ಶುಕ್ರವಾರ, ಜೂನ್ 15, 2012

ಕನ್ನಡ ಸಂಸ್ಕೃತಿ ಬತ್ತಲಾರದ ತೊರೆ


ಕನ್ನಡ, ಕರ್ನಾಟಕ ಎಂದರೇ ಏನೋ ಒಂದು ಆಹ್ಲಾದ!

ಈ ಅಕ್ಷರಗಳಲ್ಲಿಯೇ ಒಂದು ಒಲವಿದೆ, ಮೃದುವಿದೆ,ಮಮತೆಯಿದೆ,ವೈವಿಧ್ಯತೆಯಿದೆ,ನೈಸರ್ಗಿಕತೆಯ ಶ್ರೀಮಂತಿಕೆಯಿದೆ, ಉತ್ಕೃಷ್ಟತೆಯಿದೆ. ಸಂಪತ್ತಿನ ಖನಿ, ಮಹಾನ್ ಮೇಧಾವಿಗಳ ಪಡೆ, ಸುಸಂಸ್ಕೃತ ಸಂಸ್ಕೃತಿಯ ಸಂತತಿ. ಹೀಗೆ ಒಂದು ಕ್ಷಣ ಕನ್ನಡ ಎಂದರೇ ಒಂದು ಮಹಾನ್ ಇತಿಹಾಸ ಪರಂಪರೆಯ ದರ್ಶನವಾಗುತ್ತದೆ.

ಕರ್ನಾಟಕ ಬೌಗೋಳಿಕವಾಗಿಯು ಅಗಾಧವಾದ ಸಸ್ಯ, ಜೀವ ಸಂಕುಲ,ನೈಸರ್ಗಿಕವಾದ ನೆಲೆಬೀಡಾಗಿದೆ. ಎಲ್ಲೆಲ್ಲಿ ನೋಡಿದರೂ ಉನ್ನತವಾದ ಗಿರಿಶಿಖರಗಳು, ಅಲ್ಲಿರುವ ಗಗನ ಚುಂಬಿ ಬೃಹತ್ತಾದ ಮರಗಳು. ಪಶ್ಚಿಮ ಘಟ್ಟಗಳೇಂದರೇ ಕನ್ನಡ ಜನತೆಗೆ ಜೀವ ಜಲವನ್ನು ನೀಡುವ ಕಾಮದೇನು. ಅಲ್ಲಿ ಇರದ ಸಸ್ಯ ಮೊಲವೇ ಇಲ್ಲವೇನೋ. ಅಲ್ಲಿರುವ ಪ್ರಾಣಿ ಪಕ್ಷಿಗಳೇ ಎಲ್ಲೂ ಇಲ್ಲವೇನೋ. ಅದಲ್ಲದೆ ನಮ್ಮ ನಾಡಿನಲ್ಲಿ ಹರಿಯುತ್ತಿರುವ ನೂರಾರು ಹಳ್ಳ ಕೊಳ್ಳ, ನದಿಗಳ ಉಗಮ ಸ್ಥಾನ ಈ ನಮ್ಮ ಪಶ್ಚಿಮ ಘಟ್ಟಗಳಾದ ಗಿರಿ ಶಿಖರಗಳು.

ಇಂದಿನ ಅಧುನಿಕ ಜಗತ್ತಿನಲ್ಲಿ ನಾವುಗಳು ಅಲ್ಲಿಗೆ ಸುಲಭವಾಗಿ ಹೋಗಬಹುದಾಗಿದೆ. ಅಲ್ಲಿ ಸ್ವತಃ ನಾವುಗಳೇ ನಡೆದಾಡುತ್ತ ಕಾಲ ಕಳೆದು ಬರಬಹುದಾಗಿದೆ. ಅದಕ್ಕಾಗಿಯೇ ಕರ್ನಾಟಕ ಅರಣ್ಯ ಇಲಾಖೆ ಸಾಕಷ್ಟು ರೀತಿಯಲ್ಲಿ ಮೃಗಾಲಯ, ಜಂಗಲ್ ಕಾಟೇಜ್ ಈ ರೀತಿಯಲ್ಲಿ ದಟ್ಟ ಅರಣ್ಯದ ಅನುಭವವನ್ನು ಸವಿಯುವ ಅವಕಾಶವನ್ನು ಪ್ರತಿಯೊಬ್ಬರಿಗೂ ಮಾಡಿಕೊಟ್ಟಿದೆ.

