ಗುರುವಾರ, ನವೆಂಬರ್ 30, 2023

ಜೈ ಕನ್ನಡ! ಜೈ ಕರ್ನಾಟಕ!

ಕನ್ನಡ ರಾಜ್ಯೋತ್ಸವ! ಇದು ಕೇವಲ ನಗರಗಳಲ್ಲಿ ಅದೂ ಬೆಂಗಳೂರಲ್ಲಿ ಇರುವವರಿಗೆ ಮಾತ್ರ?

 ಕನ್ನಡ ಎನ್ನುವ  ಒಂದು ಭಾಷೆ ಇದೆ ಎಂಬುದನ್ನು ನೆನಪಿಸುವ ಹಬ್ಬವಾಗಿ ಮಾತ್ರ ಕಾಣುತ್ತಿದೆ ಎಂದೆನಿಸುತ್ತಿದೆ.

ಆದರೆ ಕನ್ನಡ ಭಾಷೆಯನ್ನು ನಿಚ್ಚಳವಾಗಿ ಮತ್ತು ತಮಗೆ ಗೊತ್ತಿಲ್ಲದ ರೀತಿಯಲ್ಲಿ ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಬಳಸುತ್ತಿರುವ ಮುಗ್ಧ ಕನ್ನಡಿಗರು ಎಂದರೇ ಅದು ಹಳ್ಳಿಯಲ್ಲಿರುವವರು, ಚಿಕ್ಕ ಪಟ್ಟಣಗಳಲ್ಲಿರುವವರು ಮಾತ್ರ . 

ಆದರೇ ಈ ರೀತಿಯ ಜರೋರತೆ ಬೆಂಗಳೂರಿನಲ್ಲಿರುವ ಅಥವಾ ನಾವು  ಮುಂದುವರೆದಿರುವ ಮುಂದುವರಿಯುತ್ತಿವೆ ಎಂದು ಗುರುತಿಸಿಕೊಂಡ ಮಹಾ ನಗರದ ಮಂದಿಗೆ ಇಲ್ಲ ಬಿಡಿ. ಇಲ್ಲಿ ಕನ್ನಡ ಭಾಷೆಗೆ ಏನೂ ಬೆಲೆ ಇಲ್ಲ ಎಂಬ ಕಠಿಣ ತಿಳುವಳಿಕೆಯಲ್ಲಿ ಮುಳುಗೇಳುತ್ತಿದ್ದಾರೆ.

ಯಾಕೆಂದರೇ ಇಲ್ಲಿರುವವರು ನವ ತರುಣ ತರುಣಿಯರು. 

ಹಳ್ಳಿಗಳಲ್ಲಿ , ಚಿಕ್ಕ ಪುಟ್ಟ ಪಟ್ಟಣಗಳಲ್ಲಿರುವವರು ಈ ಯುವ ಸಮುದಾಯವನ್ನು ಹೆತ್ತ ಹೆತ್ತವರು. ಹಾಗೆಯೇ ಹೆಚ್ಚು ಹೆಚ್ಚು ಓದಿರದ ಮಂದಿ ಮಾತ್ರ. ಇವರುಗಳು ಹೆಮ್ಮೆಯಿಂದ ಮತ್ತು   ಪ್ರೀತಿಯಿಂದ ಕನ್ನಡವೇ ಉಸಿರಾಗಿಸಿಕೊಂಡು ಬಾಳುತ್ತಿದ್ದಾರೆ. ಅವರುಗಳಿಗೆ ಕನ್ನಡ ಉಳಿಸಿ, ಬಳಸಿ ಮತ್ತು   ಬೆಳಸಿ ಎಂಬ ಘೋಷಣೆಯ ಬಗ್ಗೆ ಯಾವ ಅರಿವು ಬೇಕಾಗಿಲ್ಲ.

