ಸೋಮವಾರ, ಫೆಬ್ರವರಿ 17, 2025

ಡೇಟನ್ ವಿಮಾನ ಜನಕರ ಜನ್ಮ ಭೂಮಿ

ಡೇಟನ್ ಓಹಿಯೋ ರಾಜ್ಯದ ಒಂದು ಪುಟ್ಟ ನಗರ. ಜೆಮ್ ಸಿಟಿಯೆಂದೆ ಪ್ರಸಿದ್ಧವಾದ ಪಟ್ಟಣ.




ವೈಮಾನಿಕ ಜಗತ್ತಿನ ಜನಕರಾದ ರೈಟ್ ಸಹೋದರರ ತವರು ನೆಲ. ವಿಮಾನ ಹಾರಟದ ಪ್ರಯೋಗ  ಭೂಮಿಯೆಂದೇ ಇಡೀ ಜಗತ್ತಿಗೆ ತನ್ನ ಹಿರಿಮೆಯನ್ನು ಪಸರಿಸಿದ ನಗರ. ಈ ನಗರದಲ್ಲಿ ಎಲ್ಲಾ ವರ್ಗದ ಜನ ಸಾಮಾನ್ಯರು ವಾಸ ಮಾಡುತ್ತಿದ್ದಾರೆ. 


ನಾನು ಇಲ್ಲಿಗೆ ವಾಸ ಮಾಡುವ ಸಲುವಾಗಿ ಬರುವ ವೇಳೆಯಲ್ಲಿ ಇಷ್ಟೊಂದು ವಿಷಯ ವಿಶೇಷಗಳನ್ನು ಹೊಂದಿರುವ ನಗರವೆಂದು ತಿಳಿದು ವಿಸ್ಮಿತನಾಗಿದ್ದುಂಟು. ಹಾಗೆಯೇ ಈ ನಗರದಲ್ಲಿಯೇ ನನ್ನ ಕಂಪನಿ ಕೆಲಸವನ್ನು ಮಾಡಲು ಅವಕಾಶಯೋ ಸಿಕ್ಕಿದ್ದಕ್ಕೆ ನನ್ನ ಖುಷಿಯು ದುಪ್ಪಟ್ಟಾಗಿತ್ತು. 

ಹಾಗೆಯೇ ಅಮೇರಿಕಾ ಅಂದರೇ ನ್ಯೂಯಾರ್ಕ್, ಚಿಕಾಗೋ, ಸ್ಯಾನ್ ಪ್ರಾನ್ಸಿಸ್ಕೋ ಎಂದು ಮಾತನಾಡುವವರ ಮುಂದೇ ಡೇಟನ್ ಗೆ ಹೋಗುತ್ತಿದ್ದೇನೆ ಅಂದರೇ ಪುನಃ ಅಮೇರಿಕಾ ತಾನೇ ಎಂದು ಪ್ರತಿ ಪ್ರಶ್ನೆ ಮಾಡಿದ್ದವರ ಕಂಡು ಕನಿಕರವೂ ಬಂದಿತ್ತು.



ಅಮೇರಿಕವೆಂದರೇ ವಿಶಾಲವಾದ ಭೂ ಪ್ರದೇಶವನ್ನು ಹೊಂದಿರುವ ದೇಶ. ಹಾಗೆಯೇ ಅಲ್ಲಿರುವ ಒಟ್ಟು ರಾಜ್ಯಗಳ ಸಂಖ್ಯೆಯೇ ಐವತ್ತು. ಪ್ರತಿ ರಾಜ್ಯಗಳ ಗಡಿಗಳನ್ನು ಅವುಗಳಲ್ಲಿ ಹರಿಯುವ ನದಿಗಳ ಮೊಲಕ ಗಡಿಯನ್ನು ಹಾಕಿಕೊಂಡು ಬೇರೆ ಬೇರೆ ಮಾಡಿದ್ದಾರೆ. ನಾವು ಯಾವುದಾದರೂ ಒಂದು ಸಿಟಿಯಿಂದ ಇನ್ನೊಂದು ರಾಜ್ಯದ ಸಿಟಿಗೆ ಹೋಗುವಾಗ ಒಂದು ನದಿಯನ್ನು ದಾಟಿದೇವು ಅಂದರೆ ಮುಂದೆಯೇ ಹೊಸ ರಾಜ್ಯದ ಸ್ವಾಗತ ಬೋರ್ಡ್ ಗಳು ಕಾಣುವುದು ಸಾಮಾನ್ಯ.


ಹಾಗೆಯೇ ಓಹಿಯೋ ನದಿಯಿಂದ ಓಹಿಯೋ ರಾಜ್ಯದ ಹೆಸರು ಬಂದಿರುವುದಾದರೂ. ಈ ಓಹಿಯೋ ರಾಜ್ಯದಲ್ಲಿ ಅತಿ ದೊಡ್ಡ ನಗರಗಳೆಂದರೇ ರಾಜ್ಯದ ರಾಜದಾನಿಯಾದ ಕೊಲಂಬಸ್ ಮತ್ತು ಸಿನ್ಸಾನಾಟಿ. ಡೇಟನ್ ಕೊಲಂಬಸ್ ನಿಂದ ೭೦ ಮೈಲಿ ಮತ್ತು ಸಿನ್ಸನಾಟಿಯಿಂದ ೫೫ ಮೈಲಿ ದೂರದಲ್ಲಿದೆ. 


ಹಾಗೆಯೇ ವಿಶ್ವ ವೈಮಾನಿಕ ಜಗತ್ತಿಗೆ ಈ ನಗರ ಒಂದು ಐತಿಹಾಸಿಕ ಸ್ಥಳವಾಗಿದೆ. ನಮಗೆಲ್ಲಾ ಗೊತ್ತು ಇಡೀ ಜಗತ್ತನ್ನೆ ಚಿಕ್ಕದು ಮಾಡಿದ್ದು ವಿಮಾನಯಾನ. ಹಕ್ಕಿಯ ರೀತಿಯಾಗಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹಾರಿಕೊಂಡು ಹೋಗಬಹುದು ಎಂಬ ಕಲ್ಪನೆಯನ್ನು ನಿಜ ಮಾಡಿದ ರೈಟ್ ಸಹೋದರರನ್ನು ಈ ಜಗತ್ತು ಎಂದಿಗೂ ಮರೆಯಲು ಸಾಧ್ಯವಿಲ್ಲ. 



ಇಲ್ಲಿರುವ ನ್ಯಾಷನಲ್ ಮ್ಯೂಸಿಯಮ್ ಅಪ್ ಏರ್ ಪೊರ್ಸ್ ನಲ್ಲಿರುವ ಅವರ ಮೊದಲ ವಿಮಾನ ರಚನೆಯನ್ನು ಕಂಡು ಅಚ್ಚರಿಯು ಆಯಿತು.  ಮನುಷ್ಯನಿಗೂ ರೆಕ್ಕೆಗಳನ್ನು ಕಟ್ಟಿ ಹಾರಬೇಕು ಎಂಬ ಕನಸನ್ನು ನನಸು ಮಾಡಿ ಇಡೀ ಜಗತ್ತನ್ನು ಒಂದು ಹಳ್ಳಿಯಾಗಿ ಮಾಡಿದ ಸಹೋದರರ ಸಂಶೋಧನೆಗೆ ಒಂದು ಸಲಾಮ್ ಹೇಳಲೇಬೇಕು ಅನಿಸುತ್ತದೆ. ಅವರನ್ನು ನಿತ್ಯ ನೆನಪು  ಮಾಡಿಕೊಳ್ಳೊಣವೆಂದುಕೊಂಡು ಬರುವ ಮ್ಯೊಸಿಯಂ ವೀಕ್ಷಕರ ಸಂಖ್ಯೆಯೇ ಹೇಳುತ್ತದೆ  ರೈಟ್ ಸಹೋದರರ ಬಗ್ಗೆ ನಮ್ಮೆಲ್ಲಾರ ಹೆಮ್ಮೆ ಎಷ್ಟರ ಮಟ್ಟಿಗೆ ಇದೆಯೆಂದು. 



ಹಾಗೆಯೇ ಡೇಟನ್ ನಗರದ ಜೀವ ನಾಡಿಯಾಗಿ ಹರಿಯುತ್ತಿರುವ ಮಿಯಾಮಿ ನದಿಯು ಶುದ್ಧ ಪರಿಶುದ್ಧ ನೀರನ್ನು ಹೊಂದಿರುವುದಲ್ಲದೆ ಇಲ್ಲಿಯ ಜನರ ಕುಡಿಯುವ ನೀರನ್ನು ಈ ನದಿಯಿಂದಲೇ ಪೂರೈಸುತ್ತಿರುವುದು ಒಂದು ವಿಶೇಷ. 




ಈ ಡೇಟನ್ ನಗರಕ್ಕೆ ಸೇರಿರುವ ಸುತ್ತುಕೊಂಡಿರುವ ಪ್ರಮುಖ ಚಿಕ್ಕ ಪಟ್ಟಣಗಳೆಂದರೇ ಕೇಟರಿಂಗ್,ಮಿಯಾಮಿಸ್ಭರ್ಗ್,ಸೆಂಟ್ರಾವಿಲ್ಲಿ,ಬೆಲ್ ಬ್ರೂಕ್. ಈ ಎಲ್ಲಾ ನಗರಳು ಸೇರಿಕೊಂಡಿರುವುದರಿಂದ ಒಮ್ಮೊಮ್ಮೆ ದೊಡ್ಡ ನಗರವೆನಿಸುತ್ತದೆ. ಆದರೇ ಇಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಅಂದುಕೊಂಡ ಸಮಯದಲ್ಲಿ ಯಾವುದೇ ಅಡೆ ತಡೆಯಿಲ್ಲದೆ ಸರಾಗವಾಗಿ ತಲುಪಬಹುದಾಗಿದೆ ಅದು ಟ್ರಾಪಿಕ್ ಜಂಜಾಟವಿಲ್ಲದೆ. ಇದಂತೂ ಇಲ್ಲಿಯ ಜನರ ಸಂತೋಷಕ್ಕೆ ಒಂದು ಬಹುಮುಖ್ಯ ಕಾರಣವಾಗಿದೆ.


ಓಹಿಯೋ ರಾಜ್ಯದ ಹಿರಿಮೆಯೆಂದರೇ ಅತಿ ದಟ್ಟ ಹಸಿರು ಮರಗಳನ್ನು ಹೊಂದಿರುವುದು. ಹಾಗೆಯೇ ಇಲ್ಲಿಯು ಈ ನಗರದ ಸುತ್ತ ಮುತ್ತಿರುವ ಹಸಿರು ವನಗಳನ್ನು ಅವುಗಳು ಇರುವಂತೆ ಕಾಪಿಟ್ಟುಕೊಂಡು ಜನ ಸಾಮಾನ್ಯರಿಗೆ ಮೆಟ್ರೂ ಪಾರ್ಕಗಳೋಪಾದಿಯಲ್ಲಿ ಕೊಟ್ಟಿರುವುದು ಇಲ್ಲಿಯ ನಾಗರಿಕರು ತಮ್ಮ ಬಿಡುವಿನ ಸಮಯವನ್ನು ಈ ಪಾರ್ಕಗಳಲ್ಲಿ  ನಡೆದಾಡುತ್ತಾ, ಮಕ್ಕಳು ಆಟಗಳನ್ನಾಡುತ್ತ ತಮ್ಮ ಸಮಯವನ್ನು , ಬೇಸಗೆಯ ದಿನಗಳನ್ನು ಕಳೆಯಲು ಅತ್ಯುತ್ತಮವಾಗಿದೆ  ಅಂದರೇ ತಪ್ಪಿಲ್ಲ.




 ಇಲ್ಲಿಯ ಮೊಲತಃ ಅಮೆರಿಕಾದವರು ಸೌಮ್ಯ ಸ್ವಭಾವದವರು ಅಂದರೇ ತಪ್ಪಿಲ್ಲ. ಕಳೆದ ಹತ್ತು ವರುಷದ ನನ್ನ ವಾಸದಲ್ಲಿ ಎಲ್ಲಿಯೂ ಸಹ ಅಮೆರಿಕಾದ ಬೇರೆ ಬೇರೆ ಸ್ಥಳಗಳಿಂದ ಅಲ್ಲಿ ಇಲ್ಲಿ ಕೇಳುವ ಕೆಟ್ಟ ನಡವಳಿಕೆಗಳನ್ನಂತೂ ನಾನು ಇದುವರೆಗೂ ಕಂಡಿಲ್ಲ. ಹೆಚ್ಚಾಗಿ ನಿವೃತ್ತ ವಯೋ ವೃದ್ಧರ ಪ್ರೀಯ ಜಾಗವೆಂದರೇ ತಪ್ಪಿಲ್ಲ. ಯಾಕೆಂದರೇ ಇಲ್ಲಿಯ ವಾತವರಣ ಹಾಗೂ ಕಡಿಮೆ ದರದ ಸಿಟಿಯೆಂದೇ ಪ್ರಸಿದ್ಧವಾಗಿರುವುದಿರಂದಲೂ, ಆರಾಮಾಗಿ ಜೀವನ ನಡೆಸುವಂತಿರುವುದರಿಂದ, ಟ್ರಾಪಿಕ್ ಜಟಾಪಟಿ ಇಲ್ಲದಿರುವುದರಿಂದ ಶಾಂತತೆಗೆ ಹೆಸರಾದ ಪಟ್ಟಣವಾಗಿದೆ.


ನಮ್ಮ ಭಾರತೀಯರ ಸಂಖ್ಯೆಯು ಇತ್ತೀಚೆಗೆ ಹೆಚ್ಚುತ್ತಿರುವುದು ಕಾಣಿಸುತ್ತಿದೆ. ನಮ್ಮವರಿಂದಲೇ ಏನೋ ಅನಿಸುವಂತೆ ಹೊಸ ಹೊಸ ವಾಸ ಯೋಗ್ಯ ಬಡಾವಣೆಗಳು ರಚಿತವಾಗಿ ನಗರದ ವಿಸ್ತಾರ ಹಿಗ್ಗುತ್ತಿದೆ. ಒಮ್ಮೆ ಇಲ್ಲಿ ವಾಸಿಸಲೂ ಪ್ರಾರಂಭಿಸಿದರೇ ಬಿಟ್ಟು ಹೋಗಲು ಮನಸ್ಸು ಬರುವುದಿಲ್ಲ ಬಿಡಿ. ಅದು ಈ ನಗರವೊಂದೇ ಅಲ್ಲ ಯಾವುದೇ ನಗರವಾದರೂ ಸಹ ಮನುಷ್ಯನಿಗೆ   ಮೊದಲ ಸ್ಥಳವೇ  ಇಷ್ಟ ’ಮೊದಲ ಪ್ರೀತಿ’ ತರವಾ??


ಇಲ್ಲಿಯ ಡೇಟನ್ ಯುನಿವರ್ಸಿಟಿ ವಿಶ್ವ ಪ್ರಸಿದ್ಧವಾಗಿದೆ ಅನಿಸುತ್ತಿದೆ. ಇದಕ್ಕೆ ಉದಾಹರಣೆಯೆಂಬಂತೆ ಇತ್ತೀಚೆಗೆ ಹೆಚ್ಚು ಹೆಚ್ಚು ಭಾರತೀಯ ಯುವ ಮುಖಗಳು ಎಲ್ಲೆಲ್ಲಿಯು ಕಾಣಸಿಗುತ್ತಿರುವುದು ಸಂತೋಷದ ವಿಷಯ!


ಇಲ್ಲಿಯ ಮೈಕ್ ಸೆಲ್ಸ್ ಅಲೊಗಡ್ಡೆ ಚಿಪ್ಸ್ (೧೯೧೦) ಪ್ರಸಿದ್ಧವಾದ ಚಿಪ್ಸ್ ಕಂಪನಿ. ಇದು ಅಮೆರಿಕಾದ್ಯಂತ ಮಾರಾಟವಾಗುತ್ತಿದ್ದ ಪ್ರಸಿದ್ಧ ಚಿಪ್ಸ್ ಆಗಿತ್ತು. ಆದರೇ ಕಾರಣಾಂತರಗಳಿಂದ ಕಳೆದ ವರುಷ ಮುಚ್ಚಲ್ಪಟ್ಟಿತು.


ಡೇಟನ್ ಅಂತರಾಷ್ಟ್ರಿಯ ವಿಮಾನ ನಿಲ್ಧಾಣದಿಂದ ಅಮೇರಿಕ ಮತ್ತು ಜಗತ್ತಿನ ವಿವಿಧ ಭಾಗಗಳಿಗೆ ಸುಲಭವಾದ ಸಂಪರ್ಕ ದಾರಿಗಳನ್ನು ಕಲ್ಪಿಸಿಕೊಟ್ಟಿದೆ. 


ಡೇಟನ್ ಹಿಂದು ದೇವಸ್ಥಾನವು ಎಲ್ಲಾ ಭಾರತೀಯರಿಗೆ ಪ್ರಿಯವಾದ ಭಕ್ತಿ ಸ್ಥಳವಾಗಿದೆ. ನಮ್ಮ ಭಾರತೀಯ ಸಂಸ್ಕೃತಿಯ ಪಾಠಗಳನ್ನು ಇಲ್ಲಿಯೆ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ ಭಾರತೀಯ ಹಬ್ಬ ಹರಿದಿನಗಳನ್ನು ಭಾರತದಲ್ಲಿಯೇ ಇದ್ದು ಆಚರಿಸುವ ಮಟ್ಟಿಗೆ ಆಚರಿಸುವ ಮೊಲಕ ನಮ್ಮ ಸಂಸ್ಕೃತಿಯನ್ನು ತಮ್ಮ ತಮ್ಮ ಕುಟುಂಬಗಳಲ್ಲಿ ಕಾಪಾಡಿಕೊಳ್ಳಲು ಪ್ರೇರಕವಾಗಿದೆ. 


ವಿವಿಧ ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಭಾಗವಹಿಸುವು ಭಾರತೀಯರ ಸಂಖ್ಯೆ ಮತ್ತು ಉತ್ಸಾಹವನ್ನು ನೋಡಿದರೇ ನಾವುಗಳು ಅಮೆರಿಕಾದಲ್ಲಿ ಇದ್ದೇವೋ ಅಥವಾ ಭಾರತದಲ್ಲಿದ್ದೇವು ಎಂದು ಅನುಮಾನವಂತೂ ಬರುತ್ತದೆ. 



ಹೀಗೆ ಎಲ್ಲಾ ರೀತಿಯ ಜನರನ್ನು ಹೊಂದಿರುವ ಜನ ಸ್ನೇಹಿ ನಗರ ಡೇಟನ್ ಎಂದರೇ ತಪ್ಪಿಲ್ಲ! ದೊಡ್ಡ ದೊಡ್ಡ ನಗರದ ಜಂಜಾಟದ ವೇಗವಿಲ್ಲದಿದ್ದರೂ ಶಾಂತಿಯ ಸುಭಿಕ್ಷೆಯ ಹಸಿರು ಬಿಡಾಗಿ ಪ್ರತಿಯೊಬ್ಬರನ್ನು ಆಕರ್ಷಿಸುವುದರಲ್ಲಿ ಸದಾ ಮುಂದಾಗಿ ದಾಪುಗಲು ಇಡುತ್ತಾ ವೇಗವಾಗಿ ಬೆಳೆಯುತ್ತಿರುವ ಪುಟ್ಟ ನಗರ.

ಗುರುವಾರ, ಜುಲೈ 25, 2024

ಹಾಟ್ ಏರ್ ಬಲೂನ್

 ಅಮೇರಿಕಾದ ಇಲ್ಲಿನ ನಗರಗಳಲ್ಲಿ ಬೇಸಿಗೆ ರಜೆಗೆ ವಿವಿಧ ರೀತಿಯ ಹತ್ತು ಹಲವಾರು ಕಾರ್ಯಕ್ರಮಗಳನ್ನು  ಆಯೋಜಿಸಿರುತ್ತಾರೆ. ಇಲ್ಲಿಯ ಬೇಸಿಗೆ 'ಸಮ್ಮರ್' ಸಂತೋಷ ನೋಡಿಯೇ  ಖುಷಿ ಪಡಬೇಕು. 

ಮಕ್ಕಳಿಗೆ ಭರಪೂರ ೨ ತಿಂಗಳು ರಜೆಯ ಮಜಾ. ಹೀಗಾಗಿ ಈ ದಿನಗಳನ್ನು ಇಲ್ಲಿಯ ಜನ ವಿಶೇಷವಾಗಿ ಉಪಯೋಸಗಿಸಿಕೊಳ್ಳುತ್ತಾರೆ. ಮಕ್ಕಳ ನೆಪದಲ್ಲಿ ಹೆತ್ತವರು ಹಿರಿಯರು ಅಲ್ಲಿ ಇಲ್ಲಿ ವಾರಾಂತ್ಯದ ಕಾರ್ಯಕ್ರಮಗಳಲ್ಲಿ ಪೂರ್ಣವಾಗಿ ಭಾಗವಯಿಸಿ  ಖುಷಿಪಡುತ್ತಾರೆ.  

ಈ ದಿನಗಳಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳು ಜನರಿಂದ ಜೀ  ಎಂದು ತುಂಬಿರುತ್ತವೆ. ಹೋಟೆಲ್, ವಿಮಾನಗಳ ದರ ಕೇಳುವುದೇ  ಬೇಡ ಅಷ್ಟು ದುಪ್ಪಟ್ಟು. 


ನಮ್ಮ ಭಾರತೀಯರು ಸಹ ತಮ್ಮ ತಮ್ಮ ಹೆತ್ತವರನ್ನು ಈ ರಜಾ  ದಿನಗಳಿಗಾಗಿ  ಭಾರತದಿಂದ ಕರೆಸಿಕೊಂಡು  ಅಮೇರಿಕವನ್ನು ಒಂದು ಸುತ್ತು ತೋರಿಸುತ್ತಾರೆ. 

ಮಕ್ಕಳಿಗೆ ಅಜ್ಜ ಅಜ್ಜಿ ಜೊತೆಯಲ್ಲಿ ತಿರುಗುವ, ಪ್ರವಾಸ ಹೋಗುವ  ಮಜವೇ ಬೇರೆ ಬಿಡಿ.

ಹೀಗೆ ಈ ವಾರಾಂತ್ಯದಲ್ಲಿ ನಾವು ಸಹ ನಮ್ಮ ಹೆತ್ತವರೊಡಗೂಡಿ ಇಲ್ಲಿಯ ಮಿಡಲ್ ಟೌನ್ ನ ಓಹಿಯೋ ಚಾಲೆಂಜ್ ಹಾಟ್ ಏರ್ ಬಲೂನ್ ಷೋ ಗೆ ಹೋಗಿದ್ದೆವು. 

ಅಲ್ಲಿ ಈ ದೊಡ್ಡ ದೊಡ್ಡ ರಂಗು ರಂಗಿನ ಬಣ್ಣದ ಬಲೂನ್ ಗಳನ್ನು ನೋಡಿ ದಿಗ್ಬ್ರಮೆಯಾಯಿತು.


ಇಷ್ಟು ದೊಡ್ಡ ದೊಡ್ಡ ಬಲೂನಗಳ ಹಾರಾಟವನ್ನು ಇದೆ ಮೊದಲು ನೋಡಿದ್ದು. 

ಹಾಟ್ ಏರ್ ಬಲೂನ್ ನನ್ನು ಹಗುರವಾದ ವಸ್ತುಗಳಿಂದ ತಯಾರಿಸಿರುತ್ತಾರೆ. ಈ ಬಲೂನ್ಗಳನ್ನು ನೈಲಾನ್ ಬಟ್ಟೆಯಲ್ಲಿ ಮಾಡಿರುತ್ತಾರೆ. ಕೆಳ ಬಾಗವನ್ನು ಬೆಂಕಿ ಪ್ರತಿರೋಧಕ ವಸ್ತುಗಳಿಂದ ತಯಾರಿಸುತ್ತಾರೆ.   ಇದು ಮುಖ್ಯವಾಗಿ ಮೂರೂ ಬಾಗಗಳಿಂದ ಕೊಡಿರುತ್ತದೆ. ಬಲೂನ್ ಹೊರ ಬಾಗ( ಬಲೂನ್), ಬರ್ನರ್ ಮತ್ತು ಪ್ರಯಾಣಿಕರು ಕುರುವ ಪುಟ್ಟಿ. 

ಚಿಕ್ಕ ದೊಡ್ಡ ಹೀಗೆ ವಿವಿಧ ಅಳತೆಯ ಬಲೂನ್ ಗಳು ಇರುತ್ತೆ. ನಾವು ನೋಡಿದ ಇಲ್ಲಿಯ ಒಂದೊಂದು ಬಲೂನ್ ಗಳು ದೊಡ್ಡ ಮನೆಯಷ್ಟು ದೊಡ್ಡದಾಗಿ ಮತ್ತು ಅತ್ಯಂತ  ಎತ್ತರ ಇದ್ದವು. ಸುಮಾರು ೨೦-೨೫ ವಿವಿಧ ಬಗೆಯ ಬಣ್ಣದ, ರೂಪದ ಬಲೂನ್ ಗಳನ್ನೂ ನೋಡಿ ಪ್ರತಿಯೊಬ್ಬರೂ ಮೂಕವಿಸ್ಮಿತಾರದರು. 



ಅವುಗಳ ಹಾರಾಟವು ಅಷ್ಟೇ ಸುಂದರವಾಗಿತ್ತು. ಸುಂದರವಾದ ಸೂರ್ಯ ಮುಳುಗುವ  ಸಮಯದ ಆ ಕೆಂಧೂಳ ಆಕಾಶಕ್ಕೆ ಬಣ್ಣ ಬಣ್ಣ ದ ಪುಟ್ಟ ಪುಟ್ಟ ಬಣ್ಣದ ದೀಪಗಳನ್ನು ಜೋಡಿಸಿಟ್ಟಂತೆ ಕಣ್ಣಿಗೆ ಕಾಣುತ್ತಿತ್ತು. 

ಈ ಪ್ರಪಂಚದಲ್ಲಿ ಮೊದಲು ಈ  ಬಿಸಿ ಗಾಳಿ  ಬಲೂನ್ ನ್ನು ತಯಾರಿಸಿ ಹಾರಿಸಿದ್ದು ಫ್ರಾನ್ಸ್ ನಲ್ಲಿ ( 1783). 

ಪೈಲಟ್ ನ ಕೈ ಛಳಕ ಇಲ್ಲಿ ಮುಖ್ಯವಾಗುತ್ತದೆ. ಅವನು ಬಲೂನ್ ಹೇಗೆ  ಮೇಲೆ,  ಹೇಗೆ ಕೆಳಗೆ ಬರಬೇಕು ಎಂಬುದನ್ನು, ಬಿಸಿ ಗಾಳಿಯನ್ನು ಯಾವಾಗ ಹೇಗೆ ಬಲೂನ್ ಗೆ ಹರಿಸಿ ಭೂಮಿಯ ಗುರುತ್ವಾಕರ್ಷಣೆಗೆ ವಿರುದ್ಧವಾಗಿ  ಹಾರಿವುದು, ದಿಕ್ಕುಗಳನ್ನೂ ಹೇಗೆ ಬದಲಿಸಬೇಕು ಎಂಬ  ಅವನ ಜಾಣ್ಮೆಗೆ ಜೈ. 

ಇದಂತೂ ವಿಸ್ಮಯವೇ ಸರಿ. ಅಲ್ಲಿ  ಸೇರಿದ್ದ ಸಾವಿರಾರು ಜನರು ಹಾಟ್  ಏರ್ ಬಲೂನ್ ಹಾರಾಟವನ್ನು ಅಚ್ಚರಿಯ ರೀತಿಯಲ್ಲಿ ಕಣ್ಣು ತುಂಬಿಕೊಳ್ಳುತ್ತಿದ್ದರು. ಮಕ್ಕಳಂತೂ ನಾವು ಯಾವಾಗ ಹೀಗೆ ಬಲೂನ್ ನಲ್ಲಿ ಮೇಲೆ ಹಾರುವುದು ಎಂದು ಯೋಸಚಿಸುತ್ತಿದ್ದರೋ ಏನೋ ! 

ಹಾರಾಟ ಮುಗಿದ ಮೇಲೆ ಎಲ್ಲಾ ಬಲೂನ್ ಗಳನ್ನು ಒಂದು ಬದಿಗೆ ಸಾಲಾಗಿ ನಿಲ್ಲಿಸಿದಾಗ ಪ್ರತಿಯೊಬ್ಬರೂ ಅವುಗಳ ಫೋಟೋ ಕ್ಲಿಕ್ಕಿಸುವುದರಲ್ಲಿ ಬ್ಯುಸಿಯೋ ಬ್ಯುಸಿ. ಯಾರೋಬ್ಬರಿಗೂ ಸಮಾದಾನವೇ ಇಲ್ಲ. ತಮ್ಮ ತಮ್ಮ ಮಕ್ಕಳನ್ನು  ಬಲೂನ್ ಮುಂದೆ ನಿಲ್ಲಿಸಿ ಬೆಸ್ಟ್ ಫೋಟೋ ತೆಗೆಯುವ ತವಕ. ಮಕ್ಕಳಿಗೆ ಇದು ಯಾವುದು ಬೇಕಾಗದೆ ಬಲೂನ್ ಕಣ್ತುಂಬಿಕೊಳ್ಳುವುದು ಮಾತ್ರವೇ ಸಮಾಧಾನ.  

ಹೀಗೆ ಆ ಸಂಜೆ ಪ್ರತಿಯೊಬ್ಬರಿಗು ರಂಗು ರಂಗಿನ ಬೇರೊಂದು ಲೋಕದಲ್ಲಿ ತೇಲಾಡಿದ ಅನುಭವ. 

ನಮ್ಮ ಹೆತ್ತವರು ಸಹ  ಈ ರೀತಿಯ  ಅತಿ ದೊಡ್ಡ ಬಲೂನ್ ಆಕಾಶದಲ್ಲಿ ಹಾರುವುದನ್ನು ಇದೆ ಮೊದಲು ಕಂಡಿದ್ದು ಅನಿಸುತ್ತದೆ. ಅವರು ಸಹ ಮನುಷ್ಯನ ಈ ಒಂದು ಚಮತ್ಕಾರನ್ನು ತೀರಾ ಹತ್ತಿರದಿಂದ ಕಂಡು ಖುಷಿಪಟ್ಟರು. 