ನಿಸರ್ಗ ಸಂಪತ್ತು ಪ್ರತಿಯೊಬ್ಬರಿಗೂ ಸೇರಿದ್ದು. ಭೂ ತಾಯಿಯ ಒಡಲಲ್ಲಿ ಏನಿಲ್ಲಾ? ಏನುಂಟು? ಬಲ್ಲವರೇ ಬಲ್ಲರು. ನಮ್ಮ ಕನ್ನಡ ನೆಲ ಜಲ ಇದಕ್ಕೆ ಸಾಕ್ಷಿಭೂತವಾಗಿದೆ. ಹಟ್ಟಿಯ ಚಿನ್ನದ ಗಣಿ ಇದಕ್ಕೆ ಸಾಕ್ಷಿ. ಚಿನ್ನ ಸೇರಿ ಪ್ರತಿಯೊಂದು ಖನಿಜ ಸಂಪತ್ತುಗಳನ್ನು ತನ್ನ ಒಡಲಿನಲ್ಲಿ ಈ ಭೂ ತಾಯಿ ಕಾಪಿಟ್ಟುಕೊಂಡಿದ್ದಾಳೆ.

ವರುಷದಲ್ಲಿ ಅತಿ ಹೆಚ್ಚು ಮಳೆಯನ್ನು ಪಡೆಯುವ ಜಾಗವು ನಮ್ಮ ಕನ್ನಡ ನಾಡಿನಲ್ಲಿ ಇರುವುದು ಒಂದುವರದಾನವೇ ಸರಿ. ಅಗುಂಬೆ ದೇಶದಲ್ಲಿಯೇ ಪ್ರಶಿದ್ಧ ಸ್ಥಳ. ಅಲ್ಲಿನ ಸೂರ್ಯಾಸ್ತಮಾನವನ್ನು ನೋಡುವುದು ಕಣ್ಣಿಗೆ ಒಂದು ಹಬ್ಬ!

ಜೋಗ ಜಲಪಾತ ವಿಶ್ವದಲ್ಲಿಯೇ ಶ್ರೇಷ್ಠವಾದ ಅತಿ ದೊಡ್ಡ ಜಲಪಾತ. ಇದರ ಉಪಯೋಗವನ್ನು ಮಹಾನ್ ಇಂಜೀನಿಯರ್ ಸರ್. ಎಂ. ವಿಶ್ವೇಶ್ವರಯ್ಯನವರ ದೃಷ್ಟಿಯಿಂದ ನಾವು ಇಂದು ಮನೆ ಮನೆ ಬೆಳಕನ್ನು ಕಂಡಿದ್ದೇವೆ. ವಿಶ್ವೇಶ್ವರಯ್ಯನವರ ಜಾಣ್ಮೆಯ ಕೊಡುಗೆಯಾಗಿ ಮೈಸೂರು, ಮಂಡ್ಯದ ಜನತೆಯ ಹೊಟ್ಟೆಯನ್ನು ನಿತ್ಯ ಹಸಿರುವ ಮಾಡುವ ಯೋಜನೆ ಮೈಸೂರು ಕನ್ನಾಂಬಾಡಿ ಕಟ್ಟೆ, ಭದ್ರಾವತಿಯ ಕಾರ್ಖಾನೆಗಳು ಇಂದು ನಮ್ಮ ಮುಂದೆ ಇವೆ.

ಈ ರೀತಿಯಲ್ಲಿ ಹೊಸ ಹೊಸ ಗಿರಿ, ಜಲಪಾತ, ಝರಿಗಳು ನಿತ್ಯವು ನಮ್ಮಗಳನ್ನು ಹೊಸ ಹೊಸ ಅಚ್ಚರಿಯ ಕಡೆಗೆ ಕರೆದುಕೊಂಡು ಹೋಗಿ ಕನ್ನಡ ನಾಡನ್ನು ಪ್ರತಿಯೊಬ್ಬರೂ ಇನ್ನೂ ಹೆಚ್ಚು ಮೆಚ್ಚುವಂತೆ ಮಾಡುತ್ತವೆ.

ನಮ್ಮ ನಾಡು ವಿವಿಧ ಧರ್ಮಕ್ಕೆ ಹೆಸರುವಾಸಿಯಾದದ್ದು. ಹಿಂದಿನಿಂದಲೂ ರಾಜ ಮಹಾರಾಜರ ಕಾಲದಿಂದಲೂ ಬಹು ಧರ್ಮಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಲೇ ಬರುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಇಂದು ನಮ್ಮನ್ನು ಆಶ್ಚರ್ಯದ ಕಡೆಗೆ ನೋಡುವಂತೆ ನಿಂತಿರುವ ಶ್ರವಣ ಬೆಳಗೋಳ, ಬೆಲೂರು ಹಳೆಬೀಡು, ಹಂಪಿ, ಬಿಜಾಪುರದ ಗೂಲ್ ಗುಂಬಜ್,ಶ್ರಿರಂಗಪಟ್ಟಣ, ಮೈಸೂರಿನ ಚಾಮುಂಡೇಶ್ವರಿ ದೇವಸ್ಥನಗಳೇ ಮುಖ್ಯ ಉದಾಹರಣೆಗಳು. ಇವುಗಳೆಲ್ಲಾ ನಮ್ಮ ನಾಡಿನಲ್ಲಿ ಅಂದು ಇಂದು ಇರುವ ವಾಸ್ತು ಶಿಲ್ಪಿಗಳಿಗಳ ಚಾಕಚಕ್ಯತೆಗೆ ನಿದರ್ಶನ.