ಆದರೇ ನಮ್ಮ ಕರ್ನಾಟಕದ ಸ್ಥಿತಿ ಮಾತ್ರ ಅಂದಿನಿಂದ ಇಂದಿನವರೆಗೂ ಸುಧಾರಿಸಿರುವುದು ನಾ ಕಾಣೆ! 

ನಮ್ಮ ಮುಖ್ಯಮಂತ್ರಿಗಳು ಮೊನ್ನೆಯ ಕನ್ನಡ ರಾಜ್ಯೋತ್ಸವದ ಭಾಷಣದಲ್ಲಿ ಇದೇ ವಿಚಾರವನ್ನು ತಲೆ ಬಿಸಿ ಮಾಡಿಕೊಂಡು ನೆರೆದ ಸಭಿಕರಲ್ಲಿ ಹಂಚಿಕೊಳ್ಳುತ್ತಿದ್ದರು. ಬೆಂಗಳೂರು ಕನ್ನಡಿಗರು ಬೇರೆ ರಾಜ್ಯದಿಂದ ಬಂದವರ   ಭಾಷೆಯಲ್ಲಿಯೇ ಮಾತನಾಡಿದರೇ ಅವರು ತಾನೇ  ಯಾಕೆ ಕನ್ನಡ ಕಲಿಯುವ ಅವಶ್ಯಕತೆಯಾದರೂ  ಬಂದಿತು? ಅದು ಬಿಟ್ಟು  ನಾವು ಹೆಮ್ಮೆಯಿಂದ ಕನ್ನಡದಲ್ಲಿಯೇ ಅವರೊಂದಿಗೆ ಮಾತನಾಡಿದರೆ ಅವರು ಸಹ ಕನ್ನಡ ಕಲಿಯುವಲ್ಲಿ ನಮ್ಮೊಂದಿಗೆ ಕೈ ಜೋಡಿಸುವವರು ಎಂದೇಳುತ್ತಿದ್ದರು.


ಅವರಿಗೂ ಗೊತ್ತಾಗಿರಬೇಕು. ಈಗಂತೂ ವಿದಾಸೌದದಲ್ಲೂ ಸಹ ಕನ್ನಡ ಕೊಂಚ ಕೊಂಚ ಕಾಣೆಯಾಗುತ್ತಿದೆ ಎಂದು . ಹಾಗೆಯೇ ಈ ಸಂದರ್ಭದಲ್ಲಿ ಅವರು ಒಂದು ಆಜ್ಞೆಯನ್ನು   ಹೊರಡಿಸಿದರೂ ’ಸರ್ಕಾರಿ ಪತ್ರ ವ್ಯವಹಾರವೆಲ್ಲಾ ಕನ್ನಡದಲ್ಲಿಯೇ ಇರಲಿ’ ಎಂದು.



ಹೌದು ಹೀಗೆ ಈ ರೀತಿಯ  ಕನ್ನಡದ ಅಳಿವು ಉಳಿವಿನ ಮಾತುಗಳು ಕೇವಲ ಪ್ರತಿ ನವಂಬರ್ ಮಾಸಕ್ಕೆ ಮಾತ್ರ ಸೀಮಿತವಾಗಿ ಡಿಸೆಂಬರ್ ಹೊತ್ತಿಗೆ ತಣ್ಣಗೆ ಮಲಗಿ ಮೊಲೆಗೆ ಸೇರುತ್ತಿರುವುದು ನಮ್ಮ ಕರ್ನಾಟಕದ  ಜನರ ದೌರ್ಭಾಗ್ಯ ! 


ಯಾಕೇ ಈ ರೀತಿಯ ಒಂದೇ ಒಂದು ಕೂಗು ನಮ್ಮ ಅಕ್ಕ ಪಕ್ಕದ ರಾಜ್ಯಗಳಲ್ಲಿ ಇಲ್ಲವೆಂದು ತುಂಬ ಅಚ್ಚರಿಯಾಗುತ್ತದೆ.  ಯಾಕೆಂದರೇ ಕನ್ನಡವು ಮುಂದುವರಿದ ನಮ್ಮ ನಗರಗಳಲ್ಲಿ ಅದಿಕೃತ ಭಾಷೆಯಾಗಿ ಚಾಲ್ತಿಯಲ್ಲಿ ಇಲ್ಲ. ನಮಗ್ಯಾರಿಗೂ ಕನ್ನಡ ಕಲಿಯಲೇ ಬೇಕೆಂಬ ಒತ್ತಡವಿಲ್ಲ.


