಂದೊಂದು ದೇವರಿಗೂ ಒಂದೊಂದು ಬಗೆಯ ಭಕ್ಷ್ಯ ಬೋಜನಗಳ ನೇವೈದ್ಯವಿಡಬೇಕು.

ಯಾವುದೇ ಹಬ್ಬಕ್ಕೆ ಸಿದ್ಧವಾಗುವುದನ್ನು ನಮ್ಮ ಊರುಗಳಲ್ಲಿ ನೋಡಬೇಕು. ಆ ರೀತಿಯಲ್ಲಿ ಹಬ್ಬಕ್ಕಾಗಿ ಸಜ್ಜಾಗುವ ಸಂಭ್ರಮವನ್ನು ಕಣ್ಣು ತುಂಬಿಕೊಳ್ಳಬೇಕು ಅನಿಸುತ್ತದೆ. ಇಡೀ ಊರೇ ಹೊಸತನವನ್ನೊದ್ದು ಕೂತಿರುತ್ತದೆ. ಪ್ರತಿ ಮನೆಯು ಸುಣ್ಣ ಬಣ್ಣ ಬಳಿದುಕೊಂಡು, ಹಸಿರು ತೋರಣಗಳನ್ನು ತೊಟ್ಟುಕೊಂಡು, ಮನೆಯ ಹಜಾರ ಹಸಿ ಸಗಣಿಯಿಂದ ಸಾರಿಸಿ, ರಂಗೋಲಿ ಚಿತ್ತಾರವನ್ನು ಬರೆದುಕೊಂಡು ನವ ವಧುವಿನಂತೆ ಸ್ವಾಗತಿಸುರುತ್ತಿದೆ.

ವಾವ್.. ! ನೆನಸಿಕೊಂಡರೇ ಮೈ ಜುಂ ಎನಿಸುತ್ತದೆ. ಅಯ್ಯೊ ಇಂಥಾ ಹಬ್ಬದಲ್ಲಿ ಯಾವಾಗ ಬಾಗಿಯಾಗೋಣ ಅನಿಸುತ್ತಿದೆ. 

ನಮ್ಮ ಈ ಹಬ್ಬಗಳೆಂದರೇ ಚಿಲಿಪಿಲಿ ಮಕ್ಕಳ ಹಬ್ಬವೇ ಸರಿ. ನಾನಾ ಬಗೆಯ ಹಬ್ಬಗಳಿರುವುದೇ ಮಕ್ಕಳ ಸಂತೋಷಕ್ಕಾಗಿ.  ಚಿಕ್ಕ ಚಿಕ್ಕ ಮಕ್ಕಳುಗಳು ಹಬ್ಬಗಳಿಗಾಗಿ ಕಾಯುವುದನ್ನು ಕಾಣಬಹುದು.

ಯಾವಾಗ ಈ ಹಬ್ಬ ಬರುವುದು? ಈ ಹಬ್ಬಕ್ಕೆ ನನಗೆ ಇದು ಕೊಡಿಸಬೇಕು. ಈ ಹಬ್ಬಕ್ಕೆ ನನಗೆ ಈ ಉಡುಪು ಖರೀದಿಸಬೇಕು. ಅಮ್ಮಾ ಈ ಹಬ್ಬಕ್ಕೆ ಆ ಸಿಹಿ ತಿನಿಸು ಮಾಡು.. ಹೀಗೆ ಮಕ್ಕಳುಗಳು ನಾನಾ ಬೇಡಿಕೆಗಳನ್ನು  ತನ್ನ ಹೆತ್ತವರ ಮುಂದೆ ತಿಂಗಳುಗಳು ಅಥವಾ ವಾರಗಳ ಮುಂಚೆ ಇಡುವುದನ್ನು ಕೇಳುವುದೇ ಚೆಂದ.

ಹಬ್ಬವೆಂದರೇ ಎಲ್ಲಾ ಓಕೆ! ಸಾಲಾ ಮಾಡಿಯಾದರೂ ತುಪ್ಪ ತಿನ್ನಬೇಕು ಎನ್ನುವ ರೀತಿಯಲ್ಲಿ ಮನೆಯ ಮಂದಿಯೆಲ್ಲ ಅವರವರ ಹಿತಿಮಿತಿಗೆ ಅನುಸಾರವಾಗಿ ಸಂಭ್ರಮದೊಂದಿಗೆ ತಯಾರಿಗೊಳ್ಳುತ್ತಾರೆ.

ಹಿಂದಿನ ನಮ್ಮ ಹಿರಿ ತಲೆಗಳು ದಿನಾಂಕ ತಿಂಗಳುಗಳ ಲೆಕ್ಕವನ್ನು ಮಾಡುತ್ತಿರಲಿಲ್ಲ. ಹಬ್ಬಗಳ ನ್ನೇ  ತಮ್ಮ ದಿನ ಮಾನಗಳನ್ನು ಗುರುತಿಸಲು ಬಳಸಿಕೊಳ್ಳುತ್ತಿದ್ದದು ದಿಟ. ಈ ಹಬ್ಬದ ಮುಂದೆ ತಾನೇ ನೀನು ಹುಟ್ಟಿದ್ದು. ಆ ಹಬ್ಬ ಆದ ಮೇಲೆ ತಾನೆ ನೀನಗೆ ಕೆಲಸ ಸಿಕ್ಕಿದ್ದು. ಆ ಹಬ್ಬದ ದಿನ ತಾನೇ ನಾನು ನೀನಗೆ ಸಾಲ ಕೊಟ್ಟಿದ್ದು. ಹೀಗೆ ಎಲ್ಲಾ ಹಬ್ಬದ ರೇಪರೇನ್ಸ್ ಮೇಲೆ ಗೊತ್ತು ಮಾಡಿಕ್ಕೊಳ್ಳುತ್ತಿದ್ದರು. ಇದರಿಂದ ಗೊತ್ತಾಗುತ್ತದೆ ನಮ್ಮ ಹಬ್ಬಗಳ ಮಹತ್ವ ಎಷ್ಟು ಎಂಬುದು.

ಹೀಗೆಲ್ಲಾ ತಯಾರಿಯ ಮಧ್ಯೆ  ಆಚರಿಸುತ್ತಿದ್ದ ಹಬ್ಬಗಳು ಈಗ ಅತಿ ವಿರಳ. ಇಂದು ನಗರದ ಛಾಯೆ ಹಳ್ಳಿಗಳಿಗೂ ಚಾಚಿದೇಯೇನೋ ಗೊತ್ತಿಲ್ಲ. ಈ ಹಿಂದೆ ಇದ್ದ ಸಂಭ್ರಮ ಕಡಿಮೆಯಾಗಿದ್ದರೂ ಪ್ರತಿ ಮನೆಯಲ್ಲೂ ಇನ್ನೂ ಆ ಸಂತೋಷದ ಕ್ಷಣಗಳು ಮರೆಯಾಗಿಲ್ಲ ಮತ್ತು ಅದು ಎಂದಿಗೂ ಮರೆಯಾಗುವುದಿಲ್ಲ. ಎಲ್ಲಾರೂ ಈ ವೇಗದ ಜೀವನದಲ್ಲಿ ಬದುಕುತ್ತಿದ್ದರೂ ಇರುವ ಇಂಥ ಚಿಕ್ಕ ಚಿಕ್ಕ ಸಂತೋಷದ ಕ್ಷಣಗಳು ನಮ್ಮ ಬದುಕಿಗೆ ಟಾನಿಕ್ ಇದ್ದಂತೆ.

ನಗರದ ಬದುಕು ನಮ್ಮ ನಮ್ಮ ನಲಿವಿನ ಕ್ಷಣಗಳನ್ನು ಸ್ವಲ್ಪ ಸ್ವಲ್ಪ ಕಿತ್ತುಕೊಳ್ಳುತ್ತಿದೆಯೇನೋ ಅನಿಸುತ್ತಿದೆ. ಏನೇ ಮಾಡಿದರೂ ಅದು ತನಗೆ ತನ್ನವರಿಗೆ ಮಾತ್ರ ಅನಿಸುವಂತಿದೆ. ಹಳ್ಳಿಯವರ ಬದುಕಿನ ಜೀವಂತಿಕೆಯ ಮುಂದೆ ನಮ್ಮಗಳ ದೌಲತ್ತು ಯಾವ ಉನ್ನತಿಯನ್ನು ಗಳಿಸುತ್ತಿಲ್ಲ ಅಲ್ಲವಾ?