ಅಮೇರಿಕದಲ್ಲಿ ಈ ರೀತಿಯ ಪ್ರಸಿದ್ಧ ಬಿಸಿ ಗಾಳಿ   ಬಲೂನ್ ಷೋ ಗಳನ್ನು ವಿವಿಧ ಪ್ರದೇಶಗಲ್ಲಿ ಪ್ರತಿ ವರುಷ ಬೇಸಿಗೆಯಲ್ಲಿ ಏರ್ಪಡಿಸುತ್ತಾರೆ. ಅವುಗಳೆಂದರೆ ನ್ಯೂ ಮೆಕ್ಸಿಕೋ, ನೆವಾಡಾ , ಟೆಕ್ಸಸ್, ನ್ಯೂರ್ಯಾಕ್  ನಗರಗಳ ಅತಿ ದೊಡ್ಡ ಬಲೂನ್ ಷೋ. 

ಭಾರತದಲ್ಲೂ ಪ್ರತಿ ವರುಷ ಚೆನ್ನೈ , ಫುಲಾಚಿ, ಕಾಶಿ, ಜೈಪುರ ಗೋವಾ  ಮುಂತಾದ ಬಾಗಗಳಲ್ಲಿ ದೊಡ್ಡ ರೀತಿಯಲ್ಲಿ ಈ  ಬಿಸಿ ಗಾಳಿ ಬಲೂನ್ ಹಾರಾಟಗಳನ್ನು ಅಯೋಜಿಸಿ ನಡೆಸುತ್ತಾರೆ. 

ಹಾಗೆಯೇ ಅಂದು ಸಂಜೆಯಾದ ಮೇಲೆ ನಡೆದ ವಿವಿಧ ಕಾರ್ಯಕ್ರಮಗಳು ತುಂಬಾ ಚೆನ್ನಾಗಿದ್ದವು . ಅದರಲ್ಲಿ ಮುಖ್ಯವಾದದ್ದು ಪ್ಯಾರಾಚೂಟ್ ನಲ್ಲಿ ಹಾರುವವರು   ಆಕಾಶದಲ್ಲಿ  ಪಟಾಕಿಗಳನ್ನು ಸಿಡಿಸಿದ್ದು. ನಾವುಗಳು ಭೂಮಿಯ ಮೇಲೆ ಪಟಾಕಿಗಳನ್ನು ಆಕಾಶಕ್ಕೆ ಆರಿಸುವದನ್ನ ಮಾತ್ರ   ನೋಡಿದ್ದೇವು. ಆದರೆ ಇವರುಗಳು ೪-೫ ಪ್ಯಾರಾಚೂಟ್ ನಲ್ಲಿ  ಹಾರುತ್ತ ಹಾರುತ್ತ ಭೂಮಿಗೆ ಇಳಿಯುವ ಸಮಯದಲ್ಲಿ  ತಮ್ಮಲ್ಲಿರುವ ವಿವಿಧ ಬಗೆಯ ಬಣ್ಣ ಬಣ್ಣದ ಪಟಾಕಿಗಳನ್ನು ಹಾರಿಸುತ್ತ ಹಾರಿಸುತ್ತ ಬೆಳಕಿನ ಚಿತ್ತಾರವನ್ನು ಆಕಾಶದಲ್ಲಿ ರಚಿಸುದ್ದು 'ದ್ ಬೆಸ್ಟ್ ಷೋ' ಅನಿಸಿತು. ಅದು ಎಷ್ಟು ಅಪಾಯವೆಂದರೆ ಆದರೂ ತಮ್ಮ ಕೈ ಛಳಕ ಮತ್ತು ಪರಿಶ್ರಮದ ಕಲಿಕೆಯಿಂದ ಅದ್ಭುತವಾದದ್ದನ್ನು ಭೂಮಿಯಿಂದ 10 - 14 ಸಾವಿರ ಅಡಿ ಎತ್ತರದಲ್ಲಿ ಮಾಡಿ ತೋರಿಸಿದರು. 


ಕೊನೆಗೆ ಡ್ರೋನ್ ಷೋ, ಪಟಾಕಿಗಳ ರಂಗು ರಂಗು ಬಿರುಸು ಕಿಡಿಗಳಿಂದ ಆಕಾಶದಲ್ಲಿ ಅದ್ಭುತವಾದ  ವಿವಿಧ ಬಗೆಯ  ಚಿತ್ತಾರವನ್ನು ರಚಿಸುತ್ತ ಜನಮನವನ್ನ ಆಯೋಜಕರು ಗೆದ್ದರು. 

ನೇರದ್ದಿದ್ದ ಪ್ರತಿಯೊಬ್ಬರೂ ಹರ್ಷದೊಗಾರ ಮಾಡಿ ತಮ್ಮ ವಂದನೆಗಳನ್ನು ಚಪ್ಪಾಳೆಯ ಮೂಲಕ ಪ್ರತಿಯೊಬ್ಬ ಕಾರ್ಯಕ್ರಮದ ಕಾರ್ಯಕರ್ತರಿಗೆ ಅರ್ಪಿಸಿದರು. 


ಇದಕ್ಕೂ  ಮೊದಲು ಇದ್ದ ವಿವಿಧ ಬಗೆಯ ಹಳೆ ಹೊಸ ಕಾರುಗಳ ಪ್ರದರ್ಶನ ಪ್ರತಿಯೊಬ್ಬರ ಮನಸ್ಸನ್ನ ಆಕರ್ಷಿಸಿತು. 

ಎಲ್ಲಾರಿಗೂ  ತಿಳಿದ ರೀತಿಯಲ್ಲಿ ತಿನ್ನುವುದಕ್ಕೆ ಕೊಳ್ಳುವುದಕ್ಕೂ  ಏನು ಕಡಿಮೆ ಇಲ್ಲದ ರೀತಿಯಲ್ಲಿ ನೂರಾರು ಚಿಕ್ಕ ಚಿಕ್ಕ ಫುಡ್ ಮತ್ತು  ಪನ್ ಸ್ಟಾಲುಗಳು  ಪ್ರತಿಯೋಬ್ಬರ ನಿರೀಕ್ಷೆಯನ್ನು ಸುಳ್ಳು ಮಾಡದ  ರೀತಿಯಲ್ಲಿ ಭರ್ತಿ ತುಂಬಿ ತುಳುಕುತ್ತಿದ್ದವು. ಮಕ್ಕಳು ಚಿಕ್ಕ ಚಿಕ್ಕ ಆಟಗಳನ್ನು ಆಡುತ್ತಾ ನಲಿದಾಡಿದರು.

ಅಲ್ಲಿ ಸೇರಿದ್ದ ಜನ ಸಮೂಹ ಕಂಡು ನಮ್ಮ ಹೆತ್ತವರು, ನಮ್ಮ ಭಾರತದಂತೆ ಎಲ್ಲಾರು ಒಮ್ಮೆಲೇ ಮನೆಗಳಿಗೆ  ತೆರೆಳಲು ಕಾರು ತೆಗೆ್ದರೇ ರಸ್ತೆ ಪೂರ್ತಿ ಟ್ರಾಫಿಕ್ ಜಾಮ್ ಎಂದು ಅನುಮಾನ ಪಟ್ಟಿದ್ದೆ ಬಂತು. ಆದರೆ ಇಲ್ಲಿನ ಅಚ್ಚುಕಟ್ಟು ಆಯೋಜನೆ ಒಂದು ನಿಮಿಷವೂ ಎಲ್ಲಿಯೂ ಟ್ರಾಫಿಕ್ ನಲ್ಲಿ ಸಿಲುಕಿಕೊಳ್ಳದ ರೀತಿಯಲ್ಲಿ ನಮ್ಮ ನಮ್ಮ ಕಾರೂಗಳನ್ನು ಅಲ್ಲಿನ  ಪಾರ್ಕ ಜಾಗದಿಂದ ಮುಖ್ಯ ರಸ್ತೆಗೆ ತಂದಾಗ ಹೆತ್ತವರು ವಿಸ್ಮಯದ ಕಣ್ಣು ಬಿಟ್ಟು ನನ್ನನೊಮ್ಮೆ ನೋಡಿದರು! 

ಬಹಳ ದಿನವಾದ ಮೇಲೆ ನಾವೆಲ್ಲರೂ ಒಂದು ಅತ್ಯತ್ತಮವಾದ ಕಾರ್ಯಕ್ರಮವನ್ನು ನೋಡಿದೆವು ಎಂಬ ತೃಪ್ತಿಯಾಯಿತು .  
 

ಸೋಮವಾರ, ಏಪ್ರಿಲ್ 22, 2024

ದೂರದ ದೇಶದಲ್ಲಿ ಕನ್ನಡ

ಭಾಷೆ ಎಂಬುದು ಎರಡು ಮನಸ್ಸುಗಳನ್ನು ಒಂದು ಕಡೆ ಕಟ್ಟಿಹಾಕುತ್ತದೆ. ಹಾಗೆಯೆ ನಮ್ಮ ಕನ್ನಡ ಭಾಷೆ ಈ ಅಮೇರಿಕಾದ ಡೇಟನ್ ನಗರದಲ್ಲಿ ವಿವಿಧ ಕನ್ನಡ ಕುಟುಂಬಗಳನ್ನು ಒಟ್ಟಿಗೆ ಒಂದು ಜಾಗದಲ್ಲಿ  ಸೇರುವಂತೆ ಮಾಡಿದೆ ಅಂದರೆ ಅತಿಶಯೋಕ್ತಿಯಲ್ಲ.

ಡೇಟನ್ ಸಿರಿಗನ್ನಡ ಸ್ಥಾಪಿತವಾಗಿ ಇಲ್ಲಿಯ ಎಲ್ಲಾ ಅಮೇರಿಕ ಕನ್ನಡಿಗರನ್ನು ಒಂದೇ ಸೂರಿನಲ್ಲಿ ತಂದಿದೆ. 



ಈ ಸಂಘವು ವರುಶದಲ್ಲಿ ಹಲವಾರು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿ ಕೊಂಡು ವರ್ಷವಿಡಿ ಕನ್ನಡಿಗರನ್ನು ಒಟ್ಟಿಗೆ ಪರಸ್ಪರ ಭೇಟಿ ಮಾಡಲು ಅನುವು ಮಾಡಿಕೊಟ್ಟಿದೆ ಅಂದ್ರೆ ತಪ್ಪಿಲ್ಲ. 

ಇಲ್ಲ ಅಂದ್ರೆ ಗೊತ್ತಲ್ಲ ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸ ಕಾರ್ಯಗಳ ಮೊಲಕ ಈ ಬ್ಯುಸಿ ಲೈಫ್ ನಲ್ಲಿ ಮುಳುಗೇಳುತ್ತಿರುತ್ತಾರೆ. ಈ ರೀತಿಯ ಯಾ0ತ್ರಿಕ ಬದುಕಿನಿಂದ ಪ್ರತಿಯೊಬ್ಬ ಕನ್ನಡಿಗರನ್ನು ಹೊರತರುವಲ್ಲಿ ಈ ಕನ್ನಡ ಕೂಟವು ಮಹತ್ತರ ಹೆಜ್ಜೆಯನ್ನು ಇಟ್ಟಿದೆ. 

ರಾಜ್ಯೋತ್ಸವ, ಯುಗಾದಿ, ಸ0ಕ್ರಾಂತಿ ಹೀಗೆ ಮುಖ್ಯ ಹಬ್ಬಗಳನ್ನು ಇಲ್ಲಿಯ  ಕನ್ನಡಿಗರೆಲ್ಲ ಒಟ್ಟಿಗೆ ಸೇರಿ ಒಂದೆಡೆ ಕಲೆತು ಬೆರೆತು ದೊಡ್ಡವರಿಂದ ಇಡಿದು ಚಿಕ್ಕ ಮಕ್ಕಳವರೆಗೆ ಕುಣಿದು, ಹಾಡಿ, ನಲಿದು, ತಾವೇ ತಮ್ಮ ಕೈಯಾರೆ ತಯಾರಿಸಿದ ತಿನಿಸುಗಳನ್ನು ಸವಿಯುತ್ತ ಕನ್ನಡದ ನೆಲದ ನೆನಪನ್ನು ಪುನರ್ ಮೆಲಕು  ಹಾಕಿಕೊಂಡು ಆಚರಿಸುತ್ತಾರೆ. 

ಇಲ್ಲಿಯೇ ಹುಟ್ಟಿ  ಬೆಳೆದ  ಮಕ್ಕಳಿಗೆ  ಕನ್ನಡದ ಮಣ್ಣಿನ ವಾಸನೆಯನ್ನು ಗ್ರಹಿಸುವ ಅವಕಾಶ. ಹೀಗೆ ನಮ್ಮ ರಾಜ್ಯದಿಂದ ದೊರವಿದ್ದರು ನಮ್ಮ ಮಾತೃ ಭಾಷೆಯಲ್ಲಿ  ಅದು  ಈ ಇಂಗ್ಲಿಷ್ ಮಯ ವಾತಾವರಣದಲ್ಲಿ ಎಲ್ಲರನ್ನು ಅತ್ಮೀಯವಾಗಿ ಮಾತನಾಡಿಸುವುದು ಸಂತೋಷವಾಗುತ್ತದೆ.  

ದೂರದ ದೇಶದಲ್ಲಿದ್ದಾಗ ಹತ್ತಿರವಿರುವರೇ ನೆಂಟರಲ್ಲವೇ? 

ಹೌದು ಆ  ಮೂಲಕ  ನಮ್ಮ ಈ  ಸಂಘದ ಕಾರ್ಯಕರ್ತರು  ಯಾವುದೇ ಒಂದು ಕಾರ್ಯಕ್ರಮ ಶುರುವಾಗುವ ಒಂದು ತಿಂಗಳು ಮುನ್ನ ಒಂದೊಂದು ಮನೆಯಲ್ಲಿ ಅಥವಾ ಪಾರ್ಕ್ ಗಳಲ್ಲಿ ಪೂರ್ವಬಾವಿ ಸಾಂಸ್ಕೃತಿಕ ಕಾರ್ಯಕ್ರಮಗಳ ತಾಲೀಮು ನಡೆಸುತ್ತಾರೆ. ಅದಕ್ಕೆ ತಮ್ಮ ತಮ್ಮ ಮಕ್ಕಳನ್ನು ಹೆತ್ತವರು ಕರೆದುಕೊಂಡು  ಬರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. 

ಪ್ರತಿ ಬಾರಿಯೂ ಪ್ರತಿಯೊಬ್ಬರು ಸರದಿ ಪ್ರಕಾರ ತಮ್ಮ ಮನೆಯಲ್ಲಿ ತಯಾರಿಸಿದ ತಿನಿಸುಗಳನ್ನ ಮಕ್ಕಳಿಗಾಗಿ ತರುವುದು. ಅದೂ ಕೂಡ ದೊಡ್ಡವರ  ಬಾಯಿ ರುಚಿಗೆ ಸಿಗುವುದು. ಅದರ ಬಗ್ಗೆ ಪುನ: ಏನೇನೋ ಮಾತು! ಇದನ್ನೆಲ್ಲ ನೋಡುವುದಕ್ಕೆ  ಎಷ್ಟು ಸಂತೋಷವಾಗುತ್ತದೆ.  

ಇದನ್ನೆಲ್ಲ ನೋಡಿದಾಗ ನನಗೆ ಹಳ್ಳಿಯಲ್ಲಿ ನನ್ನ ಅಮ್ಮ ಏನಾದ್ರು   ಹೊಸ ರುಚಿ ಮಾಡಿದಾಗ ಅಕ್ಕ ಪಕ್ಕದ ಮನೆಯವರಿಗೆ ಕೊಡುತ್ತಿದ್ದ ದಿನಗಳು  ನೆನಪಾಗುತ್ತದೆ. 

ಈ ರೀತಿಯಲ್ಲಿ  ನಾವೆಲ್ಲಾ ಒಂದೇ ಎಂಬ ಬಾವನೆಯಲ್ಲಿ ಜರುಗಿದ ಮೊನ್ನೆಯ ಯುಗಾದಿ  ಕಾರ್ಯಕ್ರಮವು ೪೨ ಕ್ಕೂ ಹೆಚ್ಚು ಕನ್ನಡ ಕುಟುಂಬಗಳನ್ನು  ಒಂದು ಕಡೆ ಸೇರಿಸಿ, ಅರ್ಧ ದಿನ ಪೂರ್ತಿ ವಿವಿಧ ವಿಭಿನ್ನವಾಗಿ ಮಕ್ಕಳ , ಹಿರಿಯರ ಹಾಡು, ಕುಣಿತ, ಮಾತು, ಕತೆ, ವಿವಿಧ ಬಗೆ ಬಗೆಯ ಸಿಹಿ ತಿನಿಸುಗಳು ಮತ್ತು  ಭರ್ಜರಿ ಹೋಳಿಗೆ ಊಟ ಸವಿದದ್ದನ್ನು ನೋಡಿದರೆ ನಾವು ನಿಜವಾಗಿಯೂ ಅಮೆರಿಕದಲ್ಲಿ ಇದ್ದವೊ ಅಥವಾ ಕನ್ನಡದ ಬೆ೦ಗಳೂರಲ್ಲಿ ಇದ್ದೇವೊ ಎಂಬ ರೋಮಾಂಚನವಾಯಿತು. 



ಇಲ್ಲಿಯ ಸಂಘದ ಕಾರ್ಯಕರ್ತರ ಸಂಭ್ರಮ ಮನ ತುಂಬಿ ಬಂದಿತು. ಹಾಗೆಯೇ ಕನ್ನಡಿಗರ ಸವಿ ವಿನಯ ಸಿಹಿ ಹೃದಯದ ಲವಲವಿಕೆ  ಪುನ: ಪುನ: ಮೇರು ನಟ ರಾಜಣ್ಣ ನ ವ್ಯಕ್ತಿತ್ವವೇ ಕಣ್ಮು0ದೇ ಬಂದಿತು. 

ಈ ರೀತಿಯ ಕನ್ನಡ ಸಂಘಗಳು ಹೊರ ದೇಶದ ವಿವಿಧ ಬಾಗಗಳಲ್ಲಿ ಇವೆ ಮತ್ತು ಅವುಗಳು ಇದೆ  ರೀತಿಯಲ್ಲಿ ಕನ್ನಡ ಜನರನ್ನು ಒಟ್ಟಿಗೆ ಸೇರಿಸಿ ಕನ್ನಡ ವಾತಾವರಣವನ್ನು ಸೃಷ್ಟಿಸಿ ಕನ್ನಡ ಮನಗಳನ್ನು ತೃಪ್ತಿಗೊಳಿಸುವಲ್ಲಿ ಮತ್ತು ಕನ್ನಡತನವನ್ನು ಉಳಿಸಿ ಬೆಳಸಲು ಅವಿರತ ಕಾಣಿಕೆ ಕೊಡುತ್ತಿರುವುದು ಶ್ಲಾಘನೀಯ!!

ಸೋಮವಾರ, ಫೆಬ್ರವರಿ 12, 2024

ನಿಮ್ಮ ಬಗ್ಗೆ ಹೇಳಿ

ಯಾರಾದಾರು ನಿಮ್ಮ ಬಗ್ಗೆ ಹೇಳಿ ಅಂದರೆ, ಏನು ಹೇಳುವುದು ಎಂದು ಚಿಂತೆ ಮಾಡಬೇಕಾಗುತ್ತೆ.

 ಅವರಿಗೆ ನಾವು ಹೇಳುವುದು ಸರಿ ಅನಿಸುತ್ತಾ ಅಥವಾ ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ನಗು ಬರುತ್ತಾ! 

ಆದರೆ ಸಂದರ್ಶನದ ಸಮಯದಲ್ಲಿ ಹೇಳುವದು ಅನಿವಾರ್ಯ ಮತ್ತು ಕೇಳುವುದು ಕೇಳಿದರವರಿಗೂ ಅನಿವಾರ್ಯ! 

ಹಾಗೆಯೇ ಅವರ ಬಗ್ಗೆ ನಮಗೆ ಗೊತ್ತಾಗುವುದು. 

ನಾನು ಇಲ್ಲಿ ಹುಟ್ಟಿ, ಇಲ್ಲಿ ಓದಿ,  ಇಲ್ಲಿ ಈಗ  ಈ ಕೆಲಸ ಮಾಡುತ್ತಿದ್ದೇನೆ. 

ಕೇಳಿದವರಿಗೆ ಒಹ್ ಹೀಗೆಲ್ಲಾ  ಜೀವನದಲ್ಲಿ ಈ ಹುಡುಗ ಬಸವಾಳಿದಿದ್ದಾನೆ ಇಲ್ಲಿವರಿಗೆ ಎಂದು ಕೇಳಿಸಿಕೊಂಡವರು ಒಂದಿಷ್ಟು ಕನಿಕರ ಪಡಬಡಹುದು. 

ಹಾಗೆಯೇ ಒಹ್ ನನಗಿಂತ ಹೀಗೆ ಹೀಗೆ ಏನೇನೋ ಮಾಡಿದ್ದಾನೇ ಎಂದು ಅಚ್ಚರಿ ಪಡಬಹುದು.

 ಆದರೂ ಒಮ್ಮೊಮ್ಮೆ ನಮ್ಮ ಬಗ್ಗೆ ನಾವೇ ಏನ್ ಕೊಚ್ಚಿಕೊಳ್ಳುವುದು ಅನಿಸುತ್ತದೆ. 

 ಅದರೂ ಇಂದಿನ ದಿನಮಾನದಲ್ಲಿ ನಮ್ಮ ಮಾರ್ಕೆಟಿಂಗ್ ನಾವೇ ಮಾಡಬೇಕು. ಅದಕ್ಕೆ ಹೆಚ್ಚು ಬೆಲೆ.

 ಎಲೆ ಮರೆಯ ಕಾಯಿಯಂತೆ ಇದ್ದರೆ ಯಾರೊಬ್ಬರೂ ಮೂಸಿ ಸಹ ನೋಡುವುದಿಲ್ಲ. 

ಎಲ್ಲಾ ಪ್ರಚಾರ ದಿನದಲ್ಲಿ ಬದುಕುವ ಬವಣೆ. 

ಎಲ್ಲಿಯಾದರೂ ಕೆಲಸ ಬೇಕೆಂದರೆ ನಿನ್ನ ರೆಸ್ಯೋಮ್ ಚೆನ್ನಾಗಿರಬೇಕು. ಇಲ್ಲ ಅಂದರೆ ನಿಮಗೆ ಒಂದು ಕಾಲು ಸಹ ಬರುವುದಿಲ್ಲ. ಕಾಲ್ ಇಲ್ಲ ಅಂದ್ರೆ ಇಂಟರ್ವ್ಯೂ ಇಲ್ಲ. ಅದು ಇಲ್ಲ ಅಂದರೆ ಕೆಲಸನು ಇಲ್ಲ.

ಇಂದು A I  ಜಮಾನಾ! ಆರ್ಟಿಪಿಸಿಯಲ್ ಇಂಟಲಿಜೆನ್ಸ್ ಮೊಲಕ ಮನುಷ್ಯರು ರಚಿಸಿದ ಕೃತಿಗಳನ್ನು ಪರೀಕ್ಷಿಸುತ್ತಾರೆ. ಅದಕ್ಕೇನು ಗೊತ್ತು  ನಮ್ಮ ಕಷ್ಟ ಸುಖ ? ಆದರೆ ಮನುಷ್ಯರನ್ನ ನಂಬುವುದಕ್ಕಿಂತ ಮಿಷಿನ್ ನಂಬುವ ದಿನಗಳಲ್ಲಿ ನಾವು ಇದ್ದೇವೆ.  ಮನುಷ್ಯನೇ ಕಂಡು ಹಿಡಿದ ಯಂತ್ರ ಮನುಷ್ಯನ್ನನ್ನೇ ಪರೀಕ್ಷಿಸುತ್ತದೆ. ಇಲ್ಲಿಗೆ ಬಂದು ನಿಂತಿದ್ದೇವೆ. 

ಇಲ್ಲಿಗೆ ಬಂದಿದೆ ನಮ್ಮ ಜೀವನ. ಬರಿ ಓದಿದರೆ ಏನು ಸಾಲದು. 

ಓದು ಮುಗಿದ ಮೇಲೆಯೇ ಜೀವನ ಅಂದರೆ ಏನು ಎಂದು ತಿಳಿವಿಯುವುದು. 

ಇನ್ನು ಹೆಚ್ಚು ಬದುಕು ಅಂದರೆ ಏನು ಎಂದು ತಿಳಿಯಲು ಬೆಂಗಳೂರಿಗೆ ಬಂದು ನಾಲ್ಕು ಕಡೆ ತಿರುಗಾಡಿ ಕೆಲಸ ಹುಡುಕಿದಾಗ ನಮ್ಮ ತಿಳುವಳಿಕೆ, ನಾವು ಏನು ಓದಿದೀವಿ ಎನ್ನುವುದು ಗೊತ್ತಾಗುತ್ತೆ. 

ಬರಿ ಓದಿನ ಅಂಕಗಳು ಏನು ಉಪಯೋಗವಿಲ್ಲ ಎನ್ನುವುದು ಒಂದೇ ದಿನದಲ್ಲಿ ತಿಳಿಯುತ್ತದೆ. 

ಮತ್ತೆ ನಮ್ಮನ್ನು ನಾವು ಹೇಗೆ ಪ್ರೇಸಂಟ ಮಾಡಿಕೊಳ್ಳಬೇಕು ಎನ್ನುವುದನ್ನ ಕಲಿಯಲು ಪುನಃ ಯಾವುದಾರೂ ಕ್ರ್ಯಾಶ್ ಕೋರ್ಸಗೆ ಸೇರಬೇಕು. ಅಲ್ಲಿ ಅದು ಇದು ಬೇರೆ ಭಾಷೆಯಲ್ಲಿ ಪುನಃ ನುರಿಯಬೇಕು.

ನಂಗೆ ರವಿಬೆಳೆಗೆರೆ ಕೊಡುತ್ತಿದ್ದ ವರುಷದ ಅಫಿಡವಿಟ್ ಅಥವಾ ಅವರು ಅವರ ಪುಸ್ತಕಗಳಲ್ಲಿ ತಮ್ಮ ಬಗ್ಗೆ ಹೇಳಿಕೊಳ್ಳುತ್ತಿದ್ದ  ಒಂದು ಪುಟದ ಸಾಲುಗಳು ತುಂಬಾ ಚೆನ್ನಾಗೇ ಕಾಣಿಸುತ್ತಿತ್ತು. ಹುಟ್ಟಿನಿಂದ ಪ್ರಾರಂಬಿಸಿ ಹೆಂಡತಿ,  ಮಕ್ಕಳು, ಮನೆ, ದುಡಿಮೆ, ಕಾರು, ಬಟ್ಟೆ ,ಪುಸ್ತಕಗಳಿಂದ ಹಿಡಿದು ಇತ್ತೀಚೆಗೆ ಕೊಂಡ ಕೆಜಿ ಬಂಗಾರ ಬೆಳ್ಳಿಯವರಿಗೆ  ಏನೆಲ್ಲಾ ಹೆಚ್ಚಾಗಿದೆ ಮತ್ತು ಕಡಿಮೆಯಾಗಿದೆ ಎಂಬುದನ್ನು  ಹೇಳಿಕೊಳ್ಳುತ್ತಿದ್ದರು. 

ಬದುಕಿದರೇ ಹೀಗ್ ದಿಲ್ ದಾರ್ ಮನುಷ್ಯನಾಗಿ ಬಾಳಬೇಕು ಎಂಬಂತೆ ಸಾಮಾನ್ಯ ಮನುಷ್ಯನಿಗೂ  ಉತ್ತೇಜನ ಕೊಡುವ  ರೀತಿಯ ಬರಹವಾಗಿತ್ತು ಅದು ಅವರ ಬಗ್ಗೆ ಅವರು ಹೇಳಿದ್ದ ಅಫಿಡವಿಟ್! 

 ನನಗೆ ಒಮ್ಮೊಮ್ಮೆ ಅನಿಸುತ್ತದೆ. ಅದು ಯಾಕೆ ಕಾಲೇಜು, ಶಾಲೆಗಳಲ್ಲಿ ಪಾಠಗಳ ಜೊತೆಯಲ್ಲಿ ಈ ಪಾಠಗಳನ್ನು ಯಾರೊಬ್ಬ ಗುರುವು  ನಮಗೆ ಹೇಳಿಕೊಡವುದಿಲ್ಲ. 

ಹಾಗೆಯೇ ಹಳ್ಳಿ ಮೊಲೆಯಲ್ಲಿ ಓದುವ ಬದಲು ಬೆಂಗಳೂರಲ್ಲಿ ಓದಿದವರ ಲಕ್ಕು ಚೆನ್ನ ಅನಿಸುತ್ತದೆ. 

ಬೆಂಗಳೂರಲ್ಲಿ ಇದ್ದಾರೆ ಅರ್ಧ ಲೈಫ್ ಪಾಠಗಳನ್ನು ಬೆಂಗಳೂರು ಗಾಳಿ ನಮಗೆ ತಿಳಿಸಿಕೊಟ್ಟುಬಿಡುತ್ತದೆ.

ಹೇಗೆ ಬದುಕಬೇಕು. ಯಾರನ್ನು ಹೇಗೆ ನಂಬಬೇಕು, ಹೀಗೆ ಜೀವನದ ಸತ್ಯಗಳನ್ನು ಯಾವ ವಿಶ್ವವಿದ್ಯಾನಿಲಯಗಳು ಹೇಳಿಕೊಡದದ್ದನ್ನು ಬೆಂಗಳೂರು ಒಂದು ದಿನದಲ್ಲಿ ಸುಲಭವಾಗಿ ಕಲಿಸಿಬಿಡುತ್ತದೆ. 

ಹಣಕ್ಕೆ ಇರುವ ಬೆಲೇ ಏನು ಎನ್ನುವುದನ್ನು ಕಾಲಿ ಜೇಬಿನಿಂದ್ ಒಂದು ಗಂಟೆ  ಈ ಮಹಾನಗರದ ದಾರಿಯಲ್ಲಿ ಸಾಗಿದರೆ ತಿಳಿಯುತ್ತದೆ. 