ಕನ್ನಡ ನೆಲದಲ್ಲಿ ಹುಟ್ಟಿರುವ ನಮ್ಮ ಕನ್ನಡಿಗರಿಗೆ  ಕನ್ನಡ ಮಾತನ್ನಾಡಿದರೇ ದುಡಿಮೆಯ ಹೊಟ್ಟೆ ತುಂಬಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಅತಿ ಚಿಕ್ಕ ಕೆಲಸಕ್ಕೂ ಕನ್ನಡ ಬಿಟ್ಟು ಬೇರೆ ಯಾವುದೇ ಭಾಷಾ ಪಾಂಡ್ಯತೆ ಬೇಕಾಗಿದೆ ಎಂದು ಹೇಳುವವರೇ ಹೆಚ್ಚಾಗಿದ್ದರೆ. 


ಇಂದು ಭಾಷೇ  ಮಮತೆಗಿಂತ ಹೊಟ್ಟೆಯ ಪಾಡೇ ದೊಡ್ಡದು ಎಂಬ ಭಯ!


ಇದರ ಬಗ್ಗೆ ನಮ್ಮ ಸರ್ಕಾರಗಲ್ಲಿರುವ ಮಹಾನ್ ಬೃಹಸ್ಪತಿಗಳು ಕಣ್ಣು ತೆರೆದು  ಸಹ ನೋಡುವುದಿಲ್ಲ. ಬರೀ ಕನ್ನಡ ದಿನದಂದೂ ಮಾತ್ರ ಕನ್ನಡ ಉಳಿಸೋಣ ಬಳಸೋಣವೆಂದು ವೀರಾವೇಷದ ಮಾತುಗಳನ್ನು ಆಡಿ ವರ್ಷವಿಡಿ ಮೌನವಹಿಸಿಬಿಡುತ್ತಾರೆ. 


ಹೀಗೆ ಸ್ನೇಹಿತರ ವರ್ಗದಲ್ಲಿ ಯಾರೋ ಹೇಳುತ್ತಿದ್ದರು.. ಅದು ಯಾವುದೋ ಒಂದು ಬೆಂಗಳೂರಿನ ವಸತಿ ಸಮುಚ್ಛಾಯದಲ್ಲಿ ೩೨೮ ಮನೆಗಳಿವೆಯಂತೆ.  ಅಲ್ಲಿ ಇರುವ ಕನ್ನಡದ ಕುಟುಂಬಗಳು ಕೇವಲ ೩೮ ಅಂತೆ. ಇಲ್ಲಿಗೆ ಬಂದು ನಿಂತಿದೆ ನಮ್ಮ  ಕನ್ನಡ ರಾಜಧಾನಿಯ ಸ್ಥಿತಿ. ಯೋಚಿಸಿ ಭಾಷೆ ಎಷ್ಟು ಮುಖ್ಯ ಎಂಬುದು. ಕನ್ನಡಿಗರು ಸಹ ಕನ್ನಡದ ಬಗ್ಗೆ ಮೂಗು ಮುರಿದರೆ ಬೇರೆ ಯಾರು ತಾನೇ ನಮ್ಮ ಭಾಷೆಯನ್ನು ಮಾತನಾಡುವರು?  ಬೆಂಗಳೂರಲ್ಲಿ ಕನ್ನಡ ಕಲಿಯಲೇ ಬೇಕು ಎಂಬ ಜರೂರತೆ ಇಲ್ಲ!