ಇವುಗಳನ್ನೂ ಕೇವಲ ಆಯಾ ಆ ಧರ್ಮಿಯರಲ್ಲದೇ ಎಲ್ಲ ಜನಗಳು ಉಪಯೋಗಿಸುವುದು. ಹಬ್ಬ-ಹರಿ ದಿನಗಳಲ್ಲಿ ಪ್ರತಿಯೊಂದು ಧರ್ಮಿಯರು ಒಟ್ಟಿಗೆ ಕೊಡಿ ಆಚರಿಸುವುದು. ಬೇರೊಂದು ಜಾಗದಲ್ಲಿ ಕಾಣುವುದು ಬಲು ಕಷ್ಟ.

ನೀವು ಅಲ್ಲಿ ಇಲ್ಲಿ ಕೇಳಿರಬಹುದು. ಚಿತ್ರದುರ್ಗದ ನಾಯಕನಹಟ್ಟಿಯಲ್ಲಿನ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಜೀವೈಕ್ಯವಾದ ಸ್ಥಳದಲ್ಲಿರುವ ದೇವಳದ ಗೂಪುರ ಮಸೀದಿಯ ಶೈಲಿಯ ಕಟ್ಟಡವಾಗಿದೆ. ಇದನ್ನು ಹೈದರಾಲಿಯು ಕಟ್ಟಿಸಿದ ಎಂಬ ಮಾತು. ಇದಕ್ಕೆ ಸಾಕ್ಷಿ ಎನ್ನುವಂತೆ ವರುಷಕ್ಕೊಮ್ಮೆ ಜರುಗುವ ಜಿಲ್ಲೆಯ ಅತಿ ದೊಡ್ಡ ರಥ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಧರ್ಮೀಯರುಗಳನ್ನು ಸೇರಿಕೊಂಡು ಪ್ರತಿಯೊಂದು ಧರ್ಮದವರು ಭಾಗವಹಿಸುತ್ತಾರೆ ಮತ್ತು ಆ ದೇವರ ಕೃಪೆಗೆ ಪಾತ್ರರಾಗುತ್ತಾರೆ.

ಹಾಗೆಯೇ ಮತ್ತೊಂದು ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ. ಅಲ್ಲಿ ಬಾಬನು ಇದ್ದಾನೆ ಮತ್ತು ದತ್ತತ್ರೇಯನೂ ಇದ್ದಾನೇ. ಇಲ್ಲಿ ಆ ದೇವಸ್ಥಳ ಹಿಂದೂ ಮತ್ತು ಮುಸ್ಲಿಂ ಇಬ್ಬರಿಗೂ ಆರಾಧನ ಕ್ಷೇತ್ರವಾಗಿ ಪ್ರಸಿದ್ಧವಾಗಿದೆ.

ಹೀಗೆ ನಮ್ಮ ಬಹು ಧರ್ಮದ ಸಹ ಬಾಳ್ವೆಗೆ ಒಂದು ಇದು ಚಿಕ್ಕ ದರ್ಶನ.

ಈ ರೀತಿಯಲ್ಲಿ ಅದೆಷ್ಟೋ ಸ್ಥಳಗಳಲ್ಲಿ ಎಲ್ಲಾ ಧರ್ಮದವರು ಸಹ ಬಾಳ್ವೆಯಿಂದ ನಾವೆಲ್ಲಾ ಒಂದೇ ಕನ್ನಡಿಗರು ಎಂದು ಪರಸ್ಪರ ಸೇರಿಕೊಂಡು ತಮ್ಮನ್ನು ತಾವು ಸಂತೈಸಿಕೊಳ್ಳುವ ನೋಟ ಬೇರೆ ಯಾವ ಜಾಗಗಳಲ್ಲಿಯು ಕಾಣಸಿಗುವುದಿಲ್ಲ. ಇದೇ ಅಲ್ಲವಾ ನಿಜವಾದ ಏಕತೆ!

