ಗುರುವಾರ, ಜೂನ್ 28, 2012

ಕನ್ನಡ ಭಾಷೆಗೆ ಕನ್ನಡಿಗರು ಮಾತ್ರ ಬಲ


ಮಾತೃ ಭಾಷೆಯಲ್ಲಿಯೇ ಶಿಕ್ಷಣ ಬೇಕು. ಇದು ಪ್ರಸ್ತುತವಾದ ಕೂಗು. ಅದಕ್ಕಾಗಿ ಕಾನೂನಿನ ಹೋರಾಟ. ಸರ್ಕಾರವನ್ನು ಹಲವು ಧರಣಿಗಳ ಮೂಲಕ ಕನ್ನಡವನ್ನು ಪ್ರೀತಿಸುವ ಎಲ್ಲಾ ಮನಸ್ಸುಗಳು ಕೋರಿಕೊಳ್ಳುತ್ತಿವೆ.

ಈ ರೀತಿಯ ಒಂದು ಹೋರಾಟವನ್ನು ಕನ್ನಡದ ನೆಲದಲ್ಲಿ ಕನ್ನಡಕ್ಕಾಗಿ ಮಾಡುತ್ತಿರುವುದು ಬೇರೆ ರಾಜ್ಯದ ಜನಗಳಿಗೆ ಆಶ್ಚರ್ಯಕರವಾಗಿ ಕಾಣುತ್ತಿರಬಹುದು. ಏನೂ ಮಾಡುವುದು ಇದು ನಮ್ಮ ಕರ್ನಾಟಕ ರಾಜ್ಯದ ದುರಾದೃಷ್ಟ!

ಇಂದು ಕನ್ನಡದ ಬಗ್ಗೆ ನಮ್ಮ ಕನ್ನಡದ ಮನಗಳಿಗೆ ಎಷ್ಟರ ಮಟ್ಟಿಗೆ ತಾತ್ಸರವುಂಟಾಗಿದೆ ಎಂಬುದು ಇದರಿಂದ ತಿಳಿಯುತ್ತದೆ.

ಕನ್ನಡ ಎಂಬುದು ಕೇವಲ ಹಳ್ಳಿಗಾಡಿನ ಜನಗಳಿಗೆ ಸೀಮಿತವಾದದ್ದು?

ನೀನು ಏನಾದರೂ ದೊಡ್ಡ ದೊಡ್ಡ ಹುದ್ದೆ, ಕೆಲಸಗಳನ್ನು ಗಳಿಸ ಬೇಕೆಂದರೆ, ದೇಶ ವಿದೇಶವನ್ನು ಸುತ್ತಬೇಕೆಂದರೇ ಇಂಗ್ಲಿಷ್ ನ್ನು ಮಾತ್ರ ಕಲಿ ಎನ್ನುವಂತಾಗಿದೆ.

ನಾವು ಓದುವಾಗ ಇಷ್ಟೊಂದೂರ ಮಟ್ಟಿಗೆ ಕಾನ್ವೇಂಟ್ ಗಳ ಭರಾಟೆ ಇರಲಿಲ್ಲ. ಇದ್ದರೂ ಅಲ್ಲೊ ಇಲ್ಲೋ ಕಣ್ಣಿಗೆ ವಿರಳವಾಗಿ ಬೀಳುತ್ತಿದ್ದವು. ಕಾನ್ವೇಂಟ್ ಅಂದರೇ ಅದು ಇಂಗ್ಲಿಷ್ ಮಾಧ್ಯಮನ್ನು ಬೋಧಿಸುವ ಶಾಲೆಗಳು ಎಂದು ಕರೆಯುತ್ತಿದ್ದೇವು. ಕನ್ನಡದಲ್ಲಿ ಮಾತನಾಡಿದರೇ ಶಿಕ್ಷೆ ಕೊಡುತ್ತಾರಂತೆ!