ಹೀಗೆ ಬದುಕು ನಾವು ನಮ್ಮ ಪಾಡಿಗೆ ಇದ್ದಾರೆ ನಾವು ಎಲ್ಲಿ ಇರುತ್ತೇವೊ ಅಲ್ಲಿಯೇ ಇರಬೇಕಾಗುತ್ತದೆ.

ಯಾರು ತನ್ನನ್ನ ತಾನು ಪ್ರೀತಿಸಿ ನಂಬಿ ತನ್ನ(ನ್ನು ತಾನು) ಚೆನ್ನಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವವನು ಅವನು ಈ ಪ್ರಪಂಚದಲ್ಲಿ ಗೆಲ್ಲುವನು.  

ಇನ್ನು ಯಾಕೆ ತಡ ನಿಮ್ಮ ಬಗ್ಗೆ ನೀವೇ ಹೇಳಿ!  

ಗುರುವಾರ, ನವೆಂಬರ್ 30, 2023

ಜೈ ಕನ್ನಡ! ಜೈ ಕರ್ನಾಟಕ!

ಕನ್ನಡ ರಾಜ್ಯೋತ್ಸವ! ಇದು ಕೇವಲ ನಗರಗಳಲ್ಲಿ ಅದೂ ಬೆಂಗಳೂರಲ್ಲಿ ಇರುವವರಿಗೆ ಮಾತ್ರ?

 ಕನ್ನಡ ಎನ್ನುವ  ಒಂದು ಭಾಷೆ ಇದೆ ಎಂಬುದನ್ನು ನೆನಪಿಸುವ ಹಬ್ಬವಾಗಿ ಮಾತ್ರ ಕಾಣುತ್ತಿದೆ ಎಂದೆನಿಸುತ್ತಿದೆ.

ಆದರೆ ಕನ್ನಡ ಭಾಷೆಯನ್ನು ನಿಚ್ಚಳವಾಗಿ ಮತ್ತು ತಮಗೆ ಗೊತ್ತಿಲ್ಲದ ರೀತಿಯಲ್ಲಿ ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಬಳಸುತ್ತಿರುವ ಮುಗ್ಧ ಕನ್ನಡಿಗರು ಎಂದರೇ ಅದು ಹಳ್ಳಿಯಲ್ಲಿರುವವರು, ಚಿಕ್ಕ ಪಟ್ಟಣಗಳಲ್ಲಿರುವವರು ಮಾತ್ರ . 

ಆದರೇ ಈ ರೀತಿಯ ಜರೋರತೆ ಬೆಂಗಳೂರಿನಲ್ಲಿರುವ ಅಥವಾ ನಾವು  ಮುಂದುವರೆದಿರುವ ಮುಂದುವರಿಯುತ್ತಿವೆ ಎಂದು ಗುರುತಿಸಿಕೊಂಡ ಮಹಾ ನಗರದ ಮಂದಿಗೆ ಇಲ್ಲ ಬಿಡಿ. ಇಲ್ಲಿ ಕನ್ನಡ ಭಾಷೆಗೆ ಏನೂ ಬೆಲೆ ಇಲ್ಲ ಎಂಬ ಕಠಿಣ ತಿಳುವಳಿಕೆಯಲ್ಲಿ ಮುಳುಗೇಳುತ್ತಿದ್ದಾರೆ.

ಯಾಕೆಂದರೇ ಇಲ್ಲಿರುವವರು ನವ ತರುಣ ತರುಣಿಯರು. 

ಹಳ್ಳಿಗಳಲ್ಲಿ , ಚಿಕ್ಕ ಪುಟ್ಟ ಪಟ್ಟಣಗಳಲ್ಲಿರುವವರು ಈ ಯುವ ಸಮುದಾಯವನ್ನು ಹೆತ್ತ ಹೆತ್ತವರು. ಹಾಗೆಯೇ ಹೆಚ್ಚು ಹೆಚ್ಚು ಓದಿರದ ಮಂದಿ ಮಾತ್ರ. ಇವರುಗಳು ಹೆಮ್ಮೆಯಿಂದ ಮತ್ತು   ಪ್ರೀತಿಯಿಂದ ಕನ್ನಡವೇ ಉಸಿರಾಗಿಸಿಕೊಂಡು ಬಾಳುತ್ತಿದ್ದಾರೆ. ಅವರುಗಳಿಗೆ ಕನ್ನಡ ಉಳಿಸಿ, ಬಳಸಿ ಮತ್ತು   ಬೆಳಸಿ ಎಂಬ ಘೋಷಣೆಯ ಬಗ್ಗೆ ಯಾವ ಅರಿವು ಬೇಕಾಗಿಲ್ಲ.

ಆದರೇ ನಮ್ಮ ಕರ್ನಾಟಕದ ಸ್ಥಿತಿ ಮಾತ್ರ ಅಂದಿನಿಂದ ಇಂದಿನವರೆಗೂ ಸುಧಾರಿಸಿರುವುದು ನಾ ಕಾಣೆ! 

ನಮ್ಮ ಮುಖ್ಯಮಂತ್ರಿಗಳು ಮೊನ್ನೆಯ ಕನ್ನಡ ರಾಜ್ಯೋತ್ಸವದ ಭಾಷಣದಲ್ಲಿ ಇದೇ ವಿಚಾರವನ್ನು ತಲೆ ಬಿಸಿ ಮಾಡಿಕೊಂಡು ನೆರೆದ ಸಭಿಕರಲ್ಲಿ ಹಂಚಿಕೊಳ್ಳುತ್ತಿದ್ದರು. ಬೆಂಗಳೂರು ಕನ್ನಡಿಗರು ಬೇರೆ ರಾಜ್ಯದಿಂದ ಬಂದವರ   ಭಾಷೆಯಲ್ಲಿಯೇ ಮಾತನಾಡಿದರೇ ಅವರು ತಾನೇ  ಯಾಕೆ ಕನ್ನಡ ಕಲಿಯುವ ಅವಶ್ಯಕತೆಯಾದರೂ  ಬಂದಿತು? ಅದು ಬಿಟ್ಟು  ನಾವು ಹೆಮ್ಮೆಯಿಂದ ಕನ್ನಡದಲ್ಲಿಯೇ ಅವರೊಂದಿಗೆ ಮಾತನಾಡಿದರೆ ಅವರು ಸಹ ಕನ್ನಡ ಕಲಿಯುವಲ್ಲಿ ನಮ್ಮೊಂದಿಗೆ ಕೈ ಜೋಡಿಸುವವರು ಎಂದೇಳುತ್ತಿದ್ದರು.


ಅವರಿಗೂ ಗೊತ್ತಾಗಿರಬೇಕು. ಈಗಂತೂ ವಿದಾಸೌದದಲ್ಲೂ ಸಹ ಕನ್ನಡ ಕೊಂಚ ಕೊಂಚ ಕಾಣೆಯಾಗುತ್ತಿದೆ ಎಂದು . ಹಾಗೆಯೇ ಈ ಸಂದರ್ಭದಲ್ಲಿ ಅವರು ಒಂದು ಆಜ್ಞೆಯನ್ನು   ಹೊರಡಿಸಿದರೂ ’ಸರ್ಕಾರಿ ಪತ್ರ ವ್ಯವಹಾರವೆಲ್ಲಾ ಕನ್ನಡದಲ್ಲಿಯೇ ಇರಲಿ’ ಎಂದು.



ಹೌದು ಹೀಗೆ ಈ ರೀತಿಯ  ಕನ್ನಡದ ಅಳಿವು ಉಳಿವಿನ ಮಾತುಗಳು ಕೇವಲ ಪ್ರತಿ ನವಂಬರ್ ಮಾಸಕ್ಕೆ ಮಾತ್ರ ಸೀಮಿತವಾಗಿ ಡಿಸೆಂಬರ್ ಹೊತ್ತಿಗೆ ತಣ್ಣಗೆ ಮಲಗಿ ಮೊಲೆಗೆ ಸೇರುತ್ತಿರುವುದು ನಮ್ಮ ಕರ್ನಾಟಕದ  ಜನರ ದೌರ್ಭಾಗ್ಯ ! 


ಯಾಕೇ ಈ ರೀತಿಯ ಒಂದೇ ಒಂದು ಕೂಗು ನಮ್ಮ ಅಕ್ಕ ಪಕ್ಕದ ರಾಜ್ಯಗಳಲ್ಲಿ ಇಲ್ಲವೆಂದು ತುಂಬ ಅಚ್ಚರಿಯಾಗುತ್ತದೆ.  ಯಾಕೆಂದರೇ ಕನ್ನಡವು ಮುಂದುವರಿದ ನಮ್ಮ ನಗರಗಳಲ್ಲಿ ಅದಿಕೃತ ಭಾಷೆಯಾಗಿ ಚಾಲ್ತಿಯಲ್ಲಿ ಇಲ್ಲ. ನಮಗ್ಯಾರಿಗೂ ಕನ್ನಡ ಕಲಿಯಲೇ ಬೇಕೆಂಬ ಒತ್ತಡವಿಲ್ಲ.


ಕನ್ನಡ ನೆಲದಲ್ಲಿ ಹುಟ್ಟಿರುವ ನಮ್ಮ ಕನ್ನಡಿಗರಿಗೆ  ಕನ್ನಡ ಮಾತನ್ನಾಡಿದರೇ ದುಡಿಮೆಯ ಹೊಟ್ಟೆ ತುಂಬಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಅತಿ ಚಿಕ್ಕ ಕೆಲಸಕ್ಕೂ ಕನ್ನಡ ಬಿಟ್ಟು ಬೇರೆ ಯಾವುದೇ ಭಾಷಾ ಪಾಂಡ್ಯತೆ ಬೇಕಾಗಿದೆ ಎಂದು ಹೇಳುವವರೇ ಹೆಚ್ಚಾಗಿದ್ದರೆ. 


ಇಂದು ಭಾಷೇ  ಮಮತೆಗಿಂತ ಹೊಟ್ಟೆಯ ಪಾಡೇ ದೊಡ್ಡದು ಎಂಬ ಭಯ!


ಇದರ ಬಗ್ಗೆ ನಮ್ಮ ಸರ್ಕಾರಗಲ್ಲಿರುವ ಮಹಾನ್ ಬೃಹಸ್ಪತಿಗಳು ಕಣ್ಣು ತೆರೆದು  ಸಹ ನೋಡುವುದಿಲ್ಲ. ಬರೀ ಕನ್ನಡ ದಿನದಂದೂ ಮಾತ್ರ ಕನ್ನಡ ಉಳಿಸೋಣ ಬಳಸೋಣವೆಂದು ವೀರಾವೇಷದ ಮಾತುಗಳನ್ನು ಆಡಿ ವರ್ಷವಿಡಿ ಮೌನವಹಿಸಿಬಿಡುತ್ತಾರೆ. 


ಹೀಗೆ ಸ್ನೇಹಿತರ ವರ್ಗದಲ್ಲಿ ಯಾರೋ ಹೇಳುತ್ತಿದ್ದರು.. ಅದು ಯಾವುದೋ ಒಂದು ಬೆಂಗಳೂರಿನ ವಸತಿ ಸಮುಚ್ಛಾಯದಲ್ಲಿ ೩೨೮ ಮನೆಗಳಿವೆಯಂತೆ.  ಅಲ್ಲಿ ಇರುವ ಕನ್ನಡದ ಕುಟುಂಬಗಳು ಕೇವಲ ೩೮ ಅಂತೆ. ಇಲ್ಲಿಗೆ ಬಂದು ನಿಂತಿದೆ ನಮ್ಮ  ಕನ್ನಡ ರಾಜಧಾನಿಯ ಸ್ಥಿತಿ. ಯೋಚಿಸಿ ಭಾಷೆ ಎಷ್ಟು ಮುಖ್ಯ ಎಂಬುದು. ಕನ್ನಡಿಗರು ಸಹ ಕನ್ನಡದ ಬಗ್ಗೆ ಮೂಗು ಮುರಿದರೆ ಬೇರೆ ಯಾರು ತಾನೇ ನಮ್ಮ ಭಾಷೆಯನ್ನು ಮಾತನಾಡುವರು?  ಬೆಂಗಳೂರಲ್ಲಿ ಕನ್ನಡ ಕಲಿಯಲೇ ಬೇಕು ಎಂಬ ಜರೂರತೆ ಇಲ್ಲ!


ಯಾಕೇ ಹೀಗೆ ಎಂದು ಯಾರು ಸಹ ಪ್ರಶ್ನಿನಿಸಲಾರರು.  ಯಾಕೆಂದರೇ ಯಾವ ಭಾಷೆ  ಹೆಚ್ಚು ಕೆಲಸಗಳನ್ನು , ಉದ್ಯೋಗಗಳನ್ನು, ಸಂಬಳವನ್ನು ಕೊಡುವುದು ’ಹೊಟ್ಟೆ’ಯನ್ನು ತುಂಬಿಸುವುದೋ ಆ ಭಾಷೆಯೇ ಇರಲಿ ಎಂಬ ಜಾಣ ನಿರ್ಧಾರಕ್ಕೆ ಬಂದಂತಿದೆ. 


ಜೈ ಕನ್ನಡ! ಜೈ ಕರ್ನಾಟಕ!

ಶುಕ್ರವಾರ, ಫೆಬ್ರವರಿ 17, 2023

ಲಹರಿ

 ನಾವು ಓದಿದೆವೆಂದರೇ ಕೆಲಸ ಮಾಡಲೇಬೇಕಾ? ಅಯ್ಯೋ ಅಷ್ಟೊಂದು ಓದಿ ಕೊನೆಗೂ ಮದುವೆ,ಮಕ್ಕಳು,ಅತ್ತೆ, ಮೂಸರೇ ತೊಳೆಯುತ್ತಾ ಕೂತೂ ಬಿಟ್ಟೆ. 

ಅದು ಏನೂ ನಿನ್ನ ಅಪ್ಪ ನನ್ನ ಮಗಳಂತೇ ಯಾರೂ ಓದಿಲ್ಲವೆಂದು ಕೊಚ್ಚಿಕೊಂಡಿದ್ದು! ಹೀಗೆ ನೂರಾರು ಸುತ್ತಲಿನ ಬಾಯಿ ಮಾತು ಕೇಳಿ ಕೇಳಿ ರೋಸಿ ಹೋಗಿತ್ತು. 

ನಾನೂ ಅಷ್ಟು ಸ್ವಾಭಿಮಾನಿ. ನಾನು ಎಂದೂ ಹೆಣ್ಣು ಎಂದುಕೊಂಡು ಬೆಳೆದ ಮಗಳೇ ಅಲ್ಲ! ಅಪ್ಪ ಅನ್ನುವಂತೆ ನಾನೇ ನಮ್ಮ ಮನೆಗೆ ಗಂಡು ಮಗುವೆನ್ನುವಂತೆ ಬೆಳೆದವಳು. 

ಓದನ್ನು ಮಾತ್ರ ಅಚ್ಚುಕಟ್ಟಾಗಿ ಓದಿ ಬಿಡಬೇಕು ಎಂಬಂತೆ ಎಷ್ಟೇ ದೊಡ್ಡ ಓದು ಆದರೂ ಸಲೀಸಾಗಿ ಪಾಸು ಮಾಡುತ್ತಿದ್ದೆ. ಶಾಲೆಯಲ್ಲೂ ಅಷ್ಟೇ ಪ್ರತಿಯೊಬ್ಬ ಶಿಕ್ಷಕರುಗಳಿಗೂ ನಾನೇ ಬೇಕಾಗಿತ್ತು. ಓದು ಅಲ್ಲದೇ ಶಾಲೆಯಲ್ಲಿ ಕಾಲೇಜಿನಲ್ಲಿ ಯಾವುದೇ ಪಠ್ಯೇತರ ಚಟುವಟಿಕೆಗಳಿಗೆ ಅವಳೇ ಸರಿ ಎನ್ನುವ ಮಟ್ಟಿಗೆ ನಾನೇ ಪ್ರೀತಿ ಪಾತ್ರಳಾಗಿದ್ದೆ. 

ಹಾಗೇಯೇ ಬೇರೆ ಹುಡುಗ ಹುಡುಗಿಯರಿಗೆ ನನ್ನ ಏಳ್ಗೆಯನ್ನು ನೋಡಿ ಹೊಟ್ಟೆ ಉರಿ ಬಂದಿತ್ತೋ ಅಥವಾ ಅವರ ಹೆತ್ತವರು ನನ್ನನೇ ಉದಾಹರಣೆಯಾಗಿ ಕೊಟ್ಟು ಕೊಟ್ಟು ಅವರ ಹೊಟ್ಟೆ ಉರಿಸಿ ಮುನಿಸಿಕೊಳ್ಳುವಂತೆ ಮಾಡಿರಲೇಬೇಕು. 

ಇದೊಂದು ರೋಗವೇ ಸರಿ! ನಮ್ಮ ಹೆತ್ತವರೇ ಅಲ್ಲಾ ಪ್ರತಿಯೊಂದು ಮನೆಯಲ್ಲೂ ಬೇರೆಯವರೊಂದಿಗೆ ತಮ್ಮ ಮಕ್ಕಳನ್ನು ಹೋಲಿಸಿ ನೋಡುವುದು. ನೋಡು ಅವರ ಮಗ ಹೇಗೆ ದುಡಿಯುತ್ತಿದ್ದಾನೇ. ನೋಡು ಅವರ ಸೊಸೆ ಎಷ್ಟೊಂದು ಕೆಲಸ ಮಾಡುತ್ತಿದ್ದಾಳೆ. ಹೀಗೆ ಹಾಗೇ ಬರೀ ಬೇರೆಯವರನ್ನು ನೋಡಿ ನಮ್ಮ ನಮ್ಮ ಶಕ್ತಿಯನ್ನು ಪರೀಕ್ಷೆ ಮಾಡಿಕೊಳ್ಳುವುದೇ ಆಯಿತು ಅನಿಸುತ್ತದೆ. 

ನನಗೂ ಈ ರೀತಿಯ ಹೆತ್ತವರ ಕಾಟ ಮುಗಿಯಿತು ಅನ್ನುವ ಹೊತ್ತಿಗೆ ಮದುವೆ ಮಾಡಿ ಕೈ ತೊಳೆದು ಕೊಂಡು ಬಿಟ್ಟರು ಅನಿಸುತ್ತದೆ. ಅದು ಯಾರು ಅಲಿಖಿತ ಶಾಸನ ಮಾಡಿದ್ದರೋ ಗೊತ್ತಿಲ್ಲ. ಓದುವುದು ಮುಗಿಯಿತು ಅಂದರೇ ಹುಡುಗಿಯರಿಗೆ ಬೇಗ ಮೂಗುದಾರ ಹಾಕಿ ಅನ್ನುತ್ತಾರೆ. 

ನಮ್ಮ ಮಗಳು ಇದೀಗ ತಾನೇ ಇಷ್ಟೊಂದು ಓದಿದ್ದಾಳೆ, ಸ್ವಲ್ಪ ಸಮಯ ಆರಾಮಾಗಿ ಅಲ್ಲಿ ಇಲ್ಲಿ ಕೆಲಸ ಹುಡುಕಿ ದುಡಿಯಲಿ ಎನ್ನುವ ಮಾತೇ ಇಲ್ಲ. ಏಯ್ ನೀನು ಏನು ದುಡಿದು ನಮ್ಮನ್ನು ಉದ್ಧಾರ ಮಾಡಬೇಕಾಗಿಲ್ಲ. ನಾವು ಗಟ್ಟಿಯಾಗಿ ಇರುವಾಗಲೇ ನೀನೊಂದು ಮನೆಗೆ ಮಹಾಲಕ್ಷ್ಮಿಯಾಗಿ ಹೋಗಿ ಬಿಟ್ಟರೇ ಅಷ್ಟು ಸಾಕು ಎನ್ನುವ ಚಿಂತೆ ಹೆಣ್ಣು ಹೆತ್ತ ಎಲ್ಲಾ ತಂದೆ ತಾಯಿಯಂದಿರದು. 

ನಾವೆಷ್ಟೇ ಓದಿ, ಎಷ್ಟೇ ದೊಡ್ಡ ಹುದ್ದೆಯನ್ನು ಅಲಂಕರಿಸಿದರೂ ನಮ್ಮನ್ನು ಇದೇ ಸಮಾಜ ಕೇವಲ ಒಂದು ಹೆಣ್ಣು ಎನ್ನುವ ರೀತಿಯಲ್ಲಿಯೇ ನಮ್ಮ ನಮ್ಮ ಹೆತ್ತವರುಗಳು ಸಹ ಕಾಣುತ್ತಾರೆ. ಅದು ಏನೂ ಆ ಭಯ  ನನಗೆ ಇನ್ನೂ ಗೊತ್ತಾಗಿಲ್ಲ. 

ಇತಿಹಾಸ ಪುರಾಣಗಳಿಂದಲೂ ಮಹಿಳೆಯರ ಪರಾಕ್ರಮ ಸಾಧನೆಗಳು  ಕಣ್ಣ ಮುಂದೆ ಇದ್ದರೂ ಅವುಗಳನ್ನೆಲ್ಲಾ ಕೇವಲ ಕಥೆಯಾಗಿ ಮಾತ್ರ ನೋಡುತ್ತಾರೆ. ಪುನಃ ಪುನಃ ತನ್ನ ಕರಳು ಬಳ್ಳಿಯನ್ನು ಇನ್ನೂ ಹೆಚ್ಚು ನಾಜೂಕಾಗಿ ಕಾಪಾಡುತ್ತೇವೆ ಎನ್ನುವ ರೀತಿಯಲ್ಲಿ ಮದುವೆ ಎಂಬ ಖೆಡ್ಡಾಕ್ಕೆ ದೂಡುತ್ತಾರೆ. 


ಹೆಣ್ಣು ಎಂದರೇ ಅವಳು ಬೇರೆಯವರ ಮನೆಯ ಸೊತ್ತು ಎಂದೇ ನೋಡುತ್ತಾರೆ. ಅವಳ ಜವಬ್ದಾರಿಯನ್ನು ಇನ್ನೂ ಏನಿದ್ದರೂ ಅವಳ ಗಂಡ ಅತ್ತೆ ಮಾವ ನೋಡಿಕೊಳ್ಳಲಿ ಎಂಬ ಭಾವನೇ ಏಕೋ ಗೊತ್ತಿಲ್ಲ! 

ಗೊತ್ತಾ ನಮ್ಮ ಜವಾಬ್ದಾರಿ ಬೇರೆಯವರು ಹೊರುವುದಕ್ಕಿಂತ ನಾವೇ ಬೇರೆಯವರ ಜವಾಬ್ದಾರಿಯನ್ನು ಹೊತ್ತುಕೊಂಡು ಇಡೀ ಮನೆಯನ್ನೇ ತೂಗಿಸಿಕೊಂಡು ಸಾಗಬೇಕಾಗಿರುತ್ತದೆ. ಆದರೂ ನಮ್ಮ ಅಪ್ಪ ಅಮ್ಮನಿಗೆ ಅಮ್ಮ ಹೇಗೆ ತಮ್ಮ ಮನೆಯನ್ನು ನಿಭಾಯಿಸುವವಳು ಎಂಬುದನ್ನು ತಮ್ಮ ತಮ್ಮ ಹೆಣ್ಣು ಮಕ್ಕಳ  ಮದುವೆ ಮಾಡುವ ವೇಳೆ ಪೂರ್ತಿ ಮರೆತು ಬಿಟ್ಟಿರುತ್ತಾರೆ. ಇದೇಯೇ  ಸಮಜಾಯಿಷಿ? ಏನು ಹೇಳುವುದು ಹೆತ್ತ ಕರುಳುಗಳಿಗೆ!!

ಭಾನುವಾರ, ನವೆಂಬರ್ 6, 2022

ಕನ್ನಡ

ಕನ್ನಡ ಏನು ಚೆನ್ನ ನುಡಿಯಲು ಈ ಸವಿ ನುಡಿ 

ನಮ್ಮ ಭಾಷೆ ನಮ್ಮ ಕನ್ನಡ ನುಡಿಯೇ ನಮಗೆ ಹೆಮ್ಮೆ

ಎಲ್ಲಿಯೇ ಇರಲಿ ಹೇಗೆ ಇರಲಿ ನಮ್ಮ ಭಾಷೆ ನಮ್ಮದು  

ಕನ್ನಡವೊಂದಿರಲು ಭಾವನೆಗೆ ಬೇರೆ ಏನು ಬೇಕು 

ತಾಯಿ  ಭಕುತಿಗೆ  ಕನ್ನಡವೊಂದೇ ಸಾಕು 

ನಮ್ಮನ್ನೆಲ್ಲ  ಬೆಸೆದ ಬಂಧವೇ  ಈ ಸಿರಿ ಕನ್ನಡ ನುಡಿ 

ಯಾರು ಬೇಕಾದರೂ ಕಲಿಯಬಹುದು ಈ ಕನ್ನಡ

ಸುಲಲಿತ  ಸುಲಭ ಸುಕೋಮಲ  ಸುಲಿದ ಬಾಳೆ ಹಣ್ಣೇ ಸರಿ 

ಎಷ್ಟು ಚೆನ್ನ ಕನ್ನಡ ನುಡಿಯ ದ್ವನಿಯ  ಗಾಯನ 

ಕನ್ನಡ ಕೇಳಿದೊಡನೆ ನಲಿವುದು ತನು ಮನ

ಅಮ್ಮನಂತಹ ಮುದ್ದು ಪಡೆದ  ನಾವೇ  ಧನ್ಯರು

ತಾನು  ಬೆಳೆದು ನಮ್ಮ ಬೆಳೆಸುವ  ನಮ್ಮ ಭಾಷೆ ಕನ್ನಡ

ಕೋಟಿ ಮನಗಳ ಬೆಸೆಯುವ ನುಡಿಯನ್ನು  ಯಾರು ಯಾಕೆ  ಮರೆಯವರು

ನಿತ್ಯ  ನುಡಿಯ  ಪಸಲು ಬೆಳೆದ ಕನ್ನಡ ಕಟ್ಟಾಳುಗಳೇ ನಮ್ಮ ಹೆಮ್ಮೆ 

ಸ್ನೇಹ ಪ್ರೀತಿ ಬಾಳ್ವೆ ಕಲಿಸಿದ ಮಡಿಲು ಶ್ರೀಗಂಧದ ಬೀಡು

ಎಷ್ಟು ಮಹನೀಯರ  ಹೆತ್ತು  ಮೆರೆಸಿದವಳು ನಮ್ಮಮ್ಮ ಕನ್ನಡತಿ 

ಭಾರತೀಯ ಶ್ರೇಷ್ಠ ಕುವರಿ ಈ  ಕನ್ನಡ ಭುವನೇಶ್ವರಿ

ಯಾರು ಏನೇ ಹೇಳಿದರು ತಾಯಿ ನುಡಿಯೇ ಶ್ರೇಷ್ಠ ಎಂದಿಗೂ 

ಜೈ ಜೈ ಅನ್ನೋಣ ಈ  ಸುದಿನದ  ನಾಡ ಹಬ್ಬಕ್ಕೆ

ಜೈ ಕರ್ನಾಟಕ!


ಭಾನುವಾರ, ಮಾರ್ಚ್ 13, 2022

ಮಮತೆಯ ಮಡಿಲು

ಮಕ್ಕಳು ಹುಟ್ಟಿದಂದಿನಿಂದ ದೊಡ್ಡವನಾಗಿ ಬೇರೆಯೆಡೆಗೆ  ಹೋಗುವವರೆಗೂ ಹೆತ್ತ ಕರಳು ತನ್ನ ಕೂಸನ್ನು ಸೆರಗಲ್ಲಿಯೇ ಕಾಪಾಡುತ್ತಾಳೆ.  ಆ ಮಮತೆ  ಅದು ಹೇಗೆ ತನ್ನಲ್ಲಿ ಮೊಳಕೆಯೊಡೆಯುತ್ತದೆಯೋ ತಿಳಿಯದು. 

ಮಗುವೆಂಬ ಬೀಜ ಹೊಟ್ಟೆಯಲ್ಲಿ ಮೊಳೆತ ತಕ್ಷಣವೇ? 

ಇಲ್ಲ ಅನಿಸುತ್ತೆ. 


ಆ ಪ್ರೀತಿ ಹುಟ್ಟುವುದು ಆ ಮಗು ತನ್ನ ಹೊಟ್ಟೆಯಿಂದ ಈ ಜಗತ್ತಿಗೆ ಪಾದಾರ್ಪಣೆ ಮಾಡಿದ ಬಳಿಕವೇ ಇರಬೇಕು ಅನಿಸುತ್ತದೆ. 


ತನಗೆ ಗೊತ್ತಿಲ್ಲದ ರೀತಿಯಲ್ಲಿ ತನ್ನ ಜೀವಕ್ಕಾಗಿ ಪ್ರತಿ ಕ್ಷಣ ಮರುಗುವ ಕರಗುವ  ಮತ್ತೊಂದು ಜೀವ ಈ ಪ್ರಪಂಚದಲ್ಲಿ ಇರಲಾರದು.  ತನ್ನದೇ ಇನ್ನೊಂದು ಅಂಗದ ರೀತಿಯಲ್ಲಿ ಮೈ ಕೈ ತುಂಬಿಕೊಂಡಿರುವ ಇನ್ನೊಂದು  ಜೀವ ಕೈ ತುಂಬಿ ಅಂಗೈಯಲ್ಲಿ ಕುಳಿತಿರುವಾಗ  ಕಣ್ಣಾಲಿ ತುಂಬಿ ಬರಲಾರದೇ ಇರದು ಅಲ್ಲವಾ? 

ತನ್ನದೇ ರಕ್ತ ಉಸಿರನ್ನು ಹೊಂದಿರುವ​ ಇನ್ನೊಂದು ಭಾಗ ಪಕ್ಕದಲ್ಲಿಯೇ ಇರುವಾಗ ಜೀವ ಜೀವವೇ ಮಿಡಿಯಲಾರದೇ ಇರಲು ಹೇಗೆ ಸಾಧ್ಯ​?.  ಅಂದೇ ಹುಟ್ಟಿದ ಆ ಪ್ರೇಮ ಕ್ಕೆ ಸಾಟಿ ಮತ್ತೊಂದು ಇರುವುದೇ?


