ಭಾನುವಾರ, ಡಿಸೆಂಬರ್ 15, 2013

ಪ್ರೀತಿಯ ಆಕರ್ಷಣೆಯ

ಪ್ರೀತಿ ಮಾಯೆ ಎಂದು ಹೇಳುತ್ತಾರೆ. ಅದಂತೂ ನಿಜವೆನಿಸಿಬಿಟ್ಟಿದೆ.ಅದು ಯಾವ ಸಮಯದಲ್ಲಿ ಹೇಗೆಲ್ಲಾ ಸಂಭವಿಸುತ್ತದೋ ದೇವರಿಗೆ ಮಾತ್ರ ಗೊತ್ತು. ಪ್ರೀತಿ, ಪ್ರೇಮ ಎಂಬ ಜಾಲದಲ್ಲಿ ನಾನು ಎಂದಿಗೂ ನನಗೆ ತಿಳಿದ ಮಟ್ಟಕ್ಕೆ ಬೀಳಲೇ ಬಾರದು ಎಂದು ಶತ ಶತ ಶಪಥ ಮಾಡಿದ್ದೇನು.ಯಾರದರೂ ಸ್ನೇಹಿತರು ಹುಡುಗಿಯರು, ಪ್ರೀತಿಗೀತಿ ಎಂದು ಮಾತನ್ನಾರಂಭಿಸಿದರೇ ಓ ಶುರುವಾಯಿತು ಇವನ ಪುರಾಣ ಎಂದು ನಿತ್ಯ ಮೂಗು ಮುರಿದಿದ್ದೇನು.

ಇನ್ನೂ ನನ್ನನ್ನು ತಿಳಿದವರೆಲ್ಲಾ ಈ ಪ್ರಾಣಿಗೆ ಪ್ರೀತಿ, ಸ್ನೇಹ, ಹುಡುಗಿಯರು ಈ ಪದಗಳ ಅರ್ಥವೇ ಗೊತ್ತಿಲ್ಲ ಬಿಡ್ರೋ ಎಂದು ನನ್ನನ್ನು ನನ್ನ ಗೆಳೆಯರ ಸರ್ಕಲ್ ನಲ್ಲಿ ಬೇರೊಂದು ಗ್ರಹದಿಂದ ಬಂದವನಂತೆ ಕಾಣುತ್ತಿದ್ದರು. ಆದರೂ ನನಗಂತೂ ಎಂದಿಗೂ ಆ ಸಮಯಕ್ಕೆ ಬೇಜಾರು ಆಗುತ್ತಿರಲಿಲ್ಲ. ನನಗೆ ನನ್ನಲ್ಲಿಯೇ ಖುಷಿಯಾಗುತ್ತಿತ್ತು.  ನನ್ನನ್ನು ನನ್ನ ಗೆಳೆಯರೆಲ್ಲಾ ಹೀಗೆ ಗುರುತಿಸುತ್ತಿದ್ದರಲ್ಲಾ! ಎಂಬ ಸಂತೋಷ ಒಂದು ಕಡೆಯಾದರೇ.. ಅಂತೂ ಆ ಸಿನಿಮಾದಲ್ಲಿ ತೋರಿಸುವ ಪ್ರೀತಿ, ಆ ನೋವು, ಆ ಹುಡುಗಿಯರು ಹೇಳುವಂತೆ ಕೇಳುವುದು, ಅವರಿಗಾಗಿ ಬದುಕುವುದು, ಅವರಿಗಾಗಿ ಅಲ್ಲಿ ಅಲ್ಲಿ ತಿರುಗಾಡುವುದು ಏನೊಂದು ಇಲ್ಲದೇ ನನಗೆ ನಾನೇ ರಾಜನು ಅನಿಸಿಬಿಟ್ಟಿತ್ತು.

ನನ್ನ ಕಿವಿಗೆ ಅಲ್ಲಿ ಇಲ್ಲಿಂದ ಆಗಾಗ ಸ್ನೇಹಿತರ ಪ್ರೇಮ ಕಥೆಗಳು ಬಿದ್ದಾಗ.. ಅವರ ಪಲಿತಾಂಶಕ್ಕಿಂತ, ಅವರುಗಳು ಹೇಗಲ್ಲಾ ಹುಡುಗಿಯರನ್ನು ತಮ್ಮ ಕಡೆ ಸೆಳೆಯಲ್ಲು ಮಾಡುತ್ತಿದ್ದ ಕಸರತ್ತುಗಳು, ಅವರಿಗಾಗಿ ಕಾಲೇಜು ಕ್ಯಾಂಪಸ್ ಗಳಲ್ಲಿ ತಮ್ಮ ಅಮೊಲ್ಯವಾದ ಕ್ಷಣಗಳನ್ನು ವ್ಯರ್ಥ ಮಾಡಿಕೊಂಡು ಪರಿತಪಿಸುವ ಮಾತುಗಳು ಕರ್ಣಾನಂದವಾಗುತ್ತಿತ್ತು. ಮನದಲ್ಲಿಯೇ ಮಕ್ಕಳಿಗೆ ಹೀಗೆ ಆಗಬೇಕು. ಈಗಲೇ ಅದು ಎಲ್ಲಿಂದ ಲವ್ ಮತ್ತು ಪ್ರೀತಿಯ ಆಕರ್ಷಣೆಯ ಸೆರೆಗೆ ಬಿದ್ದು ಬಿಳುತ್ತಿದ್ದರಲ್ಲಾಪ್ಪಾ ಎಂದು ಆಶ್ಚರ್ಯಪಡುತ್ತಿದ್ದೆ. ಹಾಗೆಯೇ ನಿಜವಾಗಿಯೂ ಈ ಪ್ರೀತಿ ಸಿನಿಮಾ ಕಥೆಗಳಲ್ಲಿ ವರ್ಣಿಸಿದ ರೀತಿಯಲ್ಲಿ ಆಕಸ್ಮಿಕವಾಗಿ ಹೀಗೆ ಪ್ರತಿಯೊಬ್ಬರಿಗೂ ತನ್ನೊಳಗೆ ಸೆಳೆದುಕೊಳ್ಳುತ್ತದೆಯೇ.. ಯಾಕೆ ನನಗೆ ಒಮ್ಮೆಯೂ ಆ ರೀತಿಯ ಅನುಭವವೇ ಆಗಿಲ್ಲ. ಯಾಕೆ ಯಾರೊಬ್ಬರೂ ನನ್ನ ಮನವನ್ನು ಮೆಚ್ಚುವಂತೆ ನನ್ನ ಮುಂದೆ ನಿಂತಿಲ್ಲ. ಯಾಕೆ ಕ್ಯಾಂಪಸ್ ನಲ್ಲಿಯ ಒಬ್ಬಳೇ ಒಬ್ಬಳಾದರೂ ಯಾವ ರೀತಿಯಲ್ಲಿಯಾದರೂ ನನಗೆ ಹಿಡಿಸಿಲ್ಲ ಎಂದು ಚಿಕ್ಕದಾಗಿ ಮನಸ್ಸಿಗೆ ಬರುತ್ತಿತ್ತು. ಆದರೂ ಅದರ ಬಗ್ಗೆಯೇ ಹೆಚ್ಚು ತಲೆ ಕೆಡಿಸಿಕೊಳ್ಳಬೇಕೆಂಬ ಆಸೆಗಿಂತ ಕಾಲೇಜು, ಕ್ಲಾಸ್, ಸಿಲಬಸ್ ಎಂಬ ತಲೆ ನೋವೆ ಜಾಸ್ತಿಯಾಗಿಬಿಡುತ್ತಿತ್ತು. ಪರೀಕ್ಷೆ ತಯಾರಿ ಇತ್ಯಾದಿಯಲ್ಲಿ ನನ್ನೇಲ್ಲಾ ಸಮಯವನ್ನು ಕಳೆದು ಬಿಟ್ಟೆ ಎಂದು ಅಂದು ಆ ಹುಡುಗಿ ಸಿಕ್ಕಿದ ದಿನವೇ ಅನಿಸಿದ್ದು.

ಅದು ಆಕಸ್ಮಿಕವೇ.. ಅಥವಾ ಅದೃಷ್ಟವೋ ಗೊತ್ತಿಲ್ಲ. ಇಂಜಿನಿಯರ್ ಕೊನೆಯ ವರುಷ, ಕೊನೆಯ ದಿನ.. ಅಂದು ಕಾಲೇಜಿನಲ್ಲಿ ಕಾಲೇಜೆ ಮದುವಣಗೀತ್ತಿಯಂತೆ ಶೃಂಗಾರಗೊಂಡಿತ್ತು. ನನಗೋ ಮನದಲ್ಲಿಯೇ ಬೇಸರ ನಾಲ್ಕು ವರುಷದ ಪ್ರೀತಿಯ ಕಾಲೇಜಿನ ಓಡನಾಟಕ್ಕೆ ಕೊನೆ ಇಂದು. ನಾಳೆ ಇಲ್ಲಿಗೆ ಪುನಃ ಬರಲಾರೇನು. ಬಂದರು ಅದೇ ಪ್ರೀತಿಯ ತರಗತಿ, ಪಾಠ, ಹಿಂದಿನ ಬೆಂಚು, ಲೆಕ್ಚರ್ ಇವರುಗಳನ್ನೆಲ್ಲಾ ಕಾಣಲಾರೇನು. ಮುಂದಿನ ಎರಡು ತಿಂಗಳಾದ ಮೇಲೆ ಬೆಂಗಳೂರು ಪಯಣ ಕೆಲಸದ ಹುಡುಕಾಟ ನೆನಸಿಕೊಂಡರೇ ಮೈ ಜುಂ ಎಂದಿತು. ಆದರೂ ಇಂದು ತರಗತಿಯ ಎಲ್ಲಾ ವಿದ್ಯಾರ್ಥಿಗಳ ಗ್ರೂಪ್ ಪೋಟೋ ಸೆಷನ್, ಅದ್ದರಿಂದ ಇದ್ದುದರಲ್ಲಿಯೇ ಒಳ್ಳೆಯ ಬಿಳಿ ಶರ್ಟ ಹಾಕಿಕೊಂಡು, ನಾಲ್ಕು ವರುಷಗಳಲ್ಲಿ ಎಂದೂ ಇನ್ ಶರ್ಟ್ ಮಾಡಿಕೊಳ್ಳದವನು ಅಂದು ಗೆಳೆಯರ ಒತ್ತಾಯಕ್ಕಾಗಿ ಮಾಡಿಕೊಂಡು ಅರ್ಧ ಖುಷಿ, ಅರ್ಧ ಭಯದಿಂದ ಹೊರಟಿದ್ದೆ.