ಹಬ್ಬಗಳನ್ನು ಸಹ ನಮ್ಮ ಬಿಡುವು ಇದ್ದಾಗ ಮಾಡಿಕೊಂಡರಾಯ್ತು ಎನ್ನುವಂತಾಗಿದೆ. ಕೆಲವೊಮ್ಮೆ ಈ ಹಬ್ಬಗಳನ್ನು ವಿಕೇಂಡ್ ಗೆ ಮುಂದೂಡಿಕೊಂಡು ನಮ್ಮ ಪ್ರೀ ಸಮಯಕ್ಕೆ ತಕ್ಕಂತೆ ಕಾದಿದ್ದುಕೊಂಡು  ಅನುಸರಿಸಿಕೊಂಡು ಸಂಭ್ರಮಿಸುವಷ್ಟರ ಮಟ್ಟಿಗೆ ಸಮಯವಿಲ್ಲವರವಾಗಿದ್ದೇವೆ.

ಸಮೊಹದ ಸಂತೋಷ ಗೌಣವಾಗುತ್ತಿದೆ. ಕೇವಲ ತಾನಾಯಿತು ತನ್ನ ಸಂಸಾರವಾಯಿತು ಅನಿಸುವ ಮಟ್ಟಿಗೆ ಸ್ವಾರ್ಥಿಗಳಾಗುತ್ತಿದ್ದೇವೆನೋ ಗೊತ್ತಿಲ್ಲ. ಯಾವುದಕ್ಕೂ ಸಮಯವಿಲ್ಲದವರಂತೆ ಎಲ್ಲಾವನ್ನು ವೇಗದ ಬದುಕಿಗೆ ಹೊಂದುವಂತೆ ಮಾರ್ಪಾಡು ಮಾಡಿಕೊಳ್ಳುತ್ತಿದ್ದೇವೆ.  ಸಂತೋಷವನ್ನು ಅಳೆದು ತೂಗಿ ಸಂಭ್ರಮಿಸುವಂತಹ ದಿನಮಾನಗಳಲ್ಲಿ ನಾವೆಲ್ಲಾ ಬದುಕುತ್ತಿರುವುದು ದಿಗ್ಬ್ರಮೆಯನ್ನುಂಟು ಮಾಡುತ್ತಿದೆ.

ಆದರೂ ಹಬ್ಬಗಳನ್ನು ನಮಗೆ ಬೇಕಾದ ಸಮಯದಲ್ಲಿ ಮಾಡಿಕೊಳ್ಳುವ ಮಟ್ಟಿಗೆ ನಾವುಗಳೆ ನಿರ್ಧರಿಸಿಕೊಳ್ಳುತ್ತಿರುವುದು ವಿಪರ್ಯಾಸ. ಇಡೀ ದೇಶವೆ ಸಂಭ್ರಮಿಸುತ್ತಿರುವಾಗ ನಾವಂದಿಷ್ಟು ಮಂದಿ ಕೆಲಸ, ಅದು ಇದು ಎಂದುಕೊಂಡು ವಿಕೇಂಡ್ ಗೆ ಮುಂದುಡಿಕೊಂಡು ದುಡಿಯುವುದು!

ಇದನ್ನು ಸ್ವಲ್ಪ ಬದಲಾಯಿಸಿಕೊಳ್ಳೊಣ. ನಮ್ಮಗಳ ಈ ಚಿಕ್ಕ ಚಿಕ್ಕ ಸಿಹಿ ಕ್ಷಣಗಳೇ ನಮ್ಮ ನಮ್ಮ ಜೀವ ಜೀವಂತಿಕೆಗೆ ಸಾಕ್ಷಿ. ಮುಂದಿನ ಪೀಳಿಗೆಗೆ ಕೇವಲ ಬದುಕು ಅಂದರೇ ದುಡಿಮೆ ಮಾತ್ರ ಎಂಬುದು ಎಂದು  ಮಾದರಿಯಾಗಬಾರದು. ದುಡಿಮೆಗೂ ಮೀರಿದ್ದು ಬೇರೆ ಇನ್ನೂ ಏನೇನೋ ಇದೆ ಅದನ್ನು ಅನುಭವಿಸಿ ಕೂಡಿ ಅನುಕ್ಷಣವೂ ಅರ್ಥಪೂರ್ಣವಾಗಿ ಪ್ರಕೃತಿಯೊಂದಿಗೆ ಸಹಜವಾಗಿ ಬದುಕುವ ಬದುಕುವಂತೆ ಪ್ರಯತ್ನಿಸೋಣವಾ..

ಹಬ್ಬದ ಶುಭಾಶಯಗಳು!!

ಶನಿವಾರ, ಜುಲೈ 7, 2018

ಕಳೆದ ದಿನ ನಿತ್ಯ ತರುಣ

ಜೀವನ ಈಗಾಗಲೇ ಅರ್ಧ ಮೈಲಿಗೆ ಹತ್ತು ವರುಷ ಮಾತ್ರ ಬಾಕಿಯಾಗಿ ನಿಂತಂತಿದೆ.  ಹುಟ್ಟಿದಂದಿನಿಂದ ಈ ವಯೋಮಾನಕ್ಕೆ ಬಂದಿರುವ ಬದುಕಿನ ಕಳೆದ ದಿನಗಳನ್ನು ನೆನಪಿಸಿಕೊಂಡರೇ ಮೈ ಜುಂ ಅನಿಸುತ್ತದೆ.

ನಮಗೆ ನಾವುಗಳು ಎಂದಿಗೂ ನಿತ್ಯ ತರುಣರೇ. ಆದರೇ ನಮಗೆ ಗೊತ್ತೆ ಆಗದ ರೀತಿಯಲ್ಲಿ ಮದ್ಯ ವಯಸ್ಕರಾಗಿದ್ದೇವೆ. ಇಂದು ಬಾಲ್ಯದ ನೆನಪೇ ಮರೆತಂತೆ ಅನಿಸುತ್ತಿದೆ. ಈಗ ನಮಗೆ ಬಾಲ್ಯವೆಂದರೇ ನಮ್ಮ ಮುಂದಿರುವ ನಮ್ಮ ಮುದ್ದು ಮಕ್ಕಳ ಆಟವಾಗಿದೆ.

ಓದು ಅಭ್ಯಾಸ, ಕಾಲೇಜು, ಕೆಲಸವೆಂದುಕೊಂಡು ಬ್ಯುಸಿ ಲೈಫ್ ನಲ್ಲಿ ನಡೆದು ಬಂದ ದಾರಿಯ ಗುರುತನ್ನು ಗುರುತಿಸಲು ಸಮಯವಿಲ್ಲದಂತಾಗಿದೆ.

ಒಬ್ಬ ಮನುಷ್ಯನ ಜೀವನವೆಂದರೇನು ಎಂದರೇ ಅದು ನಮ್ಮ ಕೈಗೆ ನಿಲುಕದ ಅತ್ಯದ್ಬುತ ಸಿನಿಮಾವೇ ಸರಿ. ಸಿನಿಮಾ ಎಂದರೇ ಎರಡು ಮುಕ್ಕಾಲು ಗಂಟೆಯಲ್ಲಿ ಎಲ್ಲಾವನ್ನು ತೋರಿಸಿ ದಿ ಎಂಡ್ ಇರುತ್ತದೆ. ಅದರೇ ನಿಜ ಜೀವನಕ್ಕೆ ಹಾಗೆ ಕೊನೆಯನ್ನು  ಎಂದು ಕೊಡಲು ಸಾಧ್ಯವಾಗದು.

ನೋವು ನಲಿವು, ಸಂತೋಷ ದುಃಖ, ಸ್ನೇಹ ಸಂಬಂಧ, ಸಿರಿತನ ಬಡತನ ಇತ್ಯಾದಿಯ ಕಲಸುಮೆಲೋಗರದ ರಂಗು ರಂಗಿನ ಕೋಲಾಜ್ ಈ ಬದುಕು.

ಚಿಕ್ಕಂದಿನಿಂದಲ್ಲಿ ಅಂದುಕೊಂಡದ್ದನ್ನು ಸಾಧಿಸುವ ಉಮೇದು. ತಾರುಣ್ಯದಲ್ಲಿ ಆಕಾಶಕ್ಕೆ ಮೆಟ್ಟಿಲು ಹಾಕುವ ಉಮ್ಮಸ್ಸು.

ಬದುಕು ಬದುಕಲೇಬೇಕೆಂಬ ಪಾಠವನ್ನು ಯಾವ ಕಾಲೇಜಿನ ಬೋಧನೆಯು ತಿಳಿಸಿಕೊಟ್ಟಿರುವುದಿಲ್ಲ.

ಸಮಯ, ಅವಕಾಶ, ಸಂದರ್ಭಗಳು ನಮ್ಮನ್ನು ಆ ಹಳಿಯ ಮೇಲೆ ತಿಳಿದೋ ತಿಳಿಯದೇಯೋ ಆಯಾ ಸಮಯಕ್ಕೆ ತಕ್ಕನಾಗಿ ಅನುಸರಿಸಿಕೊಂಡು ಹೋಗುವಂತೆ ಮಾಡಿಬಿಟ್ಟಿರುತ್ತದೆ.