ಅಲ್ಲಿ ಓದುವ ಶಾಲೆಯ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ತುಂಬ ಹೊಳೆಯುತ್ತಿದ್ದವು. ಶಿಸ್ತು ಬದ್ಧವಾದ ಶಾಲಾ ಸಮ ವಸ್ತ್ರಗಳನ್ನು ಧರಿಸಿಕೊಂಡು ಹೋಗುತ್ತಿದ್ದುದು ನಮ್ಮ ಚಿಕ್ಕ ಮನಸ್ಸುಗಳಿಗೆ ತುಂಬ ಕುತೂಹಲದ ಆಕರ್ಷಣೆಯಾಗಿ ಕಾಣುತ್ತಿತ್ತು.

ಸರ್ಕಾರಿ ಶಾಲೆಗಳೆಂದರೇ ಅದು ಬಡವರ ರೈತಾಪಿ ಜನರ ಮಕ್ಕಳಿಗೆ ಮಾತ್ರ ಎಂಬ ನೀತಿ ಹತ್ತು ಇಪ್ಪತ್ತು ವರುಷಗಳ ಹಿಂದೆಯು ಇತ್ತು. ಇಂದು ಸಹ ಇದೆ. ನಗರದಲ್ಲೂ ಸಹ ಅದು ಕೇವಲ ಸ್ಲಂ, ಬಡ ಜನರ, ಕೂಲಿ ಕಾರ್ಮಿಕರ ಮಕ್ಕಳಿಗೆ ಅದು ಪುನಃ ಹಳ್ಳಿಯಿಂದ ಬಂದಂತವರ ಮಕ್ಕಳಿಗೆ!

ನಮ್ಮ ಕೈಯಿಂದ ಖಾಸಗಿ ಶಾಲೆಗಳಿಗೆ ಕಳಿಸಲು ಸಾಧ್ಯವಿಲ್ಲ ಎಂದು ಅನಿಸಿದರೇ ನೀವು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸಬಹುದು. ಎಂಬ ಅಲಿಖಿತ ಶಾಸನ ಹಿಂದಿನಿಂದಲೂ ರೂಢಿಯಲ್ಲಿದೆ. ಅದರಂತೆ ಹೆತ್ತವರು ತಮ್ಮ ತಮ್ಮ ಶಕ್ತಿ ಅನುಸಾರ ತಮ್ಮ ತಮ್ಮ ಕಂದಮ್ಮಗಳನ್ನು ಈ ಶಾಲೆಗಳಿಗೆ ಕಳಿಸುತ್ತಾರೆ.

ಹಿಂದೆ ನಮ್ಮ ನಮ್ಮ ಮನೆಯಲ್ಲಿ ಮಾತನ್ನಾಡುವ ಭಾಷೆಯಲ್ಲಿಯೇ ನಮ್ಮ ಗುರುಗಳು ನಮಗೆ ಪಾಠವನ್ನು ಹೇಳಿಕೊಡುತ್ತಿದ್ದರು. ಕನ್ನಡದಲ್ಲಿ ಪಾಠ ಮಾಡಿದರೇ ಎಲ್ಲವೂ ಹಿತವೇ ತಾನೇ. ಅವರುಗಳು ಹೇಳುತ್ತಿದ್ದ ವಿಷಯ, ಕಥೆಗಳು, ಗಣಿತ, ವಿಙ್ಞಾನ ಪ್ರತಿಯೊಂದು ಮನನವಾಗುತ್ತಿತ್ತು.

ಆ ಸಮಯಕ್ಕೆ ನಮಗೆ ಇನ್ನೊಂದು ಶಿಕ್ಷಣ ಮಾಧ್ಯಮವು ಸಹ ಇದೆ ಎಂಬ ಅರಿವು ಸಹ ನಮಗೆ ಇರಲಿಲ್ಲ. ನಮ್ಮ ಹಳ್ಳಿಯಲ್ಲಿದ್ದ ನಮ್ಮ ಹೆತ್ತವರಿಗೂ ಇರಲಿಲ್ಲ.