ಅಂದು ಯಾಕೊ ಏನನ್ನೋ ಕಳೆದಕೊಂಡ ಅನುಭವ.. ನಾಲ್ಕು ವರುಷ ಅಲ್ಲಿ ಆ ಜಾಗದಲ್ಲಿಯೇ ಕಾಲೇಜು ಬಸ್ಸಿಗಾಗಿ ಮುಂಜಾನೇ ಸರಿಯಾಗಿ ೬.೪೫ಕ್ಕೆ ಬಂದು ಕಾಯುತ್ತಿದ್ದ ಜಾಗವನ್ನು ಪುನಃ ಇಲ್ಲಿ ನಾಳೆ ನಿಲ್ಲಲಾರೆನು ಎಂಬ ಭಯದಲ್ಲಿ ನಿಂತು ಪುನಃ ಪುನಃ ನೋಡಿದ್ದೇನೂ. ಹುಡುಗರು ಒಂದು ಕಡೆ ನಿಲ್ಲುವುದು, ಹುಡುಗಿಯರು ಒಂದು ಕಡೆ ನಿಲ್ಲುವುದು ನಮ್ಮಲ್ಲಿನ ವಾಡಿಕೆ.. ನಾವು ನಿಲ್ಲುವ ಕಡೆ ಆ ಹುಡುಗಿಯರು ಯಾಕೋ ಎಂದು ಬಂದು ನಿಂತಿಲ್ಲ. ಅದು ಯಾಕೆ ಎಂದು ನಾನಾಗಲಿ ನಮ್ಮಲ್ಲಿನ ಯಾರೊಬ್ಬರೂ ಎಂದು ಕೇಳಿಕೊಂಡಿದ್ದಿಲ್ಲ. ಬಸ್ ಬಂದಾಗ ನಾವುಗಳು ಅವರು ನಿಂತಿರುವ ಜಾಗಕ್ಕೆ ಹೋಗಿ ಹಿಂದಿನ ಡೋರ್ ನಲ್ಲಿ ಬಸ್ ಹತ್ತುತ್ತಿದ್ದೇವು. ಹುಡುಗಿಯರು ಮುಂದಿನ ಡೋರ್ ನಲ್ಲಿ ಹತ್ತುತ್ತಿದ್ದರು. ಈ ಪರಿಪಾಟ ಯಾಂತ್ರಿಕತೆಯಲ್ಲಿ ಸಾಗುತ್ತಿತ್ತು.  ಅಂದು ಯಾಕೋ ಬಸ್ ಬೇಗ ಬಂದುಬಿಡುತ್ತೇನೋ ಎಂಬ ಭಯ ಸಂಕೋಚ ಕೊಂಚ ಲೇಟ್ ಆಗಿ ಬಂದಿದರೇ ಸಾಕು ಎಂಬ ಕೋರಿಕೆ.

ಇಂದು ಆ ಕಡೆಯ ಹುಡುಗಿಯರು ನಿಲ್ಲುವ ಜಾಗದ ದೃಶ್ಯ ಸಂಪೂರ್ಣ ವರ್ಣಮಯವಾಗಿತ್ತು. ಇವರುಗಳು ನಮ್ಮ ಕಾಲೇಜು, ನಮ್ಮ ಕ್ಲಾಸ್ ನವರ ಎಂಬ ರೀತಿಯಲ್ಲಿ ಪ್ರತಿಯೊಬ್ಬರ ಧಿರಿಸು ಬದಲಾಗಿತ್ತು. ಪ್ರತಿಯೊಬ್ಬರೂ ಬಣ್ಣ ಬಣ್ಣದ ಸೀರೆಗಳನ್ನು ಉಟ್ಟುಕೊಂಡು ಬಂದಿದ್ದರೂ. ಮುಖಗಳು ಸಹ ಹೆಚ್ಚು ಸುಂದರವಾಗಿಯೇ ಕಂಡವು. ನಾನು ಹೊಸದಾಗಿ ನೋಡುತ್ತಿದ್ದೇನೋ ಎಂಬ ರೀತಿಯಲ್ಲಿ ನೋಡಿದೆ. ನನ್ನ ತರಗತಿಯ ಹುಡುಗಿಯರನ್ನು ಹೊಸದಾಗಿ ನೋಡುವಂತೆ ನೋಡಿದೆ. ಅಯ್ಯೋ ಇಷ್ಟೊಂದು ಚೆನ್ನಾಗಿದ್ದಾರಲ್ಲಾ ಎಂದು ಮನದಲ್ಲಿಯೇ ಅಂದುಕೊಂಡೇ ಅಷ್ಟೊತ್ತಿಗೆ ಬಸ್ ಬಂತು.. ಎಲ್ಲರೂ ಸಡಗರದಲ್ಲಿ ಬಸ್ ಹತ್ತಿ ಕಾಲೇಜಿಗೆ ಬಂದೆವು.

ಪ್ರತಿಯೊಬ್ಬರೂ ತಮ್ಮ ತಮ್ಮ ಸ್ಲ್ಯಾಮ್ ಪುಸ್ತಕದಲ್ಲಿ ತಮ್ಮ ತಮ್ಮ ಕಾಂಟ್ಯಾಕ್ಟ್ ಗಳನ್ನು ವಿನಿಮಯ ಮಾಡಿಕೊಂಡು ಟಚ್ ಲ್ಲಿ ಇರ್ರೀ ಎಂದು ಹೇಳುತ್ತಾ ಹೇಳುತ್ತಾ ಕೊನೆಯ ಕಾರ್ಯಕ್ರಮ ಪೋಟೋ ಸೇಷನ್ ಗೆ ಕಾಯುತ್ತಿರುವಾಗ.. ಅದು ಏನೂ ಮಾಯೆಯೋ ಮರುಳೋ.. ಇಂಪಾದ ದ್ವನಿಯೊಂದು ನನ್ನ ಹೆಸರನ್ನು ಕರೆದಂತಾಯಿತು... ನಾನು ನನ್ನ ಸ್ನೇಹಿತರೊಡನೆ ಅದು ಇದು ಮುಂದೆ ಹೇಗೆ ಏನೂ ಎಂದು ಕೊಳ್ಳುತ್ತಾ ನಗುತ್ತಿರುವಾಗ ನನ್ನ ಹೆಸರು ಮುದ್ದಾದ ದ್ವನಿಯಲ್ಲಿ ಬಂದಿದ್ದು ನನಗೆ ಮಾತ್ರವಲ್ಲಾ.. ಅಲ್ಲಿನ ಎಲ್ಲಾ ಹುಡುಗರಿಗೂ ಅಚ್ಚರಿಯಾಯಿತು. ನಾನು ಸಂಕೋಚದಲ್ಲಿ ಹಿಂದೆ ತಿರುಗಿದಾಗ ನನ್ನ ಕಣ್ಣನ್ನೇ ನಾನು ನಂಬದಂತಾಗಿದ್ದೆ. ಅವಳು ನಾನು ಅಷ್ಟೇನೂ ಜಾಸ್ತಿ ಗಮನಿಸಿದ್ದಿರಲಿಲ್ಲ. ಯಾಕೆಂದರೇ ಅವಳು ನನ್ನ ತರಗತಿಯವಳಲ್ಲಾ.. ಅವಳು ಕಂಪ್ಯೂಟರ್ ಸೈನ್ಸ್ ಬ್ರಾಂಚಿನವಳು. ಆದರೂ ಅವಳಿಗೆ ಯಾಕಪ್ಪಾ ನನ್ನ ಹೆಸರು ಎಂಬ ಭಯದಲ್ಲಿ ಪ್ರಶ್ನೇ ಮಾಡುವ ರೀತಿಯಲ್ಲಿ ಮುಖ ಕೊಟ್ಟಾಗ ಸ್ವಲ್ಪ ಬರುತ್ತಿರಾ ಎಂದಾಗ ನಾಲ್ಕು ಹೆಜ್ಜೆ ಅವಳ ಜೊತೆಯಲ್ಲಿ ಅನುಮಾನದಲ್ಲಿ ಹಿಂದಕ್ಕೆ ಹೋದಾಗ. ನನ್ನ ಸ್ನೇಹಿತರೆಲ್ಲಾ ನನ್ನನ್ನು ಅವಳನ್ನು ಬಿಟ್ಟ ಕಣ್ಣು ಬಿಟ್ಟುಕೊಂಡು ಏನು? ಎಂಬಂತೆ ನನ್ನನ್ನೇ ಗುರಾಯಿಸಿದ್ದಾಗ ನನಗೆ ಏನೇನೋ ತಳಮಳ. ಅವಳ ಜೊತೆಯಲ್ಲಿ ಬಂದು ಆ ಸಂಪಿಗೆ ಮರದ ಬುಡದ ಹತ್ತಿರ ನಿಂತಾಗ ಅವಳು ಹೇಳಿದ ಆ ಒಂದೇ ಒಂದು ಮಾತು ನನ್ನ ಇಷ್ಟು ದಿನದ ಕಲ್ಪನೆಯನ್ನು ಪುಲ್ ೧೦೦ ಕೀ ಮಿ ವೇಗದಲ್ಲಿ ಜರ್ರ್ ಅಂತ ಬ್ಯಾಕ್ ಗೆ ಓಡಿಸಿದಂತಾಯಿತು.

ಅಂದು ನಾನು ನಾನಾಗಿರಲಿಲ್ಲ. ಅಂದು ಅದು ಹೇಗೆ ಮನೆ ತಲುಪಿದನೋ ದೇವರೇ ಬಲ್ಲ.. ನಾನಂತೂ ಯಾರನ್ನು ಮಾತನಾಡಿಸದೇ ನೇರವಾಗಿ ಮನೆ ತಲುಪಿದೆ... ಮನೆಗೆ ಬಂದು ಸ್ಲ್ಯಾಮ್ ಬುಕ್ ನ ಕೊನೆಯ ಎರಡನೆ ಪುಟದಲ್ಲಿದ್ದ ಅವಳು ಹೇಳಿದ  ಪೂರ್ಣ ಪಾಠವನ್ನು ಅಚ್ಚರಿಯಿಂದ ಓದಿದೆ.. ಪುನಃ ಪುನಃ ಎರಡು ಮೂರು ಸಾರಿ ಓದಿದೆ. ಯಾಕೋ ಏನೋ ಆ ರಾತ್ರಿ ಊಟ ಮಾಡುವ ಮನಸಾಗಲಿಲ್ಲ... ಅವಳ ಆ ಕೊನೆಯ ಸೆಲ್ ನಂಬರ್ ನನ್ನನ್ನು ಪುನಃ ಪುನಃ ಕಾಡುವಂತಾಯಿತು... ಬೆಳೆಕರದಿದ್ದೂ ಗೊತ್ತಗದಂತೆ ಮುಂಜಾನೆ ಹತ್ತರವರೆಗೆ ಹಾಸಿಗೆಯಲ್ಲಿಯೇ ವಿಚಿತ್ರವಾಗಿ ಮಲಗಿದ್ದೆ. ಅಪ್ಪ ಅಮ್ಮ ಮಗಾ ಅಂತೂ ನಾಲ್ಕು ವರುಷದ ಹಂಬಲದ ಇಂಜಿನಿಯರಿಂಗ್ ಮುಗಿಸಿದೆ.. ಮಲಗಲಿ ಬಿಡು ಎಂದು ಬಿಟ್ಟಿರಬೇಕು... ಯಾಕೋ ನನಗೆ ಅವಳನ್ನು ಮಾತನಾಡಿಸಬೇಕು.. ಆ ನಂಬರ್ ಗೆ ಆ ಮೊಲೆ ಅಂಗಡಿಯಲ್ಲಿರುವ ಕಾಯ್ ನ್ ಬೂತ್ ನಿಂದ ಕಾಲ್ ಮಾಡಿ ಬಿಡಲೇ ಎನ್ನುವಂತಾಗುತ್ತಿತ್ತು.