ಆ ಸಮಯಕ್ಕೆ ಸರಿಯಾಗಿ ನಾವು ಕಂಡ ಕನಸು, ನನಸು.. ಬಣ್ಣ ಬಣ್ಣದ ನೆನಪುಗಳು.. ವಿಧವಿಧವಾದ ನಿರ್ಧಾರಗಳು ಎಲ್ಲಾ ಗಣ್ಯ ಅನಿಸಿಬಿಟ್ಟು ಜೀವನಕ್ಕೆ ಮುಖ್ಯವಾದದ್ದನ್ನು ಆರಿಸಿಕೊಂಡು ಮುಂದುವರಿಯುತ್ತೇವೆ.

ಅದು ಯಾವುದೇ ಸರಿ. ಸಮಯಕ್ಕೆ ಸರಿಯಾಗಿ ನಾವುಗಳು ನಮ್ಮ ಬದುಕಿಗೆ ಬೇಕಾದ ಅತಿ ಅವಶ್ಯಕವೆನಿಸುವ ನಿರ್ಧಾರಗಳನ್ನು ಪ್ರತಿ ಕಾಲಘಟ್ಟದಲ್ಲು ಅನುಸರಿಸಿಕೊಂಡು ಹೋಗಿರುತ್ತೇವೆ.

ಅದೇ ಜೀವನ!

ಈ ಮದ್ಯ ವಯಸ್ಸಿನ ಈ ಸಮಯದಲ್ಲಿ ಹಿಂತಿರುಗಿ ನೋಡಿದರೇ.. ಅಭ್ಭಾ ಅನಿಸುತ್ತದೆ! ಇದು ನಾನೇನಾ ಎಂದು ಅಚ್ಚರಿಯಾಗುತ್ತದೆ. ಹಾಗೆಯೇ ತುಸು ನಗುವು ಬರುತ್ತದೆ. ಏನೇಲ್ಲಾ ಮನಸ್ಸಿನ ಕುಲುಮೆಯಲ್ಲಿ ತರಾವೇರಿ ಗೊತ್ತೂ ಗುರಿ ಮಾಡಿಕೊಂಡಿದ್ದು. ತಲೆ ತುಂಬ ನೂರು ಕನಸುಗಳ ಜಾತ್ರೆ ಮಾಡಿಕೊಂಡಿದ್ದು. ಹೃದಯದ ಗೂಡಿನಲ್ಲಿ ಹತ್ತು ಪ್ರೀತಿಯ ಕಹಾನಿಗಳನ್ನು ಕ್ರೂಡಿಕರಿಸಿಕೊಂಡಿದ್ದು.

ಅಭ್ಭಾ ಇಂದು ಎಲ್ಲಾ ಪೂರ್ತಿ ಪೂರಾ ಶಾಂತ. ವ್ಯಕ್ತಿ ಅಷ್ಟರ ಮಟ್ಟಿಗೆ ಮಾಗಿದ್ದಾನೇಯೇ?

ಜೀವನದ ಹಾದಿಯಲ್ಲಿ ಸಂಕಲನ ವ್ಯವಕಲನ ಸರಿಯಾಗಿಯೇ ನಡೆದಿರುತ್ತದೆ. ಹಾಗಂತ ಬದುಕು ಕೇವಲ ಗಣಿತವಲ್ಲ ಅಥವಾ ಜೀವನ ಲೆಕ್ಕಚಾರವಲ್ಲ! ನಮ್ಮ ನಿಲುಕಿಗೆ ನಿಲುಕಿದ ದಕ್ಕಿಸಿಕೊಂಡ ಬದುಕು ಮಾತ್ರ ನಮ್ಮದಾಗಿರುತ್ತದೆ.

ಅಷ್ಟರ ಮಟ್ಟಿಗೆ ಪ್ರತಿಯೊಬ್ಬರೂ ಹಣ್ಣಾಗಿದ್ದಾರೇ ಅನಿಸುತ್ತದೆ. ಅದು ನಮ್ಮ ನಮ್ಮಲ್ಲಿ ಇಂದು ಕಣ್ಣಿಗೆ ಗೊಚರಿಸುತ್ತಿದೆ. ಈಗ ನಾನು ನನಗೆ ಅನಿಸುವ ಮಾತೇ ಇಲ್ಲ. ಯಾಕೆಂದರೇ ನಾನು ನಾವಾಗಿದ್ದೇವೆ. ನಾನೊಬ್ಬನೇ ಅಲ್ಲ. ನಾನು ನನ್ನ ಸಂಸಾರ, ನನ್ನ ಮಗು, ನನ್ನ ಸಂಗಾತಿ ಹೀಗೆ ಬಹುತನದಲ್ಲಿ ನಮ್ಮ ಬದುಕು ಬಂದು ನಿಂತಿದೆ.

ನಾನು ಅನುಭವಿಸಿದ ಹಳೆಯ ದಿನಗಳು ನನ್ನ ಮುದ್ದಿನ ಮಗನ / ಮಗಳ ನಗುವಿನಲ್ಲಿ ಪುನಃ ಇನ್ನೊಮ್ಮೆ ಬಾಲ್ಯದ, ತಾರುಣ್ಯದ ದಿನಗಳಿಗೆ ಜಾರುವ ಮನಸ್ಸು ಮಾಡಿಕೊಂಡಿದೆ.

ನಾವು ಮಾಡಿದ ತಪ್ಪು ಒಪ್ಪುಗಳನ್ನ ನನ್ನದೇ ಕುಡಿಯು ಮಾಡುವುದನ್ನು ನೋಡುತ್ತಾ ಮನಸ್ಸು ಮುದವಾಗುತ್ತಿದೆ. ಇದೆ ಬದುಕಿನ ಜಟಕಾ ಬಂಡಿ ಅನಿಸುತ್ತದೆ. ಅದು ಎಂದೂ ಮತ್ತು ಎಲ್ಲಿಯು ನಿಲ್ಲುವುದಿಲ್ಲ.  ನಿತ್ಯ ಸಾಗುತ್ತಲೇ ಇರಬೇಕು, ಹಾಗೆಯೇ ಬದಲಾಗುತ್ತಿರಬೇಕು. ಅದೇ ಜಗದ ನಿಯಮ.

ವ್ಯಕ್ತಿ ತಾನು ಬೆಳೆಯುತ್ತಾ ತನ್ನ ಸುತ್ತಲಿನ ಸಮಾಜದಲ್ಲಿ ಪ್ರತಿಯೊಂದು ಬದುಕಿನ ಕಾಲಗಟ್ಟದಲ್ಲಿ ತನ್ನನ್ನು ಸಮಾಜದೊಂದಿಗೆ ಗುರುತಿಸಿಕೊಂಡು ಮುಂದುವರೆಯುತ್ತಿರುತ್ತಾನೆ.  ತನ್ನ ಜೀವನದ ಮೇಲೆ ಸುತ್ತಲಿನ ಸಮಾಜ, ರಾಜಕೀಯ, ಆರ್ಥಿಕ ಹೀಗೆ ಪ್ರತಿಯೊಂದು ಪ್ರಭಾವ ಬೀರುತ್ತಿರುತ್ತವೆ. ನಾನು ನಾವು ನಮಗೆ ಮಾತ್ರ ಸ್ವಂತ ಅನಿಸುವುದಿಲ್ಲ.  ನಾವು ನಮ್ಮ ಜೊತೆಯಲ್ಲಿರುವವರೊಂದಿಗೆ ಅದು ನಮಗೆ ಗೊತ್ತಿರುವವರು, ನಮ್ಮ ಸಂಬಂಧಿಕರು, ಬಂದು ಬಾಂದವರು ಹೀಗೆ ಸುತ್ತಲಿನವರೊಂದಿಗೆ ಎಷ್ಟು ಸಂತೋಷದಿಂದ ಕಳೆದಿದ್ದೇವೆ ಅನ್ನುವುದರ ಮೇಲೆ ನಮ್ಮ ಬದುಕಿನ ಆಕರ್ಷಕತೆ ನಿಂತಿದೆ.

ಬದುಕು ಎಂದು ನಿಂತ ನೀರಲ್ಲಾ! ಅದು ಸ್ವಚ್ಛಂದವಾಗಿ ಸುಲಭವಾಗಿ ಹರಿಯುವ ತೊರೆಯಾಗಿರಬೇಕು. ಹಾಗೆ ಬದುಕುವ ಅವಕಾಶ, ಆಸೆಗಳು ಪ್ರತಿಯೊಬ್ಬರಿಗೂ ಇರುತ್ತದೆ.

ಅವರವರ ಇತಿಮಿತಿಯಲ್ಲಿ ಅವರವರ ಶಕ್ತಿಯನುಸಾರ ಜೀವನದಲ್ಲಿ ಪ್ರತಿಯೊಬ್ಬರೂ ಅಂದುಕೊಂಡ ಗುರಿಗಳನ್ನು ಹಿಡೇರಿಸಿಕೊಂಡಿರುತ್ತಾರೆ.