ತಾನು ಬಲಿಯುತ್ತಿರುವಾಗ. ತಾನು ಬೆಳೆಯುತ್ತಿರುವಾಗ. ಆ ಜೀವವು ಅಷ್ಟೇ ಉತ್ಕಟ ಪ್ರೀತಿಯ ಜೇನನ್ನು ಹೆತ್ತ ಜೀವಕ್ಕೆ ಕೊಡುವುದು ಸ್ವಾಭಾವಿಕ​.  ತನ್ನನ್ನು  ನವ ಮಾಸವು ಕಾಪಿಟ್ಟು ಭೂಮಿಗೆ ಕರೆದವ್ವನ್ನನ್ನು ಇನ್ನೂ ಹೇಗೆ ಕೃತಙ್ನತೆಯಿಂದ ಕಾಣಬೇಕು? ಆ ಕೂಸಿಗೆ ಗೊತ್ತಿರುವುದು ಪ್ರತಿ ಪ್ರೀತಿಯನ್ನು  ತನ್ನನ್ನು ಹಡೆದ ಉಸಿರಿಗೆ ನೀಡುವುದು. 


ಹೊಸ ಹೊಸದರಲ್ಲಿ ಒಂದು ಕ್ಷಣವು ತನ್ನ ಹೆತ್ತ ಕರಳನ್ನು ಬಿಟ್ಟಿರಲಾರದಷ್ಟು ಹೊಟ್ಟೆ ಕಿಚ್ಚು ಮರಿ ಜೀವಕ್ಕಿರಬೇಕು. ಅದಕ್ಕೆ ಯಾರಾದರೂ ಹೊಸಬರು ತನ್ನ ಮನೆಗೆ ಬಂದರೇ ನನ್ನಮ್ಮನೇ ಇಲ್ಲವೇನೋ ಎನ್ನುವಷ್ಟು ಅಳು ಮುಂಜಿಯಾಗುವುದು.  


ತಾನು ಹೊಟ್ಟೆಯಲ್ಲಿ ಬೆಚ್ಚಗೆ ಮಲಗಿದ ನೆನಪನ್ನು ಏನಂದರೂ ಮರೆಯಲಾರ​ದೇನೋ. ತಾನು  ತಾಯಿಯ ಮಡಿಲಲ್ಲಿದ್ದಷ್ಟು ಸುರಕ್ಷಿತವವಾಗಿ   ಜಗತ್ತಿನಲ್ಲಿ ಎಂದು ಎಲ್ಲಿಯು ಸುರಕ್ಷಿತವಾಗಿರಲಾರೇನು ಎಂಬ ಭಾವನೇ ಪ್ರತಿಯೊಬ್ಬರಿಗೂ ಎಂದಿಗೂ ಅಳಿಯಲಾರದು. 

ಅದು ತನ್ನ ತಾಯಿ, ತನ್ನ ಹುಟ್ಟಿದ ಊರು, ಹುಟ್ಟಿದ ದೇಶ ಇವುಗಳು ಕೊಡುವ ಬೆಚ್ಚನೆಯ ತನ್ನದು ಎಂಬ ಮನಸ್ಸಿನ ಭಾವ​  ಯಾರೊಬ್ಬರೂ, ಯಾವ ಪರ ಊರುಗಳು, ದೇಶಗಳು ಎಂದಿಗೂ ಕೊಡಲಾರವು.


ಎಂದೂ ಮಗುವಿನ ಏಳ್ಗೆಯ ಕನಸನ್ನು ಕಾಣುವವರು ಮತ್ಯಾರು ಅಲ್ಲ​, ಅದು ತಾಯಿ ಮಾತ್ರ​. ತನ್ನ ಕಂದನು ಮಾತ್ರ ಎಂದೆಂದಿಗೂ ಸಂತೃಪ್ತಿಯಾಗಿ ಬದುಕಲಿ ಎಂಬುದೇ ಹಗಲು ಇರುಳಿನ ಕೋರಿಕೆಯಾಗಿರುತ್ತದೆ.


ತಾನು ಊಪವಾಸವಿದ್ದರೂ ತನ್ನ ಕರುಳ ಬಳ್ಳಿ ಯಾವಾಗಲೂ ನಿತ್ಯ ಹಸುರಾಗಿರಲಿ ಎಂದು ಕಾದಿದ್ದು ಹೊಟ್ಟೆಯ ತುಂಬಿಸುವ ಕೈಯನ್ನು ಈ ಜಗತ್ತಿನಲ್ಲಿ ಎಲ್ಲಿಯು ಕಾಣಲು ಸಾಧ್ಯವಿಲ್ಲ​.


ತನ್ನ ಕಂದಮ್ಮನಿಗೆ ಯಾರಾದರೂ ಏನಾದರೂ  ಅಂದರೇ ತುಂಬಾ ನೊಂದುಕೊಂಡು ಕೊರಗುವ ಒಂದೇ ಒಂದು ಮನಸ್ಸು ಎಂದರೇ ಹೆತ್ತಮ್ಮ ಮಾತ್ರ​.


ನೂರು ನೋವಿನ ಮಾತುಗಳನ್ನು ತಾನು ಮಾತ್ರ ಸಹಿಸಳು. ಆದರೇ ಒಂದು ಕೊಂಕು ನುಡಿಯನ್ನು ಯಾರದರೂ ತನ್ನ ಮಗುವಿಗೆ ಅಂದರೇ ಅವರನ್ನು ತಾನು ಎಂದೆಂದು ಕ್ಷಮಿಸಲಾರಳು.


ತಾನು ಹೇಗಾದರೂ ಬದುಕಿ ಬಾಳಲಿ, ಹೇಗೆ ಎಲ್ಲಾದರೂ ಇರಲಿ. ತಾನು ಹೇಗೆ ಬೇಕಾದರೂ ಬಾಳಿದರೂ ತನ್ನ ಮುದ್ದು ಕಂದಮ್ಮನ ಬದುಕು ಬಂಗಾರವಾಗಿರಲಿ ಎಂಬುದೇ ಜೀವದ ಹಿರಿ ಆಸೆಯಾಗಿರುತ್ತದೆ. 


ತಾನು ಪಟ್ಟ ಕಷ್ಟದ ಗುಲಗಂಜಿಯಷ್ಟನ್ನು ತನ್ನ ಉಸಿರಿನ ಉಸಿರಾದ ಮಗುವು ಪಡಬಾರದು. ತಾನು ಅನುಭವಿಸಿದ ಜೀವನ ದಾರಿಯನ್ನು ತನ್ನ ಮಗುವು ಎಂದು ತುಳಿಯಬಾರದು. ತಾನು ಕಂಡೂಂಡ ಯಾವುದೇ ಚಿಕ್ಕ ದೊಡ್ಡ ಕಷ್ಟಗಳ ನೆರಳು ಎಂದೆಂದು ಬಿಳದಿರಲಿ ಎಂಬ ಹಂಬಲ​.  ಮಗುವಿನ ನೆತ್ತಿಯ ಮೇಲೆ ಸದಾ ತನ್ನ ಆಶೀರ್ವಾದವೆಂಬ ಸೆರಗನ್ನು ಇಟ್ಟು ಕಾಯುವವಳು ಯಾರಾದರೂ ಇದ್ದರೇ ಅದು ಹೆತ್ತಮ್ಮನೇ.


ತಾನು ಕಾಣದಿರುವ, ತಾನು ಅನುಭವಿಸದಿರುವ ಈ ಜಗತ್ತಿನ ಅತ್ಯುನ್ನತವಾದ ಏನಾದರೂಂದಿದೆಯೋ ಅದು ನನ್ನ ಕರಳಿಗೆಯೇ ಸಿಗಲಿ. ಈ ರೀತಿಯ ಹತ್ತು ಹರಕೆಗಳನ್ನು ದೇವರ ಮುಂದೆ ನಿತ್ಯ ರಾತ್ರಿ ಹೊತ್ತಿರುವವಳು ಎಂದರೇ ಅದು ಅಮ್ಮ ಎನ್ನುವ ಜೀವ​.


ಕರಳ ಬಳ್ಳಿ ಕಣ್ಣಿನ ಮುಂದೆ ಸ್ವಲ್ಪ ಕಾಣದಾದರೂ ಆ ಕರಳ ಬಳ್ಳಿ ಮರಳಿ ಮನೆಗೆ ಬರುವವರೆಗೂ ಶಬರಿಯಂತೆ ದಾರಿ ಕಾಯುವವಳು ಯಾರಾದರೂ ಇದ್ದರೆ ಅದು ಅಮ್ಮನೇ.


ತಾಯಿಯ ಮಮತೆಯ ಭಾವನೆಯ ಹಚ್ಚ ಹಸಿರು ಮಗುವಿನ ಮುಖ ನೋಡಿದ  ಮೊದಲ ದಿನದಿಂದ ಆ ಮಗುವಿನ  ಹೊಸ ಕುಡಿಯವರೆಗೂ ಶ್ರೇಯೊಭಿವೃದ್ಧಿಯ ಕನಸು ಕಾಣವ  ಕಾಯಕವನ್ನು ತಾಯವ್ವ ಮಾಡಿದಷ್ಟು ಮತ್ಯಾವ​ ಹೃದಯವೂ ಮೀಡಿಯುವುದಿಲ್ಲ.


ಯಾವುದೇ ಪ್ರತಿಫಾಲಕ್ಷೆಯಿಲ್ಲದೇ ನನ್ನ ಮಗು ಊಂಡುಟ್ಟು ಉನ್ನತವಾಗಿ ಬಾಳಿದರೇ ಸಾಕು ಶಿವನೇ ಎನ್ನುವ ಹೃದಯ ಪ್ರೀತಿ ದೇವರೇ ತಾಯಿ.


ಈ ರೀತಿಯ ಬರೀ ತನ್ನ ಕುಡಿಗಾಗಿ ಕೋರಿಕೆಯ ಮಹಾ ಮಹಿಮಳ ಪ್ರೀತಿಯ ಆರೈಕೆಯನ್ನು ಕಾಪಿಟ್ಟು ಉಣ್ಣಿಸುವವಳು. 


ಪ್ರತಿಯಾಗಿ ಯಾವ ಜೀವಿಯು ತನ್ನ ಹೆತ್ತಮ್ಮನಿಗೆ ಪ್ರತಿ ಪ್ರೀತಿಯನ್ನು ಕೊಟ್ಟು ಅವಳ ಪ್ರೀತಿಯ ಲೋಕಕ್ಕೆ ಸಮನಾಗಿ ಪ್ರೀತಿಯ​ ತಕ್ಕಡಿಯನ್ನು ಸಮ ಮಾಡಲು ಸಾಧ್ಯವಿಲ್ಲ​.


ಅದಕ್ಕೆ ಇರಬೇಕು ತಾಯಿಗಿಂತ ದೊಡ್ಡ ದೇವರಿಲ್ಲ ಎಂಬ ಗಾದೆ ಹುಟ್ಟಿ ಜನಜನಿತವಾಗಿರುವುದು.


ಮಗುವಿನ ತಾಯಿಯೇಡೆಗಿನ ಪ್ರೀತಿ ಕೊಂಚ ಕಡಿಮೆಯಾದರೂ ಆದೀತು. ಆದರೇ ತಾಯಿಯ ಪ್ರೀತಿ ತನ್ನ ಮಗುವಿನೆಡೆಗೆ ಎಂದೆಂದಿಗೂ ಎಷ್ಟೇ ಕಾಲವಾದರೂ ಕೊಂಚವು ಕಡಿಮೆ ಅನಿಸುವುದಿಲ್ಲ​. ಅದು ಎಂದು ನಿಲ್ಲದ ನಿತ್ಯ ಹರಿಯುವ ಝರಿ. ಈ ರೀತಿಯ ಪ್ರೀತಿಯ ಒರತೆಯನ್ನು ನೀಡುವ ಆ ಮಹಾ ಮಾತೆಗೆ ಸಮನಾದ ದೇವತೆ ಬೇರೆ ಯಾರು ಇಲ್ಲ.

ಆ ಕಕ್ಕುಲಾತಿಯನ್ನು ಕಂಡು ಮಕ್ಕಳಾದ ನಾವೇ ನಮ್ಮ ನಮ್ಮ ರೀತಿಯಲ್ಲಿ ಹೆತ್ತಮ್ಮನನ್ನು ದೂರಿರುತ್ತೇವೆ. ಆ ಪ್ರೀತಿಯ ಒರತೆಯ ಭರವನ್ನು ಸಹಿಸಲಾರದಷ್ಟು ಬೇಸರಿಸಿಕೊಂಡಿರುತ್ತೇವೆ. ಆದರೂ ಹೆತ್ತಮ್ಮನ ಮಡಿಲು ಯಾವತ್ತಿಗೂ ಯಾವುದೇ ಘಳಿಗೆಯಲ್ಲೂಅದೇ ಹಚ್ಚ ಹಸುರಾಗಿ ನಮ್ಮನ್ನೆಲ್ಲಾ ದಣಿವಾರಿಸುವ ಹೊಂಗೆ ಮ​ರವಾಗಿರುತ್ತದೆ. 


ಮಕ್ಕಳಾದ ನಾವುಗಳು    ಎಲ್ಲಾದರೂ ಸುತ್ತಾಡಿ ದಣಿವಿನಿಂದ ಮನೆಗೆ ಬಂದು   ನಮ್ಮ ನಮ್ಮ  ತಾಯಿಯ ಮುಖವನ್ನೊಮ್ಮೆ ನೋಡಿದ ತಕ್ಷಣ ಮನಸ್ಸಿಗೆ ಆಗುವ ಆನಂದ ಸಮಧಾನ ಜಗತ್ತಿನಲ್ಲಿ ಯಾರೊಬ್ಬರೂ ನೀಡಲು ಸಾಧ್ಯವಿಲ್ಲ​.


ಮನೆಯೆಂದರೇ ನಮ್ಮ ಮನೇ (ಅಮ್ಮನ ಮನೆ) ಊರೆಂದರೇ ನಮ್ಮ ಊರು, ದೇಶವೆಂದರೇ ನಮ್ಮ ದೇಶ​, ಭಾಷೆಯೆಂದರೇ ಮಾತೃ ಭಾಷೆ. ಹೀಗೆ ಪ್ರತಿಯೊಂದು ಮಮತೆಯ ತಾಯಿಯಿಂದ ಹಿರಿದಾಗಿದೆ ಎಂದರೇ ಅತಿಶಯೋಕ್ತಿಯಲ್ಲ​.


ತಾಯಿಯನ್ನು ಖುಷಿಪಡಿಸುವ ಬದುಕು ಎಂದರೇ ತನ್ನ ಹೆತ್ತ ಮಕ್ಕಳು ಸಂತೋಷದಿಂದ ಸುಖವಾಗಿ ಬದುಕಿದ ಕ್ಷಣ ಮಾತ್ರ​. 


ತಾನು ತನ್ನ ಸುಖವೆಂದರೇ ತನ್ನ ಮಕ್ಕಳ ಸುಖವೇ ಎನ್ನುವುದು ಹೆತ್ತ ಕರಳು ಮಾತ್ರ​. 

ಆ ತಾಯಿಯ ಈ ಮಹಾಹೋನ್ನತ ಮನಸ್ಸನ್ನು  ಅರ್ಥೈಸಿಕೊಳ್ಳಲು ನಿರಂತರ ಪ್ರಯತ್ನಿಸುವುದೇ ನಮ್ಮ ಧ್ಯೇಯವಾಗಿರಬೇಕು. ಆಗ ಮಾತ್ರ ಆ ಮನದ ಹಂಬಲ​, ಮಮತೆ, ಕನವರಿಕೆ, ಕನಸು ಸ್ವಲ್ಪವಾದರೂ ನಮಗೆ ಅರ್ಥವಾಗಲು ಸಾಧ್ಯ ಮಾತ್ರ ಅಲ್ಲವಾ?




ಶನಿವಾರ, ಫೆಬ್ರವರಿ 26, 2022

ಯುದ್ಧ ಮತ್ತು ಶಾಂತಿ

ಅಂತು ಇಂತು ಕೊರೋನ  ಮುಗಿಯುತ್ತಿದೆ ಎನ್ನುವ ಹೊತ್ತಿಗೆ ನಮ್ಮ ರಾಜ್ಯದಲ್ಲಿ ಹಿಜಾಬ್ ಸಂಘರ್ಷದ ಕಿಡಿ ಹೊತ್ತಿಕೊಂಡಿದೆ. 

ವಿದ್ವಂಸಕ​ ಪುಡಾರಿಗಳಿಗೆ ನಮ್ಮ ಜನರನ್ನು, ವಿದ್ಯಾರ್ಥಿಗಳನ್ನು ನೆಮ್ಮದಿಯಾಗಿ ಎಂದು ಇರಲು ಬೀಡಲೇ ಬಾರದು ಎನ್ನುವ ಮನಸ್ಸಿರಬೇಕು. 

ಅದು ಯಾರು ಈ ಮತೀಯಾ, ಧರ್ಮಕ್ಕೆ ಸೇರಿದ ಪರ ವಿರೋಧದ ದ್ವೇಷವನ್ನು ಮುದ್ದು ಮುದ್ದು ಮನಸ್ಸುಗಳೊಳಗೆ ತುಂಬಿದರೋ ಕೇಸ್ ಹೈಕೋರ್ಟ ಅಂಗಳಕ್ಕೆ ಹೋಗಿದೆ.  

ಎಲ್ಲೆಲ್ಲೂ ನಮ್ಮ​ ಶಾಲಾ ಕಾಲೇಜುಗಳು ಅಕ್ಷರಶ​: ರಣರಂಗವೇ ಆಗಿಬಿಟ್ಟು, ಸರ್ಕಾರ ಶಾಲೆಗಳನ್ನು ಬಂದ್ ಮಾಡಿ ರಜೆ ಘೋಷಣೆ ಮಾಡುವ ಮಟ್ಟಿಗೆ. ಈ ಧರ್ಮ ವಸ್ತ್ರ ವಿಷಯವನ್ನು ಇಷ್ಟು ದೊಡ್ಡದು ಮಾಡಿ ತಮಾಷೆ ನೋಡುತ್ತಿರುವ ಈ ಕಳ್ಳ ಮನಸ್ಸುಗಳೇ ಉತ್ತರಿಸಬೇಕು.


ಇಷ್ಟು ದಿನ ಅದು ಹೇಗೆ ಇತ್ತೋ ಗೊತ್ತಿಲ್ಲ ಇನ್ನು ಮುಂದಿನದೂ ಬೇರೆ ಲೆಕ್ಕ! ಎನ್ನುವ ಮಟ್ಟಿಗೆ ಹಿಂದೂ ಮುಸ್ಲಿಮ್ ವಿದ್ಯಾರ್ಥಿಗಳು, ಮುಖಂಡರಗಳು, ಧರ್ಮ ಗುರುಗಳು, ಮಕ್ಕಳ ಹೆತ್ತವರು ಹೀಗೆ ಪ್ರತಿಯೊಬ್ಬರೂ  ಪರ ವಿರೋಧದ ಗುಂಪುಗಳಾಗಿಬಿಟ್ಟಿವೆ. 


ಕೋರ್ಟ ಯಥಾ ಸ್ಥಿತಿ ಪಾಲಿಸಿಕೊಂಡು ಇರೀ ನಾವು ತೀರ್ಪು ಹೇಳುವವರಿಗೂ ಅಂದರೇ.. ನೋ ಎಂದು ಯಾರೊಬ್ಬರೂ  ಕೋರ್ಟ್ ಆದೇಶಕ್ಕೂ ಕವಡೇ ಕಾಸಿನ ಕಿಮ್ಮತ್ತು ಕೊಡದೇ ಮತ್ತೆ ಅದೇ ರೀತಿಯ ದೊಂಬಿಯನ್ನು ಶಾಲಾ ಕಾಲೇಜುಗಳಲ್ಲಿ ನಡೆಸುತ್ತಿದ್ದಾರೆ.  


ನಾವೆಲ್ಲಾರೂ ಒಂದೇ ನಮ್ಮ ದೇಶ ಒಂದೇ ಭಾರತವೇ ಧರ್ಮ ಎಂದು ಪಾಠ ಹೇಳುವ ಮಂದಿರಗಳು ಹೊಡೆದಾಡುವ ಜಾಗಗಳಾಗಿರುವುದು ವಿಪರ್ಯಾಸ​.​


ಶಾಲಾ ಪಾಠ   ಮತ್ತು ಪರೀಕ್ಷೆಗಿಂತ ಹಿಜಾಬೇ ಮುಖ್ಯ ಎಂದು ಮುಷ್ಕರ ಮಾಡುತ್ತಿರುವ​ ವಿದ್ಯಾರ್ಥಿನಿಯರು. ಅವರು ಹಿಜಾಬ್ ಹಾಕಿಕೊಂಡು ಬಂದರೇ ನಾವು ಕೇಸರಿ ಶಾಲೇ ಧರಿಸಿ ತರಗತಿಗಳಿಗೆ ಬರುತ್ತೇವೆ ಎನ್ನುವ​ ಹಿಂದು ಮನಸ್ಸುಗಳು. 


ನೀವು ಸರಸ್ವತಿ ಪೂಜೆ, ಕುಂಕುಮ, ತಲೆಗೆ ಹೂವು ಎಲ್ಲಾ ಇಟ್ಟುಕೊಂಡು ಬರುತ್ತಿರಲ್ಲಾ ನಾವೇನಾದರೂ ಕೇಳಿದ್ದಿವಾ ಎನ್ನುವ ಮುಸ್ಲಿಂ ಮನಸ್ಸುಗಳು. 


ನಾವಾ ನೀವಾ ಎನ್ನುತ್ತಾ ಇಡೀ ಕರ್ನಾಟಕವನ್ನು ಧರ್ಮ ಯುದ್ಧಕ್ಕೆ ಅಣಿ ಮಾಡಲು ಸಿದ್ಧವಾಗಿರುವಂತೆ ಪ್ರೇರಪಿಸುತ್ತಿರುವ ಅರೇ ಬೆಂದ ಈ ಮನಸ್ಸುಗಳನ್ನು ನೆನಸಿಕೊಂಡರೇ ಅಸಹ್ಯ ಹುಟ್ಟುತ್ತದೆ. 


ಹತ್ತಿರವಿದ್ದರೂ ದೂರ ದೂರ ನಿಲ್ಲುತ್ತಿರುವ ಚಿಕ್ಕ-ದೊಡ್ಡ ಮನಸ್ಸಿನ ಈ ನಾಗರಿಕ​ ಮನುಷ್ಯರನ್ನು ಕಂಡು ಭಾರತಾಂಬೆಯೇ ಕಣ್ಣೀರಿಟ್ಟಿರಬೇಕು. 


ಹೀಗೆ ಇನ್ನೂ ನಿತ್ಯ ಸಂಘರ್ಷ ಜಗಳಗಳ ನಡುವೆಯೇ ಶಿವಮೊಗ್ಗದಲ್ಲಿ ನಡೆದ ಹಿಂದು ಹುಡುಗನ ಕೊಲೆ ಇಡೀ ನಗರವನ್ನೆ ಎರಡು ದಿನಗಳ ಕಾಲ ಹತ್ತಿ ಉರಿಯುವಂತೆ ಮಾಡಿರುವುದು.. ಈ ಧರ್ಮ ಯುದ್ಧ ಎಲ್ಲಿಗೆ ಹೋಗಿ ನಿಲ್ಲುವುದೋ ಎಂದು ಇಡೀ ರಾಜ್ಯದ ಜನರನ್ನು ಚಿಂತೆಗೀಡು ಮಾಡಿದೆ. 


ಅಲ್ಲಾ ಪುಟ್ಟ ಪುಟ್ಟ ಮನಸ್ಸುಗಳು ಈ ಮಟ್ಟಿಗೆ ಮಲಿನಗೊಳ್ಳುವಂತೆ ಮಾಡಿದ ಆ ಪ್ರಭುತಿಗಳು ಯಾರೂ ಅನಿಸುತ್ತದೆ. ರಾಜಕೀಯ ಬೇಳೇ ಬೆಯಿಸಿಕೊಳ್ಳಲು ಸಾಮಾರಸ್ಯದಿಂದ ಬದುಕುವಂತೆ ಬಿಡಲು ಯಾಕೇ ಇನ್ನೂ ನಮ್ಮ ನೇತಾರಾರಿಗೆ  ಧರ್ಮ ಸೇವಕರಿಗೆ ಕೊಂಚ​ ಬುದ್ಧಿ ಬಂದಿಲ್ಲ​.


ಇದೇಯೇನು ನಾವುಗಳು ನಮ್ಮ ಇತಿಹಾಸದಿಂದ ಇಷ್ಟು ದಿನ​ ಕಲಿತದ್ದೂ ಅನಿಸುತ್ತದೆ. ಇನ್ನೂ ಅದೇಷ್ಟು ಜನರನ್ನೂ ಕೊಂದು, ವಿರೋಧಿಸುತ್ತಾ ನಿತ್ಯ ಕಲಹದೊಂದಿಗೆ ನಾವು ಬಾಳಬೇಕು? 


ದೇಶ ಮೊದಲು ಎನ್ನುವ ಮಂತ್ರವನ್ನು ನಾವೆಲ್ಲಾ ಯಾಕೇ ಪುನಃ ಪುನಃ ಮರೆಯುತ್ತೇವೆ?


ಹೀಗೆ ನಮ್ಮ ರಾಜ್ಯ ಮತ್ತು ದೇಶದಲ್ಲಿ ಅಶಾಂತಿಯ ಕಾರ್ಮೋಡ ಕವಿತುಕೊಂಡು ಮುಂದೇನೋ ಎಂಬ ಬೀತಿಯಲ್ಲಿರುವ​ ಹೊತ್ತಿಗೆ.. 


ಮೂರನೇ ಮಹಾಯುದ್ಧವಂತೇ..


ಹೌದು. ವಿಶ್ವದಲ್ಲಿಯು ಕೊರೋನದ ಪ್ರಾಬಲ್ಯ ಇನ್ನೇನೂ ಕಡಿಮೆಯಾಯಿತು. ನಾವುಗಳು ಪುನಃ ಮಾಮೊಲಿ ಶೈಲಿಗೆ ಮರಳಬಹುದು ಎನ್ನುವಷ್ಟರಲ್ಲಿ ರಷ್ಯಾ ಉಕ್ರೇನ್ ತಮ್ಮ ತಮ್ಮ​ ಯುದ್ಧ ಉನ್ಮಾನದಲ್ಲಿ ಮೂರನೇ ವಿಶ್ವ ಯುದ್ಧದಲ್ಲಿ ತೊಡಗಿರುವ ದೃಶ್ಯ​ ಎಂಥವರ ಎದೆ ಹೊಡೆದು ಹೋಗುವಷ್ಟು ಬೀಕರವಾಗಿದೆ. 


ಟಿವಿ ಪರದೆಯ ಮೇಲೆ ಮೂಡಿ ಬರುತ್ತಿರುವ ರಣರಂಗದ ಯುದ್ಧ ಚಿತ್ರಗಳು ಮೊದಲನೇ ಮತ್ತು  ಎರಡನೇ ವಿಶ್ವ ಯುದ್ಧವನ್ನು ಇತಿಹಾಸದ ಪಾಠದಲ್ಲಿ ಓದಿದ ಮನಗಳಿಗೆ ತಣ್ಣನೆ ಭಯವನ್ನು ಮೂಡಿಸಿದೆ. 


ಭವಿಷ್ಯದ ಬಗ್ಗೆ ಭರವಸೆಯೇ ಇಲ್ಲ ಅನಿಸುವಂತೆ ಮಾಡಿದೆ. 


ಮಕ್ಕಳಿಂದ ವಯೋವೃದ್ಧರವರಿಗೇ ಉಕ್ರೇನ್ ನಲ್ಲಿ ಬೀಳುತ್ತಿರುವ ಆ ಬಾಂಬ್, ಬೆಂಕಿ, ಸಾವು, ನೋವುಗಳು ಇಲ್ಲಿಯೇ ನಮ್ಮ ಪಕ್ಕದಲ್ಲಿಯೇ ಜರುಗುತ್ತಿದೆಯೇನೋ ಎಂಬ ಆತಂಕವನ್ನುಂಟು ಮಾಡುತ್ತಿದೆ. 

ಅದನ್ನು ನೋಡಿದ​ ಮುದ್ದು ಮಕ್ಕಳ ಪುಟ್ಟ ಪುಟ್ಟ ಪ್ರಶ್ನೆಗಳಿಗೆ ದೊಡ್ಡವರು ಏನೂ ಉತ್ತರ ಕೊಡಬೇಕೋ ಏನೂ ತಿಳಿಯದೇ ಸುಮ್ಮನೇ ಟಿ.ವಿ ನೋಡುತ್ತಾ ಕೂತು ನಾವು ಎಂಥ ಪ್ರಪಂಚದಲ್ಲಿದ್ದೇವೆ ಎಂದು ಜಿಗುಪ್ಸೆಪಡುವಂತಾಗಿದೆ. 


ಪುನಃ  ಈ ಮನುಷ್ಯ ವಿಶ್ವ ಚರಿತ್ರೆಯಿಂದ ಏನನ್ನೂ ಕಲಿಯಲೇ ಇಲ್ಲವೇನೋ ಅನಿಸುತ್ತದೆ. 


ಹೌದು! ಉಕ್ರೇನ್ ನಲ್ಲಿರುವವರ ಪರಿಸ್ಥಿತಿ, ಯುದ್ಧದಿಂದ ಆಗುತ್ತಿರುವ ಹಿಂಸೆ, ನೋವು, ನಷ್ಟ​ ಇಡೀ ವಿಶ್ವಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತಿದೆ. 