ಅಮ್ಮ ಕೊಟ್ಟ ಆ ಆರಿದ ಉಪ್ಪಿಟ್ಟು ತಿಂದು.. ಇಲ್ಲಿಯೇ ಲೈಬ್ರರಿಗೆ ಹೋಗಿಬರುತ್ತೇನೆ ಎಂದು ಹೇಳಿ ಹೋರಟೆ. ಜೇಬಿನಲ್ಲಿರುವ ಐದು ರೂಪಯಿ ಕಾಯನ್ ನ್ನು ಅಂಗಡಿಯವನಿಗೆ ಕೊಟ್ಟು ಐದು ರೂಪಯಿ ಒಂದು ಒಂದು ರೂಪಯಿ ಕಾಯನ್ ತೆಗೆದುಕೊಂಡು ಭಯದಿಂದಲೇ ಆ ಹತ್ತು ನಂಬರಗಳನ್ನು ಡಯಲ್ ಮಾಡಿದೆ... ಡಯಲ್ ಮಾಡಿದ ತಕ್ಷಣ ಕೇಳಿದ ಕಾಲ್ ರ್ ಟ್ಯೂನ್.. ’ಎಲ್ಲಿ ಜಾರಿತೋ ಈ ಮನವೂ...’ ಅಶ್ವತ್ ಸಂಗೀತ ಸಂಯೋಜನೆ ಬೆಚ್ಚನೆಯ ಹಾಡು.. ಪರವಾಗಿಲ್ಲಾ ಹುಡುಗಿಗೇ ಈ ಟೇಸ್ಟ್ ಬೇರೆ ಇದೆ ಎಂದು ಸ್ವಲ್ಪವೇ ಬಾಯಲ್ಲಿ ಉಗುಳು ನುಂಗಿಕೊಂಡೆ ಎರಡನೇ ಸಾಲಿಗೆ ಬರುವ ಹೊತ್ತಿಗೆ.. ಕಾಲ್ ರೀಸಿವ್ ಮಾಡಿದ್ದು ಅದೇ ಹುಡುಗಿ.. ದ್ವನಿಯಿಂದ ಗುರುತು ಹಿಡಿದೆ, ಆಗ ಕೊಂಚ ಸಮಾದಾನವಾಯಿತು. ಅವಳೂ ಸಹ ನನ್ನ ಪೋನ್ ಗಾಗಿ ಕಾದಿದ್ದಳು ಅನಿಸುತ್ತದೆ.

ಅಂದಿನಿಂದ ನನ್ನ ಲೈಫ್ ಸ್ಟೈಲ್ ಬದಲಾಯಿತು. ಜೀವನಕ್ಕೊಂದು ಅರ್ಥ ಸಿಗಲು ಶುರುವಾಯಿತು. ಇಷ್ಟು ದಿನ ಕಳೆದ ಬದುಕೇ ಬದುಕಲ್ಲ ಅನಿಸಿತು. ಇವಳನ್ನು ನೋಡಬೇಕು, ಮಾತನಾಡಿಸಬೇಕು, ಅವಳಿಗಾಗಿ ಏನಾದರೂ ತಂದು ಕೊಡಬೇಕು, ಅವಳ ಮಾತನ್ನು ಕಿವಿ ತುಂಬ ಕಾಯಬೇಕು, ಅವಳೇ ನಾನಾಗಬೇಕು, ಅವಳೇ ನನ್ನ ಉಸಿರು ಮಾಡಿಕೊಳ್ಳಬೇಕು.. ಎನ್ನುವಷ್ಟರ ಮಟ್ಟಿಗೆ ಈ ಹುಡುಗಿ ನನ್ನ ಪ್ರಾಣದ ಗೆಳತಿಯಾಗಿಬಿಟ್ಟಿದ್ದಳು. ಇಷ್ಟು ದಿನ ಎಲ್ಲಿ ಕಾಲೇಜು ಕ್ಯಾಂಪಸ್ ನಲ್ಲಿ ಎಲೆ ಮರೆಯ ಕಾಯಿಯಂತೆ ಇದ್ದೇ ನನ್ನ ಪ್ರೀತಿ ಎಂದು ನೂರು ಬಾರಿಯಾದರು ಅವಳನ್ನು ಕೇಳಿರಬಹುದು.

ಕಾಲಕ್ಕೆ ಮೀತಿಯಿಲ್ಲ ಅನಿಸುವಂತೆ ಅದೇ ಎಲ್ಲದನ್ನೂ ನಿರ್ಧರಿಸುವಂತೆ.. ನನ್ನ ಈ ಪ್ರೇಮ ಮಯ ಬಾಳು ಅವಳೊಂದಿಗೆ ಹೀಗೆ ನಿತ್ಯ ನೂತನವಾಗಿ ಹಚ್ಚ ಹಸಿರಾಗಿ ಸಾಗುತ್ತಲೇ ಇದೆ. ಪ್ರೇಮಿಗಳಿಗೆ ಯಾವುದು ಅಸಾಧ್ಯವೆಂಬಂತೆ ಪ್ರತಿಯೊಂದನ್ನು ಖುಷಿಯಾಗಿ ಜೀವಂತವಾಗಿ ಇಬ್ಬರೂ ಅನುಭವಿಸುತ್ತಿದ್ದೇವೆ. ಇನ್ನೂ ಏನೂ ಹೇಳುವುದು..? ನೋಡಬೇಕಷ್ಟೇ!!

ಸೋಮವಾರ, ನವೆಂಬರ್ 18, 2013

ಬೆಳೆದಂತೆ..ಬುದ್ದಿವಂತರಾದಂತೆ

ಚಿಕ್ಕ ಮನಸ್ಸಿಗೆ ಚಿಕ್ಕ ಚಿಕ್ಕ ವಿಷಯಗಳನ್ನು ಜೀರ್ಣಿಸಿಕೊಳ್ಳಲು ಸಹ ಕಷ್ಟ ಅನಿಸುತ್ತಿತ್ತು. ಚಿಕ್ಕ ಚಿಕ್ಕ ಕಸಿವಿಸಿ ಸಂದರ್ಭಗಳೇ ತಲೆ ಬಿಸಿ ಮಾಡಿಸಿಬಿಡುತ್ತಿದ್ದವು. ಚಿಕ್ಕ ಚಿಕ್ಕ ತೊಂದರೆಗಳೆ ನನ್ನ ಮನವನ್ನು ನಿತ್ಯ ಕೊರೆಯುತ್ತಿತ್ತು. ಅದನ್ನೇ ದೊಡ್ಡದಾಗಿ ಮಾಡಿಕೊಂಡು ಮನೆಮಂದಿಯನ್ನೆಲ್ಲಾ ಯೋಚನೆಯ ಕಡಲಲ್ಲಿ ಮುಳುಗೇಳಿಸುತ್ತಿದ್ದೆ. ಅಪ್ಪನೋ ನನ್ನ ಒಂದೊಂದುಯೋಚನೆಯ ಗೆರೆಗೂ ಎಷ್ಟೊಂದೂ ಕೊರಗುತ್ತಿದ್ದರು ಅಂದರೇ ಅದೇ ಅವರು ನನ್ನ ಮೇಲೆ ಇಟ್ಟುಕೊಂಡಿದ್ದ ಅಗಾಧ ಪ್ರೀತಿಯ ಧ್ಯೋತಕ ಎಂಬುದನ್ನು ಇಂದು ಇಲ್ಲಿ ಕುಳಿತು ಗಟ್ಟಿ ಮಾಡಿಕೊಳ್ಳುತ್ತಿದ್ದೇನೆ. ಅಮ್ಮನೋ ಯಾವಾಗಲೂ ನನ್ನ ಮೇಲೇ ಚೂರು ಜಾಸ್ತಿ ಪ್ರೀತಿಯ ನಿರ್ಲಕ್ಷ್ಯದ ನೋಟವಿಟ್ಟಿದ್ದಳೇನೋ. ಅದರೇ ಅಪ್ಪ ಅಂದ್ರೇ ನನಗೆ ಅಪ್ಪನೇ ನನ್ನ ಎಲ್ಲಾ ಚಿಕ್ಕ ವಯಸ್ಸಿನ ನನ್ನ ಪ್ರತಿಯೊಂದು ಏಳುಬೀಳಿನ ವಾರಸುದಾರ ಅನಿಸುತ್ತದೆ.

ಮೊದಲ ಮಗಳಾಗಿ ನನಗೆ ಇದಕ್ಕಿಂತ ಹೆಚ್ಚು ದೊರೆಯಲಾರದು ಎಂದು ಅನಿಸುತ್ತಿದೆ. ನನ್ನ ಹಠ, ನನ್ನ ದಿಟ್ಟತನ,  ನನ್ನ ಸ್ವಭಾವದ ಅಚ್ಚು ಆ ವಯಸ್ಸಿನಲ್ಲಿ ಅಷ್ಟರ ಮಟ್ಟಿಗೆ ನನ್ನಲ್ಲಿ ನೆಲೆ ನಿಂತಿತ್ತು ಅನಿಸುತ್ತದೆ. ನನಗೆ ನನ್ನದೇಯಾದ ಎಲ್ಲಾ ಸಂತೋಷ, ಸುಖಗಳ ಪಾಲು ನನ್ನದು ಮಾತ್ರ ಆಗಿರಬೇಕು.. ನನ್ನ ದುಃಖ, ನನ್ನ ಅಳು ಮನೆಯವರಿಗೆಲ್ಲಾ ಪಸರಿಸಿ ಅವರಿಂದ ನನಗೆ ನನ್ನ ಪ್ರಸ್ತುತೆಯನ್ನು ತೋರಿಸಬೇಕೆಂಬ ಆಸೆಯಾಗಿತ್ತೇನೋ.  ಆಗ ನಾನು ನನ್ನ ಸ್ವಭಾವಕ್ಕೆ ತಕ್ಕ ಮಗಳು ಎಂಬ ಒಂದು ಸಮಧಾನವಾಗುತ್ತಿತ್ತು.