ಓದುವುದು ಅಂದರೇ ಮನೆಯ ಕೆಲಸ ಕಾರ್ಯ ಬಿಟ್ಟು ಶಾಲೆಗೆ ಹೋಗುವುದು ಎನ್ನುವುದಾಗಿತ್ತು. ಇದರಿಂದ ಏನೂ ಉಪಯೋಗವಾಗುತ್ತದೆ. ಇದರಿಂದ ನಾವುಗಳು ಏನಾದರೂ ಸಾಧಿಸುವುವೆವು, ಎಂಬುದು ಸಹ ಗೊತ್ತಿಲ್ಲದಂತಹ ಮುಗ್ಧ ಮನಸ್ಸು ಉಳ್ಳವರಾಗಿದ್ದೆವು.

ನಮ್ಮ ಹೆತ್ತವರು ಸಹ ಹಾಗೆಯೇ. ಫೇಲ್ ಆಗುವವರೆಗೂ ನೀ ಓದು ಮಗಾ. ಎಂದು ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರೂ. ನಮ್ಮ ಹಳ್ಳಿಯಲ್ಲಿ ಒಂದು ಮಾತು ಬಲು ಪ್ರಸಿದ್ಧಿಯಾಗಿತ್ತು. ಯಾರಾದರೂ ಕೇಳಿದರೇ ನಿಮ್ಮ ಮಗಾ ಏನೂ ಮಾಡುತ್ತಿದೆ? ಎಂದರೇ. ಇನ್ನೇನೂ ಶಾಲೆಗೆ ಹೋಗುತ್ತಿದೆ. ಎಸ್. ಎಸ್. ಎಲ್. ಸಿ ವರೆಗೆ ಓದಲಿ ಬಿಡು. ಹೇಂಗೂ ಅದರಲ್ಲಿ ಡುಮುಕ್ಕಿ ಹೊಡೆಯುತ್ತದೆ. ಆಮೇಲೆ ಬ್ಯಾಸಾಯಕ್ಕೆ ಹಾಕಿಕೊಂಡರಾಯಿತು ಎನ್ನುತ್ತಿದ್ದರು.

ಓದುವುದು ಅಂದರೇ ಹತ್ತನೇ ತರಗತಿಯವರೆಗೆ ಮಾತ್ರ ಎಂಬುದಾಗಿತ್ತು. ಮನೆಯವರು ಸಹ ಹತ್ತನೇ ತರಗತಿಯವರೆಗೆ ಅದು ಹೇಗೆ ನೀನು ಉತ್ತೀರ್ಣನಾಗಿದ್ದೀಯಾ ಎಂದು ವಿಚಾರಿಸುತ್ತಿರಲಿಲ್ಲ. ಶಾಲೆಗೆ ತಪ್ಪದೇ ಹೋಗುತ್ತಾನಲ್ಲಾ ಅದಕ್ಕೆ ಪಾಸ್ ಆಗಿದ್ದಾನೆ ಎಂದುಕೊಳ್ಳುತ್ತಿದ್ದರು.

ಆದರೆ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಈ ಮಾನದಂಡವನ್ನು ಯಾರೂ ಉಪಯೋಗಿಸುತ್ತಾರೆ? ಇದರಿಂದ ದಾರಾಳವಾಗಿ ಸಾಮಾನ್ಯ ವಿದ್ಯಾರ್ಥಿಗಳು ಒಂದು, ಎರಡು, ಮೂರು ಸಬ್ಜೇಕ್ಟ್ ಗಳಲ್ಲಿ ಫೇಲ್ ಆಗುತ್ತಿದ್ದರೂ.  ಉಪ ಪರೀಕ್ಷೆಗಳನ್ನು ತೆಗೆದುಕೊಂಡು ಪಾಸು ಮಾಡುವವರು ಮಾಡುತ್ತಿದ್ದರು. ಮಿಕ್ಕಿದವರು ವಿಧ್ಯೆಗೆ ಒಂದು ದೊಡ್ಡ ನಮಸ್ಕಾರವನ್ನು ಹಾಕಿ ಕೃಷಿ ಆರಂಭ ಮಾಡಲು ತೊಡಗುತ್ತಿದ್ದರು.