ಮನುಷ್ಯನಿಗೆ ನಿಲುಕದ ಸಮಸ್ಯೆ ಯಾವುದೂ ಇಲ್ಲ. ತನ್ನ ಬುದ್ಧಿ ಮತ್ತು ಚಾಕಚಕ್ಯತೆಯಿಂದ ಏನಾನ್ನದರೂ ಬಗೆಹರಿಸಬಲ್ಲ. ಆದರೇ ಈ ಯುದ್ಧ ಮನ ಸ್ಥಿತಿಯನ್ನು ಕಳೆದುಕೊಳ್ಳುವ ಅಥವಾ ಯುದ್ಧವನ್ನು ತಡೆಯುವಂತೆ ಮಾಡುವ ಯಾರೊಬ್ಬರೂ ಈ ಪ್ರಪಂಪಚದಲ್ಲಿ ಹಿಂದೆಯು ಇರಲಿಲ್ಲ, ಇಂದೂ ಇಲ್ಲ ಮತ್ತು ಮುಂದೆನೂ ಇರುವುದಿಲ್ಲ ಎಂಬುದು ಜಗತ್ತಿನ ಎಲ್ಲಾ  ಮನುಷ್ಯರಿಗೆ ಈ ಎರಡು ದಿನಗಳಲ್ಲಿ ಗೊತ್ತಾಗಿಬಿಟ್ಟಿದೆ. 


ವಿಶ್ವ ಸಂಸ್ಥೆ, ಶಾಂತಿ ಒಕ್ಕೋಟ, ಈ ದೊಡ್ಡಣ್ಣ​, ಚಿಕ್ಕಣ್ಣ​, ಆ ನೆರೆಯ, ಸ್ನೇಹಿ ದೇಶ ಹೀಗೆ ಯಾರೊಬ್ಬರೂ ಯಾರನ್ನೂ ರಕ್ಷಿಸಲಾರರರು.  ತಮ್ಮನ್ನು ತಾವೇ ಎಂದಿಗೂ ರಕ್ಷಿಸಿಕೊಳ್ಳಬೇಕು. ನಮ್ಮ ಮನೆ ಉರಿದರೇ ನಮಗೆ ನಷ್ಟ​. ಬೇರೆಯವರು ಕೇವಲ ಪ್ರೇಕ್ಷಕರೇ ಎಂದೆಂದಿಗೂ. ಅದು ದೇಶವಾಗಲಿ, ರಾಜ್ಯವಾಗಲಿ, ನಮ್ಮ ನಮ್ಮ ಮನೆಯಾಗಲಿ. 

ಅದೇ ಉಕ್ರೇನ್ ಸ್ಥಿ ತಿ ಇಂದು!!


ಮಾತಿನಲ್ಲಿ ಬಗೆಹರಿಸುವಂತ ಪ್ರತಿಯೊಂದು ವಿಷಯವನ್ನು ಕೇವಲ ಸಾವು ನೋವುಗಳಿಂದ ಬಗೆಹರಿಸುತ್ತೇವೆ ಎಂದು ಹೋಗುತ್ತಿರುವ ಈಗಿನ ಈ ಹೀನಾ ಮನಸ್ಸುಗಳಿಗೆ  ಯಾರು ಬುದ್ಧಿ ಹೇಳುವವರೋ  ತಿಳಿಯದಾಗಿದೆ. 


ಪ್ರತಿಯೊಬ್ಬರೂ ಎಲ್ಲಾ ಗೊತ್ತಿರುವವರಂತೆ ಮತ್ತು ಅಫೀಮು ತಿಂದವರಂತೆ ತಮ್ಮದೇ ನೀತಿಯಲ್ಲಿ ಶಾಂತಿಯೆಂಬುದು ಈ ಪ್ರಪಂಚದ್ದ​ಲ್ಲಾ ಎಂಬಂತೆ ಎಲ್ಲರನ್ನೂ ಯಾವಾಗಲೂ ಬೀತಿಯಲ್ಲಿಟ್ಟಿರಬೇಕು ಎಂಬಂತೆ ವರ್ತಿಸುವ ಪ್ರತಿ ಮನಸ್ಸುಗಳ ಮನಸ್ಥಿತಿಯನ್ನು ಬದಲಾಯಿಸಲೂ ಮತ್ತೊಮ್ಮೆ ಆ ಶ್ರೀ ಕೃಷ್ಣ ಪರಮಾತ್ಮ ಅದು ಯಾವ ಗೀತೆ ಬೋಧಿಸಬೇಕೋ ಗೊತ್ತಿಲ್ಲ​!

ಮಂಗಳವಾರ, ಫೆಬ್ರವರಿ 1, 2022

‘ವಸಂತನ’ ಆಗಮನಕ್ಕೆ ನಿಸರ್ಗದ ಸ್ವಾಗತ!

 'ಕಂಗೊಳಿಸುವ ಕೆಂಪು ಮುಂದೆ, 

ಕಂಗೆಡಿಸುವ ಮಂಜು ಹಿಂದೆ, 

ಅತ್ತಣಿಂದ ಬೇಟೆಗಾರ ಬಹನು ನಾನು ಬಲ್ಲೆ.'

 - ಅಂಬಿಕಾತನಯದತ್ತ

ಎಲ್ಲೆಲ್ಲೂ ಹಚ್ಚ ಹಸಿರು ಚಿಗುರಿನ ಸಿಂಗಾರ, ಚುಮು ಚುಮು ಬಿಸಿಲು, ಆಗೊಮ್ಮೆ ಈಗೊಮ್ಮೆ ಕೇಳಿ ಬರುವ ಕೋಗಿಲೆಯ ಸುಮಧುರ ಕೂಗು, ಈ ರೀತಿಯ ಹೊಸತನದ ರಂಗಿನ ಸ್ವಾಗತವನ್ನು ಯುಗಾದಿ ಪಡೆಯುತ್ತದೆ. ಋತುಗಳ ರಾಜನಾದ 'ವಸಂತನ' ಆಗಮನಕ್ಕೆ ನಿಸರ್ಗವೇ ತನ್ನ ಹಲವು ರೀತಿಯ ಹಳತನ್ನೆಲ್ಲಾ ಕಳಚಿಕೊಂಡು ಹೊಚ್ಚ ಹೊಸತನದೂಂದಿಗೆ ಬರಮಾಡಿಕೊಳ್ಳುತ್ತದೆ.

ಇನ್ನು ಯುಗಾದಿ ಸಾಮಾನ್ಯವಾದ ಹಬ್ಬವೇನಲ್ಲ. ಹಿಂದೂಗಳ ಎಲ್ಲಾ ಹಬ್ಬಗಳಿಗೆ 'ರಾಜ ಹಬ್ಬ' ವೇ ಸರಿ. ಇದು ಯುಗದ ಆದಿ. ಯುಗದ ಹಾದಿಗೆ ಈ ಹಬ್ಬದ ಮೂಲಕ ಶ್ರೀಕಾರ ಆಗುತ್ತದೆ. ನಮ್ಮ ಜನಕ್ಕೆ ಇದೇ ಹೊಸ ವರ್ಷಾರಂಭ ಮತ್ತು ಯುಗಾದಿಯ ದಿನವೇ ರಾಮ ರಾವಣವನ್ನು ಸೋಲಿಸಿ ಅಯೋಧ್ಯೆಗೆ ಹಿಂತಿರುಗಿ ತನ್ನ ಸಿಂಹಾಸನವನ್ನು ಅಲಂಕರಿಸಿ ಜನರ ಪ್ರೀತಿಗೆ ಭಾಜನನಾಗಿದ್ದು.

ನಮ್ಮ ಕನ್ನಡ ನಾಡಿನ ಯುಗಾದಿ ಆಚರಿಣೆ ಸಂಭ್ರಮವನ್ನು ನಾವು ಬೇರೆ ಯಾವ ಹಬ್ಬಗಳಲ್ಲೂ ಕಾಣಲಾರೆವು. ನಿಸರ್ಗವು ಯಾವ ರೀತಿಯಲ್ಲಿ ಯುಗವನ್ನು ಬರಮಾಡಿಕೊಳ್ಳುತ್ತದೆಯೋ ಅದೇ ಬಗೆಯಲ್ಲಿ ನಮ್ಮ ಜನರೂ ಸಂತಸದಿಂದ ಆಚರಿಸಲು ಸಿದ್ಧತೆಯನ್ನು ಮಾಡಿ ಕೊಳ್ಳುತ್ತಾರೆ. 

ಹಬ್ಬ ಇನ್ನೂ ತಿಂಗಳಷ್ಟು ದೂರ ಇರುವಾಗಲೇ ನಗರಗಳ ಅಂಗಡಿಗಳಲ್ಲೆಲ್ಲ, ಎಲ್ಲ ಜನಯೋಪಯೋಗಿ ವಸ್ತುಗಳ ಮೇಲೆ ರಿಯಾಯ್ತಿ ಘೋಷಣೆ. ಮೆಗಾ ಡಿಸ್ಕೌಂಟ್‌ ಸೇಲ್‌ ಫಲಕ ನೋಡಿದ ಮೇಲೆ ಜನ ಆಕರ್ಷಿತರಾಗದೇ ಇರುತ್ತಾರೆಯೇ? ಹಬ್ಬಕ್ಕೆ ಬೇಕಾದ ಎಲ್ಲ ಸರಕು-ಸರಂಜಾಮುಗಳನ್ನು ಕೊಳ್ಳುತ್ತಾರೆ. ಎಲ್ಲರೂ ತಮ್ಮ ಶಕ್ತಿ ಮೀರಿ ಈ ಹಬ್ಬವನ್ನು ಅತ್ಯುತ್ತಮವಾಗಿ ಆಚರಿಸಲು ಕಂಕಣ ಬದ್ಧರಾಗುತ್ತಾರೆ. ಈ ಭಾವನೆ ನಗರ ಮತ್ತು ನಮ್ಮ ಹಳ್ಳಿಗಳೆಂಬ ತಾರತಮ್ಯ ಇಲ್ಲದೆ ಎಲ್ಲೆಡೆಯೂ ಕಂಡುಬರುತ್ತದೆ. 

ನಮ್ಮ ಭಾರತೀಯ ಹಬ್ಬದ ಸೊಬಗನ್ನು ಕಾಣಬೇಕೆಂದರೆ ನಮ್ಮ ಹಳ್ಳಿಗಳಿಗೆ ಹೋಗಿ ನೋಡಬೇಕು. ವರ್ಷದ ಬೇಸಾಯದ ಬಿಡುವಿನ ಸಮಯದಲ್ಲಿ ಬರುವ ಯುಗಾದಿ, ರೈತನ ಮನೆ ತುಂಬ ದವಸ, ಧಾನ್ಯಗಳ ಭಂಡಾರ ತುಂಬುತ್ತದೆ. ಇದರಿಂದ ಉತ್ತೇಜಿತನಾಗುವ ರೈತ ತನು ಮನ ಧನಗಳನ್ನು ಅರ್ಪಿಸಿಕೊಂಡು, ಮನೆ ಮಂದಿಯಾಂದಿಗೆ ನಲಿಯುತ್ತಾ ಹಬ್ಬ ಆಚರಿಸುತ್ತಾನೆ.

ಹಳ್ಳಿಗಳಲ್ಲಿ ಗೃಹಿಣಿಯರು ತಮ್ಮ ಅಕ್ಕ ಪಕ್ಕದ ಮನೆಯ ಸಹಗೃಹಿಣಿಯರ ಸಹಾಯದಿಂದ, ಪ್ರತಿನಿತ್ಯ ತಮ್ಮ ತಮ್ಮ ಮನೆಗಳಲ್ಲಿ ವಿವಿಧ ರೀತಿಯ ತಿನಿಸುಗಳನ್ನು ಮಾಡಿ ಬಿಸಿಲಿನಲ್ಲಿ ಒಣಗಿಸಿ ಹಬ್ಬಕ್ಕಾಗಿ ಸಿದ್ಧಪಡಿಸಿಕೊಳ್ಳುತ್ತಾರೆ. ಹಬ್ಬದ ನೆಪದಲ್ಲಿ ಮಾಡಿದ ಈ ಪದಾರ್ಥಗಳು ಮುಂದಿನ ವರ್ಷವಿಡೀ ಉಪಯೋಗಕ್ಕೆ ಬರುತ್ತವೆ. ಯಾಕೆಂದರೆ ಇಂಥ ಬಿಡುವಿನ ಸಮಯ ಪುನಃ ಸಿಗಬೇಕೆಂದರೆ ಮುಂದಿನ ಯುಗಾದಿಯೇ ಬರಬೇಕು. 

ತಿಂಡಿ-ತೀರ್ಥಗಳ ರುಚಿ ಹಬ್ಬದಲ್ಲಿ ಮತ್ತಷ್ಟು ಹೆಚ್ಚಾಗುತ್ತದೆ. ಯಾಕೆಂದರೆ ಅಲ್ಲಿ ಪ್ರೀತಿಯ ಕೈ ಎಲ್ಲ ವಸ್ತುಗಳನ್ನೂ ಸ್ಪರ್ಶಿಸಿರುತ್ತದೆ. ಆದರೆ ನಮ್ಮ ನಗರದವರಿಗೆ ಈ ರೀತಿಯ ರುಚಿ ಕೇವಲ ಪ್ಯಾಕೆಟ್‌ ಪದಾರ್ಥಗಳಿಗೆ ಸೀಮಿತವಾಗಿ ಒಂದು ರೀತಿಯ ಕೃತಕ ಮಾಧುರ್ಯವೇ ಅನಿವಾರ್ಯವಾಗಿಬಿಟ್ಟಿದೆ .

 ಮನೆಯ ಒಳ-ಹೊರಗೆಲ್ಲ ಸುಣ್ಣ ಬಣ್ಣಗಳಿಂದ ಕಂಗೊಳಿಸುವುದು ಮನಮೋಹಕ. ಮನೆಯ ಎಲ್ಲಾ ಬಾಗಿಲುಗಳಿಗೆ ಹಸಿರುತೋರಣ, ಮನೆಯ ಮುಂದೆ ರಂಗೋಲಿ. ಮಕ್ಕಳಿಗೆ ಈ ಹಬ್ಬ ಹೆಚ್ಚು ಇಷ್ಟ , ಯಾಕೆಂದರೆ ಹೊಸ ಉಡುಪುಗಳ ಜಾತ್ರೆಯೇ ಆಗುತ್ತದೆ! ಹಿರಿ-ಕಿರಿಯರೆಲ್ಲ ಒಂದಾಗಿ ಖುಷಿಪಡುತ್ತಾರೆ. ಮನೆಯಲ್ಲಿ ದೊಡ್ಡವರಿಂದ ಹಿಡಿದು ಚಿಕ್ಕವರವರೆಗೆ ಎಲ್ಲರೂ ಅಭ್ಯಂಜನ ಮಾಡಿ, ಹೊಸ ಉಡುಪನ್ನು ಧರಿಸಿ, ಪೂಜೆಗೆ ಸಿದ್ಧವಾಗುತ್ತಾರೆ.

ಆ ವೇಳೆಗೆ ಮನೆಯ ಮಹಿಳೆಯರೆಲ್ಲ ರುಚಿಯಾದ ತಿನಿಸು, ಅಡಿಗೆಗಳು ಹಾಗೂ ಬೇವು-ಬೆಲ್ಲ ಎಲ್ಲವನ್ನೂ ಸಿದ್ಧಗೊಳಿಸಿರುತ್ತಾರೆ. ಹಿರಿಯರಿಂದ ಹೊಸ ಪಂಚಾಗದ ಪಠಣ ಮತ್ತು ಅದನ್ನು ಮನೆ ಮಂದಿಯೆಲ್ಲಾ ಕೇಳುತ್ತಾರೆ. ಆ ವರ್ಷದ ಫಲಾಫಲಗಳು, ಭವಿಷ್ಯ, ಮಳೆಯ ಯೋಗ ಇತ್ಯಾದಿ ವಿವರಣೆಗಳನ್ನು ಕೇಳಿ ಧನ್ಯರಾಗುತ್ತಾರೆ. 

ಬೇಸಾಯದ ಕೇಂದ್ರ ಬಿಂದು ಎತ್ತುಗಳು. ಅವುಗಳ ಪೂಜೆಯೂ ನೆರವೇರುತ್ತದೆ. ಜೊತೆಜೊತೆಗೆ ಅಂದೇ ಹೊಲದಲ್ಲಿ ಮಣ್ಣಿನ ಪೂಜೆ ಹಾಗೂ ನೇಗಿಲು ಪೂಜೆ ಮಾಡಿ, ಸ್ವಲ್ಪ ದೂರ ಉಳುಮೆಯನ್ನೂ ಮಾಡಲಾಗುತ್ತದೆ. ಇದಕ್ಕೆ ಗ್ರಾಮೀಣ ಭಾಷೆಯಲ್ಲಿ 'ಹೊನ್ನಾರ' ಎಂದು ಕರೆಯಲಾಗುತ್ತದೆ. 

ಬೇವು-ಬೆಲ್ಲಗಳ ವಿತರಣೆಯಾಯಿತು ಎಂದರೆ ಮುಗಿಯಿತು. ಎಲ್ಲರೂ ಅಂದಿನ ಮುಖ್ಯ ಭೋಜನದ ಸವಿದು, ಊರಿನ ಮುಖ್ಯ ದೇವಸ್ಥಾನಗಳ ಜಾಗಕ್ಕೋ ಅಥವಾ ತಂಪಾದ ಮರದ ನೆರಳಿನ ಜಾಗಕ್ಕೋ ಬರುತ್ತಾರೆ. ಪರಸ್ಪರ ಕುಶಲ ವಿನಿಮಯ ಮಾಡಿಕೊಳ್ಳುತ್ತಾರೆ. ಮಕ್ಕಳು ಜೊಕಾಲಿಯಾಟ ಆಡುವ ತವಕದಲ್ಲಿ ವಿವಿಧ ಮರಗಳ ಕೊಂಬೆಗಳನ್ನು ಅರಸುತ್ತಾ ಅಕ್ಕ ಪಕ್ಕದ ಹೊಲಗಳ ಕಡೆ ಮುಖ ಮಾಡುತ್ತಾರೆ. 

ಕೆಲ ಮಧ್ಯ ವಯಸ್ಕ ತರುಣರು ತಮ್ಮ ಅದೃಷ್ಟ ಪರೀಕ್ಷೆ ಮಾಡೋಣವೇ ಎಂದು ಜೂಜಾಟಕ್ಕೆ ತೊಡಗುತ್ತಾರೆ. ಹೀಗೆ ಯುಗಾದಿಯಲ್ಲಿ ಪ್ರಾರಂಭವಾದ ಜೂಜಾಟ ಕೆಲವೊಮ್ಮೆ ತಿಂಗಳವರೆಗೆ ಮುಂದುವರಿಯುವುದು ಸಾಮಾನ್ಯ. ಕೆಲವರು ತಮ್ಮ ಹಣವನ್ನು ಕಳೆದುಕೊಂಡು ಎಚ್ಚರವಾಗುವರು ಮತ್ತು ಕೆಲವರು ಹಣ ಗಳಿಸಿ ಮುಂದಿನ ಯುಗಾದಿಯಲ್ಲಿ ಪುನಃ ಆಟ ಆಡಬೇಕೆಂದುಕೊಳ್ಳುವರು. 

ನಮ್ಮ ಹಳ್ಳಿಗಳಲ್ಲಿ ಯುಗಾದಿಯೆಂದರೆ ಎರಡು ದಿನದ ಹಬ್ಬ ಇದಿಷ್ಟು ಮೊದಲನೇ ದಿನದ ಆಚರಣೆ. ಎರಡನೇಯ ದಿನದಲ್ಲಿ ಸಾಮಾನ್ಯವಾಗಿ ಪೂಜೆ ಮತ್ತು ಸಿಹಿಯಾದ ಊಟವನ್ನು ಮಧ್ಯಾಹ್ನದಿಂದ ಸಂಜೆಯವರೆಗೆ ಮಾಡುತ್ತಾರೆ. ಎರಡನೆಯ ದಿನ ನಮ್ಮ ಊರುಗಳಲ್ಲಿ ಸಂಜೆ ಚಂದ್ರನ ದರ್ಶನವನ್ನು ಮಾಡುವುದರ ಮೂಲಕ ಅಂದಿನ ಮುಖ್ಯ ಆಚರಣೆ ಮುಗಿಯುತ್ತದೆ. ಅಂದು ಚಂದ್ರ ದರ್ಶನವಾದ ಬಳಿಕ ಹಿರಿಯರಿಗೆಲ್ಲಾ ಚಿಕ್ಕವರಿಂದ ಕಾಲಿಗೆ ನಮಸ್ಕಾರ ಮತ್ತು ಅವರಿಂದ ಆಶೀರ್ವಾದಗಳನ್ನು ಪಡೆಯುತ್ತಾರೆ. 

ಯುಗಾದಿಯ ಮೂರನೇಯ ದಿನದ ಹಬ್ಬ ಒಂದು ರೀತಿಯಲ್ಲಿ ಕಿರಿಯರಿಗೆ ಮತ್ತು ತರುಣ ತರುಣಿಯರಿಗೆ. ಅಂದು ನೀರು ಎರಾಚಡುವುದು ನಡೆಯುತ್ತದೆ. ಇದು ಒಂದು ರೀತಿಯಲ್ಲಿ ಹೋಳಿಯ ಆಚರಣೆ.

Read more at: https://kannada.oneindia.com/festivals/ugadi/2006/290306thipperudra.html

ಪ್ರೀತ್ಸೋದ್‌ ತಪ್ಪಾ?

 ಪ್ರೇಮ ಕುರುಡು ಅದಕ್ಕೆ ಕಣ್ಣಿಲ್ಲ ಎಂದು ಕೆಲವರು ಹೇಳುತ್ತಾರೆ. ಆಕರ್ಷಣೆಯೇ ಮುಖ್ಯವಲ್ಲ ಅಲ್ಲಿ ನೋಟಾತೀತವಾದ ಬೇರೆಯೇನೋ ಇದ್ದಿರಲೇಬೇಕು. ಯಾಕೆಂದರೆ, ಹಲವಾರು ಗಟ್ಟಿ ಪ್ರೇಮ ಪ್ರಕರಣಗಳು ಸುಂದರವಲ್ಲದ ಯುವಕ-ಯುವತಿಯರ ನಡುವೆಯೂ ಸಹ ನಿರಂತರವಾಗಿ ಸಾಗುತ್ತ ವೆ... ಪ್ರೇಮಕ್ಕೆ ಕಣ್ಣುಂಟು ಎಂದು ತಿಳಿಯಲು ಇಷ್ಟು ಸಾಕಲ್ಲವೇ...?


‘ನಿಜಕ್ಕೂ ನಾವು ಇತರ ಮನುಷ್ಯರಲ್ಲಿನ ಮುಗ್ಧತೆಯನ್ನು ಪ್ರೇಮಿಸಿದಷ್ಟು ಬೇರೇನನ್ನೂ ಪ್ರೀತಿಸುವುದಿಲ್ಲ. ಯಾವಾಗ ಆ ಮನುಷ್ಯ ನಮ್ಮ ಬಗ್ಗೆ ತನಗಿರುವ ಇಷ್ಟವನ್ನು ತನ್ನ ಮುಗ್ಧತೆಯ ಮೂಲಕ ಪ್ರದರ್ಶಿಸುವುದನ್ನು ಆರಂಭಿಸುವನೋ ಆತ ನಮಗೆ ಅತ್ಯಂತ ಆಪ್ತನಾಗುತ್ತಾನೆ. ಮುಗ್ಧತೆ ಎಂದರೆ ಸ್ವಚ್ಛತೆ. ಅದರಲ್ಲಿ ಸ್ವಾರ್ಥವಿಲ್ಲ ’(ಪುಟ-438 ವಿಜಯಕ್ಕೆ ಐದು ಮೆಟ್ಟಿಲು ಪುಸ್ತಕ ನೋಡಿ).


ಪ್ರೀತಿ(ಲವ್‌) ಈ ಎರಡಕ್ಷರದ ಆಳ ವಿಸ್ತಾರ ಮತ್ತು ವ್ಯಾಪ್ತಿಯ ಅರಿವು ನಿಮಗೀಗಾಗಲೆ ಗೊತ್ತಾಗಿರುವ ವಿಷಯ. ಪ್ರಪಂಚದ ಬಹುತೇಕ ವಿಷಯಗಳು, ಮಾನವ ಸಂಬಂಧಗಳು ಈ ಎರಡೇ ಎರಡಕ್ಷರದೊಂದಿಗೆ ತಳಕು ಹಾಕಿಕೊಂಡಿವೆ ಎಂದರೆ ತಪ್ಪಾಗಲಾರದು.

ಇದಕ್ಕೆ ಸಾಕ್ಷಿಯೆಂಬಂತೆ ಸಮಾಜದ ಕನ್ನಡಿಯಂತೆ ವಿಶ್ವದ ಎಲ್ಲಾ ಭಾಷೆಯ ಚಲನಚಿತ್ರಗಳು ತಮ್ಮ ಬಹುಪಾಲು ಚಿತ್ರಕಥೆಯನ್ನು ಪ್ರೀತಿ, ಪ್ರೇಮವನ್ನಲ್ಲದೇ ಬೇರೆ ವಿಷಯಗಳನ್ನಾಧರಿಸಿ ಗೆದ್ದಿರಲಾರವು.

 ನಮ್ಮ ಭಾರತೀಯ ಚಲನಚಿತ್ರ ಮಾಧ್ಯಮವಂತೂ ಪ್ರೀತಿ, ಪ್ರೇಮದಲ್ಲಿಯೇ ಹಾಗೆ ಹೀಗೆ ಮಾಡಿ, ಹಿಂದೆ ಮುಂದೆ ಮಾಡಿ ಏಕಕೋನ, ದ್ವಿಕೋನ, ತ್ರಿಕೋನ ಮತ್ತು ಚತುಷ್ಕೋನ ಪ್ರೀತಿಯ ಕಥೆಗಳನ್ನು ಹೂತ್ತು ತಂದು ತಮ್ಮ ಚಿತ್ರದ ನಾಯಕ ಮತ್ತು ನಾಯಕಿ ಮಣಿಗಳಿಂದ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. 

ನಮ್ಮ ನಡುವೆ ಪ್ರೇಮದ ಚಿತ್ತಾರ : ಪ್ರೇಮದ ಎಳೆಯಿಲ್ಲದ ಸಿನಿಮಾಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಲ್ಲದೆ ಅದರ ಬಗ್ಗೆ ನಿಮಗೆ ಏನೂ ಹೇಳುವ ಅಗತ್ಯವೂ ಸಹ ಇಲ್ಲ ಎನಿಸುತ್ತದೆ.ಯಾಕೆಂದರೆ ಅದು ದಿನನಿತ್ಯ ನಮ್ಮ ಕಣ್ಣಿಗೆ ಕಾಣುವ ಸರ್ವೇಸಾಮಾನ್ಯ ಸಂಗತಿ.

ನಮ್ಮ ನಡುವೆ ಪ್ರೇಮದ ಚಿತ್ತಾರ : ಪ್ರೇಮದ ಎಳೆಯಿಲ್ಲದ ಸಿನಿಮಾಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಲ್ಲದೆ ಅದರ ಬಗ್ಗೆ ನಿಮಗೆ ಏನೂ ಹೇಳುವ ಅಗತ್ಯವೂ ಸಹ ಇಲ್ಲ ಎನಿಸುತ್ತದೆ.ಯಾಕೆಂದರೆ ಅದು ದಿನನಿತ್ಯ ನಮ್ಮ ಕಣ್ಣಿಗೆ ಕಾಣುವ ಸರ್ವೇಸಾಮಾನ್ಯ ಸಂಗತಿ.

ಈ ಹಿಂದೆ ನಾನು ಎಲ್ಲೋ ಓದಿದ ನೆನಪು. ಒಬ್ಬ ಮನಶಾಸ್ತ್ರಜ್ಞ ಈ ರೀತಿ ಹೇಳಿದ್ದರು ‘ಯಾಕೆ ನಮ್ಮ ಜನ ಇಂಥ ಪ್ರೇಮ ಚಿತ್ರಗಳನ್ನು ಅಸಕ್ತಿ ಮತ್ತು ಮುಗಿ ಬಿದ್ದು ನೋಡುತ್ತಾರೆಂದರೆ- ಮನುಷ್ಯ ನಿರಂತರವಾಗಿ ಪ್ರೀತಿಸುವುದನ್ನು ಹೇಗೆ ಉತ್ತಮಗೊಳಿಸಿಕೊಳ್ಳಬೇಕು ಎಂಬುದನ್ನು ಕಲಿಯಲು’. 

ಇನ್ನು ನಮ್ಮ ಸಾಹಿತ್ಯ ಪ್ರಕಾರಗಳಾದ ಕಾವ್ಯ, ಕಾದಂಬರಿ, ಕವಿತೆ, ಕಥೆಗಳೂ ಸಹ ಈ ಶಬ್ದದ ಹೊರತಾಗಿಲ್ಲ . ಇದಕ್ಕೆ ಉದಾಹರಣೆಯಾಗಿ ನಮ್ಮಲ್ಲಿ ಹಿಂದಿನಿಂದಲೂ ಪ್ರಚಲಿತವಿರುವ ಜನ ಮನ ಸೂರೆಗೊಂಡಿರುವ ‘ದುಷ್ಯಂತ-ಶಕುಂತಲೆ’, ‘ ಸಲೀಂ ಮತ್ತು ಅನಾರ್ಕಲಿ’,‘ ರೋಮಿಯೋ-ಜ್ಯೂಲಿಯಟ್‌’ ಅಮರ ಪ್ರೇಮ ಕಾವ್ಯಗಳು, ಇಂದೂ ಸಹ ನಮ್ಮ ಸುತ್ತ ಮುತ್ತ ನಿರಂತರವಾಗಿ ನಿತ್ಯನೂತನವಾಗಿ ಚಲಿಸುತ್ತಿವೆ. 

ಪ್ರೀತಿ ಏಕೆ ಭೂಮಿ ಮೇಲಿದೆ? : ಸರಿ, ‘ಪ್ರೀತಿ’ ಎಂದರೇನು? ಎಂದು ಕೇಳಬಹುದು. ನಮಗೆ ಪ್ರೀತಿಯೆಂದರೆ ತಕ್ಷಣ ನೆನಪಾಗುವುದು ಒಂದು ಹುಡುಗ-ಹುಡುಗಿಯ ನಡುವೆ ಘಟಿಸುವ ಸಂಬಂಧವೇ. ಇಷ್ಟಕ್ಕೇ ಪ್ರೀತಿ ಎಂದು ಕರೆದರೆ ಆ ಪದಕ್ಕೆ ಇರುವ ವ್ಯಾಪ್ತಿಯನ್ನು ಕಡಿಮೆ ಮಾಡಿದಂತಾಗುತ್ತದೆ.