ಆ ವಯಸ್ಸು ಯಾರು ಯಾರನ್ನು ಹಿಡಿದಿರಲಾರದ ವ್ಯಕ್ತಿತ್ವದ ನಿರೂಪಣೆ ಎಂದು ಇಂದು ಇಲ್ಲಿ ನನಗೆ ಅನಿಸುತ್ತಿದೆ. ಯಾಕೆ ನಾನು ಅಷ್ಟರ ಮಟ್ಟಿಗೆ ತುಂಬ ಗಟ್ಟಿಗಿತ್ತಿ ಎಂಬ ಅಪ್ಪನ ಬೀರುದಂನ್ನು ಎಲ್ಲಾರಿಗೂ ತೋರಿಸಬೇಕು, ನಮ್ಮ ಕುಟುಂಬದ, ಸಂಬಂಧಿಗಳಲ್ಲೆಲ್ಲಾ ನಾನು ತುಂಬಾನೇ ಬೇರೆಯಾದ ಹುಡುಗಿ, ಇವಳು ಅಂದ್ರೇ ಹೀಗೆ ಎಂಬ ಮಾತಿಗೆ ಜೋತುಬಿದ್ದುಬಿಟ್ಟಿದ್ದೆ. ಜೀವನ ಅನ್ನುವುದು ಹೀಗೆ ನಿತ್ಯ ಸರಾಗವಾದ ದಾರಿಯೆಂಬ ಆಶಾಭಾವನೆ ಎಲ್ಲಿಂದ ಉದ್ಭವಿಸಿತ್ತೋ ದೇವರೆ ಬಲ್ಲ.

ಬದುಕಿನ ಪಯಾಣದ ದಿಕ್ಕನ್ನು ಯಾರು ಯಾರನ್ನು ಕೇಳಿ ಬದಲಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಹಿರಿಯರ ಮಾತನ್ನೇ ದಿಕ್ಕರಿಸಿ ನಿಂತಿದ್ದು. ನನ್ನ ದೇಹ ಬೆಳವಣಿಗೆಯ ಜೊತೆಗೆ ನನ್ನಲ್ಲಿನ ತಿಳುವಳಿಕೆಯ ಚಿಗುರು ಆದ್ಯಾವ ವೇಗದಲ್ಲಿ ಹಸಿರಾಗಿತ್ತೋ ನಾನು ನಂಬಿದ ನಾ ಕಂಡ ದಾರಿಗಳೆಲ್ಲಾ ನನ್ನವೇ ಎಂಬ ಧೈರ್ಯದ ಮನೋಭಾವ ನನ್ನನ್ನು ಬೇರೊಂದು ಸ್ಥಾನದಲ್ಲಿ ಇಟ್ಟಿರಬೇಕೆನೋ ಎಂದು ಇಂದು ಅನಿಸುತ್ತಿದೆ.

ಆದರೇ ಕಾಲನ ಪರಿಭ್ರಮಣೆಗೆ ಯಾರೊಬ್ಬರೂ ಜವಾಬ್ದಾರರಲ್ಲ ಎಂದು ಇಂದು ಇಲ್ಲಿ ನನಗೆ ಅನಿಸುತ್ತಿದೆ. ಬದುಕು ನಾನು ಅಂದುಕೊಂಡಂತೆಯೆ ಸಿಕ್ಕಿಬಿಟ್ಟಿದ್ದರೇ ಆ ಬದುಕಿಗೂ ಮಹತ್ವವೆಲ್ಲಿರುತ್ತಿತ್ತು? ಅಲ್ಲವಾ. ನಾವೇ ನಮ್ಮನ್ನೂ ಕಂಡುಕೊಳ್ಳಲು ತಿಣುಕುತಿರಬೇಕಾದರೇ ನಮ್ಮಿಂದ ಎಷ್ಟೋ ದೂರವಿರುವ ಭವಿಷ್ಯತ್ ನ್ನು ಅದು ಹೇಗೆ ನಾನು ಕಂಡುಕೊಳ್ಳಲಿ?

ನನ್ನ ವ್ಯಕ್ತಿತ್ವಕ್ಕೆ ಹೊಂದುವ ಧೀರಿಸು, ನನ್ನ ವ್ಯಕ್ತಿತ್ವಕ್ಕೆ ಹೊಂದುವ ಬಣ್ಣ, ನಾನು ನಡೆದಾಡುವ ದಾರಿ ನನ್ನದೇ ಆಗಿರಬೇಕು ಎಂಬ ನನ್ನದೇ ಅನಲಾಜಿಯೆಲ್ಲಾ ಎಲ್ಲಿ ಬಿಟ್ಟು ಬಿಟ್ಟೆ ಎಂಬ ಯೋಚನೆ ಇಂದು ಇಲ್ಲಿ ಕುಳಿತು ಚಿಂತಿಸುತ್ತಿದ್ದೇನೆ. ಆದರೇ ಯಾರೊಬ್ಬರೂ ನನ್ನ ಈ ಕೊರಗಿನ ಯೋಚನೆಯ ಪಾಲುದಾರಾಗುತ್ತಿಲ್ಲವಲ್ಲಾ ಯಾಕೆ?

ನಾನು ಚಿಕ್ಕವಳಲ್ಲಾ ಎಂಬ ಧ್ಯೆರ್ಯ ನಮ್ಮಪ್ಪನಿಗಿರಬಹುದಾ? ನಾನೇನು ಮಾಡಿದರು ಸರಿಯಾಗಿಯೇ ಮಾಡುವವಳು ಎಂಬ ಪ್ರೀತಿಯ ನಿರ್ಲಕ್ಷ್ಯ ನನ್ನ ಮುದ್ದು ಅಮ್ಮನಿಗಿರಬಹುದಾ? ಯಾರೊಬ್ಬರ ನೋಟ ನನ್ನನ್ನು ಇಂದು ನನ್ನ ಮೇಲೆ ಇಲ್ಲವಾ ಎಂಬ ಕೊರಗೂ ನನಗಿರುವುದಾ? ಎಂದು ನಾನು ನೂರು ಭಾರಿ ನನ್ನನ್ನೇ ಕೇಳಿಕೊಂಡರು ಉತ್ತರವಿಲ್ಲದ ಮನಸ್ಸು ಮನಸ್ಸಿಗೆ ಕಸಿವಿಸಿಯ ನೆಮ್ಮದಿಯೇ ಇಲ್ಲವಾಗಿದೆ.

ದೊಡ್ಡವರು ನಾವುಗಳೂ ಎಂಬ ನಿರ್ಲಕ್ಷ್ಯ ಯಾಕೆ ಕುಟುಂಬ, ಸಮಾಜ, ಗೆಳತನ ಪ್ರತಿಯೊಂದರಲ್ಲೂ ಕಾಣುತ್ತಿದೆ. ಗೆದ್ದರೇ ದೂರದಿಂದ ಏನೂ ಹೇಳಲಾರದವರು.. ಸೋತರೇ ಬಾಯಿಗೆ ಬಂದಂತೆ ನನ್ನ ವ್ಯಕ್ತಿತ್ವವನ್ನೆ ಅಣುಕಿಸುವಂತೆ ಅಲ್ಲಿ ಅಲ್ಲಿಯೇ ನಿಲ್ಲುವವರು ಯಾವ ರೀತಿಯ ಆತ್ಮೀಯರು?

ಬದುಕು ಬದುಕಲಾರದಷ್ಟು ನಿಕೃಷ್ಟವಲ್ಲ ಎಂಬುದನ್ನು ನಾನು ಅಲ್ಲಿ ಇಲ್ಲಿ ನನ್ನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವ ಪ್ರಾರಂಭದಲ್ಲಿ ನಾನೇ ಕಂಡುಕೊಂಡ ಸತ್ಯವಾಗಿದ್ದರೂ.. ನಾನೇ ಯಾಕೇ ಪುನಃ ಇದು ಸಹಜ ಸತ್ಯವೇ ಅಲ್ಲವೇ ಎಂಬ ಗೊಂದಲದ ಗೊಡಾಗಿ ಹೀಗೆ ಕುಳಿತಿರುವೇನೂ..?

ಯಾವುದೇ ಅಳುಕಿಗೂ ನಿಲುಕದ ನಕ್ಷತ್ರವೆಂಬ ಬೀರದನ್ನು ಎಲ್ಲಿ ಬಿಟ್ಟುಬಿಟ್ಟೆ ಎಂಬ ಹಿಂದಿನ ದಿನಗಳೇ ನೆನಪಿಗೆ ಬಾರದಷ್ಟು ದೂರ ಸಾಗಿಬಿಟ್ಟಿದೆ. ಯಾವುದನ್ನು ಯಾವಾಗ ಯೋಚಿಸಿದರೂ ಅದು ನಮ್ಮಿಂದ ನಾವೇ ರಚಿಸಿಕೊಳ್ಳುವಂತೆಯಂತೂ ಇರುವುದಿಲ್ಲ. ಅದು ನಾವಂದುಕೊಂಡಂತೆ ಇದ್ದುಬಿಟ್ಟಿದ್ದರೆ ನಾವೆ ನಮ್ಮನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಿರುತ್ತಿತ್ತೆ? ಇಲ್ಲ ಎಂಬ ಉತ್ತರ ಇಂದು ಅನಿಸುತ್ತಿದೆ. ಅದೆ ಇಪ್ಪತ್ತು ವರುಷಗಳ ಹಿಂದೆ ಕೇಳಿದ್ದರೆ ಈ ಉತ್ತರಕ್ಕೆ ವಿರುದ್ಧವಾದ ಉತ್ತರ ಕೊಟ್ಟಿರುತ್ತಿದ್ದೇನೇನೋ.. ನಾನು ಅಂದರೆ ಹಾಗೆ ಎಂಬಂತೆ ನಾನಿದ್ದಿದ್ದು.. ನನಗೆ ನಾನೇ ಆಶ್ಚರ್ಯದಿಂದ ನೋಡುವಂತಾಗಿದೆ.

ಎಲ್ಲಾರೂ ಇದ್ದು ಯಾರು ಇಲ್ಲ ಎಂಬ ಭಾವನೆ. ಹಿಂದಿಗಿಂತ ಎಲ್ಲಾದರಲ್ಲೂ ಎಲ್ಲ ರೀತಿಯಲ್ಲಿ ಹೆಚ್ಚಾಗಿಯೇ ನನ್ನಲ್ಲಿದೆ. ಎಲ್ಲಾ ಕನಸಿನ ಮನೆಗೆ ಯಾವಾಗಲಾದರೂ ಯಾರನ್ನು ಕೇಳದೆ ಹೋಗುವಷ್ಟು ಅವಕಾಶಗಳು ನನ್ನ ಮುಂದೆ ನಿತ್ಯ ಸಿಗುತ್ತಿದೆ. ಆದರೇ ಈ ಸಮಯದಲ್ಲಿ ಇದೆಲ್ಲಾ ನಗಣ್ಯವೆನಿಸುತ್ತಿದೆ. ಅದೇ ಆ ದಿನಗಳಲ್ಲಿ ಎನೂ ಇಲ್ಲದೇ ಏನಾದರೂ ಸಾಧಿಸುವೆನೂ ಎಂಬ ಶಕ್ತಿಯ ಮೊಲ ಯಾವುದಾಗಿತ್ತು ಎಂಬಂತಾಗಿದೆ.