ಪ್ರಳಯಾಂತಕ, ಜಾಣ, ಚುರುಕು ವಿದ್ಯಾರ್ಥಿಗಳು ಮಾತ್ರ ಪಾಸಾಗಿ ಮುಂದೆ ಪಿ.ಯು.ಸಿ, ಬಿ.ಎ, ಟಿ.ಸಿ.ಎಚ್ ಇತ್ಯಾದಿ ಎಂದು ಓದಲು ಪಟ್ಟಣದ ಕಡೆ ಹೆಜ್ಜೆ ಹಾಕುತ್ತಿದ್ದರು.

ನೀವು ಗಮನಿಸಿರಬಹುದು. ಹಳ್ಳಿಯಲ್ಲಿನ ಬಹುಪಾಲು ವಿದ್ಯಾರ್ಥಿಗಳು ಹತ್ತನೇ ತರಗತಿಯಲ್ಲಿ ಡುಮುಕ್ಕಿ ಹೊಡೆಯುತ್ತಿದ್ದದೂ ಇಂಗ್ಲಿಷ್ ನಲ್ಲಿ. ಅದು ಅಷ್ಟರ ಮಟ್ಟಿಗೆ ಕಬ್ಬಿಣದ ಕಡಲೆಯಾಗಿರುತ್ತಿತ್ತು.

ಆದರೇ ಇಂದಿನ ಯುಗದಲ್ಲಿ ನಮ್ಮ ಪ್ರತಿಯೊಂದು ಚಿಕ್ಕ ಹುಡುಗನಿಗೂ ಗೊತ್ತು ಓದಿನ ಗುರಿ. ಶಿಕ್ಷಣ ಅಂದರೇ ಏನು? ತಾನು ಏಕೆ ಓದಬೇಕು? ಎಷ್ಟು ಮಾರ್ಕ್ಸ್ ತೆಗೆದುಕೊಳ್ಳಬೇಕು? ಎಷ್ಟು ಅಂಕ ಪಡೆದರೇ ಎಲ್ಲಿ ಸೀಟ್ ಸಿಗುವುದು? ಯಾವ ಕಾಲೇಜಿನಲ್ಲಿ ಓದಿದರೇ ಯಾವ ಯಾವ ಕೆಲಸಗಳು ಸಿಗುವುದು? ಇತ್ಯಾದಿ ವಿಷಯಗಳನ್ನು ಅವರು ಎಷ್ಟರ ಮಟ್ಟಿಗೆ ಮನನ ಮಾಡಿರುತ್ತಾರೆ ಎಂದರೇ...? ಕೇಳುವುದೇ ಬೇಡ ಬಿಡಿ.

ಇಂದು ಹೆತ್ತವರಿಗೆ ಮಕ್ಕಳು ಓದುತ್ತಿದ್ದಾರೆಂದರೆ ಏನೋ ಒಂದು ಯುದ್ಧಕ್ಕೆ ಸಿದ್ಧತೆಗೊಳ್ಳುತ್ತಿದ್ದಾರೆ ಎಂಬ ಅನುಭವ. ಅಷ್ಟರ ಮಟ್ಟಿಗೆ ಪ್ರತಿಯೊಂದು ಕುಟುಂಬವು ಶಿಕ್ಷಣದ ಮಹತ್ವವನ್ನು ಕಂಡುಕೊಂಡಿದೆ. ಇಂದು ಹಳ್ಳಿಗಾಡಿನ ಮಕ್ಕಳು ಸಹ ಹತ್ತು ಇಪ್ಪತ್ತು ಕಿಲೊ ಮೀಟರ್ ದೂರದ ಕಾನ್ವೇಂಟ್ ಗಳಿಗೆ ಬಂದು ಇಂಗ್ಲಿಷ್ ಮಾಧ್ಯಮದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.  ಬಾಯಿಬಿಟ್ಟರೇ ಮಮ್ಮಿ, ಡ್ಯಾಡಿ,ಅಂಟಿ,ಅಂಕಲ್ ಮುಂತಾದ ಇಂಗ್ಲಿಷ್ ಪದಪುಂಜಗಳು ಚಿಕ್ಕ ಚಿಕ್ಕ ಬಾಯಿಂದ ಪುಂಕಾನುಪುಂಕವಾಗಿ ಹೊರ ಬರುತ್ತಿವೆ. ಅಷ್ಟರ ಮಟ್ಟಿಗೆ ಇಂಗ್ಲಿಷ್ ನಮ್ಮ ನಮ್ಮ ಮನೆಗಳ ಮನದಲ್ಲಿ ಹಾಸು ಹೊಕ್ಕಾಗಿದೆ.