ಬದುಕು ಎಂದು ನಿಲ್ಲದ ಕನಸಿನ ಆಗರವೇ ಸರಿ. ಎಂದು ಕನಸು ನಿಲ್ಲುವುದೋ ಅಂದೇ ಬದುಕಿಗೆ ಪುಲ್ ಸ್ಟಾಪ್! ನಾವುಗಳೆಲ್ಲಾ ಕನಸಿನ ಬೆನ್ನು ಹತ್ತಿ ಓಡುತ್ತಿರುವ ಕುದುರೆಗಳೇ ಸರಿ.

ಬದುಕಿನ ನಾನಾ ವಯಸ್ಸಿನಲ್ಲಿ ನಾನಾ ರೀತಿಯ ಗುರಿ ಸಾಧನೆಗಳು ನಮ್ಮ ಕಣ್ಣ ಮುಂದಿರುತ್ತವೆ. ಅವುಗಳನ್ನು ಹೇಗೆಲ್ಲಾ ಸಾಧಿಸಬೇಕೆಂಬುದು ನಮ್ಮ ನಮ್ಮ ಬುದ್ಧಿ ಮತ್ತು ಜಾಣ್ಮೆಗೆ ಕಾಣಿಸುತ್ತಿರುತ್ತದೆ.  ಹಾಗೆಯೇ ಅಂದುಕೊಂಡಿದ್ದನ್ನೇಲ್ಲಾ ಸಾಧಿಸುವೆವು ಕೊಡ. ಸಾಧನೆಯ ಮಾಪನ ನಮ್ಮ ನಮ್ಮಲ್ಲಿಯೇ ಇರುತ್ತದೆ. ಆದರಂತೆ ನಮ್ಮ ಖುಷಿ ಮತ್ತು ದುಃಖದ ಮರ್ಮ ನಿರ್ಧಾರವಾಗುತ್ತದೆ.  ಆದರೇ ಸಾಧಿಸಿದ ಪಲಿತಾಂಶದ ಪರಾಮರ್ಶೆಯ ಮಾಪಕ ನಾವುಗಳಾಗಿದ್ದರೇ ಮಾತ್ರ ಸಾಕು.

ನಾವು ನಮಗೆ ಮಾತ್ರ ಬದುಕಿದರೇ ಚೆಂದ! ಯಾಕೆಂದರೇ ನಮ್ಮ ಬದುಕು ನಮ್ಮ ಕೈಯಲ್ಲಿದೆ. ಯಾರು ಯಾರ ಬದುಕನ್ನು ಎಂದಿಗೂ ಕಟ್ಟಲಾರರು ಅಥವಾ ಕೆಡವಲಾರರು.

ನಮ್ಮ ಸೋಲೇ ನಮಗೆ ಪಾಠ. ಅದು ನಮ್ಮ ಗಟ್ಟಿ ಅನುಭವದ ಬುತ್ತಿಯೇ ಸರಿ. ಅದು ನಮ್ಮ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗುದರಲ್ಲಿ ಯಾವ ಸಂಶಯವಿಲ್ಲ.

ಬದುಕಿನ ಅರ್ಧ ಮೈಲು ಸಾಗಿಸಿದ ಸಂತಸ ಒಂದು ಕಡೆಯಾದರೇ.. ದಿನ ದಿನ ಮುದುಕರಾಗುತ್ತಿದ್ದೇವೆ ಎಂಬ ಭಯವು ಇರಬೇಕಾ ಎಂಬ ಪ್ರಶ್ನೇ ಮತ್ತೊಂದು ಕಡೆ. ಆದರೇ ಕಳೆದ ಜೀವನವನ್ನು ಮತ್ತೊಮ್ಮೆ ಬೇಕು ಎಂದು ಕೇಳಲಾಗುವುದಿಲ್ಲ. ಕೇಳಿದರೇ ಸಿಗಬೇಕಲ್ಲಾ? ಕಾಲದ ಚಕ್ರದಲ್ಲಿ ಹಿಮ್ಮುಕ ಚಲನೆಯಿಲ್ಲ.

ಗೊತ್ತಿಲ್ಲದ ಮುಂದಿನ ಭವಿಷ್ಯತ್ ಕಾಣುವ ನೋಟವೇ ಚೆನ್ನಾ.. ಮುಂದಿನ ದಿನಗಳ ಗುರಿಗಳು ಇದ್ದೇ ಇರುತ್ತದೆ.. ನಡೆಯುವ ಚೈತನ್ಯ ಮೈಗೂಡಿಸಿಕೊಂಡರೇ ಸಾಕಲ್ಲವಾ? ವಯಸ್ಸಿಗೆ ಗೋಲಿ ಮಾರೋ, ಬದುಕಿನ ಹರುಷಕ್ಕೆ ಜೈ ಅನ್ನೋಣವೆ?

ಶನಿವಾರ, ಮೇ 5, 2018

ಮದುವೆ Anniversary

ಇಂದು ಮದುವೆಯ ವರ್ಷಾಚರಣೆ. ಕೇಳಬೇಕೆ ಹೆತ್ತವರು, ಸ್ನೇಹಿತರು, ಬಂದುಗಳು, ಹತ್ತಿರದವರು, ದೂರದವರು ಪ್ರತಿಯೊಬ್ಬರ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ ಈ ನವ ಜೋಡಿಗೆ.

ಮದುವೆಯ ವರ್ಷಾಚರಣೆಯೆಂದರೇ ಸತಿಪತಿಗಳಾದ ಆ ದಿನದಿಂದ ಎರಡು ಜೀವಗಳು ಹೇಗೆಲ್ಲಾ ಬಾಳಿದವೆಂಬುದನ್ನು ಮೆಲುಕು ಹಾಕಿಕೊಳ್ಳುವ ದಿನವೇ ಸರಿ.

ಮದುವೆಯೆಂಬುದು ಗಂಡು ಹೆಣ್ಣು ಒಟ್ಟಿಗೆ ಸೇರಿ ಗೊತ್ತಿದ್ದು ಮಾಡುವ ತಪ್ಪು ನಿರ್ಧಾರ! ಮದುವೆಯೆಂಬ ಎಂದೂ ಮುಗಿಯದ ಜಂಜಾಟಕ್ಕೆ ಗೊತ್ತಿದ್ದೂ ಆ ಬಂಧನಕ್ಕೆ ಯಾಕೆ ಬೀಳುವಿರಾ ಗಾವಿದರಾ ಎನ್ನುವರು. ಹೀಗೆಲ್ಲಾ ಮದುವೆಯಾದವರು ಮತ್ತು  ಇನ್ನೂ ಮದುವೆಯಾಗದ ಪ್ರತಿಯೊಬ್ಬರೂ ಹೇಳುವ ನಿತ್ಯ ಮಾತಾಗಿದೆ.

ನನಗೆ ತಿಳಿದಂತೆ ಮದುವೆ ಎನ್ನುವ ಈ ಒಂದು ಸಂಬಂಧದ ಬಗ್ಗೆ ಇರುವ ಗಾದೆ, ಹಿತನುಡಿಗಳು, ಸಿನಿಮಾಗಳು, ಕತೆಗಳು, ಕವಿತೆಗಳು, ವಕ್ರತೊಂಡೋಕ್ತಿಗಳು, ಕಿಚಾಯಿಸುವ ಮಾತುಗಳು ಬೇರೆ ಯಾವ ಸಂಬಂಧದ ಬಗ್ಗೆ ಈ ಜಗತ್ತಿನಲ್ಲಿ ಇಲ್ಲವೆ ಇಲ್ಲ ಬಿಡಿ.

ಆದರೂ ಮದುವೆಯಾಗಲೇಬೇಕು. ಮದುವೆಯಾಗುವುದು ಒಂದು ಮಾಮೂಲಿ ಜೀವನದ ಘಟನೆ.

ಮದುವೆಯಾಗದೇ ದಿನ ಕಳೆದರೇ ಒಂದು ರೀತಿಯ ನೋವು. ಮದುವೆಯಾಗದವರೆಗೆ ಮದುವೆಯಾಗುವ ತವಕ. ಮದುವೆಯಾದವರ ಸಂಕಟಗಳು ಬೇರೆ. ಖುಷಿಯಾಗಿ ಜೀವನ ಮಾಡುವವರು ಸಾಕಷ್ಟು ಜನ ಇದ್ದಾರೆ. ಆದರೇ ಪುನಃ ಮದುವೆಯ ಬಗ್ಗೆ ಇದೇ ರೀತಿಯ ಕಾಲು ಎಳೆಯುವ ಮಾತೆ ಪ್ರತಿಯೊಬ್ಬರಿಗೆ ಬರುತ್ತದೆ.