ಯಾಕೇ ಬದುಕು ಇಷ್ಟೊಂದು ನಿರಾಸ ಅನಿಸುತ್ತದೆ. ಸುಖವನ್ನು, ದುಃಖವನ್ನು ನನ್ನಲ್ಲಿ ನಾನೇ ಅದುಮಿಕೊಂಡು ನಾನೊಬ್ಬಳೇ ಅನುಭವಿಸಿ ನನ್ನಲ್ಲಿಯೇ ನಾನೇ ಎಲ್ಲವನ್ನೂ ಸಂಭ್ರಮಿಸಿಕೊಳ್ಳಬೇಕಾದ ಬದುಕು ಇದಾಗಿದೆ. ಯಾವುದಕ್ಕೂ ಯಾರೊಂದಿಗೆ ಮನಬಿಟ್ಟು ಯಾವ ರೀತಿಯಲ್ಲೂ ಷೇರ್ ಮಾಡಿಕೊಳ್ಳಲಾಗದ ತಳಮಳ. ಯಾರೇನೂ ಅಂದುಕೊಳ್ಳುವವರೋ ಎಂಬ ಚಿಂತೆ. ನಮ್ಮ ಬದುಕು ನಮಗೆ ಮಾತ್ರ ಮೀಸಲು ಎಂಬ ಅನುಭಾವ.

ಚಿಕ್ಕ ಚಿಕ್ಕ ವಯಸ್ಸಿನ ಆ ಸಂಭ್ರಮದ ಸೆಲೆಯೇ ಮರೆಯಾದ ಪಯಣ ಇದಾಗಿದೆ. ಬೆಳೆದಂತೆ ನಮ್ಮನ್ನು ನಾವೇ ಕಳೆದುಕೊಂಡಂತೆ. ನಮ್ಮವರೆಲ್ಲ ನಮ್ಮವರಲ್ಲ, ನಮ್ಮ ಭಾವನೆಗೆ ಬೆಳಕಲ್ಲ ಅನಿಸುವುದಕ್ಕೆ ಶುರುವಾದ ದಿನಗಳು ಯಾವಾಗ ಅನಿಸುತ್ತಿದೆ.. ಯಾಕೇ?

ನನಗೂ ಗೊತ್ತೂ ಇದು ಹುಡುಗಿಯರಿಗೆ ಮಾತ್ರ, ಹುಡುಗರಿಗೆ ಮಾತ್ರ ವಿಭಿನ್ನವಾದ ವಿಷಾದ ಛಾಯೆಯಲ್ಲ.  ಆದರೆ ಪ್ರೀತಿಯ ಕೊರತೆಯ ಈ ಜೀವನ ರಂಗದಲ್ಲಿ ಯಾವೆಲ್ಲಾ ವಿಷಯ ಯಾವ್ಯಾವಾಗ ಹೇಗೆ ಹೇಗೆ ಅನಿಸುತ್ತಿರತ್ತೋ ಯಾರಿಗೊತ್ತು ಅಲ್ಲವಾ?

ಆಗೊಮ್ಮೆ ಹೀಗೊಮ್ಮೆ ಪೊನಾಯಿಸುವ ಗೆಳೆತಿಯರು, ಗೆಳೆಯರು, ಸಂಬಂಧಿಗಳು ಮಾತಿಗೆ ಎಂಬಂತೆ ಹೇಗೆದ್ದೀಯಾ? ಎಂದಾಗ ಮಾತಿಗೆ ಎಂಬಂತೆ ಚೆನ್ನಾಗಿದ್ದೇನೆ! ಎಂದು ಹೇಳುವುದು. ಮನಸ್ಸಲ್ಲಿ ಸಾವಿರ ಸಾವಿರ ಮಾತುಗಳಿದ್ದರು ಯಾಕಾದರೂ ಈ ಪೋನ್ ಕಾಲ್ ಬಂದಿತು, ಏನು ಮಾತಾಡಲಿ ಎಂಬಂತಾಗುತ್ತದೆ. ಏನು ಮಾತಾಡಿದರೇ ಏನೋ ಎಷ್ಟು ಬೇಕೊ ಅಷ್ಟನ್ನು ಮಾತ್ರ ಮಾತನ್ನಾಡುವುದು. ಏನನ್ನು ಪೊರ್ತಿಯಾಗಿ ಯಾರೊಬ್ಬರ ಜೊತೆಯಲ್ಲೂ ಹೇಳಾಲಾರದವಾಗಿಬಿಡುತ್ತಿವಲ್ಲಾ ಯಾಕೇ?

ಚಿಕ್ಕವರಾಗಿದ್ದಾಗ ಚಿಕ್ಕ ಚಿಕ್ಕ ವಿಷಯಗಳನ್ನು ಮನಸ್ಸಿನಲ್ಲಿ ಎಂದಿಗೂ ಬಚ್ಚಿಟ್ಟುಕೊಳ್ಳದೆ ಹೊರಗಡೆ ಹಾಗೆ ಹಾಗೆಯೇ ಚೆಲ್ಲಿಬಿಟ್ಟು ಎಷ್ಟೊಂದು ಹಗುರಾಗುತ್ತಿದ್ದೆ... ಆದರೇ ಈ ದೊಡ್ಡವಳು ಎಂಬುದೇ ನಮ್ಮನ್ನು ಈ ರೀತಿಯ ಗುಬ್ಬಚ್ಚಿ ಗೂಡಿಗೆ ದೂಡಿಬಿಟ್ಟಿತೆ.. ಯಾರು ಯಾರಿಗೂ ಅಲ್ಲಾ.. ನನಗೆ ನಾನೇ ಎಲ್ಲಾ ಎಂಬ ಭಾವದ ಪರಿ ಹೀಗೆ ಯಾಕೋ...

ನಾವುಗಳು ಬೆಳೆದಂತೆ ಬುದ್ಧಿವಂತರಾದಂತೆ ಅತ್ಯಂತ ಚಿಕ್ಕವರಾಗಿಬಿಟ್ಟುಬಿಡುವೆವೇನೋ.. ನಮ್ಮ ಮನಸ್ಸಿನ ಸ್ವಚ್ಛಂದತನವನ್ನೇ ಆಳು ಮಾಡಿಕೊಂಡುಬಿಡುವೆವೇನೋ.. ಕುಟುಂಬ,ಸಮಾಜ,ಜಗತ್ತು ಪ್ರತಿಯೊಂದಕ್ಕೂ ಸಂಬಂಧವಿಲ್ಲದಂತೆ ನಮ್ಮ ನಮ್ಮೊಳಗೆ ಕಳೆದುಹೋಗಿಬಿಡುವುವೆನೋ.. ಇದು ನನಗೆ ಮಾತ್ರವಾ? ನಿಮಗೂ ಹೀಗೆ ಅನಿಸಿದ್ದಿದೀಯಾ?

ಭಾನುವಾರ, ಜೂನ್ 30, 2013

ಹೀಗೊಂದು ವಿಷಯ

ನಾವು ಇವನು ಈ ರೀತಿ ಇರುವುವನು ಎಂದು ಕನಸು ಮನಸಿನಲ್ಲಿನಲ್ಲೂ ಯೋಚಿಸಿದ್ದಿಲ್ಲ. ಏನೋ ಹೇಗೋ ನಮ್ಮ ಜೊತೆಯಲ್ಲಿಯೇ ನಿತ್ಯ ಇರುತ್ತಿದ್ದಾನೆ ಬಿಡು. ಅವನು ನಮ್ಮ ಹಾಗೆಯೇ ಏನೋ ಓದುತ್ತಿದ್ದಾನೆ ಎಂದು ಅಷ್ಟಾಗಿ ಗಮನ ಹರಿಸಿದ್ದಿಲ್ಲ.

ಆದರೇ ಇಂದು ನನ್ನ ಸ್ನೇಹಿತ ಸಿದ್ದು ಅವನ ಬಗ್ಗೆ ,ಏ, ನಿನಗೆ ಗೊತ್ತಾ ಅವನು ತುಂಬ ಬದಲಾಯಿಸಿಬಿಟ್ಟಿದ್ದಾನೆ ಕಣೋ. ನಾನು ಮುಂಜಾನೆ ಅವನ ಎದುರಿಗೆ ಹೋದರೂ ನನ್ನ ಗಮನಿಸದ ರೀತಿಯಲ್ಲಿಯೇ ಹಾಗೆಯೇ ಹೋದ ಕಣೋ..’ ಅಂದನು.

ನನಗೆ ಕೊಂಚ ಶಾಕ್ ಆಯ್ತು ’ಏಲೇ ಏನೋ ನೀನು ಹೇಳುತ್ತಿರುವುದು...’ ಅವನು ಸ್ನೇಹಿತರು ಅಂದ್ರೇ ಪ್ರಾಣ ಬಿಡುವ ಹುಡುಗ ನೀನೇ ಎಲ್ಲೋ ಎತ್ತಲೋ ನೋಡುತ್ತಾ ಬಂದಿರಬಹುದು ಬಿಡು ಎಂದೇ.

ಇಲ್ಲಾ ಕಣೋ ನನ್ನಾಣೆ ಅವನು ಹಾಗೆಯೇ ಹೋದ ಎಂದಾಗ.. ನನಗೂ ಚಿಕ್ಕ ಕುತೂಹಲ ಅವನ ಬಗ್ಗೆ ಬಂದಿತು.

ಕಾಲೇಜು ಹುಡುಗರು ಇಂದು ಇದ್ದಂತೆ ನಾಳೆ ಇರಬೇಕು ಎಂಬ ಕಾನೂನು ಯಾವ ಕಾಲೇಜು ಪುಸ್ತಕದಲ್ಲೂ ಬರೆದಿಲ್ಲ. ಅವರು ಹೀಗೆಯೇ ಕೊನೆಯವರೆಗೂ ಇರಬೇಕು ಎಂದು ಯಾರು ಬಯಸುವುದಕ್ಕೂ ಸಾಧ್ಯವಿಲ್ಲ. ಯಾಕೆಂದರೇ ಆ ವಯಸ್ಸೇ ಅಂತಹವುದು. ಯಾವಾಗಲೂ ಹೊಸತನಕ್ಕೆ ಹೊಸ ನೋಟಕ್ಕೆ ತೆರೆದುಕೊಳ್ಳುವಂತಹ ವಯಸ್ಸು, ಮನಸ್ಸು.

ಮನಸ್ಸಲ್ಲಿ ತರಾಹವೇರಿ ಸುಂದರ ರಂಗು ರಂಗಿನ ಕನಸುಗಳ ಸಂಮಿಲನ. ವಯೋಸಹಜವಾದ ಆಸೆ ನಿರೀಕ್ಷೆಗಳನ್ನು ಪ್ರತಿಯೊಬ್ಬ ಹುಡುಗ ಹುಡುಗಿಯರು ಕಟ್ಟಿಕೊಳ್ಳುವ ಒಂದು ಮಹತ್ತರ ಘಟ್ಟ.