ಧರ್ಮಕ್ಕೆ ಸಂಬಂಧಿಸಿದ ಮಹಾನ್ ಕ್ರಾಂತಿಗೆ ನಮ್ಮ ನಾಡು ಸಾಕ್ಷಿ ಎಂದರೇ.. ಅದು ಹನ್ನೆರಡನೇ ಶತಮಾನದಲ್ಲಿ ಜರುಗಿದ ವಚನಕ್ರಾಂತಿ. ಅತ್ಯಂತ ಸುಲಭವಾದ ಅಚ್ಚ ಕನ್ನಡದ ವೈಚಾರಿಕ ಸಾಹಿತ್ಯ ಸೃಷ್ಟಿ. ಅದು ಒಂದು ಮಹಾನ್ ಧರ್ಮದ ಉಗಮಕ್ಕೆ ಕಾರಣವಾಯಿತು. ಕೆಳ ಮಟ್ಟದ ಕಂದಾಚಾರ, ಉಚ್ಛ ವರ್ಗದವರ ಶೋಷಣೆಯ ವಿರುದ್ಧವಾಗಿ ನಿಂತು ಸರ್ವರಿಗೂ ಸಮಬಾಳ್ವೆ ಮತ್ತು ಸಮಾನ ಅವಕಾಶವನ್ನು ಧರ್ಮದ ನೆಲೆಯಲ್ಲಿ ದೊರಕಿಸಿಕೊಟ್ಟ ಕೀರ್ತಿಗೆ ಕಲ್ಯಾಣದ ಅಣ್ಣ ಶ್ರೀ ಬಸವಣ್ಣನವರ ಕೊಡುಗೆ ವಿಶ್ವವೇ ಒಮ್ಮೆ ಹಿಂತಿರುಗಿ ನೋಡುವಂತೆ ಮಾಡಿದ್ದು. ಆ ಸ್ಥಳ ನಮ್ಮ ಕರ್ನಾಟಕ ಎಂದರೇ ಎಷ್ಟೊಂದೂ ಹೆಮ್ಮೆಯಲ್ಲವಾ?

ನಮ್ಮ ಕನ್ನಡ ಜನಗಳೆಂದರೇ ಸತ್ಯ ಸಂದರು. ಮಮತೆಯ ಮನಸ್ಸುಳ್ಳವರು ಎಂಬುದಕ್ಕೆ ನಮ್ಮ ಜನಪದದಲ್ಲಿ ಇಂದಿಗೂ ಹಚ್ಚ ಹಸಿರಾಗಿ ಅತ್ಯಂತ ದೊಡ್ಡ ಸತ್ಯ ಮಾದರಿಯಾಗಿರುವ ಗೋವಿನ ಹಾಡು. ಈ ಹಾಡೇ ಸಾಕು ನಾವುಗಳು ಎಂಥವರು ನಮ್ಮ ಮಣ್ಣಿನ ಹಿರಿಮೆ ಏನೂ ಎಂಬುದನ್ನು ಅರಿಯಲು. ಅಷ್ಟರ ಮಟ್ಟಿಗೆ ಸತ್ಯದ ಬಗ್ಗೆ ಸತ್ಯದ ಗೆಲುವಿಗೆ ಯಾವತ್ತೂ ಕಟಿಬದ್ಧರಾದವರು ನಮ್ಮ ಜನ ಮನ.

ಪರರನ್ನು ಕಂಡರೇ ಮಮ್ಮಲು ಮರುಗುವ ಗುಣ, ಸ್ನೇಹವೇ ನಮ್ಮ ಮುಖ್ಯ ಅಸ್ತ್ರ.

ಯಾರಾದರೂ ನಮ್ಮಲ್ಲಿಗೆ ಬಂದರೇ ಸಾಕು ಅವರನ್ನು ಸ್ವತಃ ವಿಚಾರಿಸಿ ಉಪಚರಿಸುವ ಗುಣ ಬೇರೊಂದು ಜನಾಂಗದಲ್ಲಿ ಕಾಣಲಾರೆವು. ಅತಿಥಿಗಳೆಂದರೇ ದೇವರೇ ಸರಿ. ಅವರ ಉಪಚಾರವನ್ನು ದೇವರನ್ನು ಉಪಚರಿಸಿದ ರೀತಿಯಲ್ಲಿಯೇ ಉಪಚರಿಸಿ ಸತ್ಕರಿಸುವೆವು.