ಯಾವುದೇ ವ್ಯಕ್ತಿ ಭೂಮಿಯ ಮೇಲೆ ಮೊಟ್ಟ ಮೊದಲು ಅವತರಿಸಿದ ತಕ್ಷಣ ಅಮ್ಮನ ಪ್ರೀತಿಯ ಮೊದಲ ತುತ್ತುನ್ನು ಸೇವಿಸುತ್ತಾನೆ.ಆ ಪ್ರೀತಿಯೇ ವ್ಯಕ್ತಿಯ ಎಲ್ಲಾ ಮುಂದಿನ ಸಂಬಂಧಗಳಿಗೆ ಅ, ಆ, ಇ, ಈ ... ಅಂದರೆ ಅಡಿಪಾಯ.

ತಾಯಿಯ ಪ್ರೀತಿ ಈ ಪ್ರಪಂಚದಲ್ಲಿಯೇ ಎಲ್ಲ ಪ್ರೀತಿಗಳಿಗಿಂತ ಮಿಗಿಲಾದದ್ದು. ಅದು ಎಂದೂ ಸಹ ಬತ್ತಲಾರಾದ- ತನ್ನ ಸಮಸ್ತ ಮಕ್ಕಳ ಕಡೆಗೆ ಹರಿಯುವ ‘ ಜೀವವಾಹಿನಿ’. ‘ ತಾಯಿಯ ಬಗ್ಗೆ ಪ್ರೀತಿಯಿಲ್ಲದೆ ಇರುವ ಮಗನಿರಬಹುದು, ಮಕ್ಕಳೆಡೆಗೆ ಪ್ರೀತಿ ಇರಲಾರದ ಯಾವ ತಾಯಿಯೂ ಇರಲಾರಳು’. ತಾಯಿಯ ಪ್ರೀತಿಯಲ್ಲಿ ನಿಸ್ವಾರ್ಥವಾದ ಒಂದು ಕಳಕಳಿ ಮತ್ತು ಏನನ್ನೂ ಅಪೇಕ್ಷಿಸದೆ, ತನ್ನ ಮಕ್ಕಳನ್ನು ಕಾಪಾಡುವ, ಗಮನಿಸುವ ಉತ್ಕೃಷ್ಟ ಕಾಳಜಿ ಇರುತ್ತದೆ. ಈ ಪ್ರೀತಿಯ ಅಮೃತಪಾನದಿಂದ ಯಾರೂ ಸಹ ಪಾರಾಗಿರಲಾರರು. 

ಹಾಗಾದರೆ, ಯಾಕೆ ನಮ್ಮ ಯುವಕರು-ಯುವತಿಯರು ತಮ್ಮ ತಾರುಣ್ಯಾವಸ್ಥೆಯಲ್ಲಿ ಪ್ರೀತಿ-ಪ್ರೇಮ ಎಂಬ ಸುಳಿಯಲ್ಲಿ ಮುಳುಗಿ ತಮ್ಮ ಬಹುಪಾಲು ಸಮಯವನ್ನು ಕಳೆಯುತ್ತಾರೆ? ತಾಯಿಯ ಪ್ರೀತಿ ಸಾಕಾಗುವುದಿಲ್ಲವೇ? ಎಂದು ನೀವು ಕೇಳಬಹುದು. 

ಅದು ಸರಿ, ಮನುಷ್ಯ ಜೀವಿ ತಾನು ಎಂದೂ ನಿಂತ ನೀರಾಗಲು ಬಯಸುವುದಿಲ್ಲ. ಪ್ರತಿ ನಿಮಿಷ ಬೌದ್ಧಿಕವಾಗಿ, ಭೌತಿಕವಾಗಿ ಅಭಿವೃದ್ಧಿಯಾಗುತ್ತ ಪರಿಸರ ಮತ್ತು ಸಮಾಜದ ಮೂಲಕ ಬೆಳೆಯುತ್ತ ಹೋಗುತ್ತಾನೆ. ಚಿಕ್ಕಂದಿನಲ್ಲಿ ತನ್ನ ಮನೆಯಲ್ಲಿ ತಂದೆ-ತಾಯಿ, ಬಂಧು-ಬಳಗದೊಂದಿಗೆ ತನ್ನ ಪ್ರೀತಿ, ಪ್ರೇಮ ಸಾಮ್ರಾಜ್ಯವನ್ನು ಕಟ್ಟಿಕೊಂಡಿರುತ್ತಾನೆ. ಅಲ್ಲಿ ಅದು ಅವನಿಗೆ ಯಾರೂ ಪ್ರಶ್ನೆ ಮಾಡದ ಒಂದು ಕಂಫರ್ಟ್‌ ಸಿಕ್ಕಿರುತ್ತದೆ.

ಅದು ಅವನಿಗೆ ತನ್ನ ಕುಟುಂಬಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಅಂತಹ ಕಂಫರ್ಟನ್ನು ಅಲ್ಲಿರುವ ಎಲ್ಲರೂ ಅವನಂತೆಯೇ ಅನುಭವಿಸುತ್ತಿರುತ್ತಾರೆ. ಆದರೆ ಸಹಜವಾಗಿ ಮನುಷ್ಯ ಯಾವಾಗಲೂ ತಾನೂ ಸಹ ಇನ್ನೊಬ್ಬರಂತೆ ಇರಲು ಪ್ರಯತ್ನಿಸುವುದಿಲ್ಲ. ತನಗೆ ಸಿಗುವಂತಹ ಯಾವುದೇ ವಸ್ತು ಮತ್ತು ಸಂಬಂಧಗಳನ್ನು ಹಂಚಿಕೊಂಡು ಅನುಭವಿಸಲು ಮತ್ತು ಜೀವಿಸಲು ಎಂದೂ ಮನಸ್ಸು ಮಾಡುವುದಿಲ್ಲ. ಆಗ ತನ್ನದೇ ಆದ, ತನಗೆ ಮಾತ್ರ ಸೀಮಿತವಾದ, ಮುಡಿಪಾದ ಈ ಪ್ರೀತಿಯನ್ನು ತನ್ನ ಸುತ್ತಲಿನ ಹತ್ತಿರದ ಮನೆಯಿಂದ, ತಾನು ನಿತ್ಯ ಬಹುಪಾಲು ಸಮಯವನ್ನು ಕಳೆಯುವ ಸ್ಥಳಗಳಾದ ಶಾಲೆ, ಕಾಲೇಜು, ಕಚೇರಿ ಮೊದಲಾದಕಡೆ ಹುಡುಕುತ್ತಾನೆ. 

ನೀವು ಇಲ್ಲಿ ಗಮನಿಸಬೇಕು ನಾನು ಹೇಳುತ್ತಿರುವುದು ಪಕ್ಕಾ ಪ್ರೀತಿಗೆ ಸಂಬಂಧಿಸಿದ್ದು. ಆದರೆ ಪ್ರೀತಿಗೆ ಅಡಿಪಾಯ ಸ್ನೇಹವೆನ್ನುತ್ತೀರಾ? ಅದು ನಿಜ. ಮೊದಲ ಮೆಟ್ಟಿಲು ಸ್ನೇಹ. ಆದರೆ, ಮೊದಲ ನೋಟದಲ್ಲೇ ಪ್ರೀತಿ ಬೆಳೆಯುತ್ತದೆ (Love at frist sight) ಎಂಬ ಮಾತನ್ನೂ ನಾವೆಲ್ಲರೂ ಕೇಳಿದ್ದೇವೆ.

ಹೌದು, ನೀವು ಗಮನಿಸಿರಬೇಕು ಹಲವು ಯುವಕ-ಯುವತಿಯರು ಈ ರೀತಿಯ ಬಾಹ್ಯಾಕರ್ಷಣೆಗೆ ಒಳಗಾಗಿ ಪ್ರೀತಿಸಲು ಪ್ರಾರಂಭಿಸುತ್ತಾರೆ. ಇಂತಹ ಪ್ರೀತಿ ಕಾಲಕ್ರಮಿಸಿದಂತೆ ಪಕ್ವವಾಗಲೂಬಹುದು ಅಥವಾ ಪಾರ್ಕ್‌ ಮತ್ತು ಕಾಲೇಜು ಕ್ಯಾಂಪಸ್‌ಗಳಲ್ಲಿ ಪಕ್ಕಕ್ಕೆ ಸರಿಯಲೂಬಹುದು.

Read more at: https://kannada.oneindia.com/literature/articles/2006/140206triputapriya1.html

ಸಹನೆ ಪರೀಕ್ಷಿಸ ಬೇಡಿ!

 "I am growing patience in my garden of life. I cant wait to see what fruit it bears." 

ನನ್ನ ಸ್ನೇಹಿತ ಹೇಳ್ತಿದ್ದಾ ‘ತಿಪ್ಪಾ ಯಾಕೊ ಏನೊ ಇತ್ತೀಚೆಗೆ ಪೇಷನ್ಸೆ ಇಲ್ಲಾ ಕಣೊ’. ಅಂದರೆ ಪೇಷನ್ಸ್‌ ಇಲ್ಲ, ಇರಬೇಕಾಗಿತ್ತು ಎಂಬುದೆರಡು ಅವನಿಗೆ ಗೊತ್ತಿದೆ ಎಂದಾಯ್ತು.


ಪೇಷನ್ಸ್‌ಗೆ ಸಮಾನ ಅರ್ಥಗಳು ಕನ್ನಡದಲ್ಲಿ ಸಹನೆ, ತಾಳ್ಮೆ, ಸೈರಣೆ. ಸಹನೆ ಇಲ್ಲದೇ ಇರುವುದು ಎಂದರೆ ಏನು ಎಂಬುದು ಮುಖ್ಯ. ನಾವೆಲ್ಲಾ ಕಂಡಿರುವ ಹಾಗೇ ಪೇಷನ್ಸ್‌ ಇಲ್ಲದವರ ನಡವಳಿಕೆಯೆಂದರೆ ಗಾಬರಿ, ವಿನಾಕಾರಣ ಉದ್ವೇಗ , ಆತುರ, ಸುಮ್‌ ಸುಮ್ಮನೆ ಆತಂಕಪಡುವುದು ಇತ್ಯಾದಿ.

ಸಹನಾಶೀಲಳು ಎಂಬ ಅನ್ವರ್ಥ ಹೊಂದಿರುವ ಸ್ತ್ರೀಯರಲ್ಲೂ ಸಹನೆಯ ಕೊರತೆ ಕಂಡುಬರುತ್ತದೆ. ಇದು ಸರ್ವಸಮ್ಮತವಾಗಿ ಎಲ್ಲಾ ವಿಭಾಗದಲ್ಲೂ ವಯಸ್ಸಿನ ವ್ಯತ್ಯಾಸವಿಲ್ಲದೇ ಕಾಡುವ ಸಮಸ್ಯೆ ಎಂದರೆ ತಪ್ಪಾಗಲಾರದು. 

ಹಾಗಾದರೆ ಪೇಷನ್ಸ್‌ ಇರಲೇಬೇಕಾ ಎಂದು ನೀವು ಕೇಳಬಹುದು. ಇದಕ್ಕೆ ಉತ್ತರವನ್ನು ನನ್ನಲ್ಲಿ ಪೇಷನ್ಸ್‌ ಇಲ್ಲ ಎನ್ನುವವರೇ, ಪೇಷನ್ಸ್‌ ಇರಬೇಕು ಸಾರ್‌ ಎಂದು ಘಂಟಾಘೋಷವಾಗಿ ಹೇಳುತ್ತಾರೆ.

ಇರಲಿ, ಪೇಷನ್ಸ್‌ ಇಲ್ಲದಿರುವುದು ಕಾಯಿಲೆನಾ? ನಿಜವಾಗಿಯೂ ಕಾಯಿಲೆ ಅಲ್ಲ. ವಂಶಪಾರಂಪಾರ್ಯವಾಗಿ ಬರುವ ರೋಗವು ಅಲ್ಲ, ಮತ್ತೆ ಯಾಕೆ ಪೇಷನ್ಸ್‌ ಇಲ್ಲಾ ಎಂಬ ಕೊರಗು? ಆದರೆ ಸಹನೆ ಇಲ್ಲದ ನಮ್ಮ ವರ್ತನೆಯಿಂದ ನಡೆಯುವ ಅವಘಡಗಳು ಮನಸ್ಸಿಗೆ ನೋವು ತರುತ್ತವೆ. ಎದುರಿನವ ಸಂಕಷ್ಟಕ್ಕೆ ಸಿಲುಕುತ್ತಾನೆ.

ಹೌದು, ಅತಿ ಚಿಕ್ಕಚಿಕ್ಕ ವಿಷಯಗಳಿಗೋಸ್ಕರ ಪೇಷನ್ಸ್‌ ಕಳೆದುಕೊಂಡು ಅನಂತರ ಪಶ್ಚಾತ್ತಾಪ ಪಟ್ಟಿರುವವರನ್ನು ನಾವು ನೋಡಿದ್ದೇವೆ. ಆತುರಗಾರನಿಗೆ ಬುದ್ದಿ ಮಟ್ಟ ಎಂಬ ರೀತಿಯಲ್ಲಿ ವರ್ತಿಸಿ, ಸುತ್ತಲಿನವರ ಬಾಯಿಂದ ಈ ಗಾದೆಯನ್ನು ಶೇ.100ರಷ್ಟು ಜನ ಕೇಳಿಸಿಕೊಂಡಿದ್ದಾರೆ. ಪೇಷನ್ಸ್‌ ಇಲ್ಲದೆ ಬಿಪಿ ರೈಸ್‌ ಮಾಡಿಕೊಂಡು ಎಗರಾಡಿ ಒದ್ದಾಡಿಕೊಂಡಿರುವವರನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ.


ಹಾಗೆಯೇ, ಇದರ ಅನುಭವವನ್ನು ನಾವು ದಿನನಿತ್ಯ, ಮುಖ್ಯವಾಗಿ ನಗರ ಸಾರಿಗೆಯಲ್ಲಿ ಪ್ರಯಾಣಿಸುವಾಗ ಕಾಣುತ್ತೇವೆ. ಹಿಂದಿನವರು ಸ್ವಲ್ಪ ಕಾಲು ತುಳಿದರೆ ಅಥವಾ ಮೈ ಮೇಲೆ ಬಿದ್ದರೆ, ನಮ್ಮೆಲ್ಲರ ಪ್ರತಿಕ್ರಿಯೆಗೆ ಆ ವ್ಯಕ್ತಿ ನಿಜವಾಗಿಯೂ ಕಸಿವಿಸಿಗೊಳ್ಳುತ್ತಾನೆ. ಸ್ವಲ್ಪನೂ ವ್ಯವಧಾನವಾಗಿ ಯೋಚಿಸಲು ಹೋಗುವುದಿಲ್ಲ, ಆ ರೀತಿ ಬೇರೆಯವರ ಮೇಲೆ ಮುಗಿ ಬೀಳುತ್ತೇವೆ. ಇಲ್ಲೂ ಸಹ ಸಹನೆಯ ಕಟ್ಟೆ ಚೂರಾಗುತ್ತದೆ.

ಹಿಂದೆ ನಮ್ಮ ಪುರಾಣ ಪುಣ್ಯ ಕತೆಗಳಲ್ಲಿ ಬರುವ ಋಷಿ ಮುನಿಗಳು, ಪಾಮರರ ಮತ್ತು ರಾಜರುಗಳ ತಪ್ಪಿಗೆ ಸಹನೆಯನ್ನು ಮೀರಿ ಶಾಪವನ್ನು ಕೊಟ್ಟು ಬಿಡುತ್ತಿದ್ದರು. ಅನಂತರ ಋಷಿಗಳಿಗೆ ಅವರ ಶಾಪದ ಬಗ್ಗೆ ವಿಷಾದವಾಗಿ, ಶಾಪ ವಿಮೋಚನೆಯನ್ನು ಸಹನೆಯಿಂದ ನೀಡುತ್ತಿದ್ದರು.

ಆದ್ದರಿಂದ, ಇದು ಸರ್ವಸಂಗ ಪರಿತ್ಯಾಗಿಗಳನ್ನೇ ಬಿಟ್ಟಿಲ್ಲವೆಂದರೆ ನಮ್ಮ ನಿಮ್ಮಲ್ಲಿ ಇದನ್ನು ಕಾಣುವುದು ಏನು ಅತಿಶಯವಲ್ಲ. ಆದ್ದರಿಂದ ಇದಕ್ಕೆ ಪರಿಹಾರ ಯೋಚಿಸಿ ವರ್ತಿಸುವುದು.


ಕಾಯಿಲೆಯಲ್ಲದಿದ್ದರೂ, ಸಹನೆಯ ಕೊರತೆಯಿಂದ ಅನೇಕ ಅಪಾಯಗಳು ಸಂಭವಿಸುತ್ತವೆ. ನಮ್ಮ ಸುತ್ತಮುತ್ತಲಿನ ಒಬ್ಬರಿಗೆ ಪೇಷನ್ಸ್‌ ಇಲ್ಲವಾದರೆ, ಜಗಳ ತಪ್ಪಿದ್ದಲ್ಲ. ಅನಗತ್ಯ ಕಿರಿಕಿರಿಯೂ ಉಂಟಾಗುತ್ತದೆ. 

ಕೆಲವು ಸಲ ಪೇಷನ್ಸ್‌ ಕಳೆದು ಹೋಗಲು, ಎದುರಿನ ವ್ಯಕ್ತಿಯೂ ಕಾರಣವಾಗುತ್ತಾನೆ. ವ್ಯಕ್ತಿ ಗಾಬರಿಯಿಂದ ಅಥವಾ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ಸಹನೆ ಕಳೆದುಕೊಳ್ಳುತ್ತಾನೆ. ಒಂದೇ ಒಂದು ನಿಮಿಷ ಸಮಾಧಾನದಿಂದ ಯೋಚಿಸಿದರೆ ಶಾಂತ ಸನ್ನಿವೇಶವನ್ನು ಸುಲಭವಾಗಿ ನಿರ್ಮಿಸಬಹುದು. ಆದರೆ ಹಾಗೆ ಮಾಡುವಷ್ಟ ಸಹನೆ ನಮ್ಮ ಕೈಯಲ್ಲಿರುತ್ತೇನು ಅನ್ನಬಹುದು ನೀವು. ಆದರೆ ನಾವೇ ನಮ್ಮ ಬುದ್ದಿಯ ಕೈಹಿಡಿಯಬೇಕು. ಸ್ವಲ್ಪ ಸಮಾಧಾನದಿಂದ ಸನ್ನಿವೇಶದ ನಾನಾ ಕೋನಗಳನ್ನು ಗಮನಿಸಿ ಮುಂದುವರೆದರೆ, ಪೇಷನ್ಸ್‌ ಇಲ್ಲ ಎಂಬ ಮಾತೇ ಇರುವುದಿಲ್ಲ.

ನನಗೆ ಪೇಷನ್ಸ್‌ ಹೊಯ್ತೇಂದರೆ ನಾನೇನ್‌ ಮಾಡ್ತೀನೋ ನನಗೆ ಗೊತ್ತಿಲ್ಲ ಎಂಬ ಮಾತು ನೀವು ಕೇಳಿರಬಹುದು. ಆತನಿಗೆ ತನ್ನ ಬಗ್ಗೆ ಹೇಳಿಕೊಂಡು, ವ್ಯಕ್ತಿತ್ವಕ್ಕೆ ಮೆರಗು ನೀಡುವ ಆಸೆ. ಅವನಿಗೆ ಸ್ವಲ್ಪನೂ ತಾಳ್ಮೆನೇ ಇಲ್ಲ ಕಣ್ರಿ ಎಂಬ ಪಕ್ಕದ ಮನೆಯ ತಾಯಿಯ ಮಾತು ನಿಮ್ಮ ಕಿವಿಗೆ ಬಿದ್ದಿರಬಹುದು. ಆ ತಾಯಿಗೆ ತನ್ನ ಮಗನ ಗುಣದ ಬಗ್ಗೆ ಚಿಂತೆ, ಆತಂಕ.

ತಾಳಿದವನು ಬಾಳಿಯಾನು ಎಂಬಂತೆ ತಾಳ್ಮೆಯಿಂದ ಯಾವುದೇ ಕೆಲಸವನ್ನಾಗಲಿ, ಸನ್ನಿವೇಶವನ್ನಾಗಲಿ ಹೆಚ್ಚು ಅರ್ಥಪೂರ್ಣವಾಗಿ ಮಾಡಬಹುದು. ಸಹನೆಯ ಮೂರ್ತಿಯಾಗದಿದ್ದರೂ ಪರವಾಗಿಲ್ಲ , ಸರಿಯಾಗಿ ಅರಿತು ನಡೆದರೆ ನಮಗೂ, ನಮ್ಮ ಸುತ್ತ ಇರುವವರಿಗೂ ಸಹ ಕ್ಷೇಮ. 

ಇದನ್ನೆಲ್ಲಾ ಸಹನೆಯಿಂದ ಓದಿದ್ದಿರೆಂದು ಭಾವಿಸಲಾ?

Read more at: https://kannada.oneindia.com/literature/articles/2006/250106patience.html


ಕನ್ನಡ ಪತ್ರಿಕೋದ್ಯಮದಲ್ಲಿ ಅಂಕಣ ಸಾಹಿತ್ಯ

  ನಿತ್ಯ ಓದುಗರು ಹೆಚ್ಚು ಇಷ್ಟಪಡುವುದು ಪತ್ರಿಕೆ, ವಾರಪತ್ರಿಕೆ ಮತ್ತು ಮಾಸಿಕಗಳಲ್ಲಿನ ‘ಅಂಕಣಗಳನ್ನು’. ಪ್ರತಿದಿನ, ಪ್ರತಿವಾರ ಕಾತುರತೆಯಿಂದ ಓದುಗರನ್ನು ನಿರೀಕ್ಷೆಯಲ್ಲಿಯೇ ಇರಿಸುವಂತೆ ಮಾಡುವ ಚಮತ್ಕಾರ ಅಂಕಣಗಳಿಗೆ ಇದೆ. ಹಾಟ್‌ ಸುದ್ಧಿ, ಮುಖಪುಟ ಲೇಖನಗಳನ್ನು ಓದುಗ ನಿರೀಕ್ಷೆ ಮಾಡುವುದು ಕಷ್ಟ. ಆದರೆ ತಾನು ಮೆಚ್ಚಿದ ಅಂಕಣಕಾರನ ಅಂಕಣವನ್ನು ಕಾದಿದ್ದು ಮತ್ತು ತಾನು ಗೆಸ್‌ ಮಾಡಿದ ವಿಷಯದ ಮೇಲೆ ಬೆಳಕು ಚೆಲ್ಲಿದ್ದರೆ ಹೆಚ್ಚು ಖುಷಿಪಟ್ಟು ಓದುತ್ತಾನೆ.


ಈ ರೀತಿಯ ಆಕರ್ಷಕ ಅಂಕಣಗಳನ್ನು ಓದುಗರಿಗೆ ಕೊಡುವುದರ ಮೂಲಕ ತನ್ನ ಪ್ರಸಾರ ಸಂಖ್ಯೆಯನ್ನು ಬಹುಬೇಗ ಹೆಚ್ಚಿಸಿಕೊಂಡ ಕನ್ನಡ ಪತ್ರಿಕೆಗಳ ಉದಾಹರಣೆ ಸಾಕಷ್ಟಿವೆ. ದಿನಪತ್ರಿಕೆಗಳಲ್ಲಿ ಇತ್ತೀಚಿನ ಕನ್ನಡದ ನಂಬರ್‌ ಒನ್‌ ಪತ್ರಿಕೆಯಾದ ವಿಜಯಕರ್ನಾಟಕ, ಪ್ರತಿದಿನವೂ ತನ್ನ ಸಂಪಾದಕೀಯ ಪುಟದಲ್ಲಿ ಒಬ್ಬ ಲೇಖಕನ ಅಂಕಣವನ್ನು ಬರೆಸುತ್ತಿದೆ. ನನಗೆ ತಿಳಿದಂತೆ ಈ ಪತ್ರಿಕೆಯ ಹೆಚ್ಚಿನ ಅಭಿಮಾನಿಗಳ ಆಕರ್ಷಣೆ ಈ ಅಂಕಣಗಳೆ ಸರಿ.


ಹಾಗಾದರೆ, ಏನಿದು ಅಂಕಣಬರಹ? ನಮ್ಮ ದಿನ ನಿತ್ಯದ ಯಾವುದೇ ವಿಷಯಕ್ಕೆ ಸಂಬಂಧಿಸಿದ ಸಂಗತಿಯನ್ನು ಪ್ರಸ್ತುತ ಸಮಯಕ್ಕೆ ಹೊಂದುವಂತೆ ಪತ್ರಿಕೆಯ ಅಂಕಣದಲ್ಲಿ ಸಮರ್ಪಕವಾಗಿ ವಿಶ್ಲೇಷಿಸುವುದು ಅಥವಾ ವಿವೇಚಿಸುವುದು. ಇಲ್ಲಿ ವಿಷಯಗಳ ವೈವಿಧ್ಯತೆಯಲ್ಲಿ ಲೇಖಕನ ಅಗಾಧ ಜ್ಞಾನ ಪ್ರತಿಭೆ ವ್ಯಕ್ತವಾಗುತ್ತದೆ. ಅಂಕಣದಲ್ಲಿನ ವಿಷಯದ ಇತರೆ ಆಯಾಮಗಳು, ಸಾಮಾನ್ಯ ಓದುಗನಿಗೆ ಸುಲಭ ಭಾಷೆಯಲ್ಲಿ ಅರ್ಥವಾಗುತ್ತವೆ. ಅವನನ್ನು ಚಿಂತನೆಗೀಡು ಮಾಡುವಲ್ಲಿ ಅಂಕಣಗಳು ಫಲಕಾರಿ.


-ನಮ್ಮ ಕರ್ನಾಟಕದಲ್ಲಿ ಯಾವಾಗ ಈ ರೀತಿಯ ಸಾಹಿತ್ಯ ಪ್ರಕಾರ ಪ್ರಾರಂಭವಾಯಿತು ಎಂದರೆ, ಕನ್ನಡದ ಪ್ರಥಮ ಪತ್ರಿಕೆಯಾದ ‘ಮಂಗಳೂರು ಸಮಾಚಾರ’ದಲ್ಲಿ 1 ಜುಲೈ 1843ರಂದು. ಇದರ ಸಂಪಾದಕರು ರೆವಡೆಂಟ್‌ ಹರ್ಮಾನ್‌ ಮೊಗ್ಲಿಂಗ್‌.


ಇವರು ‘ನೈತಿಕ ವಿಚಾರಗಳು’ ಎಂಬ ಅಂಕಣವನ್ನು ಧಾರ್ಮಿಕ ವಿಷಯಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸುತ್ತಿದ್ದರು. ಅದರೆ, ಇದು ಕಾಲಾಂತರದಲ್ಲಿ ನಿಂತಿತು.


ಆನಂತರ ನಾವು ಪ್ರಮುಖ ಅಂಕಣ ಬರಹ ಎಂದು ಗುರುತಿಸುವುಂತಾಗಿದ್ದು ಸಿದ್ದವನಹಳ್ಳಿ ಕೃಷ್ಣಶರ್ಮರ ಅಂಕಣಗಳಾದ ಮಾತಿನ ಮಂಟಪ, ಚಿಂತನ-ಮಂಥನ ಇವುಗಳನ್ನು. ಇವು ಅಂದಿನ ಪ್ರಸ್ತುತ ವಿಷಯಕ್ಕೆ ಸಂಬಂಧಪಟ್ಟಿದ್ದರೂ ಸಾಹಿತ್ಯಕ ಮೌಲ್ಯಗಳನ್ನು ಹೆಚ್ಚು ಹೊಂದಿ ಜನಮಾನಸದಲ್ಲಿ ಉಳಿದಿದ್ದು ಇಂದಿಗೂ ಮೆಲುಕು ಹಾಕುವಂತ ಬರಹಗಳಾಗಿವೆ.


ಪತ್ರಿಕೆಗಳ ಸುದ್ದಿಗಳು ಸಾಹಿತ್ಯ ಪ್ರಕಾರವಾಗಲು ಸಾಧ್ಯವಿಲ್ಲ. ಆದರೆ ಅಂಕಣ ಬರಹಗಳು ಸಾಹಿತ್ಯ ಪ್ರಕಾರಗಳಲ್ಲೊಂದು ಎಂದು ಗುರುತಿಸಲು ಕಾರಣವಾಗಿದ್ದು ಅವುಗಳಲ್ಲಿರುವ ಸರ್ವಕಾಲಿಕ ಸಾಹಿತ್ಯ ಮಂಡಣೆ ಮತ್ತು ಆಯ್ಕೆ ಮಾಡಿಕೊಂಡ ವಿಷಯಗಳನ್ನು ಓದುಗರಿಗೆ ಮುಟ್ಟಿಸುವ ಪರಿಯಿಂದ ಮತ್ತು ಅಂಕಣ ಬರಹಗಾರನ ಸಾಹಿತ್ಯ ಅನುಭವ ಸಾಮರ್ಥ್ಯದಿಂದ. 


ಓದುಗರು ಕೇವಲ ಸುದ್ದಿಗಳನ್ನು ಓದುವುದರಿಂದ, ಪ್ರಯೋಜನವಿಲ್ಲ. ಸುದ್ದಿ ಬಗೆಗೆ ತನ್ನ ವಿಚಾರ ಚಿಂತನ ಮಾಡುವುದು ಸಾಧ್ಯವಾಗದಿರಬಹುದು. ಆದರೆ, ಅಂದಿನ ಸಮಯದಲ್ಲಿ ಸವಿಸ್ತಾರವಾಗಿ ಅಂಕಣಗಳಲ್ಲಿ ಮಂಡಿಸುವ ಅಂಕಣಗಾರನ ಸಾಲುಗಳು, ಲೇಖಕನ ಜೊತೆ ಜೊತೆ ತನ್ನ ಚಿಂತನೆಯ ಯಂತ್ರವನ್ನು ಚಾಲು ಮಾಡಲು ಸಹಾಯವಾಗುತ್ತದೆ.