ಓದು ಎಂಬುವುದು ಕೇವಲ ನೆಪ ಮಾತ್ರ ಎನ್ನುವಂತಹ ಮನೋಸ್ಥಿತಿ. ಓದುವುದಕ್ಕಾಗಿಯೇ ಕಾಲೇಜಿಗೆ ಹೋಗುವವರು ಯುವಕರು ಮತ್ತು ಯುವತಿಯರು ಎಂದು ಹಿರಿ ತಲೆಗಳು ಯೋಚಿಸಿದರೇ..ಅದು  ದೇವರಾಣೆ ನೂರಕ್ಕೆ ನೂರು ತಪ್ಪು ನಂಬಿಕೆ.

ಹಿರಿಯರು ಸಹ ಆ ಒಂದು ಘಟ್ಟವನ್ನು ದಾಟಿಯೇ ತಾನೇ ಬಂದಿರುವುದು. ನಮ್ಮನ್ನು ನೋಡಿದರೇ ಅವರಿಗೂ ಅನಿಸಿರುತ್ತದೆ..  ಈ ಸಮಯದಲ್ಲಿ ತರುಣ ತರುಣಿಯರ ಮನೋ ರಂಗಭೂಮಿಯಲ್ಲಿ ನಡೆಯುವ ಎಲ್ಲಾ ರಂಗು ರಂಗಿನ ಒಲವಿನ ಚಿತ್ತಾರಗಳನ್ನು ನಿರೀಕ್ಷಿಸಿಯೇ ಇರುತ್ತಾರೆ.

ಅದೇ ರೀತಿಯಲ್ಲಿ ನನಗೆ ಈ ನನ್ನ ಸ್ನೇಹಿತನ ಮೇಲೆ ಮೊದಲೇನೆಯ ಅನುಮಾನ ಬಂದಿದ್ದು. ಇವನು ಯಾರೋ ಮಾಯಾಂಗನೆಗೆ ಸೋತಿದ್ದಾನೆ. ಆದರೂ ಅವನು ಅಷ್ಟು ಸುಲಭದಲ್ಲಿ ಈ ಪ್ರೀತಿ, ಪ್ರೇಮ ಎಂಬುದರಲ್ಲಿ ಸುಲಭವಾಗಿ ಸಿಕ್ಕಿಕೊಳ್ಳುವ ತಲೆ ಅಲ್ಲಾ ಅನಿಸಿತ್ತು.

ಆದರೇ ಸಿದ್ದುವಿನ ಒಂದು ಲೈನ್ ರಿಪೋರ್ಟ್, ಆ ಜಾಡಿನಲ್ಲಿ ನನ್ನನ್ನು ಯೋಚಿಸಿ ಯೋಚಿಸುವಂತೆ ಮಾಡಿತು. ನಾನು ಮನಸ್ಸಿನಲ್ಲಿಯೇ ಅಂದುಕೊಂಡೆ. ಮಗಾ ಬರಲಿ ಕಾಲೇಜಿಗೆ ಒಂದು ಕಣ್ಣನ್ನು ಅವನ ಮೇಲೆ ಇಡೋಣ ಅನಿಸಿತು.

ನಾನು ನನ್ನ ಮೊದಲ ಪ್ರೇಮದ ಸುದ್ಧಿಯನ್ನು ಸ್ನೇಹಿತರ ಬಳಿ ಹೇಳಿಕೊಳ್ಳುವಾಗ ಅದು ಏನೂ ಜೋರಾಗಿ ಮೂಗು ಮುರಿದಿದ್ದ. ಮಕ್ಕಳಾ ನೀವೆಲ್ಲಾ ಸುಮ್ಮನೆ ನಿಮ್ಮ ಅಮೊಲ್ಯವಾದ ಕಾಲೇಜು ವಿದ್ಯಾರ್ಥಿ ಜೀವನವನ್ನು ಪ್ರೀತಿ, ಪ್ರೇಮ, ಲವ್ವು,ಗಿವ್ವು ಎಂಬ ಎರಡೇ ಎರಡು ಮಾಯ ಅಕ್ಷರದಲ್ಲಿ ಕಳೆದುಕೊಳ್ಳುತ್ತಿರಾ ಎಂದಿದ್ದ. ಆಗ ನಮಗೆ ಇವನೂ ಒಬ್ಬ ಅಧುನಿಕ ಸಂತನಂತೆ ಕಂಡಿದ್ದ.

ಅಲ್ಲವಾ ಅವನ ಓದಿನ ದಾಟಿಯು ಅದೇ ರೀತಿಯಲ್ಲಿ ಇತ್ತು. ಮೊದಲಿನಿಂದಲೂ ಅವನ ಓದಿನ ರೇಕಾರ್ಡ್ ಆಗಿತ್ತು. ಅವನು ಏನಾದರೂ ಹೇಳಿದರೇ ನಮ್ಮ ಗೆಳೆಯರ ಬಳಗ ಗಂಭೀರವಾಗಿ ಕಿವಿಕೊಟ್ಟು ಕೇಳುತ್ತಿತ್ತು. ಅವನು ಏನಾದರೂ ಬೈದರೇ ನಮ್ಮನ್ನು ಉದ್ಧಾರ ಮಾಡಲೇ ಹೇಳುತ್ತಿದ್ದಾನೆ ಬಿಡು ಎಂಬ ಅಭಿಮಾನ ನಮ್ಮೆಲ್ಲಾರಲ್ಲಿ ಇತ್ತು.

ಅಂಥಾ ಸಾದಾ ಸೀದಾ ಹುಡುಗ ನಮ್ಮಗಳ ರೀತಿಯಲ್ಲಿ, ನಾವು ನಡೆಯುತ್ತಿರುವ ದಾರಿಗೆ ಜಾರುತ್ತಿದ್ದಾನೇ ಎಂಬ ಕಲ್ಪನೆಯೇ ನನ್ನನು ಅದೀರನಾಗಿಸಿತು. ಇದನ್ನು ಸುಳ್ಳು ಅನಿಸಬೇಕು ಎಂಬ ಆಸೆಯಿಂದ ಬಹು ಬೇಗನೇ ಕಾಲೇಜು ಅಂಗಳಕ್ಕೆ ಬಂದೇ.

ಅಂದು ದಟ್ಟವಾದ ಆಷಾಡದ ಮೊಡಗಳು ಅನುಮಾನದಂತೆ ಕವಿದಿತ್ತು. ಒಮ್ಮೊಮ್ಮೆ ತುಂತುರು ಮಳೆ ಹನಿಗಳು ನನ್ನ ಕಾತುರತೆಗೆ ತಣ್ಣೀರು ಎರಚುವಂತೆ ಬಿಳುತ್ತಿತ್ತು.

ನನ್ನ ಗೆಳೆಯರ ಬಳಗ ಆಗಲೇ ನಿತ್ಯ ಸೇರುತ್ತಿದ್ದಾ ಆ ಮೊಟು ಕಲ್ಲಿನ ಮೇಲೆ ಕುಳಿತು ದಾರಿಯಲ್ಲಿ ಬರುತ್ತಿದ್ದ ಕಾಲೇಜು ಹುಡುಗಿಯರ ಕಡೆ ಕಿಡಿ ನೋಟವನ್ನು ಬೀರುತ್ತಾ, ಅದು ಇದು ಮಾತನಾಡುತ್ತಾ ತಮಾಷೆಯಲ್ಲಿ ಕಾಲವನ್ನು ಕಳೆಯುತ್ತಿತ್ತು. ಕಾಲೇಜಿನ ಮೊದಲನೇ ಕ್ಲಾಸ್ ಶುರುವಾಗಲೂ ಇನ್ನೂ ೪೫ ನಿಮಿಷಗಳು ಬಾಕಿ ಇದ್ದವು. ನಾನು ಅಲ್ಲಿ ಬಂದ ತಕ್ಷಣ ಗುಬ್ಬೀರಾ ಗೊತ್ತಾ ಅಂದ ತಕ್ಷಣ ಇವನು ಆದೇ ವಿಷಯಕ್ಕೆ ಪೀಠಿಕೆ  ಹಾಕುತ್ತಿದ್ದಾನೆ ಎಂದು ಮನನವಾಯಿತು.

ಕಾಲೇಜು ಕ್ಯಾಂಪಸ್ ನಲ್ಲಿ ಏನೋ ನಡೆಯಬಾರದ ಘಟನೆ ಘಟಿಸಿದೆ ಎಂಬ ರೀತಿಯಲ್ಲಿ ಇಡೀ ನನ್ನ ಗೆಳೆಯರ ಬಳಗದಲ್ಲಿ ಈ ಒಂದು ವಿಷಯ ತೀವ್ರ ರೀತಿಯಲ್ಲಿ ಸಂಚಲವನ್ನುಂಟು ಮಾಡಿಬಿಟ್ಟಿತ್ತು. ಅದಕ್ಕೆ ತುಪ್ಪ ಸುರಿಯವ ಕೆಲಸವನ್ನು ನನ್ನ ಎಲ್ಲಾ ಸ್ನೇಹಿತರು ತಾವೇ ಏನೋ ಒಂದು ಘನ ಕಾರ್ಯವನ್ನು ನಡೆಸುತ್ತಿದ್ದೇವೆ ಎಂಬ ರೀತಿಯಲ್ಲಿ ಆ ನೋಗವನ್ನು ಹೊತ್ತುಕೊಂಡು ನಡೆಯಲು ಸಜ್ಜಾಗಿಬಿಟ್ಟಿದ್ದರು.

ನಮ್ಮಲ್ಲಿ ನಾವೇ ಯಾರದರೂ ಈ ರೀತಿಯಲ್ಲಿ ಮಾಡಿದ್ದರೇ ನನ್ನಾಣೆ ಇಷ್ಟೊಂದು ರೀತಿಯಲ್ಲಿ ಗುಲ್ಲಾಗುತ್ತಿರಲಿಲ್ಲ ಅಲ್ಲವಾ? ನಮ್ಮ ಮನಸ್ಸಿನಲ್ಲಿ ಎಲ್ಲಾರ ಬಗ್ಗೆನೂ ಹೀಗೆ ಹೀಗೆ ಇರಬೇಕು ಇವರುಗಳು. ಎಂಬ ಅಲಿಖಿತ ಶಾಸನವನ್ನು ನಮ್ಮ ಸಮಾಜ ಸೃಷ್ಟಿ ಮಾಡಿಕೊಂಡುಬಿಟ್ಟಿರುತ್ತದೆ. ಅದರಲ್ಲಿನ ಯಾವುದಾದರೂ ಒಂದು ಬದಲಾವಣೆಯಾದರೂ ನಾವುಗಳೂ ನಾವಾಗಿರುವುದಿಲ್ಲ. ನಾವುಗಳೂ ಅವರುಗಳೂ ನಮ್ಮಂತೆಯೇ ಮನುಷ್ಯರಂತೆಯೇ, ಅವರು ಸಹ ಸಾಮಾನ್ಯರು ಎಂದು ಯೋಚಿಸುವುದಿಲ್ಲ. ಅವರು ಹೀಗೆಯೇ ಇರಬೇಕು ಎಂದು ಒಂದು ದೊಡ್ಡ ಅಭಿಪ್ರಾಯಗಳನ್ನು ಅವರುಗಳ ಮೇಲೆ ಏರಿಬಿಟ್ಟಿರುತ್ತೇವೆ.. ಯಾಕೆ?