ಇದು ಪ್ರತಿ ಮನೆ ಮನೆಯಲ್ಲೂ ಮನಸ್ಸಿನಲ್ಲೂ ಜಾರಿಯಲ್ಲಿರುವ ಒಂದು ಅಲಿಖಿತ ಸಂಸ್ಕೃತಿ. ಇದಕ್ಕೆ ಸಾಕ್ಷಿ ನಮ್ಮ ಇಂದಿನ ಬೆಂಗಳೂರು. ನೋಡಿ ಇದೇ ಒಂದು ಮಿನಿ ಭಾರತವಾಗಿದೆ. ಇಲ್ಲಿರುವ ಪ್ರತಿಯೊಂದು ಹೊರ ರಾಜ್ಯದವರು ಎಷ್ಟರ ಮಟ್ಟಿಗೆ ಇದು ಅವರವರ ತವರು ಮನೆ ರಾಜ್ಯವೇನೋ ಎಂಬ ರೀತಿಯಲ್ಲಿ ನಮ್ಮಲ್ಲಿಯೇ ಬೆರತು ಹೋಗಿ ಬಿಟ್ಟಿದ್ದಾರೆ! ಅಷ್ಟರ ಮಟ್ಟಿಗೆ ನಮ್ಮ ಕನ್ನಡದ ಜನಮನಗಳು ಧಾರಳತನವನ್ನು ತೋರಿಸುತ್ತಲೇ ಇರುತ್ತಾರೆ!!!?

ರಾಜಕೀಯವಾಗಿ, ಅರ್ಥಿಕವಾಗಿ, ಸಾಂಸ್ಕೃತಿಕವಾಗಿ ಅತಿರಥ ಮಹಾರಥರನ್ನು ನಮ್ಮ ನಾಡು ಕಂಡಿದೆ. ಯಾವತ್ತಿಗೂ ಕಲೆ, ಕಲಾವಿದರಿಗೆ ಮತ್ತು ಸಾಧಕರಿಗೆ ನಮ್ಮ ಕನ್ನಡಾಂಬೆ ಬಂಜೆಯಾಗಿಲ್ಲ. ನಿತ್ಯ ನೂರಾರು ಸಾಧಕರು ತಮ್ಮ ಹಿರಿಯ ಹಿರಿಮೆ ಗರಿಮೆಯ ನೊಗವನ್ನು ಹೊತ್ತುಕೊಂಡು ಪ್ರತಿಯೊಂದು ರಂಗದಲ್ಲೂ ಮುಂದೆ ಮುಂದೆ ಸಾಗುತ್ತಾ ವಿಶ್ವದಲ್ಲಿಯೇ ಕನ್ನಡ ಎಂದರೇ ಬೆರಗುಗಣ್ಣಿಂದ ನೋಡುವಂತೆ ಮಾಡಿದ್ದಾರೆ.

ಒಂದು ನಾಡನ್ನು ಸುಖ ಸಂಪತ್ತುಭರಿತವಾದದ್ದು ಎಂಬುದನ್ನು ಗುರುತಿಸುವುದು ಅಲ್ಲಿರುವ ಸುಸಂಸ್ಕೃತ ವಿಧ್ವಾಂಸರುಗಳಿಂದ ಮತ್ತು ಸಜ್ಜನರುಗಳಿಂದ.

ನಮ್ಮ ಮಣ್ಣಿನಲ್ಲಿ ಸರಸ್ವತಿಯ ಪುತ್ರರ ಸಾಲು ಸಾಲೇ ಇದೆ. ಪಂಪ, ರನ್ನ ರಿಂದ ಮೊದಲು ಮಾಡಿ ರಾಷ್ಟ್ರವೇ ಮೆಚ್ಚುವ ರೀತಿಯಲ್ಲಿ ಕನ್ನಡ ಪದಗಳನ್ನು ತಮ್ಮ ಲೇಖನಿಯ ಮೊಲಕ ಕನ್ನಡ ಜನಕ್ಕೆ ಕೊಟ್ಟು ರಾಷ್ಟ್ರ ಕವಿಯೆಂದು ಬಿರುದು ಪಡೆದ ಕುವೆಂಪು.

ಕನ್ನಡವೇ ಎಂದೆಂದಿಗೂ ಮೊದಲು ಎಂಬ ರೀತಿಯಲ್ಲಿ ೮ ಙ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವುದು ನಮ್ಮ ಕನ್ನಡ ಭಾಷೆಯ ಸತ್ವಕ್ಕೆ ಒಂದು ಕೀರಿಟ. ಭಾರತದ ಯಾವೊಂದು ಭಾಷೆಯು ಇಷ್ಟೊಂದು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿಲ್ಲ. ಇಲ್ಲಿನ ಸರಸ್ವತಿ ಪುತ್ರರು ತಮ್ಮ ತಮ್ಮ ಕೃತಿಗಳ ಮೊಲಕ ವಿಶ್ವಕ್ಕೆ ಮಾಧರಿಯಾಗಿದ್ದಾರೆ. ನೊಬೆಲ್ ಪ್ರಶಸ್ತಿಗೂ ಸಡ್ಡು ಹೊಡೆಯುವ ಮಟ್ಟಿಗೆ ತಮ್ಮ ಛಾಪನ್ನು ನಿತ್ಯ ಜಗತ್ತಿನ ಮುಂದೆ ಇಡುತ್ತಿದ್ದಾರೆ. ಎಂದರೇ ನಾವುಗಳೇ ಧನ್ಯರು.