ಯಾಕೇ ಹೀಗೆ ಎಂದು ಯಾರು ಸಹ ಪ್ರಶ್ನಿನಿಸಲಾರರು.  ಯಾಕೆಂದರೇ ಯಾವ ಭಾಷೆ  ಹೆಚ್ಚು ಕೆಲಸಗಳನ್ನು , ಉದ್ಯೋಗಗಳನ್ನು, ಸಂಬಳವನ್ನು ಕೊಡುವುದು ’ಹೊಟ್ಟೆ’ಯನ್ನು ತುಂಬಿಸುವುದೋ ಆ ಭಾಷೆಯೇ ಇರಲಿ ಎಂಬ ಜಾಣ ನಿರ್ಧಾರಕ್ಕೆ ಬಂದಂತಿದೆ. 


ಜೈ ಕನ್ನಡ! ಜೈ ಕರ್ನಾಟಕ!

ಶುಕ್ರವಾರ, ಫೆಬ್ರವರಿ 17, 2023

ಲಹರಿ

 ನಾವು ಓದಿದೆವೆಂದರೇ ಕೆಲಸ ಮಾಡಲೇಬೇಕಾ? ಅಯ್ಯೋ ಅಷ್ಟೊಂದು ಓದಿ ಕೊನೆಗೂ ಮದುವೆ,ಮಕ್ಕಳು,ಅತ್ತೆ, ಮೂಸರೇ ತೊಳೆಯುತ್ತಾ ಕೂತೂ ಬಿಟ್ಟೆ. 

ಅದು ಏನೂ ನಿನ್ನ ಅಪ್ಪ ನನ್ನ ಮಗಳಂತೇ ಯಾರೂ ಓದಿಲ್ಲವೆಂದು ಕೊಚ್ಚಿಕೊಂಡಿದ್ದು! ಹೀಗೆ ನೂರಾರು ಸುತ್ತಲಿನ ಬಾಯಿ ಮಾತು ಕೇಳಿ ಕೇಳಿ ರೋಸಿ ಹೋಗಿತ್ತು. 

ನಾನೂ ಅಷ್ಟು ಸ್ವಾಭಿಮಾನಿ. ನಾನು ಎಂದೂ ಹೆಣ್ಣು ಎಂದುಕೊಂಡು ಬೆಳೆದ ಮಗಳೇ ಅಲ್ಲ! ಅಪ್ಪ ಅನ್ನುವಂತೆ ನಾನೇ ನಮ್ಮ ಮನೆಗೆ ಗಂಡು ಮಗುವೆನ್ನುವಂತೆ ಬೆಳೆದವಳು. 

ಓದನ್ನು ಮಾತ್ರ ಅಚ್ಚುಕಟ್ಟಾಗಿ ಓದಿ ಬಿಡಬೇಕು ಎಂಬಂತೆ ಎಷ್ಟೇ ದೊಡ್ಡ ಓದು ಆದರೂ ಸಲೀಸಾಗಿ ಪಾಸು ಮಾಡುತ್ತಿದ್ದೆ. ಶಾಲೆಯಲ್ಲೂ ಅಷ್ಟೇ ಪ್ರತಿಯೊಬ್ಬ ಶಿಕ್ಷಕರುಗಳಿಗೂ ನಾನೇ ಬೇಕಾಗಿತ್ತು. ಓದು ಅಲ್ಲದೇ ಶಾಲೆಯಲ್ಲಿ ಕಾಲೇಜಿನಲ್ಲಿ ಯಾವುದೇ ಪಠ್ಯೇತರ ಚಟುವಟಿಕೆಗಳಿಗೆ ಅವಳೇ ಸರಿ ಎನ್ನುವ ಮಟ್ಟಿಗೆ ನಾನೇ ಪ್ರೀತಿ ಪಾತ್ರಳಾಗಿದ್ದೆ. 