ನಮ್ಮ ಕನ್ನಡ ಭಾಷೆಯಲ್ಲಿ ಈ ಪರಿಯ ಒಂದು ಸಾಹಿತ್ಯದ ಪ್ರಕಾರ ವಿಫುಲವಾಗಿ ಬೆಳೆದಿದೆ ಎಂಬುದಕ್ಕೆ ಸಾಕ್ಷಿಯಾಗಿ ಹಲವಾರು ಸಾಹಿತ್ಯ ದಿಗ್ಗಜರುಗಳು ಪತ್ರಿಕೆಗಳಲ್ಲಿ ನಿಯಮಿತವಾಗಿ ತಮ್ಮ ಲೇಖನಗಳನ್ನು ಬರೆಯಲು ಪ್ರಾರಂಭಿಸಿದ್ದಾರೆ. ಈ ಪ್ರಕಾರಕ್ಕೆ ಕಿರೀಟ ಪ್ರಾಯಾವಾದ ಸೇವೆ ಸಲ್ಲಿಸಿದವರಲ್ಲಿ- ತರಾಸು (ತೋಚಿದ್ದು -ಗೀಚಿದ್ದು, ವಾಹಿನಿ ವಾರಪತ್ರಿಕೆ), ನಿರಂಜನ (ಬೇವು-ಬೆಲ್ಲ, ರಾಜಧಾನಿಯಿಂದ, ಐದುನಿಮಿಷ), ಟಿ.ಎಸ್‌. ರಾಮಚಂದ್ರರಾವ್‌(ಛೂಬಾಣ- ಪ್ರಜಾವಾಣಿ), ರಾವ್‌ ಬಹದ್ದೂರ್‌(ದೇಭನ ಉವಾಚ), ಲಾಂಗೋಚಾರ್ಯರು(ಓದುಗರೊಡನೆ ಹರಟೆ), ಹರಿದಾಸ ಭಟ್ಟರು(ಲೋಕಭಿರಾಮ-ಉದಯವಾಣಿ), ಶ್ರೀರಂಗರು(ವಿಶ್ವ ಕುತೂಹಲ ಕಣ್ಣುಗಳು), ಜಿ.ಪಿ. ರಾಜರತ್ನಂ ಮುಂತಾದ ಹಿರಿಯ ಸಾಹಿತಿಗಳು ತಾವು ಪತ್ರಕರ್ತರಲ್ಲದಿದ್ದರೂ ಪತ್ರಿಕೆಯೊಡನೆ ನಿಕಟ ಸಂಪರ್ಕವನ್ನಿಟ್ಟುಕೊಂಡು, ನಿಯಮಿತವಾಗಿ ಓದುಗರೊಂದಿಗೆ ತಮ್ಮ ಅನುಭವಗಳನ್ನು ಮತ್ತು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಹೀಗಾಗಿ ಕನ್ನಡದಲ್ಲಿ ಅಂಕಣ ಬರಹ ಸ್ವಾತಂತ್ರ್ಯೋತ್ತರದ್ದು.


ಹಾಗೆಯೇ, ಇತ್ತೀಚಿನ ದಶಕಗಳಲ್ಲಿ ಹಾ. ಮಾ.ನಾಯಕ, ಎಚ್ಚೆಸ್ಕೆ, ಎಲ್‌.ಎಸ್‌.ಶೇಷಗಿರಿರಾವ್‌, ಕೆ.ಟಿ.ಪಾಂಡುರಂಗಿ, ಪೂರ್ಣಚಂದ್ರ ತೇಜಸ್ವಿ, ಕೀರ್ತಿನಾಥ ಕುರ್ತುಕೋಟಿಯವರುಗಳು ಅಂಕಣಗಳು ಸಹ ಪ್ರಭಾವಿ ಮಾಧ್ಯಮ ಎಂಬುದನ್ನು ನಿರೂಪಿಸಿದರು. 

ಇದಕ್ಕೆ ಸಾಕ್ಷಿ ಹಾಮಾನಾ ಅವರ ಪ್ರಜಾವಾಣಿಯಲ್ಲಿ ಬರೆದ ಅಂಕಣ -ಸಂಪ್ರತಿ. ಈ ‘ಸಂಪ್ರತಿ’ ಅಂಕಣ ಬರಹಗಳು ಪುಸ್ತಕ ರೂಪ ತಾಳಿದ್ದು ನಂತರದ ಸಮಾಚಾರ. ಈ ಪುಸ್ತಕ 1989-90ಸಾಲಿನಲ್ಲಿ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದು, ಈ ಪ್ರಶಸ್ತಿ ಭಾರತೀಯ ಭಾಷೆಯಲ್ಲಿಯೇ ಪ್ರಥಮವಾಗಿ ಈ ಹೊಸ ಪ್ರಕಾರಕ್ಕೆ ಬಂದು ಇದರ ಪ್ರಸ್ತುತೆಯ ಜವಾಬ್ದಾರಿಯನ್ನು ಹೆಚ್ಚಿಸಿತು. 


ಸಂಪ್ರತಿ ಅಂದಿನ ಸಮಯದಲ್ಲಿ ಒಂದು ಗೊತ್ತಿಲ್ಲದ ಮಿಡಿತವನ್ನು ಹಾಮಾನಾ ಮತ್ತು ಓದುಗರ ನಡುವೆ ಸೃಷ್ಟಿ ಮಾಡಿತ್ತು. ಇದು ಈ ಅಂಕಣದ ಜನಪ್ರಿಯತೆಗೆ ಕನ್ನಡಿ. ನನಗೆ ತಿಳಿದಂತೆ ನಾನೇ ಓದಿರುವ ಹಾಮಾನಾ ಅವರ ‘ಸ್ವಗತ’ ಅಂಕಣ(ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು)ದ ವಿಷಯ ಆಯ್ಕೆ ಸಂಕ್ಷಿಪ್ತತೆ ಮತ್ತು ವಿಶ್ಲೇಷಣೆಯಿಂದ ಅತಿ ಹೆಚ್ಚು ಓದುಗರನ್ನು ತಲುಪಿತ್ತು. ಹಾಗೆಯೇ ಇವರ ಇನ್ನೊಂದು ಅಂಕಣ ‘ಸಾಹಿತ್ಯ ಸಲ್ಲಾಪ’ -ಕನ್ನಡ ಪ್ರಭದಲ್ಲಿ ಸಾಹಿತ್ಯದ ದೃಷ್ಟಿಯಿಂದ ಮಹತ್ವವನ್ನು ಪಡೆದಿತ್ತು.

ಅಂಕಣ ಬರಹಕ್ಕೆ ಸಂಬಂಧಿಸಿದಂತೆ ಕೆಲವು ಅಪರೂಪ ಪ್ರಥಮಗಳು ಸಹ ಇವೆ. ಸುದೀರ್ಘವಾಗಿ ಪ್ರತಿದಿನ ಅಂಕಣ ಬರೆದಿದ್ದು ಒಂದು ದಾಖಲೆ. ಏಪ್ರಿಲ್‌ 11,1977ರಿಂದ ಟಿ.ಎಸ್‌.ಆರ್‌ ರವರ ನಿಧನದೊಂದಿಗೆ ಅವರ ಛೂಬಾಣ ನಿರಂತರವಾಗಿ ಸಾಗಿತ್ತು. ಅದರ ಆಳ, ಹರಿತವೂ ಅವರ ಹಿಂದೆಯೇ ಹೋಯಿತು. ಕ್ರೀಡಾರಂಗದ ಮೇಲೆ ಬೆಳಕು ಚೆಲ್ಲುವ ಮೊದಲ ಅಂಕಣ ಬರೆದದ್ದು ಸೂರಿ. ಅವರ ಕ್ರೀಡಾಂತರಂಗ ಅಂಕಣ ಕ್ರೀಡಾಪ್ರೇಮಿಗಳಿಗೆ ಇಷ್ಟವಾಗಿತ್ತು. ಆ ಕಾಲದಲ್ಲಿ ಪ್ರಜಾಮತವನ್ನು ಹಾಮಾನಾ ಅವರ ಅಂಕಣಕ್ಕಾಗಿಯೇ ನೋಡುತ್ತಿದ್ದರು. 


ಇಂದು ಸಹ ಹಲವರು ಲೇಖಕರು ಪತ್ರಿಕೆಗಳಲ್ಲಿ ನಿಯಮಿತವಾಗಿ ಆಕರ್ಷಕ ಅಂಕಣ ಬರಹಗಳನ್ನು ಬರೆಯತ್ತಿದ್ದಾರೆ ಅವುಗಳಲ್ಲಿ ವಿಶ್ವೇಶ್ವರ ಭಟ್ಟರ -ನೂರೆಂಟು ಮಾತು, ರವಿಬೆಳೆಗೆರೆಯ -ಬಾಟಂ ಐಟಂ, ಜಾನಕಿಯವರ -ತೆರೆದ ಬಾಗಿಲು, ಕುಲದೀಪ ಅಯ್ಯರ್‌ರ -ಅಂತರಂಗ, ಪ್ರತಾಪ ಸಿಂಹರ -ಬೆತ್ತಲೆ ಜಗತ್ತು, ನಾಗತಿಹಳ್ಳಿ ಚಂದ್ರಶೇಖರ, ಚಂದ್ರಶೇಖರ ಆಲೂರು ಮತ್ತು ಇನ್ನೂ ಮುಂತಾದವರ ಬರಹಗಳು ಪ್ರಸ್ತುತ ಸಮಯದಲ್ಲಿ ಮನೆ ಮಾತಾಗಿವೆ.


ಅಂಕಣ ಸಾಹಿತ್ಯಕ್ಕೆ ಹೊಸ ಸೇರ್ಪಡೆ : ಕನ್ನಡ ಸಾಹಿತ್ಯಕ್ಕೆ ಇತ್ತೀಚೆಗೆ ಅಪರೂಪದ ಹೊಸ ಅಂಕಣ ಬರಹಗಳು ಪುಸ್ತಕ ರೂಪದಲ್ಲಿ ಸೇರ್ಪಡೆಯಾಯಿತು. ಅದು ಯಾವುದೆಂದರೆ -ವಿಚಿತ್ರಾನ್ನ. ವಿಶ್ವಕನ್ನಡಿಗರ ಮನೆಮಾತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಟ್ಸ್‌ ಕನ್ನಡ ಡಾಟ್‌ ಕಾಂ ನಲ್ಲಿ ಸತತ ಮೂರು ವರ್ಷಗಳಿಂದ ನಿರಂತರವಾಗಿ ಪ್ರತಿ ಮಂಗಳವಾರ ಶ್ರೀವತ್ಸ ಜೋಷಿಯವರ ವಿಚಿತ್ರಾನ್ನ ಪ್ರಕಟವಾಗುತ್ತದೆ. ಇದು ಒಂದು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಮೈಲುಗಲ್ಲೇ ಸರಿ. ಇದು ಇಂಟರ್‌ನೆಟ್‌ನಲ್ಲಿ ಮೂಡಿಬಂದ ಮೊದಲ ಕನ್ನಡ ಅಂಕಣ ಬರಹಗಳ ಪುಸ್ತಕ. ಇದರ ಮಹತ್ವ ಮತ್ತು ವಿಷಯ ವೈವಿಧ್ಯತೆಯ ಪರಿಯನ್ನು ಓದಿಯೇ ಸವಿಯಬೇಕು. 

ಪ್ರತಿ ಲೇಖನವು ನವಿರಾದ ಹಾಸ್ಯದ ಮೂಲಕ ಅತಿ ಸಾಮಾನ್ಯ ಸಂಗತಿಗಳನ್ನು ತಮ್ಮ ವಿಷಯ ವಿಶ್ಲೇಷಣೆಯ ಸಾಮರ್ಥ್ಯದಿಂದ, ಪ್ರತಿ ಲೇಖನಕ್ಕೂ ಅವರು ಕೊಡುವ ತಲೆ ಬರಹ ಮತ್ತು ಅವರು ಮಾಡುವ ಪದಗಳ ಪಂಚ್‌ ಓದುಗರು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡುತ್ತವೆ. ಇದರ ಮೂಲಕವೇ ಹಲವಾರು ವಿಷಯಗಳು ನಮ್ಮೆಲ್ಲರ ಅರಿವಿಗೆ ಬಂದಿರುವುದು ಅವರ ವಿಷಯ ಆಯ್ಕೆಯ ನೈಪುಣ್ಯಕ್ಕೆ ಸಾಕ್ಷಿ. ಅಂಕಣಕಾರರು ತಾವೇ ಹೇಳಿಕೊಂಡಂತೆ ವಿಚಿತ್ರಾನ್ನ ಅಂಕಣ ಚಿತ್ರಾನ್ನ ಇರುವವರೆಗೂ ಇರುತ್ತದೆ, ಇದು ನೂರಕ್ಕೆ ನೂರು ಸತ್ಯ. 

ಇಂದಿನ ಇಂಟರ್‌ನೆಟ್‌ ಲೋಕದಲ್ಲಿ ಕನ್ನಡತನವೇನು ಕಡಿಮೆಯಿಲ್ಲ ಎಂಬುದನ್ನು ನಿತ್ಯ ಹಲವಾರು ಸುದ್ಧಿಗಳೊಂದಿಗೆ, ವಿಶಿಷ್ಟ ಅಂಕಣಗಳೊಂದಿಗೆ ದಟ್ಸ್‌ ಕನ್ನಡ ಸಾಬೀತುಪಡಿಸಿದೆ. ಆರಕ್ಕೂ ಹೆಚ್ಚು ಅಂಕಣಕಾರರಿಂದ ಅತ್ಯುತ್ತಮ ಲೇಖನಗಳನ್ನು ವಿಶ್ವ ಕನ್ನಡ ಓದುಗರಿಗೆ ಅದು ಉಣಬಡಿಸುತ್ತಿದ್ದಾರೆ. ಪ್ರಮುಖ ಇ-ಅಂಕಣಕಾರರೆಂದರೆ ಜಾಲತರಂಗದ ಡಾ. ಎಂ.ಎಸ್‌. ನಟರಾಜ್‌, ತುಳಸಿವನದ ಕೆ. ತ್ರಿವೇಣಿ ಶ್ರೀನಿವಾಸರಾವ್‌ ಮತ್ತಿತರರು. ಉತ್ಕೃಷ್ಟ ಲೇಖಕರ ಅನುಭವ ಬುತ್ತಿಯ ಸವಿಯನ್ನು ನಿಯಮಿತವಾಗಿ ಓದುಗರು ಸವಿಯುತ್ತಿದ್ದಾರೆ.


ನಮ್ಮ ಕನ್ನಡ ನಾಡಿನ ಸಾಹಿತ್ಯದ ಬೆಳವಣಿಗೆಯಲ್ಲಿ ಅಂಕಣಬರಹಗಳು ಓದುಗರ ಜೊತೆಗೆ, ಓದುಗರ ಸಲಹೆಗಳೊಡನೆ ಮತ್ತು ಓದುಗರ ಅಭಿರುಚಿಯನ್ನು ಗ್ರಹಿಸಿ ಅಂದಿನ ಸಮಾಜ ಮತ್ತು ಸಂದರ್ಭಕ್ಕನುಸಾರವಾಗಿ ಜಾಗೃತಿ ಮತ್ತು ಕಾಳಜಿಯನ್ನು ಂಟು ಮಾಡುತ್ತಿವೆ. ಇದು ಎಂದೂ ನಿಲ್ಲದ ಹೊಸತನ, ಸಾಹಿತ್ಯದ ಸೃಜನಶೀಲ ಆವಿಷ್ಕಾರ!

Read more at: https://kannada.oneindia.com/literature/articles/2006/120106trudra.html


ಕನ್ನಡಿಗರ ಸಮಸ್ಯೆಗಳು ಹಾಗೂ ತುರ್ತು ಆತ್ಮವಿಮರ್ಶೆ

ಸಂಪಿಗೆಯವರ ‘ವಲಸೆ’ ಲೇಖನದ ಬಗ್ಗೆ ಕನ್ನಡದ ಹಲವು ಓದುಗರಿಂದ ವಿವಿಧ ರೀತಿಯ ವಾದ ಸರಣಿಗಳು ದಟ್ಸ್‌ ಕನ್ನಡ ಡಾಟ್‌ ಕಾಂನಲ್ಲಿ ಮೂಡಿ ಬರುತ್ತಿವೆ. ಸಂಪಿಗೆಯವರು ತಮ್ಮ ಲೇಖನದಲ್ಲಿ ಇಂದಿನ ಕನ್ನಡ ನಾಡಿನ ಸ್ಥಿತಿಯನ್ನು ಉತ್ತಮ ಅಂಕಿ ಅಂಶಗಳೂಂದಿಗೆ ವಿಶ್ಲೇಷಿಸಿ ನಾವೆಲ್ಲ ಇದರ ಬಗ್ಗೆ ಯೋಚಿಸುವಂತೆ ಮಾಡಿರುವುದಕ್ಕೆ ಅವರಿಗೆ ಸಮಗ್ರ ಕರುನಾಡ ಜನತೆಯ ಪರವಾಗಿ ಧನ್ಯವಾದಗಳು.

ಆದರೆ ಅವರ ಲೇಖನದಲ್ಲಿ ಕೊಟ್ಟಿರುವ ಸಲಹೆಯಂತೆ ಕನ್ನಡ ನಾಡಿನ ಜನತೆ ತಾವು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡುವ ಮೂಲಕ ಇದಕ್ಕೆ ಕಡಿವಾಣ ಹಾಕಬಹುದು ಎಂದಿದ್ದಾರೆ. ಆದರೆ, ಈ ಸಲಹೆ ಅಷ್ಟು ಉತ್ತಮವಾದ ಪರಿಹಾರವಲ್ಲ ಎಂದು ಎಲ್ಲರಿಗೂ ತಿಳಿದಿರುವ ವಿಷಯ. ನಮಗೆ ಜನಸಂಖ್ಯೆಯ ಹೆಚ್ಚಳದಿಂದ ಆಗುವ ಅನಾನುಕೂಲ ಈಗಾಗಲೇ ಪ್ರತಿ ಕುಟುಂಬಗಳಿಗೆ ತಿಳಿದಿರುವ ವಿಚಾರ. ಈ ದುಬಾರಿ ಜೀವನದಲ್ಲಿ ಒಂದು ಮಗುವಿಗೆ ಒಳ್ಳೆಯ ಶಿಕ್ಷಣ ಮತ್ತು ಜೀವನವನ್ನು ರೂಪಿಸುವುದು ಎಷ್ಟು ಕಷ್ಟ ಎಂದು ತಿಳಿದಿರುವುದರಿಂದ ಎಲ್ಲಾ ಸಂಸಾರಗಳು ಆರತಿಗೊಂದು ಕೀರ್ತಿಗೊಂದು ಎಂಬ ನಾಣ್ಣುಡಿಯನ್ನು ಆದಷ್ಟೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿವೆ. ಇದು ಒಳ್ಳೆಯದು ಸಹ ಅಲ್ಲವಾ?

ಈ ವಲಸೆ ಸಮಸ್ಯೆ, ಬಾಟಾ ಅಂಗಡಿಗಳಲ್ಲಿ ಪೂಂಗಲ್‌ ಶುಭಾಶಯ, ಪಿಜಾ ಹಟ್‌ನಲ್ಲಿ ಕನ್ನಡ ಔಟ್‌, ಬೆಳಗಾವಿಯಲ್ಲಿನ ಚುನಾವಣೆಯಲ್ಲಿ ಎಂ.ಇ.ಎಸ್‌ ಬಹುಸಂಖ್ಯೆಯ ಸ್ಥಾನಗಳನ್ನು ಪಡೆದಿರುವುದು, ಇವೆಲ್ಲ ಕನ್ನಡದ ಸದ್ಯದ ಸ್ಥಿತಿಯನ್ನು ಬಿಂಬಿಸಿವೆ. ಕನ್ನಡಿಗರಿಗೆ ಬೆಂಗಳೂರಿನಲ್ಲಿ ಕೀಳರಿಮೆ ಮತ್ತು ಅನಾಥ ಪ್ರಜ್ಞೆ ಕಾಡುತ್ತಿದೆ. ಇದಕ್ಕೆ ಕಾರಣ ಎಲ್ಲರಿಗೂ ಗೊತ್ತಿರುವಂತೆ ಕನ್ನಡಿಗರ ತುಂಬು ಔದಾರ್ಯ, ಎಲ್ಲದಕ್ಕೂ ಹೊಂದಿಕೊಂಡು, ಸಹಿಸಿಕೊಂಡು ಹೋಗುವ ಪ್ರವೃತ್ತಿ. ಇದು ನಮ್ಮ ನಾಡಿನ ಮಣ್ಣಿನ ಗುಣ. ಆದರೆ ಈ ರೀತಿಯ ಗುಣವನ್ನೇ ತಮ್ಮ ಲಾಭವಾಗಿ ಮಾಡಿಕೊಂಡು ನಮ್ಮ ಮೇಲೆ ದಬ್ಬಾಳಿಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿಯೆಂಬುವುದನ್ನ ಅವರು ಯೋಚಿಸುವಂತೆ ಮಾಡುವ ಸಮಯ ಇಂದು ಬಂದಿದೆ.

ಕನ್ನಡ ನುಡಿ, ಸಂಸ್ಕೃತಿಯ ಬಗ್ಗೆ ಎದ್ದಿರುವ ಕೂಗು ಕೇವಲ, ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗುತ್ತಿದೆ. ಆದರೆ ನಮ್ಮ ನಾಡಿನ ಬಹುಪಾಲು ಜಿಲ್ಲೆ, ತಾಲ್ಲೂಕು ಮತ್ತು ಹಳ್ಳಿಗಳಿಗೆ ಇದರ ಬಗ್ಗೆ ಏನೂ ಗೊತ್ತಿಲ್ಲ. ಗೊತ್ತಿರಲು ಸಾಧ್ಯವಿಲ್ಲ ಬಿಡಿ. ಯಾಕೆಂದರೆ ಅಲ್ಲಿ ಕನ್ನಡವೇ ಜೀವಾಳ ಮತ್ತು ಜೀವನ ಎಂಬ ರೀತಿಯಲ್ಲಿ ಜೀವಿಸುತ್ತಿದ್ದಾರೆ. ಅಲ್ಲಿ ಈ ರೀತಿಯ ಸಮಸ್ಯೆಗಳಿಗಿಂತ ಭಿನ್ನವಾದ ಹಾಗೂ ಇದಕ್ಕಿಂತ ಹೆಚ್ಚು ಬೃಹತ್‌ ಆದ ಸಮಸ್ಯೆಗಳಿವೆ.

ಆದ್ದರಿಂದ ಸಂವಿಧಾನದಲ್ಲಿ ವಲಸೆ ವಿರೋಧಿ ಶಾಸನ ತರುವುದು ಕೇವಲ ಬೆಂಗಳೂರಿಗೆ ಮಾತ್ರ ಸಾಧ್ಯವಿಲ್ಲದ ಮಾತು. ಬೆಂಗಳೂರಿಗೆ ಯಾಕೆ ಈ ಪರಿಯ ಆಪತ್ತು ಎಂದರೆ, ನಮ್ಮ ಸರ್ಕಾರ ಮತ್ತು ನಮ್ಮ ನಾಯಕರ ದೂರ ದೃಷ್ಟಿಯಿಂದ ಎಲ್ಲಾ ದೊಡ್ಡ ದೊಡ್ಡ ಯೋಜನೆಗಳು, ಕಂಪನಿಗಳು ಬೆಂಗಳೂರು ಬಿಟ್ಟು ಬೇರೆ ಪ್ರದೇಶಗಳಿಗೆ ಹೋಗದಿರುವುದು. ಇದರಿಂದ ನಮ್ಮ ಬೆಂಗಳೂರು ಅತಿ ಹೆಚ್ಚು ಒತ್ತಡವನ್ನು ಮತ್ತು ಹೆಚ್ಚು ಅವಮಾನಗಳನ್ನು ತಾನು ಅನುಭವಿಸಿ ತನ್ಮೂಲಕ ಕನ್ನಡಮ್ಮನಿಗೂ ನೀಡುತ್ತಿದೆ.


ಯಾಕೆಂದರೆ, ಕರ್ನಾಟಕದ ಪ್ರತಿ ಜಿಲ್ಲೆಯ ಜನರು ಉದ್ಯೋಗವನ್ನು ಹುಡುಕಿಕೊಂಡು ಬೆಂಗಳೂರಿನ ಕಡೆಗೆ ಮುಖ ಮಾಡಬೇಕು. ಈ ನಗರವನ್ನು ಬಿಟ್ಟು ಬೇರೆ ನಗರಗಳ ಕಡೆಗಲ್ಲ. ಹಾಗೆಯೆ ಬೇರೆ ರಾಜ್ಯದವರು ಸಹ ಐಟಿ, ಬಿಟಿ ಮತ್ತು ಬಿಪಿಒ ಎಂದುಕೊಂಡು ಬೆಂಗಳೂರಿಗೆ ಲಗ್ಗೆ ಹಾಕುತ್ತಿದ್ದಾರೆ. ಮತ್ತು ನಮ್ಮವರೊಡನೆ ಸ್ಪರ್ಧೆಯನ್ನು ಒಡ್ಡುತ್ತಿದ್ದಾರೆ. ಹೀಗಾಗಿ ಬಹುಸಂಸ್ಕೃತಿಯ ಮಾಲಿನ್ಯದಿಂದ, ನಿಜವಾದ ಕನ್ನಡಿಗರ ಮನ-ಭಾವನೆ ಮತ್ತು ಬೆಳವಣಿಗೆಯನ್ನು ಗಮನಿಸುವರಾರು? ಇದಕ್ಕೆ ಪರಿಹಾರ -ಯೋಜನೆಗಳು ವಿಕೇಂದ್ರೀಕರಣಗೊಳ್ಳಬೇಕು.



ಹಾಗೆಯೇ ಕನ್ನಡ, ಕನ್ನಡಿಗರ ಕಾಳಜಿಯ ಪಕ್ಷ ಬಂದರೂ ಆದರ ಬಗ್ಗೆ ಎಲ್ಲಾ ಜನರಿಗೂ ಎಷ್ಟರ ಮಟ್ಟಿಗೆ ಎಷ್ಟೊತ್ತಿಗೆ ಅರಿವು ಮೂಡಲು ಮತ್ತು ಮೂಡಿಸಲು ಸಾಧ್ಯ? ಇಂದು ಎಲ್ಲಾ ಸಾಮಾನ್ಯ ಪ್ರಜೆಗೆ ಭಾಷೆ, ಸಂಸ್ಕೃತಿಗಿಂತ ತನ್ನ ಮೂಲಭೂತ ಸಮಸ್ಯೆಗಳು ಮತ್ತು ತನ್ನ ಅಭಿವೃದ್ಧಿಯೇ ಮುಖ್ಯವಾಗುತ್ತಿವೆ. ಇದರಿಂದ ಎಲ್ಲರೂ ಒಂದೇ ಮನಸ್ಸಿನಿಂದ ಇಂಥ ವಿಷಯಗಳ ಬಗ್ಗೆ ಚಿಂತಿಸುವಂತೆ ಆಗುತ್ತಿಲ್ಲ. ಆದ್ದರಿಂದ ಇದರ ಬಗ್ಗೆ ಇಂದಿನ ಎಲ್ಲಾ ಪಕ್ಷಗಳು ಪಕ್ಷ ಬೇದ ಮರೆತು ಜನಸಾಮನ್ಯರ ಸಮಸ್ಯೆಗಳನ್ನು ಬಗೆಹರಿಸಲು ಅನುವಾಗಬೇಕು. ಜೊತೆಗೆ ನಮ್ಮ ನಾಡಿನ ಮತ್ತು ಬೆಂಗಳೂರಿನ ಸಮಸ್ಯೆಗಳನ್ನು ಸಮಂಜಸವಾಗಿ ತಿಳಿಸಬೇಕು. ಆಗ ಪ್ರತಿ ಕನ್ನಡಿಗನಿಗೂ ತನ್ನ ನಾಡಿನ, ದೇಶದ ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ಯೋಚಿಸಲು ಸಾಧ್ಯವಾಗುತ್ತದೆ.


ಇದೆಲ್ಲಕ್ಕೂ ಮಿಗಿಲಾಗಿ ಬೇಕಾಗಿರುವುದು ‘ಸರ್ವಶಿಕ್ಷಣ’ ಹಳ್ಳಿಯ ಪ್ರತಿಯೊಂದು ಮಗುವು ತನ್ನ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸದೆ ಪೂರ್ಣ ಮಾಡಲು ಸರ್ಕಾರ ಮತ್ತು ಎಲ್ಲಾ ಸಂಘ ಸಂಸ್ಥೆಗಳು ಸಹಾಯ ಮಾಡಬೇಕು. ಶಿಕ್ಷಣದಿಂದ ನಾವೆಲ್ಲಾ ಈ ರೀತಿ ಮಾತಾನಾಡುವ ಸೂಕ್ಷ್ಮ ವಿಷಯಗಳನ್ನು ಪ್ರತಿಯೊಬ್ಬರಿಗೂ ಮನ ಮುಟ್ಟುವಂತೆ ತಿಳಿಸಿ ಜಾಗೃತಿಯನ್ನುಂಟು ಮಾಡಲು ಸಾಧ್ಯ. ಹಾಗೆಯೇ, ನಮ್ಮ ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಎಳೆಗಳನ್ನು ಮಕ್ಕಳ ಚಿಕ್ಕ ವಯಸ್ಸಿನ ಮನಸ್ಸಲ್ಲಿ ನೆಡಲು ಸಾಧ್ಯ. ಆಗ ಆ ಮಗುವೆ ಇಡಿ ಸಮಾಜದ ಆಗು ಹೋಗುಗಳ ಬಗ್ಗೆ ಕಾಳಜಿಯನ್ನು ಗೊತ್ತಿಲ್ಲದೆ ವಹಿಸಿಕೊಂಡು ತನ್ನವರ ಜೊತೆ ಹೊರಡುತ್ತದೆ.