ಎರಡು ಸಾವಿರ ವರುಷ ಇತಿಹಾಸವಿರುವ ಕನ್ನಡ ಭಾಷೆ ಸುಲಿದ ಬಾಳೆ ಹಣ್ಣೇ ಸರಿ!

ನೂರಾರು ವಿಙ್ಞಾನಿಗಳು ವಿವಿಧ ಸಂಶೋಧನೆಗಳ ಮೊಲಕ ನಮ್ಮ ನಾಡನ್ನು ಸೇರಿಸಿಕೊಂಡು ದೇಶ ಮತ್ತು ವಿಶ್ವಕ್ಕೆ ಕಾಣಿಕೆಗಳನ್ನು ನಿತ್ಯ ನೀಡುತ್ತಲೇ ಇದ್ದಾರೆ.

ರಾಜಕೀಯವಾಗಿ ಅತಿ ಉನ್ನತ ಸ್ಥಾನವಾದ ಪ್ರಧಾನ ಮಂತ್ರಿ, ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿರುವ ಮಹಾನೀಯರುಗಳು ಕರ್ನಾಟಕದವರಾಗಿದ್ದಾರೆ ಎಂಬುದು ನಮ್ಮಗಳ ರಾಜಕೀಯ ಕೌಶಲತೆಗೆ ಮೆರಗು.

ದೊಡ್ಡ ದೊಡ್ಡ ಉದ್ಧಿಮೇದಾರರುಗಳು ಇಲ್ಲಿದ್ದಾರೆ. ಅವರು ತಮ್ಮ ಕೌಶಲದಿಂದ ಜಗತ್ತಿನಲ್ಲಿಯೇ ನಮ್ಮ ಬೆಂಗಳೂರು ಕರ್ನಾಟಕವನ್ನು ಪ್ರತಿಯೊಬ್ಬರೂ ತಿರುಗಿ ನೋಡುವಂತೆ ಮಾಡಿದ್ದಾರೆ. ಪರದೇಶದವರು ಸಹ ಬೆಂಗಳೂರಿನಲ್ಲಿ ಕೆಲಸ ಮಾಡಬೇಕು.. ಎಂಬ ಕನಸನ್ನು ಕಾಣುತ್ತಿದ್ದಾರೆ ಎಂದರೇ ನಮ್ಮ ನಮ್ಮ ಬುದ್ಧಿಶಾಲಿಗಳ ಸತ್ವವನ್ನು ಗಮನಿಸಬೇಕು.

ಜನಪದವೆಂದರೇ ಅನುಭವಗಳ  ಮೂಟೆಯೇ ಸರಿ. ಅಲ್ಲಿ ಇರುವ ಸಿರಿ ಸಂಪತ್ತು ಯಾವತ್ತಿಗೂ ಎಂದೂ ಬತ್ತಲಾರದ ತೂರೆ. ಅವರುಗಳ ಜನಪದ ಗೀತೆಗಳು, ಗಾದೆ, ಒಗಟುಗಳು,ಪದ,ಲಾವಣಿಗಳ ಮರ್ಮವನ್ನು ಎಂಥ ಶಿಷ್ಟ ವಿದ್ವಾಂಸರಿಗೂ ಇಂದಿಗೂ ಬಿಡಿಸಿಲಾರದ ಙ್ಞಾನವಾಗಿದೆ.

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಗಾದೆಯ ಮಾತೇ ಇದಕ್ಕೆ ಬಲವನ್ನು ಕೊಡುತ್ತದೆ. ಅಷ್ಟರ ಮಟ್ಟಿಗೆ ನಮ್ಮ ಜನಗಳು "ಕುರಿತೋದದೆಯು ಕಾವ್ಯ ಪ್ರಯೋಗ ಪರಿಣತ ಮತಿಗಳ್". ಎನ್ನುವಷ್ಟರ ಮಟ್ಟಿಗೆ ಬುದ್ಧಿವಂತರುಗಳೂ.