ಆದರೂ ಈ ಒಂದು ಅವಿನಭಾವ ಸಂಬಂಧವನ್ನು ಈ ಜಗತ್ತಿನಲ್ಲಿರುವ ಪ್ರತಿ ಹೆಣ್ಣು ಗಂಡು ಸಹ ಅನುಭವಿಸಲೇಬೇಕು. ಸಂಸಾರ ಎಂಬ ಸಾಗರದ ಸಾರವನ್ನು ಉಣ್ಣಲೇಬೇಕು.

ಎರಡು ಜೀವಗಳು ತಮ್ಮ ಮುಂದಿನ ದಿನಗಳನ್ನು ತಾವು ಜೀವವಿಸಿರುವವರೆಗೂ ಒಟ್ಟಿಗೆ ಬಾಳುವ ಉನ್ನತ ಬಂಧವೇ ಮದುವೆ.

ಹೌದು ಇದೊಂದು ಪದಗಳಿಗೂ ಮೀರಿದ ಅನುಬಂಧ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಮತ್ತೇಲ್ಲೋ ಬೇರೊಬ್ಬನ/ಳ ಜೊತೆಯಲ್ಲಿ ತನ್ನ ಅಂತ್ಯದವರೆಗೂ ಜೀವಿಸುವುದು. ಕಲ್ಪನೆಗೂ ನಿಲುಕದ ಉನ್ನತವಾದ ರೀಲೆಶನ್.

ಪ್ರತಿ ಮನುಷ್ಯನ ಪ್ರವರ್ಧಮಾನದ ಘಟ್ಟದಲ್ಲಿ ಸಂಭವಿಸುವ ಈ ಗೃಹಸ್ಥಾಶ್ರಮ ಇಬ್ಬರೂ ವ್ಯಕ್ತಿಗಳ ಸಂಮಿಲನ, ಎರಡು ಹೃದಯಗಳ ಬೆಸೆಯುವಿಕೆ, ಎರಡು ಕುಟುಂಬಗಳ ಸಂಬಂಧವೃದ್ಧಿಯಾಗಿದೆ.

ಪ್ರೀತಿ ಪ್ರೇಮ ಅನುರಾಗವನ್ನು ನಿತ್ಯವು ಸ್ಪುರಿಸುವ ಎರಡು ಜೀವಗಳ ಬಾಳುವಿಕೆಗೆ ಜಗತ್ತು ಗೊತ್ತು ಮಾಡಿರುವ ಅತ್ಯುತ್ತಮವಾದ ಸಂಬಂಧ.

ಇಲ್ಲಿಂದ ಇಬ್ಬರ ಬದುಕು ಬದಲಾಗುವುದು. ಇಲ್ಲಿಂದ ಇಬ್ಬರನ್ನು ಸಮಾಜ ನೋಡುವ ನೋಟ ಬದಲಾಗುವುದು. ಇಲ್ಲಿಂದ ಹೆತ್ತವರು ತನ್ನ ಮಕ್ಕಳನ್ನು ಜವಬ್ಧಾರಿವಂತರಂತೆ ಮತ್ತು  ಸರಿ ಸಮಾನರಂತೆ ಗುರುತಿಸುವುದು. ಇಲ್ಲಿಂದ ಇನ್ನೊಂದು ಕುಟುಂಬ /ಸಂಸಾರ ಸೃಷ್ಟಿಯಾಗುವುದು. ಇಲ್ಲಿಂದ ಹೊಸ ಜೀವನ ಎರಡು ಜೀವಿಗಳಿಗೆ. ಇಲ್ಲಿಂದ ಮುಂದಿನ ಸಂತತಿಯ ಬೆಳವಣಿಗೆ.

ಆರೋಗ್ಯವಂತಹ ಸಮಾಜದ ಉತ್ತಮ ಸಂಬಂಧವಾದ ಮದುವೆ ಎರಡು ವಿಭಿನ್ನ ಮನೋಸ್ಥಿತಿಗಳ ಬೆಸೆಯುವಿಕೆಯ ಮೊಲಕ ಹೆತ್ತವರಿಗೆ ಸಾರ್ಥಕವೆನಿಸುವಂತೆ ಮಾಡುತ್ತದೆ.

ಶಾಶ್ವತ ಸ್ನೇಹಿತರಾಗಿ ಅನುಗಾಲವು ಕಷ್ಟ ಸುಖದ ಕ್ಷಣಗಳನ್ನು ಅನುಭವಿಸುತ್ತಾ ನಿತ್ಯವು ಸಾಮರಸ್ಯದಿಂದ ಬಾಳುವುವಂತೆ ಮಾಡುವ ಜಾದು ಈ ಮದುವೆಯಲ್ಲಿದೆ.

ಹಿರಿಯರು ಇಷ್ಟಪಟ್ಟು ಸೇರ್ಪಡಿಸಿದ ಜೋಡಿಗಳು ಪ್ರೀತಿಯ ಹೊನಲಿನಲ್ಲಿ ಅನುದಿನವು ಒಬ್ಬರನ್ನುಬ್ಬರೂ ಬಿಟ್ಟಿರದಂತೆ ಗಟ್ಟಿಯಾಗಿ ಅಂಟಿಕೊಂಡಿರುವಂತೆ ಮಾಡುವ ನಂಟನ್ನು ಮದುವೆಯೆಂಬ ವ್ಯವಸ್ಥೆ ಈ ಮನುಷ್ಯ ಜೀವಿಗೆ ಕೊಟ್ಟಿರುವ ವರವೇ ಸರಿ.

ಹುಟ್ಟಿದಾಗ ಹೆತ್ತವರು, ಬೆಳೆಯುವಾಗ ಕುಟುಂಬದವರು, ದೊಡ್ಡವರಾಗಿ ತನ್ನ ಕಾಲ ಮೇಲೆ ತಾನು ನಿಲ್ಲುವ ಸಮಯದಲ್ಲಿ ಜೀವದ ಸಂಗಾತಿ, ಪುನಃ ವಯಸ್ಸಾದ ಕಾಲಕ್ಕೆ ತನ್ನ ಮಕ್ಕಳು.

ಈ ರೀತಿಯ ಜೀವನದ ಕಾಲ ಚಕ್ರದಲ್ಲಿ ಮನುಷ್ಯ ವಿವಿಧ ರೀತಿಯ ಪಾತ್ರಾಭಿನಯಗಳನ್ನು ಬದುಕ ನಿಭಾಯಿಸಲು ಮಾಡುತಿರುತ್ತಾನೆ.

ತಾನು ಬೆಳೆಯಬೇಕು ಹಾಗೂ ತನ್ನ ಜೊತೆಯಲ್ಲಿರುವವರನ್ನು ಬೆಳೆಸುತ್ತಾ ಸಾರ್ಥಕತೆಯನ್ನು ಕಾಣುತ್ತಾನೆ.

ಪ್ರತಿಯೊಬ್ಬ ಮನುಷ್ಯ ತನ್ನ ಹೆತ್ತವರನ್ನು ಬಿಟ್ಟರೆ ಜೀವನದಲ್ಲಿ ಅತಿ ಹೆಚ್ಚು ಸಮಯ  ಕಳೆಯುವುದು ತನ್ನ ಸಂಗಾತಿಗಳ ಜೊತೆಯಲ್ಲಿ ಮಾತ್ರ.

ತನ್ನ ಮನದ ಭಾವ ಅಭಿವ್ಯಕ್ತಿಗಳಿಗೆ ಪ್ರತಿಯಾಗಿ ತನ್ನ ಜೀವದ ಗೆಳತಿ/ಗೆಳೆಯನನ್ನು ಹುಡುಕಿಕೊಳ್ಳುತ್ತಾವೆ. ತನ್ನ ಮಾತಿಗೆ ಕಿವಿಯಾಗುವ, ತನ್ನ ನೋವಿಗೆ ಸಾಂತ್ವನ ನೀಡುವ, ತನ್ನ ಗೆಲುವಿಗೆ ನಗುವಾಗುವ ಜೀವಂತ ಜೀವವನನ್ನು ಕಂಡುಕೊಳ್ಳುತ್ತಾನೆ.

ನಿಮಗೆ ಗೊತ್ತು ಮನುಷ್ಯ ಸಂಘ ಜೀವಿ. ಒಂಟಿತನಕ್ಕೆ ಬೇಕು ಒಂದು ಬ್ರೇಕ್. ಅದೇ ಹೆಣ್ಣಿಗೆ ಗಂಡು ಗಂಡಿಗೆ ಹೆಣ್ಣು ಜೋಡಿ.

ಹೊಸ ಜೀವ ಜೀವನದ ಪಾಲನ್ನು ಹೊಂದಿರುವ ಜೀವದ ಸಂಗಾತಿಯನ್ನು ಎಂದು ಮರೆಯಲಾರೆವು. ಒಂದು ಕ್ಷಣವು ಬಿಟ್ಟಿರಲಾರದಂತಹ ಬಂಧದ ಸೃಷ್ಟಿಯಾಗುವುದು ಹೇಗೆ ತಿಳಿಯದು, ಗೊತ್ತಿಲ್ಲ.