ಹಿಂದೆ ನಮ್ಮ ನಾಡಿಗೆ ಬಂದ ಪರರಾಜ್ಯದ ಪರ ದೇಶದ ಬಹು ಸಂಖ್ಯೆಯ ಗಣ್ಯರು ತಮ್ಮ ಮಾತೃ ಭಾಷೆ ಬೇರೆಯಾಗಿದ್ದರೂ ಕನ್ನಡಮ್ಮನ ಮಡಿಲನ್ನು ತಮ್ಮ ಹಲವು ಕನ್ನಡ ಪರ ಕಾರ್ಯಗಳಿಂದ ಶ್ರೀಮಂತಗೂಳಿಸಿ, ಅಮರರಾಗಿ ಕನ್ನಡ ನಾಡು ನುಡಿ ಇರುವವರೆಗೂ ಅವರನ್ನು ನಾವು ಸ್ಮರಿಸುವಂತೆ ಮಾಡಿದ್ದಾರೆ. ಆ ರೀತಿಯ ಅಭಿಮಾನ ನಮ್ಮ ಕನ್ನಡ ಜನರಿಂದ ಅವರಿಗೆ ಬರಬೇಕು. ಆಗಲೇ ಅವರು ನಮ್ಮ ಸಂಸ್ಕೃತಿಯ ಬಗ್ಗೆ ಗೌರವವನ್ನು ಮತ್ತು ಮೃದು ಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ. ಆದರೆ ನಮ್ಮವರೇ ತಮಗೆ ಅರಿವಿಲ್ಲದಂತೆ ನಮ್ಮ ಕನ್ನಡದ ಬಗ್ಗೆ ತಾತ್ಸಾರವನ್ನು ಹೊಂದಿ‘ಬ್ಯಾಂಗಲೂರಿಯನ್‌’ ಗಳಂತೆ ಮಾತಾಡಿದರೆ ಹೇಗೆ ಸಾಧ್ಯ. 

ಇದಕ್ಕೆ ಪುಷ್ಟಿಯಂತೆ ಈ ಜೋಕ್‌ ನೆನಪಿಗೆ ಬರುತ್ತದೆ. ‘ಇಬ್ಬರೂ ಇರುವಲ್ಲಿ ತಮಿಳು ಕೇಳಿಸುತ್ತಿದೆಯೆಂದರೆ ಅಲ್ಲಿ ಇಬ್ಬರೂ ತಮಿಳರು ಇರುತ್ತಾರೆ. ಹಿಂದಿ ಕೇಳಿಸುತ್ತಿದೆಯೆಂದರೆ ಅಲ್ಲಿ ಒಬ್ಬ ಕನ್ನಡಿಗ ಮತ್ತು ಇನ್ನೊಬ್ಬ ತಮಿಳಿಗ. ಅಲ್ಲಿ ಇಂಗ್ಲಿಷ್‌ ಕೇಳಿಸುತ್ತಿದೆಯೆಂದರೆ ಅವರಿಬ್ಬರೂ ಕನ್ನಡಿಗರಾಗಿರುತ್ತಾರೆ’ 

ಇತ್ತೀಚೆಗೆ ಆರಮನೆ ಮೈದಾನದಲ್ಲಿ ನಡೆದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಉತ್ಸವದಲ್ಲಿ ನಾನೂ ಸಹ ಭಾಗವಹಿಸಿದ್ದೆ. ಅಲ್ಲಿನ ಒಂದು ಕನ್ನಡ ಪುಸ್ತಕ ಮಾರಾಟ ಮಾಡುವ ಮಳಿಗೆಯನ್ನು ಪ್ರವೇಶಿಸಿ ಕನ್ನಡ ಪುಸ್ತಕಗಳ ಮಾರಾಟ ಹೇಗೆ ಎಂದು ಕೇಳಿದಾಗ ಆತ-‘ಏನು ಹೇಳಲಿ ಸಾರ್‌, ಈ ಉತ್ಸವದ ಬಗ್ಗೆ ಸಂಘಟಕರು ಸರಿಯಾದ ಪ್ರಚಾರ ಮಾಡಿಲ್ಲ. ಅಲ್ಲದೆ ನಮ್ಮ ಕನ್ನಡ ಪುಸ್ತಕ ಮಾರಾಟ ಮಳಿಗೆಗಳಿಗೆ ಭೇಟಿ ಕೊಡುವವರೂ ಕಮ್ಮಿ, ಕೊಟ್ಟರೂ ಕನ್ನಡ ಪುಸ್ತಕ ಕೊಳ್ಳುವರು ಯಾರೂ ಇಲ್ಲ. ಅಲ್ಲಿ ನೋಡಿ ಆ ಇಂಗ್ಲಿಷ್‌ ಪುಸ್ತಕಗಳ ವ್ಯಾಪಾರ. ನಾವು ಈ ಮಳಿಗೆಗೆ ಕೊಡುವ ಬಾಡಿಗೆ ಸಹ ಗಿಟ್ಟುವುದಿಲ್ಲ. ಇನ್ನು ನಿಮ್ಮಂಥವರು ರಿಯಾಯಿತಿಯನ್ನು ಕೇಳುವಿರಿ. ಹೇಗೆ ಸಾರ್‌ ಡಿಸ್ಕೌಂಟ್‌ ಕೊಡಲು ಮನಸ್ಸು ಬರುತ್ತದೆ. ಆದಕ್ಕೆ ಮುಂದಿನ ಬಾರಿ ಈ ಉತ್ಸವದಲ್ಲಿ ಭಾಗವಹಿಸಬಾರದೆಂದು ನಿರ್ಧರಿಸಿದ್ದೇನೆ’ ಇದು ನಿಜವೇ ಸರಿ.

ನಮ್ಮ ಜನರು ಇಂಗ್ಲಿಷ್‌ ಪುಸ್ತಕಗಳನ್ನು ಮನೆಯ ಕಪಾಟುಗಳಲ್ಲಿ ಹೊಂದಿರುವುದೇ ಪುಣ್ಯದ ಕೆಲಸ ಮತ್ತು ಅದು ನಮ್ಮ ಯುವ ಪೀಳಿಗೆಗೆ ಉತ್ತಮ ಭವಿಷ್ಯವನ್ನು ಕೊಡುತ್ತದೆ ಎಂದು ತಿಳಿದಿರುವರು. ಇನ್ನು ಯಾವುದೇ ಇಂಗ್ಲಿಷ್‌ ಪುಸ್ತಕಗಳು ಬಿಡುಗಡೆಯಾದರೆ, ಭಾರೀ ಪ್ರಚಾರ ಮತ್ತು ಭಾರೀ ರಿಯಾಯಿತಿಯ ನಡುವೆ ಅಂಗಡಿಗಳು ವಿಶೇಷವಾಗಿ ರಾತ್ರಿಯಿಡೀ ತೆರೆದಿದ್ದು ಎಲ್ಲಾ ಆಂಗ್ಲ ಪ್ರಿಯರಿಗೆ ಸಕಾಲಕ್ಕೆ ತಲುಪುತ್ತವೆ. ಅದೇ ನಮ್ಮ ಕನ್ನಡ ನಾಡಿನ ಮುಖ್ಯ ಸಾಹಿತಿಯ ಹೆಸರನ್ನು ಮತ್ತು ಆತನ ಪುಸ್ತಕಗಳ ಬಿಡುಗಡೆ ಈ ರೀತಿಯ ಭಾರೀ ಪ್ರಚಾರದಂತೆ ನವ ಓದುಗರಿಗೆ ತಿಳಿಯಲು ಸಾಧ್ಯವಿಲ್ಲ. ಇನ್ನೆಲ್ಲಿ ಕನ್ನಡ ಪ್ರಿಯರು ಬೆಳೆಯಲು ಸಾಧ್ಯ? ಇಲ್ಲಿ ಕೇವಲ ವ್ಯಾಪಾರವೇ ಬಂಡವಾಳ, ಸಂಸ್ಕೃತಿಯಲ್ಲ. ಇದು ತಲೆ ತಗ್ಗಿಸುವ ವಿಚಾರ.

ಇನ್ನು ನಮ್ಮ ಚಲನಚಿತ್ರ ಕ್ಷೇತ್ರಕ್ಕೆ ಬಂದರೆ ನಾವೇನೂ ಕಡಿಮೆಯಿಲ್ಲ . ಮೂದಲು ಕೇವಲ ನಿರ್ದೇಶಕರು ಮತ್ತು ನಾಯಕಿಯರ ಅಮದು ಆಗುತ್ತಿತ್ತು. ಈ ಪ್ರವೃತ್ತಿ ಸಾವಕಾಶವಾಗಿ ವಿಸ್ತರಿಸಿಕೊಂಡು ಕತೆ, ಗಾಯಕರು, ಸಂಗೀತ ನಿರ್ದೇಶಕರು ಮತ್ತು ಟೆಕ್ನಿಷಿಯನ್‌ಗಳನ್ನು ಕರೆಸಿಕೊಂಡು, ಕನ್ನಡ ಸಿನಿಮಾವನ್ನು ಕನ್ನಡ ನೆಲದಲ್ಲಿ ಬಿಡುಗಡೆ ಮಾಡಿ ಪುಣ್ಯವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಯಾಕೆಂದರೆ ನಮ್ಮಲ್ಲಿನ ಯುವ ಕಲಾ ಪ್ರತಿಭೆಗಳು ಇವರಿಗೆ ಭಾರೀ ದುಡ್ಡು ತರುವಂಥ ಸರಕುಗಳಲ್ಲ. ನಮ್ಮ ಕನ್ನಡ ನಾಡಿನ ಹಿಂದೆ ಬಂದಂಥ ಅತ್ಯುತ್ತಮ ಚಲನಚಿತ್ರಗಳಿಗೆ ನಮ್ಮ ಕನ್ನಡ ಕಾದಂಬರಿಗಾರರು, ಸಂಗೀತಕಾರರು, ನಟರು ಮತ್ತು ಜನತೆ ಕಾರಣ ಎಂಬುವುದನ್ನೇ ಮರೆತು ಕೀಳಾಗಿ ಕಾಣುತ್ತಿದ್ದಾರೆ. ಯಾರು ಕೇಳಬೇಕು ಇವರನ್ನು?


ಹೀಗೆ ಎಲ್ಲಾ ರಂಗಗಳನ್ನು ಹೀಗೆ ಮಾಡಿ, ಇದನ್ನು ಅಳವಡಿಸಿಕೊಳ್ಳಿ ಎಂದು ಬೆಟ್ಟು ಮಾಡಿ ತೋರಿಸಿ ಸರಿಪಡಿಸುವುದು ಎಷ್ಟರ ಮಟ್ಟಿಗೆ ಸರಿ. ನಮ್ಮ ನಾಡಿನ ಎಲ್ಲರೂ ಸಹ ಅವಕಾಶವನ್ನು ಕೊಟ್ಟರೆ ಬೇರೆಯವರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂದು ಮಾಡಿ ತೋರಿಸುತ್ತಾರೆ. ಅದಕ್ಕೆ ಸ್ವಲ್ಪ ಅಸಕ್ತಿ ಮತ್ತು ಪ್ರೀತಿ ಮುಖ್ಯ.

ಹೀಗಾಗಬಾರದು ನಾವು ನಮ್ಮ ಭಾಷೆಯನ್ನು ಎದೆಯುಬ್ಬಿಸಿ ಮಾತನಾಡಬೇಕು. ನಮ್ಮ ನಡುವೆ ಬದುಕುತ್ತಿರುವ ಬೇರೆ ಭಾಷೆಯ ಎಲ್ಲ ಜನರು ತಮ್ಮ ನಡುವೆ ತಮ್ಮ ಮಾತೃ ಭಾಷೆಯಲ್ಲಿಯೆ ರಾಜಾರೋಷವಾಗಿ ಮಾತಾನಾಡಿದರೆ ನಾವೇಕೆ ಮಾತಾನಾಡಲು ಸಾಧ್ಯವಿಲ್ಲ ಹೇಳಿ? ನಾವೇ ನಮ್ಮ ಭಾಷೆಯ ಬಗ್ಗೆ ನಮ್ಮಲ್ಲಿ ಹೆಮ್ಮೆಯನ್ನು ಪಡದಿದ್ದರೆ ಅವರಾದರೂ ಹೇಗೆ ತಾನೆ ಗೌರವವನ್ನು ಕೊಡಲು ಮತ್ತು ಭಾಷೆ ಕಲಿಯಲು ಅಸಕ್ತಿ ತೋರಲು ಸಾಧ್ಯ?

ಪರರ ಆಕ್ರಮಣ ಪುರಾತನ ಕಾಲದಿಂದಲೂ ನಡೆದಿರುವುದು ಸರ್ವೇಸಾಮಾನ್ಯ. ಇಂದೂ ಈ ರೀತಿಯ ಆಕ್ರಮಣಗಳು ಇವೆ. ಆದಕ್ಕೆ ಎಲ್ಲರೂ ಒಗ್ಗಟ್ಟಿನಿಂದ ತಮ್ಮ ತಮ್ಮಲ್ಲಿಯೇ ಸಂಕಲ್ಪ ಮಾಡಿಕೊಂಡು ಶಾಂತ ರೀತಿಯ ಕ್ರಾಂತಿಯನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ, ಇಂಥ ಹತ್ತು ಅವಮಾನಗಳಿಗೆ ಸರಿಯಾದ ಉತ್ತರವನ್ನು ನಮ್ಮ ಜನ ಸರಿಯಾದ ರೀತಿಯಲ್ಲಿ ಕೊಡುವುದರಲ್ಲಿ ಸಂಶಯವಿಲ್ಲ.

Read more at: https://kannada.oneindia.com/literature/articles/2006/180106triputa.html

ಶುಕ್ರವಾರ, ಜನವರಿ 28, 2022

ಬಿಳಿ ಹಿಮ​ ರಾಶಿಯನ್ನು ಕವಿ ಕಂಡಿದ್ದರೇ

ಇಂದು ನನಗೆ ಮೂಡೇ ಇರಲಿಲ್ಲ​.  ಇಷ್ಟು ಬೇಗ ಯಾರೂ ಎದ್ದೇಳುತ್ತಾರೆ? ಕಳೆದ ರಾತ್ರಿಯಿಡಿ ಹಿಮ​ ಮಳೆ ಇಲ್ಲಿ. 

ಹಿಮವು ತೆರೆ ತೆರೆಯಾಗಿ ಇನ್ನೂ ಬೀಳುತ್ತಲೇ ಇದೆ. ಆದರೂ ಎದ್ದೇಳಲೇ ಬೇಕು. ಮನಸ್ಸಿನ ಮನಸ್ಸಿಲ್ಲದೇ ಆಪ್ ಶೂರ್ ಕಾಲ್ ಗಾಗಿ. 

ಒಳಗೆ ಮತ್ತು ಹೊರಗೆ ಕೊರೆಯುವ ಚಳಿ ನನ್ನ​ ಕಣ್ಣು ಬಿಡಲು ಬಿಡುತ್ತಿರಲಿಲ್ಲ​. ಹಾಗೆಯೇ ಮೊಬೈಲ್ ಆಲರಾಮ್ ಕೂಗುವ ಐದು ನಿಮಿಷಕ್ಕೆ ಮೊದಲೇ ಆಪ್ ಮಾಡಿ ಬಾತ್ ರೂಮ್ ಕಡೆಗೆ ಹೋದೆ. 


ಚಕಾ ಚಕ್ ಎಂದು ಬ್ರಷ್ ಮಾಡಿದೆ. ಮುಖಕ್ಕೆ ನೀರು ಹಾಕಿಕೊಳ್ಳಲು ಬೇಜಾರು. ಕೊರೆಯುವ ತಣ್ಣೀರು. ಬಿಸಿ ನೀರು ಬರುವುದು ಹಲ್ಲುಜ್ಜಿ ಮುಖವನ್ನು ತೊಳೆದು ಮುಗಿದ ಮೇಲೆಯೇ. ತಣ್ಣೀರೇ ಒಳ್ಳೆಯದು ನಿದ್ದೆಯನ್ನು ಬಡಿದು ಎಚ್ಚರ ಮಾಡಲು. 


ಮುಖವನ್ನೊರಿಸಿಕೊಂಡು ಹಾಗೆಯೇ ಹಾಲಿಗೆ ಬಂದು ಕಿಟಿಕಿಯ ಬ್ಲೆಂಡ್ ಸರಿಸಿದೆ. ನೋಡಿದರೇ ಪೂರ್ತಿ ಸ್ವರ್ಗದಂತಹ ನೋಟ. ಹಚ್ಚ ಬಿಳಿ ಹತ್ತಿಯನ್ನರಡಿದ ರೀತಿಯಲ್ಲಿ ಬಿಳಿ ಹಿಮ​ ಮನೆ, ಕಾರು, ರೋಡ್ ಮೇಲೆ ಪೂರ್ತಿ ಬಿದ್ದಿದೆ. ಸೂರ್ಯನ ಕಿರಣವಿಲ್ಲದೇ ಹೊಳೆಯುತ್ತಿರುವ ಹಾಲು ಬಿಳುಪು ಎಲ್ಲೆಲ್ಲೂ.

ಸೂರ್ಯನಿಗೂ ಬೇಸರವಿರಬೇಕು ಈ ಕೊರೆಯುತ್ತಿರುವ ಚಳಿ ಗಾಳಿಯನ್ನು ಕಂಡು.   

ಕಿಟಕಿಯ ಕರ್ಟ್ ನ್  ಪೂರ್ತಿ ಸರಿಸದೇ ಅಡುಗೆ ಮನೆಗೆ ಹೋಗಿ ನೀರನ್ನು ಬಿಸಿ ಮಾಡಲು ಇಟ್ಟು ಲ್ಯಾಪ್ ಟಾಪ್ ಆನ್ ಮಾಡಿದೆ.  


ಹೊಸ​ ಮೇಲ್ ಗಳನ್ನು ಚೆಕ್ ಮಾಡುವ ಹೊತ್ತಿಗೆ ನೀರು ಬಿಸಿಯಾಗಿರುವಂತೆ ಕಂಡಿತು. ಅದು ಸೂಯ್ ರೂಯ್ ಎನ್ನುವ ಶಬ್ಧವೇ ಹೇಳುತ್ತಿದೆ ನಾನು ಕಾದಿದ್ದೇನೆ. 


ಲೋಟಕ್ಕೆ ಬಿಸಿ ನೀರು ತುಂಬಿಸಿಕೊಂಡು ಪುನ: ಲ್ಯಾಪ್ ಟಾಪ್ ಗೆ ಮುಖ ಮಾಡಿದೆ. ಅಪ್ ಶೂ ರ್ ಕಾಲ್ ಜಾಯನ್ ಆಗಲು. 


ಹೀಗೆ ಸ್ವಲ್ಪ ಹೊತ್ತು ಹೋದಂತಾದಾಗ ಪುನಃ ಕಿಟಿಕಿಯ ಕಡೆಗೆ ಬಂದು ತೆರೆಯನ್ನು ಸ್ವಲ್ಪ ಸರಿಸಿ ನೋಡಿದೆ. ರವಿರಾಯ​ ಸ್ವಲ್ಪ ಸ್ವಲ್ಪ ತನ್ನ ಮುಖವನ್ನು ತೋರಿಸಲು ಶುರು ಮಾಡುತ್ತಿದ್ದ​. 

ಇರಲಿ ಹೊರಗಿನ ಬೆಳಕು ಸ್ವಲ್ಪ ಬರಲಿ ಎಂದುಕೊಂಡು ಬ್ಲೆಂಡ್ ನ್ನು ಪೂರ್ತಿ ಸರಿಸಿ ಸೋಪಾ ಮೇಲೆ ಕೂತು ಮೊಬೈಲ್ ನೋಡಲು ಶುರು ಮಾಡಿದೆ. ನಿನ್ನೆಯ​ ಕೊರೋನ  ನಂಬರ್ ಏನು ಎತ್ತಾ ಕಥೆಯೆಂದು. Yahoo ನೀವ್ಸ್ ನೋಡುತ್ತಾ ನೋಡುತ್ತಾ ಆಗಲೇ ಗಂಟೆ ಎಂಟಾಗುತ್ತಿದೆ.



ಹೊರಗಡೇಯೋ ಇನ್ನೂ ಹಿಮ ಹನಿಗಳು ಬೀಳುತ್ತಲೇ ಇದೆ. ವೇದರ್ ಆಪ್ ಪ್ರಕಾರ ಇನ್ನೂ ಇದೆ ರೀತಿಯಲ್ಲಿ ಸ್ನೋ ೧೧ ರವರೆಗೆ ಬೀಳುವುದಂತೆ. 

ಮನೆಯ ಹೊರಗಂತೂ ಪೂರಾ ನಿಶಬ್ಧ. ಕೊರೋನಾ ಬಂದ ಮೇಲೆ ಮನೆಯ ಮುಂದೆ ನಿಂತಿರುವ ಕಾರುಗಳು ದೂಸ್ರಾ ಕದಲುವುದಿಲ್ಲ​. ಯಾರೂ ಯಾಕೆ ಸುಖ ಸುಮ್ಮ​ನೇ ಈ ಕೊರೆಯುವ ಚಳಿ ಹಿಮದಲ್ಲಿ ಎದ್ದು ಕಾರುಗಳನ್ನು ತೆಗೆಯುತ್ತಾರೆ. ಈಗ ಇಲ್ಲಿ ಮನೆಯಿಂದಲೇ ಎಲ್ಲಾ ಕೆಲಸ ಮಾಡುತ್ತಿದ್ದಾರೆ.  

ಬರೀ ಶಾಲೆಗೆ ಹೋಗುವ ಮಕ್ಕಳು ಮಾತ್ರ ೮.೩೦ಕ್ಕೆ ಶಾಲೆಗಳಿಗೆ ಹೋಗುವುದು ಮಾತ್ರ​ ಕಾಣಿಸುವುದು. 

ಕೋರೋನಾ ಎಲ್ಲೇಲ್ಲಿಯೂ ತಾರಕ​ಕ್ಕೆ ಏರಿದ್ದರೂ ಪಾಪ ಮಕ್ಕಳಿಗೆ ರಜಾ ಮಾತ್ರ ಇಲ್ಲ​!!  

ನನಗೆ ಬ್ರೇಕ್ ಪಾಸ್ಟ್ ಏನೂ ಮಾಡಲಿ ಎಂಬುದೇ ಚಿಂತೆ. ಇದು ಒಂದೇ ಅಲ್ಲಾ..ಹೀಗೆ ಹತ್ತು ಹಲವು ಪ್ರಶ್ನೆಗಳು ಒಮ್ಮೆಲೇ ಮತ್ತು ಆಗಾಗ್ಗೆ ಬರುತ್ತವೆ. ಈಗ ಈ ಒಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳೋಣವೆಂದುಕೊಂಡು ಮನಸ್ಸಿನಲ್ಲಿಯೇ ನಿರ್ಧರಿಸಿದೆ. 

ಹೊರಗೆ ಹೋಗಿ ಹೋಟೆಲ್ ನಿಂದ ಏನಾದರೂ ತರಲೇ. ಅಲ್ಲಿಂದ ಹೆಚ್ಚಿಗೆ ಏನಾದರೂ ತಂದರೇ ಮಧ್ಯಾನ ಮತ್ತು ಸಂಜೆಗೂ ಸರಿ ಹೋಗಿ ಈ ದಿನದ ಹೊಟ್ಟೆಯ ವಿಷಯಕ್ಕೆ ಉತ್ತರವಾಗುವುದು.

ಯಾರೂ ಮತ್ತೆ ತಿಂಡಿ ತೀರ್ಥ ತಯಾರಿಸುವುದೆಂದು. 


ಆದರೇ ಹೊರಗೆ ಹೋಗುವುದು ಎಂದರೇ ಮತ್ತೆ ಸಮಸ್ಯೆಗಳ ಸರಮಾಲೆ. ಈ ಚಳಿ, ಸ್ನೋ ಗಳಿಂದ ನನ್ನ ಕಾರು ಆನ್ ಆಗುವುದಿಲ್ಲ​. ಅದಕ್ಕೆ ಜಂಪ್ ಸ್ಟಾಟರ್ ಹಾಕಬೇಕು. ಸ್ನೋ ಕ್ಲೀನ್ ಮಾಡಬೇಕು. ಬೇಡಪ್ಪಾ ಬೇಡ. ಈ ಎಲ್ಲಾ ಕೆಲಸಗಳನ್ನು ಕೊರೆಯುವ ಚಳಿಯಲ್ಲಿ ನಿಂತು ನಾನೇ ಮಾಡಬೇಕು. 


ಅದರೂ ಚಟುವಟಿಕೆಯಿಂದ ಇರಬೇಕು ಎಂಬ ದೃಢ ನಿರ್ಧಾರದಿಂದ ಆಗಿದ್ದಾಗಲಿ ಎಂದು ಯುದ್ಧಕ್ಕೆ ತಯಾರಾಗುವ ರೀತಿಯಲ್ಲಿ  ಜಾಕೇಟ್, ಬೂಟ್ಸ್, ಗ್ಲೌಸ್, ಕ್ಯಾಪ್ ಎಲ್ಲಾ ಧರಿಸಿ ಕಾರ್ ಕೀ ತೆಗೆದುಕೊಂಡು ಹೋರಟೆ.


ನಾನು ಎಷ್ಟು ಸೋಮಾರಿ ಎಂಬುದು ನಿತ್ಯ ಮುಂಜಾನೆ ಎದ್ದು ಈ ಚುಮು ಚುಮು ಚಳಿಯಲ್ಲೆದ್ದು ಶಾಲೆಗೆ ಹೋಗುವ ಇಲ್ಲಿನ ಮಕ್ಕಳನ್ನು ಕಂಡಾಗ ಅನಿಸಿತು. 

ಅವರೇ ಗ್ರೇಟ್ ಸಹ​. 

ಆದರೇ ಕಳೆದ ಈ ಎರಡು ವರುಷದಿಂದ ವರ್ಕ್ ಪ್ರಮ್ ಹೋಮ್ ಕೆಲಸ ಮಾಡುವ ಹೈದರನ್ನೆಲ್ಲಾ ಸ್ವಲ್ಪ ಮಟ್ಟಿಗೆ ಸೋಮಾರಿಗಳನ್ನಾಗಿ ಮಾಡಿರುವುದಂತೂ ದಿಟ​.


ನಾನು ಮುಂಬಾಗಿಲನ್ನು ಲಾಕ್ ಮಾಡಿ  ಆಪಾರ್ಟ್ ಮೆಂಟ್ ಕಾಮನ್ ಏರಿಯದಲ್ಲಿ ನಿಂತಾಗ ಸ್ವಲ್ಪ ಸ್ವಲ್ಪ ಚಳಿಯ ಸ್ಪರ್ಶವಾಯಿತು. ಆದರೂ ಪುನಃ ಮಕ್ಕಳ ಮುಖ ನೆನಪಾಗಿ ಲೇಟ್ಸ್ ಸ್ಟೇಪ್ ಔಟ್ ಎಂದು ಮೈನ್ ಡೋರ್ ತೆಗೆದು ಬಿದ್ದಿರುವ ಬಿಳಿ ಹಿಮದ​ ಮೇಲೆ ನನ್ನ​ ಶೋ ಇರಿಸಿದಾಗ ರೋಮಾಂಚನವಾಯಿತು. 

ಮೊದಲ ವರುಷದ ಮೊದಲ ಸ್ನೋ ಶವರ್! ಹಾಗೆಯೇ ನನ್ನ​ ಕಾರ್ ನ್ನು ಕಂಡು ಇನ್ನೂ ರೋಮಾಂಚನವಾಯಿತು.  ಕಾರ್ ಪೂರ್ತಿ ಹತ್ತಿಯನ್ನೇ ಹೊದ್ದುಕೊಂಡು ಬೆಚ್ಚಗೆ ಮಲಗಿದ ರೀತಿಯಲ್ಲಿತ್ತು. 

ಉಫ್ ಸುತ್ತಲಿನ ನೋಟ ತುಂಬಾನೇ ಚೆನ್ನಾಗಿತ್ತು. 


ಕೆಲವು ಮನೆಗಳಲ್ಲಿ ಕಿಟಕಿಗಳನ್ನೇ ಇನ್ನೂ ತೆರೆದಿರಲ್ಲಿಲ್ಲ​. ಕೆಲವರಂತೂ ಇನ್ನೂ ಮಲಗಿರಲೇಬೇಕು. ಈ ಕೊರೆಯುವ ಚಳಿ ಜನಗಳನ್ನು ಇನ್ನೂ ಹೆಚ್ಚು ಮಲಗುವಂತೆ ಮಾಡುತ್ತದೆ. ಬೆಚ್ಚಗೆ ಮಲಗುವ ಮಜಾವನ್ನು ಯಾರು ತಾನೇ ಕಳೆದುಕೊಳ್ಳುತ್ತಾರೆ ಅಲ್ಲಾವಾ? ನನಗೂ ಹಾಗೆಯೇ ಅನಿಸುತ್ತೇ. ವಿಕೇಂಡ್ ನಲ್ಲಿ ಚೆನ್ನಾಗಿ ಮಲಗಬೇಕೆಂದು.


ಮಲ್ಲಿಗೆಯಂತೆ ಬಿದ್ದಿರುವ​ ಈ ಹಿಮ ರಾಶಿಯನ್ನು ಕವಿ ಕಂಡಿದ್ದರೇ ಸುಂದರವಾದ ಕಾವ್ಯವನ್ನೇ ರಚಿಸಿಬಿಟ್ಟಿರುತ್ತಿದ್ದ ಅನಿಸುತ್ತದೆ. ಅಷ್ಟರ ಮಟ್ಟಿಗೆ ಸುಂದರವಾಗಿತ್ತು. ನಾನೂ ಸಹ​ ಇರಲಿ ಎಂದು ಕೊಂಡು ನನ್ನ ಮೊಬೈಲ್ ಕ್ಯಾಮರದಲ್ಲಿ ಹಿಮ ಸೌಂದರ್ಯವನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತ ಕೆಲವು ಪೋಟೋ ತೆಗೆದುಕೊಂಡು ನನಗೆ ನಾನೇ ಬೇಷ್ ಅಂದುಕೊಂಡು ಕಾರಿನ ಮೇಲಿರುವ ಹಿಮವನ್ನು ಕ್ಲೀನ್ ಮಾಡಲು ತಯರಾದೇ...