ಹಾಗೇಯೇ ಬೇರೆ ಹುಡುಗ ಹುಡುಗಿಯರಿಗೆ ನನ್ನ ಏಳ್ಗೆಯನ್ನು ನೋಡಿ ಹೊಟ್ಟೆ ಉರಿ ಬಂದಿತ್ತೋ ಅಥವಾ ಅವರ ಹೆತ್ತವರು ನನ್ನನೇ ಉದಾಹರಣೆಯಾಗಿ ಕೊಟ್ಟು ಕೊಟ್ಟು ಅವರ ಹೊಟ್ಟೆ ಉರಿಸಿ ಮುನಿಸಿಕೊಳ್ಳುವಂತೆ ಮಾಡಿರಲೇಬೇಕು. 

ಇದೊಂದು ರೋಗವೇ ಸರಿ! ನಮ್ಮ ಹೆತ್ತವರೇ ಅಲ್ಲಾ ಪ್ರತಿಯೊಂದು ಮನೆಯಲ್ಲೂ ಬೇರೆಯವರೊಂದಿಗೆ ತಮ್ಮ ಮಕ್ಕಳನ್ನು ಹೋಲಿಸಿ ನೋಡುವುದು. ನೋಡು ಅವರ ಮಗ ಹೇಗೆ ದುಡಿಯುತ್ತಿದ್ದಾನೇ. ನೋಡು ಅವರ ಸೊಸೆ ಎಷ್ಟೊಂದು ಕೆಲಸ ಮಾಡುತ್ತಿದ್ದಾಳೆ. ಹೀಗೆ ಹಾಗೇ ಬರೀ ಬೇರೆಯವರನ್ನು ನೋಡಿ ನಮ್ಮ ನಮ್ಮ ಶಕ್ತಿಯನ್ನು ಪರೀಕ್ಷೆ ಮಾಡಿಕೊಳ್ಳುವುದೇ ಆಯಿತು ಅನಿಸುತ್ತದೆ. 

ನನಗೂ ಈ ರೀತಿಯ ಹೆತ್ತವರ ಕಾಟ ಮುಗಿಯಿತು ಅನ್ನುವ ಹೊತ್ತಿಗೆ ಮದುವೆ ಮಾಡಿ ಕೈ ತೊಳೆದು ಕೊಂಡು ಬಿಟ್ಟರು ಅನಿಸುತ್ತದೆ. ಅದು ಯಾರು ಅಲಿಖಿತ ಶಾಸನ ಮಾಡಿದ್ದರೋ ಗೊತ್ತಿಲ್ಲ. ಓದುವುದು ಮುಗಿಯಿತು ಅಂದರೇ ಹುಡುಗಿಯರಿಗೆ ಬೇಗ ಮೂಗುದಾರ ಹಾಕಿ ಅನ್ನುತ್ತಾರೆ. 

ನಮ್ಮ ಮಗಳು ಇದೀಗ ತಾನೇ ಇಷ್ಟೊಂದು ಓದಿದ್ದಾಳೆ, ಸ್ವಲ್ಪ ಸಮಯ ಆರಾಮಾಗಿ ಅಲ್ಲಿ ಇಲ್ಲಿ ಕೆಲಸ ಹುಡುಕಿ ದುಡಿಯಲಿ ಎನ್ನುವ ಮಾತೇ ಇಲ್ಲ. ಏಯ್ ನೀನು ಏನು ದುಡಿದು ನಮ್ಮನ್ನು ಉದ್ಧಾರ ಮಾಡಬೇಕಾಗಿಲ್ಲ. ನಾವು ಗಟ್ಟಿಯಾಗಿ ಇರುವಾಗಲೇ ನೀನೊಂದು ಮನೆಗೆ ಮಹಾಲಕ್ಷ್ಮಿಯಾಗಿ ಹೋಗಿ ಬಿಟ್ಟರೇ ಅಷ್ಟು ಸಾಕು ಎನ್ನುವ ಚಿಂತೆ ಹೆಣ್ಣು ಹೆತ್ತ ಎಲ್ಲಾ ತಂದೆ ತಾಯಿಯಂದಿರದು. 