ಗಮನಿಸಿ. ಇಂದು ಯಾವುದೇ ಒಂದು ಕೆಲಸವನ್ನು ದೊರಕಿಸಿಕೊಳ್ಳಬೇಕೆಂದರೇ ಅದು ವಿಪರೀತ ಕಷ್ಟ. ಹತ್ತು ಹಲವಾರು ಟೆಸ್ಟ್ ಗಳು. ಅದಕ್ಕಾಗಿ ವಿವಿಧ ರೀತಿಯಲ್ಲಿ ನಾವುಗಳು ಸಿದ್ಧತೆಯನ್ನು ಮಾಡಿಕೊಳ್ಳಬೇಕು. ದೊಡ್ಡ ದೊಡ್ಡ ಓದನ್ನು ಓದಬೇಕೆಂದರೇ ಇಂಗ್ಲಿಷ್ ಬೇಕೇ ಬೇಕು. ಕನ್ನಡದಲ್ಲಿ ಮಾತ್ರ ಓದಿ ಏನಾದರೂ ಸಾಧಿಸಿದವರು ಇದ್ದಾರೆಯೇ ತೋರಿಸಿ. ಎಂದು ಮಕ್ಕಳುಗಳು ಹಿರಿಯರನ್ನು ಪ್ರಶ್ನೆ ಮಾಡುತ್ತಾರೆ.

ಯಾವುದೇ ಒಂದು ವಿಷಯದ ಬಗ್ಗೆ ಹೆಚ್ಚು ಅರಿಯಬೇಕು ಎಂದರೇ ಅದೇ ಇಂಗ್ಲಿಷ್ ಪುಸ್ತಕಗಳ ಮೊರೆ ಹೋಗಬೇಕು.

ಉನ್ನತ ಶಿಕ್ಷಣವನ್ನು ನೀಡುವ ಎಲ್ಲಾ ಕರ್ನಾಟಕದ ವಿಶ್ವ ವಿದ್ಯಾನಿಲಯಗಳು ದೊಡ್ಡ ವಿಷಯಗಳನ್ನು ಇಂಗ್ಲಿಷ್ ನಲ್ಲಿಯೇ ಕೊಡುವುದು. ಪುಸ್ತಕಗಳು ಸಹ ಕನ್ನಡದಲ್ಲಿ ದೊರೆಯುವುದಿಲ್ಲ. ಎಕ್ಸಾಮ್ ಗಳು ಸಹ ಕನ್ನಡ ಮಾಧ್ಯಮದಲ್ಲಿ ಇರುವುದಿಲ್ಲ. ಕನ್ನಡದಲ್ಲಿ ಅಭ್ಯಾಸ ಮಾಡಬೇಕೆಂದು ಬರುವ ಕನ್ನಡದ ಮನಗಳಿಗೆ ಹೆಜ್ಜೆ ಹೆಜ್ಜೆಗೂ ಇಂಗ್ಲಿಷ್ ಕಾಡುತ್ತದೆ. ಇದರಿಂದ ತಮ್ಮ ವ್ಯಕ್ತಿತ್ವದಲ್ಲಿಯೇ ಪ್ರತಿಕೂಲ ಪರಿಣಾಮಗಳನ್ನು ಅನುಭವಿಸಿ ಕೀಳುಹಿರಿಮೆ ಬೆಳೆಸಿಕೊಳ್ಳುತ್ತಾ ತಾವೆ ಕೊರಗುವುಂತಾಗಿದೆ.

ಈ ಎಲ್ಲಾ ಕಾರಣಗಳನ್ನು ನಮ್ಮ ಸರ್ಕಾರ ಮತ್ತು ಹಿರಿ ಕಿರಿ ಹೋರಾಟಗಾರರು ನೋಡುತ್ತಿದ್ದಾರೆಯೇ? ಇದನ್ನು ಬದಲಾಯಿಸುವ ಕಡೆ ಇವರು ಏಕೆ ಮನಸ್ಸು ಮಾಡಬಾರದು.