ಒಂದು ಕ್ಷಣ ಜಗಳ, ಒಂದು ಕ್ಷಣ ಮುನಿಸು, ಇನ್ನೊಂದು ಕ್ಷಣ ಪ್ರೀತಿ, ಮತ್ತೊಂದು ಕ್ಷಣ ಕಕ್ಕುಲಾತಿ. ತಮ್ಮಗಳ ಸಂತೋಷವನ್ನು ಮಕ್ಕಳ ನಗುವಿನಲ್ಲಿ ಕಾಣುವ ಅದೇಷ್ಟೋ ಗಂಡ ಹೆಂಡತಿಯರನ್ನು ನಾವು ಕಾಣಬಹುದು.

ತಮ್ಮ ಮುಂದಿನ ಪೀಳಿಗೆಯ ಏಳ್ಗೆಗಾಗಿ ತಮ್ಮ ಜೀವನವನ್ನು ಸವೆಸುವ ಅದೇಷ್ಟೋ ಅಪ್ಪ ಅಮ್ಮಂದಿರ ಕನಸನ್ನು ಯಾರು ಕಡೆಗಣಿಸಲಾರರು.

ಇಂದಿನ ಮಕ್ಕಳೇ ಮುಂದಿನ ಜವಬ್ಧಾರಿ ಪ್ರಜೆಗಳು.

ಕುಟುಂಬದ ಗಟ್ಟಿ ವ್ಯವಸ್ಥೆಗೆ ಮದುವೆಯೊಂದು ಸಾಧನವೇ ಸರಿ. ಜೀವನವೆಂಬ ಗಾಡಿಗೆ ಗಂಡು ಹೆಣ್ಣು ಎಂಬ ಎರಡು ಚಕ್ರಗಳು. ಒಂದನ್ನೊಂದು ಎಂದು ಬಿಟ್ಟಿರಲಾರವು.

ಏನೇ ವೈಮನಸ್ಸು ಬಂದರೂ ಕ್ಷಣಾರ್ಧದಲ್ಲಿ ಪರಿಹರಿಸಿಕೊಂಡು ಪುನಃ ತನಗೆ ನೀನು, ನೀನಗೆ ನಾನು ಎಂದುಕೊಂಡು ಜೀವನ ಸಾಗಿಸುವಂತೆ ಮಾಡುವ ಮದುವೆಯ ಜಾದುವನ್ನು ಯಾರು ಗಮನಿಸದೆ ಇರಲಾರರು.

ಮುಂದಿನ ದಿನದ ಕನಸ್ಸಿಗೆ ಕನಸಾಗಿ, ಹೆಗಲಾಗಿ, ಅಸರೆಯಾಗಿ, ಧೈರ್ಯಕೊಡುವ ಗೆಳೆಯನಾಗಿ, ಯಾವಾಗಲೂ ಕಾಳಜಿ ವಯಿಸುವ ಮನೆಯ ಒಡತಿಯಾಗಿ, ಕಾಯುವ ಕಾಲವು ಜೊತೆಯಿರುವ ಸಂಗಾತಿಗೆ ನಮೋ ನಮಃ.

ವರುಷ ವರುಷವು ಉತ್ಸಾಹದ ಚಿಲುಮೆಯಾಗಿ ಪರಸ್ಪರ ಬಾಳುವಂತೆ ನಿರ್ಧಾರ ಮಾಡಿಕೊಳ್ಳುವ ದಿನವೇ ಈ ಮದುವೆಯ ದಿನ.

ಈ ದಿನ ಹೀಗೆ ಹೊಸತನದಿಂದ ಮುಂದೆಂದೂ ವರುಷ ವರುಷವೂ ಬರಿತಿರಲಿ ಈ ಜೋಡಿಗಳಿಗೆ. ನಿತ್ಯ ಯುಗಾದಿಯ ರೀತಿಯಲ್ಲಿ.

ಅನುಭವಿಸಿದ ಅನುಭವಗಳೇ ಮುಂದಿನ ದಿನಗಳಿಗೆ ಸ್ಪೂರ್ತಿ ಮತ್ತು ಮಾರ್ಗದರ್ಶಿಯಾಗಬೇಕು. 

ಈ ಜಗತ್ತು ಇರುವವರೆಗೂ ಈ ಒಂದು ಸಂಬಂಧ ಎಲ್ಲಾ ಸಂಬಂಧಗಳಿಗೆ ಮಾದರಿಯಾಗಿ ಹೊಸ ಬೆಳಕಾಗಿ ಯಾವಾಗಲೂ ಪ್ರಕಾಶಿಸುರುತ್ತದೆ. 

ಹೆಣ್ಣು ಗಂಡುಗಳಿರುವವರೆಗೂ ಉಳಿದಿರುವುದು ಮದುವೆ ಮಾತ್ರ. ಅದೇ ಎಲ್ಲಾ ಸಂಬಂಧಗಳ ಹುಟ್ಟಿಗೆ ಜೀವ.

ಬುಧವಾರ, ಮಾರ್ಚ್ 14, 2018

ನಿಮ್ಮ ಮತ ದುರ್ಗದ ಭವಿಷ್ಯ

ಮತ್ತೆ ಕರ್ನಾಟಕ ವಿಧಾನಸಭೆಗೆ ಚುನಾವಣೆ ಬರುತ್ತಿದೆ. ಐದು ವರುಷ ಅದು ಹೇಗೆ ಕಳೆದು ಹೋಯ್ತು ಅನ್ನುವಷ್ಟರಲ್ಲಿಯೇ, ಇನ್ನೊಂದು ಎಲೆಕ್ಷನ್ ಮುಂದಿದೆ.

ಪುನಃ ಎಲ್ಲಾ ರಾಜಕೀಯ ಹಳೆ ಹೊಸ ನಾಯಕರುಗಳು ತಮ್ಮ ಹಳೆ ಜುಬ್ಬಗಳನ್ನು ಕೊಡವಿ ಎದ್ದು ಕೂತಿದ್ದಾರೆ.

ಹೌದು. ಈ ಮೂರು ತಿಂಗಳು ತಮ್ಮ ಮುಖಗಳನ್ನು ಮತದಾರರನ ಮುಂದೆ ಇಟ್ಟು ಹೇಗಾದರೂ ಮಾಡಿ ಗೆದ್ದು ಬಿಟ್ಟರೆ..! ಮುಂದೆ ಮತ್ತೈದು ವರುಷ ಹೇಗೋ ಏನೋ ಖುಷಿಯಾಗಿ ಅಧಿಕಾರ ಅನುಭವಿಸಬಿಡಬಹುದು. ಎಂಬುದು ಅವರ ಯೋಜನೆ?

ಈಗಿರುವ ಸಿದ್ಧಣ್ಣ ಸರ್ಕಾರ ತಾನು ಈಗಾಗಲೇ ಗೆದ್ದು ಬಿಟ್ಟಿವಿ ಎಂಬಂತೆ ನಿತ್ಯ ಟಿ.ವಿ ಪೇಪರ್ ಗಳಲ್ಲಿ ಸದಾ ’ಸಿದ್ಧ' ಸರ್ಕಾರ ಎಂದು ಜಾಹೀರಾತುಗಳನ್ನು ನಿತ್ಯ ನೀಡುತ್ತಿದೆ.  ಪುನಃ ನಮ್ಮ ಸರ್ಕಾರವೇ ಈ ಕರ್ನಾಟಕಕ್ಕೆ ಗತಿ ಎಂಬಂತೆ ಮಾತನ್ನಾಡುತ್ತಿದ್ದಾರೆ.

ಬಿ.ಜೆ.ಪಿ ಈ ಭಾರಿ ನಾವೇ . ಮೋದಿ ಮೂರು ಸಲ ಬಂದು ಹೋಗಿದ್ದಾರೆ. ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ. ಇಲ್ಲಿಯು ನಮ್ಮದೇ ಈ ಭಾರಿ ಎಂದು ಮೋದಿ ಹಿಂದೆ ಬಿದ್ದಿದೆ.

ಅಷ್ಟರ ಮಟ್ಟಿಗೆ ಮೋದಿ ಹೆಸರು ಇಲ್ಲಿ ಓಡುತ್ತಿದೆ ಅನ್ನಿಸುತ್ತಿದೆ!

ಜೆ.ಡಿ.ಎಸ್ ಪುನಃ ನಮ್ಮ ಕೈಗೆ ಅಧಿಕಾರ ಕೊಡಿ ನಾವೆನೆಂದು ತೋರಿಸುತ್ತಿವಿ. ಎಂದು ಹಸಿರು ಶಾಲು ಹೆಗಲು ಮೇಲೆ ಹಾಕಿಕೊತ್ತಿದ್ದಾರೆ.