ಅವನು ಕ್ಲಾಸ್ ಶುರುವಾಗುವುದು ಇನ್ನೂ ಏನೋ ಐದು ನಿಮಿಷವಿದೆ ಎನ್ನುವ ಸಮಯಕ್ಕೆ ಸರಿಯಾಗಿ ಮಾಮೊಲಾಗಿಯೇ ಬಂದ. ನನಗೆ ಅವನಲ್ಲಿ ಅಂಥ ಏನೂ ಒಂದು ಬದಲಾವಣೆಯು ಕಾಣಿಸಲಿಲ್ಲ. ಆದರೇ ಈ ಗೆಳೆಯರ ಗುಂಪು ಅವನನ್ನು ನೋಡಿದ ರೀತಿಯನ್ನು ಗಮನಿಸಬೇಕಾಗಿತ್ತು. ಅವನನ್ನು ತೀರ ಅಪರಚಿತನಂತೆ ಇವರು ’ಏನಮ್ಮಾ ಸಮಾಚಾರಾ?, ಏನ್ ವಿಷ್ಯಾ?’ ಎಂದು ಪ್ರಶ್ನೇ ಮಾಡಿದರು. ಅದಕ್ಕೆ ಅವನು ಒಂದೇ ಒಂದು ಬುದ್ಧಿವಂತ ಮುಗುಳ್ನಗೆಯ ಉತ್ತರವನ್ನು ಕೊಟ್ಟು, ಕ್ಲಾಸ್ ಗೆ ಲೇಟ್ ಆಯ್ತು ಬನ್ರೋ ಎಂದು ನಮ್ಮನ್ನೆಲ್ಲಾ ಕರೆದುಕೊಂಡು ಹೋದ.

ಅವನ ಹಿಂದೆ ನಾವುಗಳು ಹಾಗೆಯೇ ಸಾಗಿದೆವು.

ನಾನು ಏನೂ ತಿಳಿಯದ ರೀತಿಯಲ್ಲಿ ಸ್ನೇಹಿತರ ಜೊತೆಯಲ್ಲಿ ಸಾಗಿದೆ.

ಕ್ಲಾಸ್ ನಲ್ಲಿ ಪಾಠವನ್ನು ಕೇಳುವ ಮನಸ್ಸೇ ಇರಲಿಲ್ಲ. ಮನದ ತುಂಬೆಲ್ಲಾ ಇವನ ಬಗ್ಗೆಯೇ ಯೋಚನೆ. ತಿರುಗಿ ತಿರುಗಿ ಹಿಂದಿನ ಡೆಸ್ಕ್ ಕಡೆ ನೋಡುತ್ತಿದ್ದೇ. ನನಗೆ ಅವನಲ್ಲಿ ಅಂಥ ಯಾವ ವ್ಯತ್ಯಾಸವು ಕಾಣಲಿಲ್ಲ. ನಿತ್ಯ ಹೇಗೆ ಅವನು ಕಾಣುತ್ತಿದ್ದನು ಅದೇ ರೀತಿಯಲ್ಲಿ ನನಗೆ ಕಾಣಿಸಿದ. ಆದರೇ ಹಿಂದಿನ ದಿನಗಳಿಗಿಂತ ಚೆನ್ನಾಗಿ ಅವನ ಮುಖದಲ್ಲಿ ಹೊಸ ಕಳೆ ಕಾಣಿಸುತ್ತಿತ್ತು. ಇದು ಆ ಪ್ರೀತಿ, ಪ್ರೇಮ ಎಂಬ ಎರಡಕ್ಷರದ ಜಾದುವೇ ಎಂದು ನನ್ನ ತಲೆಯಲ್ಲಿ ಕೊರೆಯುತ್ತಿತ್ತು. ಯಾವ ಹುಡುಗಿ ದೇವರೇ ಇವನನ್ನು ಲವ್ ಎಂಬ ಯಾರು ಹೇಳಿಕೊಡದ ಹಾಗೆಯೇ ಘಟಿಸುವ ಪಾಠಕ್ಕೆ ಕರೆಸಿಕೊಂಡಿರುವವಳು.. ಎಂಬ ರೀತಿಯಲ್ಲಿ ಮುಂದಿನ ಎರಡು ಸಾಲಿನಲ್ಲಿ ಕುಳಿತಿರುವ ನಮ್ಮ ಕ್ಲಾಸ್ ಹುಡುಗಿಯರನ್ನು ಹಾಗೆಯೇ ಸೂಕ್ಷ್ಮವಾಗಿ ನೋಡಿದೆ. ನನಗೆ ಅಂಥ ರೀತಿಯಲ್ಲಿ ಇಂಥ ಹುಡುಗನ ಮನವನ್ನು ಗೆಲ್ಲುವ ಯಾವ ಕಲರ್ ಇಲ್ಲಿ ಇಲ್ಲ ಬಿಡು ಎಂಬ ಒಂದು ಸಣ್ಣ ಧೈರ್ಯ ಬಂದಿತು.

ಹೊರಗಡೆ ಸಣ್ಣದಾಗಿ ಕಪ್ಪು ಮೊಡಗಳು ಕಳೆದು ಸೂರ್ಯನ ಕಿರಣಗಳು ಬೀಳಲು ಶುರುವಾಯಿತು. ಹೊರಗಡೆಯ ನೋಟ ನನ್ನ ಮನಸ್ಸು ಸ್ವಲ್ಪ ಭರವಸೆಯ ಖುಷಿಯಾಯಿತು. ಗುಬ್ಬೀರ ನನ್ನ ಕಡೆ ನೋಡಿ ಹಾಗೆಯೇ ಏನೋ ಹೇಳಲು ತವಕಿಸುಂತಿರುತಿತ್ತು. ಆದರೇ ಈ ಕ್ಲಾಸ್ ಲೇಕ್ಚರ್ ನ ಮಧ್ಯೆ ಅದನ್ನು ಸಾವಾಕಾಶವಾಗಿ ಚರ್ಚಿಸಲು ಯಾರೊಬ್ಬರಿಗೂ ಸಾಧ್ಯವಾಗಲಿಕಿಲ್ಲ ಎಂದುಕೊಂಡು ಹಾಗೆಯೇ ಒಮ್ಮೆ ಸಿದ್ದು ಕಡೆ ನೋಡಿ ಲೇಕ್ಚರ್ ಹೇಳುವ ನೋಟ್ಸನ್ನು ಮನಸ್ಸಿಲ್ಲದೆ ಪೆನ್ನಿನಿಂದ ಕೆತ್ತಲು ಶುರು ಮಾಡಿದೆ.

ಇದಕ್ಕೆ ಒಂದು ಅಂತ್ಯವನ್ನು ಕಂಡುಕೊಳ್ಳಬೇಕು ಎಂದು ಸಂಜೆಯವರೆಗೂ ಯೋಚಿಸುತ್ತಾ ಯೋಚಿಸುತ್ತಾ ಇಂದಿನ ಕಾಲೇಜು ಒಂದು ಚೂರು ರುಚಿಸಲಿಲ್ಲ.

ನನ್ನ ಗೆಳತಿ ರುಚಿಯನ್ನು ಸಹ ನೋಡಲು ಹೋಗಲು ಮನಸ್ಸಾಗಲಿಲ್ಲ. ಅವಳು ಸಹ ಇಂದು ಕಾಲೇಜಿಗೆ ಬಂದಿದ್ದಳು ಇಲ್ಲವೋ ಎಂಬುದು ನನಗೆ ಗೊತ್ತಾಗಲಿಲ್ಲ. ಮನದ ತುಂಬೆಲ್ಲಾ ಈ ಒಂದು ಸಂಚಲನದ ನಿಜ ಸತ್ಯಶೋಧನೆಯನ್ನು ಮಾಡಿಯೇಬಿಡಬೇಕು ಎಂದುಕೊಂಡು ಯಾರೊಬ್ಬರೊಂದಿಗೂ ಮಾತನಾಡದೇ ಮನೆಗೆ ಮರಳಿದೆ.....

ಬುಧವಾರ, ಮಾರ್ಚ್ 13, 2013

ನೋಡಿದ ನೋಟ ನಾಳೆ ಬದಲಾಗಿರುತ್ತದೆ

ಬದುಕು ಹೀಗೆ ಸಾಗುತ್ತಿರುತ್ತದೆ. ಇಂದು ಇದ್ದದ್ದು ನಾಳೆ ಇರುವುದಿಲ್ಲ. ಇಂದು ನೋಡಿದ ನೋಟ ನಾಳೆ ಬದಲಾಗಿರುತ್ತದೆ. ಇಂದಿನ ಸವಿಗಾಳಿ ನಾಳೆ ಬಿರುಗಾಳಿಯಾಗಬಹುದು. ಇಂದಿನ ಕಷ್ಟದ ಸಮಯ ನಾಳೆಯ ಸುಖಮಯವಾಗಿರಬಹುದು.




ನಾವು ಹೀಗೆ ಎಂದೆಂದು.. ಎಂದು ಯಾರು ಗ್ಯಾರಂಟಿ ಕೊಟ್ಟು ಹೇಳಲಾರರು ಅಲ್ಲವಾ? ಅದಕ್ಕೆ ಇರಬೇಕು ಜಗತ್ತು ಯಾವುದೋ ಒಂದು ರೀತಿಯಾದ ಏನನ್ನೋ ಹುಡುಕುತ್ತಾ ಎತ್ತಲೋ ಸಾಗುತ್ತಿದೆ ಅನಿಸುತ್ತಿದೆ.



ಇದೇ ಜಗತ್ತಿನ ಜನಮನಕ್ಕೆ ಒಂದು ಕ್ರಿಯಾಶೀಲತೆಯ ಸೃಜನತೆಯಲ್ಲಿ ತಮ್ಮನ್ನು ತಾವು ಪೂರ್ಣವಾಗಿ ಅರ್ಪಿಸಿಕೊಂಡು ತಮ್ಮ ಕಾಲವನ್ನು ತಾವು ಸಾಗಿಸುವಂತೆ ಮಾಡಿದೆ.



ಯಾವುದೇ ಒಂದು ಬದುಕಿಗೆ ಹೊಸ ತಿರುವು ಬರಲೇ ಬೇಕು. ಆಗ ಮಾತ್ರ ನಮ್ಮ ಬದುಕಿನ ಯಾಂತ್ರಿಕತೆಗೆ ಒಂದು ಪುಲ್ ಸ್ಟಾಪ್ ಸಿಗುತ್ತದೆ.