ಜನಪದವೆಂದರೇ ಅದು ಹಳ್ಳಿಯ ರೈತಾಪಿ ಜನಗಳು. ಇವರೇ ನಮ್ಮ ನಾಡಿನ ದೇಶದ ಬೆನ್ನೆಲಬು. ದೇಶಕ್ಕೆ ಅನ್ನವನ್ನು ನೀಡುವ ಕೋಟ್ಯಾಂತರ ಅನ್ನದಾತರು ಇರುವುದರಿಂದಲೇ ಈ ನಮ್ಮ ನಾಡು ಸುಭಿಕ್ಷೆಯಾಗಿರುವುದು. ಅವರನ್ನು ಮರೆತರೆ ನಾವುಗಳು ಇರುವುದಿಲ್ಲ!

ದೇಶ, ಗಡಿ ರಕ್ಷಣೆಗೆ ಯಾವಾಗಲೂ ಸುಸಜ್ಜಿತವಾದ ಸೈನ್ಯ ಸೈನಿಕರು ಬೇಕೇ ಬೇಕು. ಇದಕ್ಕಾಗಿ ನಿತ್ಯ ಹುಡುಕಾಟ ನಡೆದೇ ಇರುತ್ತದೆ. ಇಂದು ನಾವುಗಳು ನೆಮ್ಮದಿಯಾಗಿ ಉಸಿರಾಡುತ್ತಿದ್ದೇವೆ ಎಂದರೇ ಅದು ನಮ್ಮ ಸೈನಿಕ ಅಣ್ಣ ತಮ್ಮಂದಿರ ಗಡಿ ಕಾಯುವಿಕೆಯಿಂದ ಮಾತ್ರ!

ಇದರ ಸೇವೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆಯಾಗುವುದು ನಮ್ಮ ಕೊಡಗಿನ ಜೆಲ್ಲೆಯ ಶೂರರು ಎಂಬುದು ಹೆಮ್ಮೆಯ ವಿಷಯ. ಧೈರ್ಯವಂತರ ತವರು ಕೊಡಗಾಗಿದೆ. ಅವರಿಗೆ ದೇಶ ಸೇವೆಯೇ ಹೆಮ್ಮೆಯ ಕಾಯಕವಾಗಿದೆ. ಇದಕ್ಕೆ ದೇಶದ ಮೊದಲ ಮೆಜರ್ ಜನರಲ್ ಕಾರ್ಯಪ್ಪನವರೇ ಸಾಕ್ಷಿ.

ನಾಟಕ, ಸಿನಿಮಾ, ಸಂಗೀತ ಕಲೆಗಳು ನಮ್ಮ  ನಾಡಿನ ನೈಜತೆ ಮತ್ತು ಜೀವಂತಿಕೆಯ ಕುರುಹುಗಳು.

ಇದರಲ್ಲಿ ತಮ್ಮದೇ ಛಾಪನ್ನು ಮೈಲುಗಲ್ಲಾಗಿಸಿದ ನೂರಾರು ಕಲಾವಿದರುಗಳು ಬಂದು ಹೋಗಿದ್ದಾರೆ ಮತ್ತು ಇಂದಿಗೂ ಬರುತ್ತಿದ್ದಾರೆ. ಕನ್ನಡ ನಾಡು ಕಂಡ ವರನಟ ಡಾ. ರಾಜ್ ಕುಮಾರ್ ವಿಶ್ವ ಸಿನಿಮಾ ರಂಗದಲ್ಲಿಯೇ ಒಂದು ಮೊಡಿಯ ಹೆಸರು. ಅಂಥ ಒಬ್ಬ ನಟ ಮತ್ತೊಮ್ಮೆ ಈ ದೇಶದಲ್ಲಿಯೇ ಹುಟ್ಟಿ ಬರಲಾರನೇನೋ ಎಂಬುವಷ್ಟರ ಮಟ್ಟಿಗೆ ಅವರ ನಟನೆಯ ಚಲನಚಿತ್ರಗಳು ಇಂದಿನ ಯುವಪೀಳಿಗೆಗೆ ಕಾಲೇಜು ಪಾಠಗಳಾಗಿವೆ. ಇವರ ಹೆಸರನ್ನು ಕೇಳದೇ ಇರುವ ಒಂದು ಜೀವವು ಕನ್ನಡ ನೆಲದಲ್ಲಿ ಇರಲಾರದು.