ಹೀಗೆ ಈಗಾಗಲೇ ಅಧಿಕಾರದ ರುಚಿ ನೋಡಿರುವ ಪಕ್ಷಗಳು ಅಧಿಕಾರದ ಗದ್ದುಗೆ ಏರಲು ಪರಿಪಾಟು ಪಡುತ್ತಿದ್ದರೆ. ಹೊಸ ಪಕ್ಷಗಳ ಉಗಮ, ಹೊಸ ನಾಯಕರ ಮೊಳಿಕೆಗಳು ಅಲ್ಲಿ ಇಲ್ಲಿ ಕಾಣಿಸುತ್ತಿವೆ. ನೋಡಬೇಕು ಯಾರು ಏನ್ ಆಗುತ್ತಾರೆಂದು.

ಆದರೇ ಮತದಾರನ ಮರ್ಮ ಚುನಾವಣೆಯಾಗಿ ಪಲಿತಾಂಶ ಬಂದ ಅನಂತರವೇ ತಾನೇ ಗೊತ್ತಾಗುವುದು!

ಆದರೇ.. ನಮ್ಮ ಚಿತ್ರದುರ್ಗ ನಗರ ಮತ್ತು ಕ್ಷೇತ್ರ ಎಷ್ಟೇ ಚುನಾವಣೆಗಳು ಬರಲಿ ಹೋಗಲಿ ತಾನು ಮಾತ್ರ ಕ್ಷಣ ಮಾತ್ರವು ಬದಲಾಗುವುದಿಲ್ಲ ಎಂಬಂತೆ, ದುರ್ಗದ ಮೇಲಿರುವ ದೊಡ್ಡ ಕಲ್ಲಿನೋಪಾದಿಯಲ್ಲಿ ದೂಳು ಮುಚ್ಚಿಕೊಂಡು ಕೂತಿದೆ.

ನನಗೆ ಆಶ್ಚರ್ಯ ಮತ್ತು ಅಚ್ಚರಿಯೆಂದರೇ ಇಲ್ಲಿಯವರೆಗೆ ಅದು ಎಷ್ಟೋ ಎಲೆಕ್ಷನ್ ಗಳು ಮುಗಿದು ಹೋಗಿವೆ. ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್, ಜಿಲ್ಲಾ ಪಂಚಾಯಿತಿ ಇತ್ಯಾದಿ. ಆದರೂ ಸಹ ಈ ನಗರಕ್ಕೆ ಒಂದೇ ಒಂದು ಚೂರು ನವ ನವೀನತೆಯನ್ನು ಒಬ್ಬೇ ಒಬ್ಬ ನಾಯಕನಿಗೂ ಕೊಡಲು ಸಾದ್ಯವಾಗಿಲ್ಲವಲ್ಲವೆಂಬುದು...

ಹಿಂದುಳಿದ ಜಿಲ್ಲೆ ಎಂದು ಹೆಸರುವಾಸಿಯಾಗಿರುವುದೇ ಇದರ ಹಿರಿಮೆ.

ಅದೇ ಒಂದು ಮೈನ್ ರೋಡ್ ಅದಕ್ಕೆ ಟಾರ್ ಹಾಕಿ ಯಾವ ಕಾಲವಾಯಿತೋ (ಬ್ರಿಟಿಷರ) ದೇವರಿಗೆ ಗೊತ್ತು.

ಹಲವು ವರುಷಗಳ ಹಿಂದೆ ನಡೆದ ಸಾಹಿತ್ಯ ಸಮ್ಮೇಳನದ ಆಶೀರ್ವಾದದಿಂದ ರೋಡ್ ಮದ್ಯ ರಸ್ತೆ ವಿಭಾಗ ಮಾಡಿದ್ದು ಬಿಟ್ಟರೆ ಏನೆಂದರೂ ಏನೂ ಬದಲಾಗಿಲ್ಲ ಇಂದಿಗೂ.

ಅದೇ ದೂಳು ದೂಳು ಮತ್ತು ದೂಳು. ಯಾವುದೇ ಹೊಸತನದ ಶುದ್ಧ ಗಾಳಿ ಯಾವ ರೀತಿಯಲ್ಲೂ ಸುಳಿದಿಲ್ಲ. ಯಾವುದೇ ಹೊಸ ಯೋಜನೆಯ ಸುದ್ಧಿಯೇ ಇಲ್ಲ ಬಿಡಿ.

ಮೈನ್ ರೋಡ್ ಬಿಟ್ಟು ಗಲ್ಲಿ, ಬಡಾವಣೆಗಳ ಕಡೆ ಕಣ್ಣರಿಸಿದರೇ ಅಲ್ಲೂ ದೂಳ್ ದೂಳ್ ಮತ್ತು ದೂಳ್. ಆಗೋ ಹೀಗೋ ಇದ್ದ ರಸ್ತೆಗಳನ್ನು ಒಳ ಚರಂಡಿ ವ್ಯವಸ್ಥೆ ಮಾಡುತ್ತಿವೀ ಎಂದು ಚೆನ್ನಾಗಿ ಗುಂಡಿಗಳನ್ನು ಅಗಿದು ಅವನ್ನು ಮುಚ್ಚದೇ, ಆಗಲೇ ಅದ್ವಾನವಾಗಿದ್ದ ಈ ರೋಡ್ ಗಳಿಗೆ ಚಿರಾ ಮುಕ್ತಿ ದಯಾಪಾಲಿಸಿ, ದೂಳ್ ಭಾಗ್ಯ ಕೊಟ್ಟು ಕೂರಿಸಿಬಿಟ್ಟರು.

ಉರಿಯುವ ಬಿಸಿಲಲ್ಲಿ ಒಂದೇ ಒಂದು ಸುತ್ತು ನಗರ ದರ್ಶನ ಮಾಡಿದರೇ ತಲೆ ನೋವು, ಉಸಿರು ಉಬ್ಬಸ ಕಾಯಂ. ಎನ್ನುವುದು ಇಲ್ಲಿಗೆ ಬೇಟಿ ಕೊಡುವ ಅಕ್ಕಪಕ್ಕದ ಹಳ್ಳಿಗರ ಮಾತು.

ಎಲ್ಲಾರಿಗೂ ಯಾವಾಗಲೂ ಮೊಡುವ ಪ್ರಶ್ನೇ ಒಂದೇ. ಅಲ್ಲಾ ಅಕ್ಕ ಪಕ್ಕದ ಎಲ್ಲಾ ನಗರಗಳು ಅಷ್ಟು ವೇಗವಾಗಿ ಹೊಸತನವನ್ನು ಪಡೆದುಕೊಂಡಿದ್ದರೇ ಈ ನಮ್ಮ ನಗರ ಇನ್ನೂ ೧೯೭೯ ತನವನ್ನು ಅದು ಹೇಗೆ ಕಾಪಿಟ್ಟುಕೊಂಡಿದೆಯೆಂಬುದು?

ನನಗಂತೂ ಅರ್ಥವಾಗುತ್ತಿಲ್ಲ. ಇತಿಹಾಸ ಪ್ರಸಿದ್ಧ ನಗರಕ್ಕೆ ಏಕೆ ಈ ರೀತಿಯ ಶಾಪವೊ? ತಿಳಿಯದಾಗಿದೆ.

ರಾಜಕೀಯವಾಗಿ ಅಧಿಕಾರ ಮಾತ್ರ ಪ್ರತಿ ಭಾರಿಯು ಒಬ್ಬೊಬ್ಬರ ಪಾಲಗುತ್ತಿರುತ್ತದೆ. ಆದರೇ ಅವರುಗಳು ತಮ್ಮ ಕ್ಷೇತ್ರದ ಅಭಿವೃದ್ಧಿ ಅಥವಾಉದ್ಧಾರದ ಬಗ್ಗೆ ಯಾಕೆ ಇನ್ನೂ ಯಾಕೆ ತಲೆ ಕೆಡಿಸಿಕೊಂಡಿಲ್ಲವೋ ನನಗಂತೂ ಗೊತ್ತಿಲ್ಲ.

ನಾನು ಪ್ರಸ್ತಾಪಿಸಿದ್ದು ರಸ್ತೆ ಸಮಸ್ಯೆಯನ್ನೊಂದು. ಇನ್ನೂ ನಾನ ಬಗೆಯ ವಿಷಯಗಳು, ಸಮಸ್ಯೆಗಳ ಸರಮಾಲೆ ಈ ಜಿಲ್ಲೆಯನ್ನು ಸುತ್ತಿಕೊಂಡಿದೆ ಎಂದರೇ ತಪ್ಪಿಲ್ಲ.

ಅಲ್ಲ ನಮ್ಮ ನಗರದ ಮತದಾರರಿಗೇನೂ ಯಾರಾದರೂ ಮಂತ್ರ ಗಿಂತ್ರ ಮಾಡಿಸಿದ್ದಾರೆಯೇ? ಅದು ಹೇಗೆ ಪ್ರತಿ ಭಾರಿಯು ಒಂದೇ ಒಂದು ಮಾತನ್ನಾಡದೇ ಬೇಕಾದ ಅಭ್ಯರ್ಥಿಯನ್ನು ಚುನಾಯಿಸಿ ಬೆಂಗಳೂರಿಗೂ, ದೆಹಲಿಗೂ ಪ್ರತಿ ಭಾರಿಯು ಕಳಿಸಿಕೊಡುತ್ತಾರೆ?