ನಾವೆಷ್ಟೇ ಓದಿ, ಎಷ್ಟೇ ದೊಡ್ಡ ಹುದ್ದೆಯನ್ನು ಅಲಂಕರಿಸಿದರೂ ನಮ್ಮನ್ನು ಇದೇ ಸಮಾಜ ಕೇವಲ ಒಂದು ಹೆಣ್ಣು ಎನ್ನುವ ರೀತಿಯಲ್ಲಿಯೇ ನಮ್ಮ ನಮ್ಮ ಹೆತ್ತವರುಗಳು ಸಹ ಕಾಣುತ್ತಾರೆ. ಅದು ಏನೂ ಆ ಭಯ  ನನಗೆ ಇನ್ನೂ ಗೊತ್ತಾಗಿಲ್ಲ. 

ಇತಿಹಾಸ ಪುರಾಣಗಳಿಂದಲೂ ಮಹಿಳೆಯರ ಪರಾಕ್ರಮ ಸಾಧನೆಗಳು  ಕಣ್ಣ ಮುಂದೆ ಇದ್ದರೂ ಅವುಗಳನ್ನೆಲ್ಲಾ ಕೇವಲ ಕಥೆಯಾಗಿ ಮಾತ್ರ ನೋಡುತ್ತಾರೆ. ಪುನಃ ಪುನಃ ತನ್ನ ಕರಳು ಬಳ್ಳಿಯನ್ನು ಇನ್ನೂ ಹೆಚ್ಚು ನಾಜೂಕಾಗಿ ಕಾಪಾಡುತ್ತೇವೆ ಎನ್ನುವ ರೀತಿಯಲ್ಲಿ ಮದುವೆ ಎಂಬ ಖೆಡ್ಡಾಕ್ಕೆ ದೂಡುತ್ತಾರೆ. 


ಹೆಣ್ಣು ಎಂದರೇ ಅವಳು ಬೇರೆಯವರ ಮನೆಯ ಸೊತ್ತು ಎಂದೇ ನೋಡುತ್ತಾರೆ. ಅವಳ ಜವಬ್ದಾರಿಯನ್ನು ಇನ್ನೂ ಏನಿದ್ದರೂ ಅವಳ ಗಂಡ ಅತ್ತೆ ಮಾವ ನೋಡಿಕೊಳ್ಳಲಿ ಎಂಬ ಭಾವನೇ ಏಕೋ ಗೊತ್ತಿಲ್ಲ! 

ಗೊತ್ತಾ ನಮ್ಮ ಜವಾಬ್ದಾರಿ ಬೇರೆಯವರು ಹೊರುವುದಕ್ಕಿಂತ ನಾವೇ ಬೇರೆಯವರ ಜವಾಬ್ದಾರಿಯನ್ನು ಹೊತ್ತುಕೊಂಡು ಇಡೀ ಮನೆಯನ್ನೇ ತೂಗಿಸಿಕೊಂಡು ಸಾಗಬೇಕಾಗಿರುತ್ತದೆ. ಆದರೂ ನಮ್ಮ ಅಪ್ಪ ಅಮ್ಮನಿಗೆ ಅಮ್ಮ ಹೇಗೆ ತಮ್ಮ ಮನೆಯನ್ನು ನಿಭಾಯಿಸುವವಳು ಎಂಬುದನ್ನು ತಮ್ಮ ತಮ್ಮ ಹೆಣ್ಣು ಮಕ್ಕಳ  ಮದುವೆ ಮಾಡುವ ವೇಳೆ ಪೂರ್ತಿ ಮರೆತು ಬಿಟ್ಟಿರುತ್ತಾರೆ. ಇದೇಯೇ  ಸಮಜಾಯಿಷಿ? ಏನು ಹೇಳುವುದು ಹೆತ್ತ ಕರುಳುಗಳಿಗೆ!!