ಹಾಸ್ಯ ನಟನಾಗಿ ರಾಜ್ ಸಮಕಾಲೀನರಾಗಿ ಇದ್ದ. ಹಾಸ್ಯ ನಟ ದಿವಂಗತ ನರಸಿಂಹರಾಜ್ ವಿಶ್ವ ಕಂಡ ಅಪರೂಪದ ನಟ.ಇವರು ಚಾರ್ಲಿ ಚಾಂಪಿನ್ ರನ್ನು ನೆನಪು ಮಾಡಿಕೊಡುತ್ತಾರೆ. ಅಷ್ಟರ ಮಟ್ಟಿಗೆ ಕನ್ನಡ ಮನದಲ್ಲಿ ನಗುವನ್ನು ಇಂದಿಗೂ ಸ್ಪುರಿಸುವ ಶಕ್ತಿ ಆ ಹೆಸರಿಗೆ ಇದೆ.

ಅವರನ್ನು ನೆನಪು ಮಾಡಿಕೊಂಡರೇ.. ಹಿಂದೆ ರಾಜ ಕೃಷ್ಣದೇವರಾಯನ ಅಸ್ಥಾನದಲ್ಲಿದ್ದ ವಿಕಟಕವಿಯಾದ ತೇನಾಲಿ ರಾಮಕೃಷ್ಣನ ನೆನಪು ಬರುತ್ತದೆ.

ಹೀಗೆ ನಮ್ಮ ನಾಡಿಗೆ ಒಂದೊಂದು ಕಾಲದಲ್ಲೂ ಒಬ್ಬೊಬ್ಬರೂ ಬಂದು ನಮ್ಮ ಸಂಸ್ಕೃತಿಗೆ ತಮ್ಮದೇ ಕೊಡುಗೆಗಳನ್ನು ನೀಡುತ್ತಲೇ ತಮ್ಮ ತಾಯಿನಾಡನ್ನು ಇನ್ನೂ ಹೆಚ್ಚು ಹೆಚ್ಚು ಎತ್ತರಕ್ಕೆ ಕೊಂಡು ಹೋಗುತ್ತಿದ್ದಾರೆ. ಆ ಎಲ್ಲಾ ಮಹನೀಯರುಗಳಿಗೂ ಮತ್ತೊಮ್ಮೆ ನಮ್ಮ ನಮನಗಳು.

ಹೀಗೆ ಯಾವ ಕೋನದಲ್ಲಿ ನೋಡಿದರು ನಮ್ಮ ನಾಡಲ್ಲಿ ಒಂದೊಂದು ಅನರ್ಘ್ಯ ರತ್ನಗಳೇ ಸಿಗುತ್ತವೆ.

ಕಲೆಯಾಗಿರಲಿ, ಶಿಕ್ಷಣವಾಗಿರಲಿ, ವಾಸ್ತುಸಿಲ್ಪವಾಗಿರಲಿ, ನಿಸರ್ಗದತ್ತವಾದ ತಾಣಗಳಾಗಿರಲಿ, ಊರು, ಕೇರಿ, ಜನಸಾಮನ್ಯರಾಗಿರಲಿ. ಪ್ರತಿಯೊಂದು ಪ್ರತಿಯೊಬ್ಬರೂ ಒಂದೊಂದು ರತ್ನದಷ್ಟು ಶ್ರೇಷ್ಠವಾದ ಕೆಲಸಗಳನ್ನು ಮಾಡಿ ನಮ್ಮ ನಾಡನ್ನು ಶ್ರೀಮಂತಗೊಳಿಸಿದ್ದಾರೆ.

ಅದಕ್ಕೆ ಆಭಾರಿಗಳಾಗಿರುವುದು ಮಾತ್ರ ನಾವು ಮಾಡುವ ವಂದನೆಗಳು.

ಇದನ್ನೂ ಇನ್ನೂ ಹೆಚ್ಚು ಹೆಚ್ಚು ಹಸಿರು ಮಾಡುವ ಕಾಯಕ ನಮ್ಮ ಇಂದಿನ ಯುವ ಪೀಳಿಗೆಗೆ ಇದೆ. ಇದರ ಹಿರಿಮೆಯನ್ನು ಕಾಪಾಡುವುದು ಮತ್ತು ಅದನ್ನು ಹೆಚ್ಚು ಅರ್ಥಪೂರ್ಣವಾಗಿ ಹೊರಗಿನವರಿಗೆ ತೋರಿಸುವುದನ್ನು ಸರ್ಕಾರ ಸೇರಿ ಪ್ರತಿಯೊಂದು ಸಂಘ ಸಂಸ್ಥೆಗಳು ನೆರವೇರಿಸುವುದು ಪ್ರತಿಯೊಬ್ಬರ ದೊಡ್ಡ ಜವಾಬ್ದಾರಿ ಮತ್ತು ಹೊಣೆ.


ನೀವುಗಳು ಏನು ಹೇಳ್ತೀರಾ........?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