ಯಾಕೆ ಒಬ್ಬರೂ ಸಹ ತಮ್ಮ ಬಳಿಗೆ ಓಟು ಕೇಳಿಕೊಂಡು ಬರುವವರಿಗೆ ಯಾವೊಂದು ಬೇಡಿಕೆಗಳನ್ನು ಇಟ್ಟಿಲ್ಲ? ಯಾಕೆ ಇಂದಿಗೂ ಒಂದೇ ಒಂದು ಚುನಾವಣೆಯನ್ನು ಬೇಡ ಅಂದಿಲ್ಲ?  ಅದು ಏಕೆ ರಾಜಕೀಯ ಪುಡಾರಿಗಳ ಬಗ್ಗೆ ಒಂದಿಷ್ಟು ಸಿಟ್ಟಿಲ್ಲ?

ಇದು ನೆನ್ನೆ ಮೊನ್ನೆಯ ಕಥೆಯಲ್ಲ! ಸರಿ ಸುಮಾರು ೨-೩ ದಶಕಗಳಿಂದ ಚಿತ್ರದುರ್ಗ ದುರ್ಗ(ಮ)ವಾಗಿಯೇ ಇದೆ.

ಚಿಕ್ಕ ಮಗುವು ಸಹ ಗುರುತಿಸುತ್ತದೆ. ಬೇರೆ ಜಿಲ್ಲಾ ಕೇಂದ್ರಗಳೆಲ್ಲಾ ಆ ರೀತಿಯಲ್ಲಿ ಬೆಳೆದಿದ್ದರೆ ನಮ್ಮ ಊರು ಯಾಕೆ ಇನ್ನೂ ಹೀಗೆಯೇ ಇದೆ ಎಂದು.

ಅದು ಹೇಗೆ ಇಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಏನೂಂದು ಕೆಲಸವನ್ನು ಮಾಡದೇ ಪುನಃ ಪುನಃ ಸಲೀಸಾಗಿ ಗೆಲ್ಲುತ್ತಿದ್ದಾರೆ?

ನನಗಂತೂ ಪರಮಾಶ್ಚರ್ಯವಾಗುತ್ತದೆ. ಹಾಗೆಯೇ ದುಃಖವುವಾಗುತ್ತದೆ!

ಭದ್ರ ಮೇಲ್ದಾಂಡೆ  ಎನ್ನುವ ಮಾತನ್ನು ಇಲ್ಲಿನ ಜನ ಹಲವು ದಶಕಗಳಿಂದ ಕೇಳುತ್ತಲೇ ಕೇಳುತ್ತಲೇ  ಮುದುಕರಾದರೇನೋ.

ಅದರ ಸುದ್ಧಿ ಸುಳಿವು ಇನ್ನಾದರೂ ಇಲ್ಲ. ಅದು ಯಾವಾಗ ಆ ನೀರನ್ನು ಕುಡಿಯುವ ನೋಡುವ ಭಾಗ್ಯ ಬರುವುದೋ ನೋಡಬೇಕು.

ಮೊಲಭೂತ ಸೌಲಭ್ಯಗಳ ಕೊರತೆಯನ್ನು ಈ ಜಿಲ್ಲೆ ಮತ್ತು ನಗರ ಅನುಭವಿಸಿದಂತೆ ಬೇರೆ ಯಾವ ಕ್ಷೇತ್ರವು ಅನುಭವಿಸಿಲ್ಲ. ಇದು ಬರಸೀಮೆ ಬರಗಾಲ ನಿತ್ಯ ಕುಡಿಯುವ ನೀರಿಗೆ ಹಾಹಕಾರ. ಎಲ್ಲಾ ರಂಗಗಳಲ್ಲೂ ಏನೊಂದು ಅಭಿವೃದ್ಧಿ ಕಾಣದ ನತದೃಷ್ಟ ಜಿಲ್ಲೆ ಮತ್ತು ಜಿಲ್ಲಾ ಕೇಂದ್ರ.

ಆದರೇ ಇಲ್ಲಿ ಗೆದ್ದ ಯಾವೊಬ್ಬ ನಾಯಕನು ಅಭಿವೃದ್ಧಿಯನ್ನು ಮಾಡಲು ಸಾಸಿವೆ ಕಾಳಿನಷ್ಟು ಪ್ರಯತ್ನಪಟ್ಟಿದ್ದನ್ನು ನಾನಂತೂ ಕಂಡಿಲ್ಲ.

ಯಾವ ಅಸಂಬ್ಲಿಯಲ್ಲೂ ಎಂದೂ ನಮ್ಮ ನಗರದ ಸಮಸ್ಯೆಗಳ ಬಗ್ಗೆ , ಹೊಸ ಯೋಜನೆಗಳ ಬಗ್ಗೆ ಯಾವೊಬ್ಬ ನಾಯಕನು ಎಂದೂ  ಉಸಿರು ಬಿಟ್ಟಿರುವುದನ್ನು ನಾನಂತು ಕೇಳಿಲ್ಲ!

ತುಟಿ ಬಿಚ್ಚಿಲ್ಲ!

ನಮ್ಮ ನಗರದ ಮತದಾರರು ಹಸಿವಿನಂತವರು ಬಿಡಿ. ಇಲ್ಲಿಂದ ಆಯ್ಕೆಯಾಗಿರುವ ನಾಯಕರುಗಳು ಹಸಿವಿನ ಮನಸ್ಸಿನವರೇನಾ?

ಓ ಒನಕೆ ಒಬವ್ವ..! ಇನ್ನಾದರೂ.. ಈ ಭಾರಿಯಾದರೂ.. ಒಳ್ಳೆಯ ನಾಯಕನನ್ನು ಆರಿಸುವಂತಹ ಬುದ್ದಿಯನ್ನು ನಿನ್ನ ನಗರದ ಮತದಾರ ಪ್ರಭುವಿಗೆ ದಯವಿಟ್ಟು ದಯಪಾಲಿಸು.

ನಿನ್ನಲ್ಲಿರುವ ಒನಕೆಯ ಪಾಲಿನಷ್ಟನಾದರೂ ಕೆಚ್ಚನ್ನು/ಕಿಚ್ಚನ್ನು ನಿನ್ನೂರಿನ ನಗರದ ಮನ ಮಂದಿಗೆ ಕೊಡು.

ನಾನಂತೂ ಏನಾದರೂ ಹೊಸತನವನ್ನು ಈ ನಗರದಲ್ಲಿ ಈ ಚುನಾವಣೆಯನಂತರ ಕಾಣಲು ಬಯಸುವೆ. ಪ್ಲೀಜ್!

ಯಾವ ಪಕ್ಷದವರಾದರೂ ಪರವಾಗಿಲ್ಲ. ನಮಗೆ ಒಳ್ಳೆಯ ವ್ಯಕ್ತಿ ಬೇಕು! ಚಿತ್ರದುರ್ಗದ ಬಗ್ಗೆ ಪ್ರೀತಿಯಿರುವ ಮನಸ್ಸಿರಬೇಕು! ಏನಾದರೂ ಹೊಸ ಅನುಕೂಲವನ್ನು ಪೂರೈಸುವ ಕಾಳಜಿಯ ಮನುಷ್ಯನಾಗಿರಬೇಕು!

ಈ ಮನುಷ್ಯನ ಕಾಲದಲ್ಲಿ ಈ ಕೆಲಸವಾಯಿತು ಎಂದು ನಿನ್ನ ನಗರದ ಜನ ಮುಂದೆ ನೆನಪಿಸಿಕೊಳ್ಳುವಂತಹ ನಾಯಕ/ಜನಪ್ರತಿನಿಧಿ ನಮಗೆ ಬೇಕು.

ಬನ್ನಿ ಗೆಲ್ಲಿಸೋಣ. ಬದಲಿಸೋಣ. ಚಿತ್ರದುರ್ಗದ ನೋಟವನ್ನು.

ಮುಂದಿನ ಚುನಾವಣೆಯಲ್ಲಿ ದೂಳ್ ದೂಳ್ ಮಾಡಿ. ಕೆಲಸ ಮಾಡದೇ ಓಟು ಕೇಳುವ ಬಾಯ್ ಮಾತ್ ನಾಯಕರನ್ನು, ಗಿಲೀಟು ಕನಸ ಬಿತ್ತುವವರನ್ನಾ.

ನಿಮ್ಮ ಮತ ನಿಮ್ಮ ಕೈಯಲ್ಲಿ. ದುರ್ಗದ ಭವಿಷ್ಯ ನಿಮ್ಮಿಂದ!