ಹೊಸತನದ ನೋಟಕ್ಕೆ ಪ್ರತಿಯೊಬ್ಬರು ಯಾವಾಗಲೂ ಖುಷಿಯಿಂದ ಕಾತುರತೆಯಿಂದ ಕಾಯುತ್ತಿರುತ್ತೇವೆ.



ಪ್ರತಿಯೊಂದು ಕ್ಷಣವನ್ನು ಸ್ವಂತವಾಗಿ ಅನುಭವಿಸಬೇಕು ಎಂದರೇ..! ಅಲ್ಲಿ ಹೊಸತನವಿರಲೇ ಬೇಕು. ಏನಾದರೂ ಹೊಸ ಕಲಿಕೆ ಅಲ್ಲಿರಬೇಕು. ಇಲ್ಲವಾದರೇ ಮನಸ್ಸಿಲ್ಲದ ಮನಸ್ಸಿನಿಂದ ನಮ್ಮ ಸಮಯವನ್ನು ನಾವು ದೂಡುವಂತಾಗುತ್ತದೆ.



ಹೊಸತನದ ಬದುಕಿಗೆ ತೆರೆದುಕೊಳ್ಳುವ ಮುನ್ನ ಒಂದು ಬ್ರೇಕ್ ನಮ್ಮಗಳಿಗೆ ಸಿಗಬೇಕಾದದ್ದು ಅತ್ಯವಶ್ಯ. ಯಾಕೆಂದರೇ ಆ ಒಂದು ಗ್ಯಾಪ್ ನಲ್ಲಿ ನಮ್ಮ ಹಿಂದಿನ ಮತ್ತು ಬರುವ ಮುಂದಿನ ಹೊಸ ವಿಚಾರಕ್ಕೆ ತೆರೆದುಕೊಳ್ಳುವ ಮುನ್ನ ನಮ್ಮನ್ನು ನಾವುಗಳೂ ಸಜ್ಜು ಮಾಡಿಕೊಳ್ಳಲು ಆ ಒಂದು ಸಮಯ ನಮಗಾಗಿಯೇ ಬಂದಿದೆ ಅನಿಸಿರುತ್ತದೆ. ಇದು ಯಾವುದೇ ಹೊಸ ಕೆಲಸ, ಹೊಸ ವಿಚಾರ, ಹೊಸ ಊರು, ಹೊಸ ಪುಸ್ತಕ, ಹೊಸ ಓದು, ಹೊಸ ಸಂಗೀತ, ಹೊಸ ಸ್ನೇಹ, ಹೊಸ ಮಾರ್ಗ ಪ್ರತಿಯೊಂದಕ್ಕೂ ಹಿಂದಿನ ಗತ ಜೀವನಕ್ಕೂ ಮುಂದಿನ ಬರುವ ಹೊಸ ದಿನಕ್ಕೊ ನಾವು ಹೇಗೆಲ್ಲಾ ಅನುಭವಿಸಬೇಕು.. ಸರಿ ತಪ್ಪುಗಳ ಬದುಕಿನ ಗಣಿತಕ್ಕೆ ಆ ಒಂದು ಚಿಕ್ಕ ಗ್ಯಾಪ್ ನಮ್ಮನ್ನು ನಾವು ನೋಡಿಕೊಳ್ಳಲು ಅನುಕೂಲ ಮಾಡಿಕೊಡುವ ನಮ್ಮ ಸಮಯವಾಗಿರುತ್ತದೆ.



ಹಾಗಂತಹ ಸುಮಾರು ದಿನಗಳು ಗ್ಯಾಪ್ ಬ್ರೇಕ್ ಎಂದು ನಮ್ಮ ಸಮಯವನ್ನು ನಿಷ್ಕರುಣೆಯಾಗಿ ಕೊಲ್ಲುವುದು ಸಹ ಅಲ್ಲಾ! ಸುಖವಾಗಿ ಮಜಾ ಮಾಡುವುದು ಸಹ ಅಲ್ಲಾ. ಅದು ನಾವುಗಳೂ ಹೆಚ್ಚು ಬ್ಯುಸಿ ದಿನಗಳಿಂದ ಕಡಿಮೆ ಬ್ಯುಸಿ ದಿನಗಳು ಎಂದು ಹೇಳಬಹುದು. ಈ ಸಮಯದಲ್ಲಿ ಹೊಸತನದ ಹೆಜ್ಜೆಗೆ ಕಾಲು ಇಡುವ ಮುನ್ನ ನಮ್ಮನ್ನು ನಾವುಗಳೂ ಉನ್ನತವಾಗಿ ಸಜ್ಜು ಮಾಡಿಕೊಳ್ಳುವ ತಾಲಿಮು ದಿನಗಳು.



ಆ ಸಮಯದಲ್ಲಿ ನಾವು ನಡೆದ ಹಳೆಯ ದಿನಗಳನ್ನು ಚಿಕ್ಕದಾಗಿ ಮೆಲುಕು ಹಾಕಿಕೊಂಡು ಸರಿ ತಪ್ಪುಗಳನ್ನು ಗಮನಿಸಿ. ಬರಲಿರುವ ಹೊಸ ಹರುಷದ ಹಾದಿಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಉತ್ಕೃಷ್ಟವಾಗಿ ಕಳೆಯಲು ಬರುವ ದಿನಗಳ ಬಗ್ಗೆ ಭರವಸೆಯನ್ನು ಕಂಡುಕೊಳ್ಳುವಂತಾಗಬೇಕು.



ಈ ಬ್ರೇಕ್ ಒಮ್ಮೊಮ್ಮೆ ನಮಗೆ ನಮ್ಮ ನಮ್ಮ ಕೆಲಸದಿಂದ ನಾವುಗಳು ಇಟ್ಟುಕೊಂಡಿರುವ ನಮ್ಮ ಹವ್ಯಾಸಗಳಿಗೆ ಬರಬಹುದು. ಇದು ನಾವುಗಳು ಬಹುಮುಖ್ಯವಾದ ಕೆಲಸದ ಜಂಜಾಟದಲ್ಲಿ ಮುಳುಗಿ ಹೋದ ಸಮಯದಲ್ಲಿ ನಾವುಗಳು ನಿತ್ಯ ಸಂತೋಷಪಡುವ ಹವ್ಯಾಸಗಳನ್ನು ಒಂದಷ್ಟು ದಿನಗಳ ಮಟ್ಟಿಗೆ ಮುಟ್ಟಲಾರದವಾಗಿರುತ್ತೇವೆ.



ಬ್ರೇಕ್ ಸಮಯದಲ್ಲಿ ನಾವುಗಳು ನಮ್ಮ ಪ್ರೀತಿಪಾತ್ರರನ್ನು ಸಹ ಮೊದಲು ಮಾತನಾಡಿಸುತ್ತಿದ್ದಂತೆ ಮಾತನಾಡಿಸಲಾರೆವು, ಮೇಸೆಜ್ ಸಹ ಮಾಡಲಾರೆವು. ಮೊದಲು ಬರೆಯುತ್ತಿದ್ದ, ಓದುತ್ತಿದ್ದ, ನೋಡುತ್ತಿದ್ದ, ಬೇಟಿ ಮಾಡುತ್ತಿದ್ದ ಸ್ಥಳಗಳನ್ನು ಬೇಟಿ ಮಾಡಲಾರೆವು, ಏನೊಂದನ್ನು ಮಾಡದಂತಾಗಿಬಿಟ್ಟಿರುತ್ತೇವೆ. ಯಾಕೆಂದರೇ ಆ ಸಮಯಕ್ಕೆ ಬಹುಮುಖ್ಯವಾದ ಜೀವನದ ಯಾವುದೋ ಒಂದು ಕೆಲಸದಲ್ಲಿ ಮುಳುಗೇಳುತ್ತಿರುತ್ತೇವೆ.



ಈ ರೀತಿಯ ಒಂದು ಸಮಯ ಪ್ರತಿಯೊಬ್ಬರಿಗೂ ಜೀವನದಲ್ಲಿ ಒಮ್ಮೊಮ್ಮೆ ಬಂದೇ ಬಂದಿರುತ್ತದೆ. ಈ ರೀತಿಯ ಬ್ರೇಕ್ ನಮಗೆ ಬರಬೇಕು ಅನಿಸುತ್ತದೆ. ಇಲ್ಲವೆಂದರೇ ನಾವುಗಳು ಪ್ರತಿಯೊಂದರ ಮಹತ್ವವನ್ನು ಗಮನಿಸಲಾರದವಾಗಿರುತ್ತೇವೆ. ಒಂದು ಮತ್ತೊಂದರ ಮಹತ್ವ ಆ ಸಮಯದಲ್ಲಿ ತಿಳಿಯಬೇಕು ಎಂದರೇ ಈ ರೀತಿಯ ಅನುಭವ ಪ್ರತಿಯೊಬ್ಬರಿಗೂ ತಿಳಿಯಲೇಬೇಕು.


ಪ್ರೀತಿಯನ್ನು ಮಾಡುತ್ತಿರುವ ಪ್ರೆಮಿಗಳು ಹಲವು ದಿನಗಳ ಮೇಲೆ ತನ್ನ ಪ್ರಿಯಕರನ/ಪ್ರಿಯತಮೆಯ ಒಂದು ಸವಿ/ಕಹಿ ಮಾತಿಗಾಗಿ ಕಾಯುವ ಕಾತುರತೆಯಂತೆ, ನಾವು ಇಷ್ಟಪಟ್ಟು ಮಾಡುವ ಕೆಲಸವನ್ನು ಕೆಲವು ದಿನಗಳ ಮಟ್ಟಿಗೆ ಮಾಡದೇ ಇರುವಾಗ ಅನುಭವಿಸುವ ಕಾತುರತೆಯೇ ನಮ್ಮ ಮನವನ್ನು ನಾವು ಹೆಚ್ಚು ಪಾಸಿಟಿವ್ ಆಗಿ ಇಟ್ಟುಕೊಳ್ಳುವಂತೆ ಮಾಡುತ್ತದೆ ಅಲ್ಲವಾ?



ಗಮನಿಸಿ ಬಹುದಿನಗಳ ನಂತರ ನಾವು ಕಾಣುವ ಪ್ರತಿಯೊಂದು ಹೆಚ್ಚು ಅಪ್ಯಾಯಮಾನವಾಗಿರುತ್ತದೆ. ಆ ಸಮಯಕ್ಕೆ ನಾವುಗಳು ಏನೋ ಒಂದನ್ನು ಸಾಧಿಸಿರುವ ಹೆಮ್ಮೆ, ಜೊತೆಗೆ ಏನೋ ಹೊಸತನವನ್ನು ಕಾಣುವ ಹೊಸ ಹುರುಪು.


 ಹೊಸ ಛಾಯೆಗೆ ಹಳೆಯದು ಬೆಳಕಾಗಿರುತ್ತದೆ.