ಕನ್ನಡ ಮಾಧ್ಯಮದಲ್ಲಿ ಓದಿದರೂ ಸಹ ಏನಾದರೂ ಸಾಧಿಸಬಹುದು. ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾವಂತನಿಗೂ ಸಹ ಸುಲಭವಾಗಿ ಕೆಲಸಗಳು ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಸಿಗುವುವು ಎಂಬ ಭರವಸೆಯ ಬೆಳಕನ್ನು ಶಾಸನವನ್ನು ರೂಪಿಸುವವರು ಕೊಡಬೇಕು.

ಅದು ಬಿಟ್ಟು ಕೇವಲ ಅಭಿಮಾನಕ್ಕೊಸ್ಕರ ಕನ್ನಡದಲ್ಲಿಯೇ ಓದಿ ಎಂದರೇ ಯಾರೂ ಕೇಳುತ್ತಾರೆ?

ಯಾಕೆಂದರೇ ಬೆಳೆದು ದೊಡ್ಡವರಾದ ಮೇಲೆ ಕೆಲಸ ಮಾಡಲೇಬೇಕು ಅಲ್ಲವಾ?

ಬೆಂಗಳೂರಿನಂತಹ ನಗರದಲ್ಲಿ ಒಂದು ಚಿಕ್ಕ ಕೆಲಸವನ್ನು ಗಿಟ್ಟಿಸಲು ಸಹ ಟಸ್ಸೂ, ಪುಸ್ಸೂ ಇಂಗ್ಲಿಷ್ ಮಾತನ್ನಾಡಬೇಕಾದಂತಹ ವ್ಯವಸ್ಥೆಯನ್ನು ನಿರ್ಮಿಸಿರುವುದಾದರೂ ಯಾರೂ?

ಇದು ಮೊದಲು ಸರಿಯಾದರೇ ಈ ರೀತಿಯ ಧರಣಿ, ಹೋರಾಟಗಳಿಲ್ಲದೇ ಕನ್ನಡ ಜನಗಳು ಕನ್ನಡದ ಬಗ್ಗೆ ಇಟ್ಟುಕೊಂಡಿರುವ ಅಂತರಂಗದ ಅಭಿಮಾನವನ್ನು ತಾವು ಮಾಡುವ ಸಂಸ್ಥೆಯಲ್ಲಿ, ಕೆಲಸಗಳಲ್ಲೂ ಮತ್ತು ಎಲ್ಲಾ ರಂಗದಲ್ಲೂ ಕೆಂಪು ಹಳದಿ ಪತಾಕೆಯನ್ನು ಆರಿಸುವವರು.

ಗಮನಿಸಿ ಮತ್ತು ಮನನ ಮಾಡಿಕೊಳ್ಳಿ ಕನ್ನಡಕ್ಕೆ ಕನ್ನಡಿಗರೇ ಬಲ!

ಕನ್ನಡದ ಜನರು ಮಾತ್ರ ಕನ್ನಡವನ್ನು ಕಲಿಯುವತ್ತಾ ಅಸಕ್ತಿ ಹೊಂದಿರುವವರು. ಪರ ರಾಜ್ಯದವರೂ ಯಾಕೆ ಈ ಭಾಷೆಯನ್ನು ಕಲಿಯುತ್ತಾರೆ? ಕನ್ನಡವೆಂದರೇ ಕೇವಲ ಕಥೆ, ಕಾದಂಬರಿ, ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಬಾರದು. ಅದರ ಬಲಿಷ್ಟತೆಯನ್ನು ಜಗತ್ತಿಗೆ ತೋರಿಸುವಂತೆ ಮಾಡುವ ಶಕ್ತಿ ಪ್ರತಿಯೊಬ್ಬರಲ್ಲೂ ಇದೆ. ಅದರ ಕಡೆ ಗಮನ ಹರಿಸಬೇಕು ಅಷ್ಟೇ!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