ಬುಧವಾರ, ಮಾರ್ಚ್ 30, 2016

ಜೀವನದ ಅರ್ಧ ಮೈಲೇಜು

ಬದುಕಿನ ಸಾರ್ಥಕತೆಯ ಬಗ್ಗೆ ಪ್ರತಿಯೊಬ್ಬರೂ ತಮ್ಮಲ್ಲಿಯೆ ಒಮ್ಮೆಯಾದರು ಯೋಚಿಸಿರುತ್ತಾರೆ.

ಹುಟ್ಟಿನಂದಿನಿಂದ ಬಾಲ್ಯ, ಯೌವನ, ಮದ್ಯ ವಯಸ್ಸು, ಮುಪ್ಪು ಹೀಗೆ ವಿಭಿನ್ನ ಕಾಲಘಟ್ಟವನ್ನು ಕ್ರಮಿಸುವ ದಾರಿಯಲ್ಲಿ ಯಾವುದಾದರೂಂದು ಘಟ್ಟದಲ್ಲಿ ತನ್ನನ್ನು ತಾನು ಪರಮರ್ಶಿಸಿಕೊಂಡೆ ಕೊಂಡಿರುತ್ತಾನೆ.

ಯಾಕೆಂದರೇ ಬದುಕು ತನ್ನ ವಯಸ್ಸು ಪೂರ್ತಿ ಬರಾಬರಿ ಅನುಭವಗಳ ಮೊತ್ತವನ್ನೆ ಕೊಟ್ಟಿರುತ್ತದೆ. ಈ ಬದುಕು ಯಾವುದೇ ಪ್ರೀ ಪ್ಲ್ಯಾನ್ ಪ್ರೋಗ್ರಾಂ ಅಲ್ಲವಲ್ಲ. ಪ್ರತಿಯೊಂದು ಒಂದಲ್ಲ ಒಂದು ಹೊಸ ಅನುಭವವೇ ಆಗಿರುತ್ತದೆ.

ತಾನು ನೋಡಿ, ಕಲಿತ , ಕೇಳಿದ ಸತ್ವಗಳ ಪರೀಕ್ಷೆಯಾಗಿರುತ್ತದೆ.

ಜೀವನ ಒಮ್ಮೊಮ್ಮೆ ಸುಖ, ಸಂತೋಷಮಯವಾಗಿದ್ದರೆ, ಒಮ್ಮೊಮ್ಮೆ ಎಲ್ಲಾದರೂ ಓಡಿ ಹೋಗಿಬಿಡಲೇ ಅನ್ನಿಸುವಷ್ಟು ಕಷ್ಟ ಮತ್ತು ದುಃಖಮಯವಾಗಿರುತ್ತದೆ.

ಈ ರೀತಿ ಎಲ್ಲಾ ಹೋರಾಟಗಳನ್ನು ಜಯಿಸಲೇ ಬೇಕು. ಅದೇ ಜೀವನ! ನಾವು ನೆಚ್ಚಿಕೊಂಡು, ನಮ್ಮ ಮನದಲ್ಲಿ ಕಲ್ಪಿಸಿಕೊಂಡಷ್ಟು ಸುಲಭವಾದದ್ದು ಮಾತ್ರ ಅಲ್ಲ!

ಹೌದು! ಒಬ್ಬೊಬ್ಬರಿಗೆ ಅದು ಯಾವಾಗಲೂ ಸುಖಮಯವಾಗಿರಬಹುದು. ಅದು ಅವರು ಹುಟ್ಟಿದ ಜಾಗ, ಮನೆ, ಸುತ್ತಲಿನ ಪರಿಸರವನ್ನು ಅವಲಂಬಿಸಿರುತ್ತದೆ. ಅವರಿಗೆ ಮುಟ್ಟಿದ್ದೆಲ್ಲ ಚಿನ್ನ! ಅದು ಅದೃಷ್ಟದ ಮಾತಾಯಿತು.

ಹಾಗಂತಾ ಎಲ್ಲಾರೂ ಚಿನ್ನದ ಪುಟ್ಟಿಯಲ್ಲಿಯೇ ಹುಟ್ಟಲು ಸಾಧ್ಯವಿಲ್ಲವಲ್ಲ!

ಅಂಥವರಿಗೆ ಪ್ರತಿಯೊಂದು ನಿಮಿಷವು ಸವಾಲೇ ಸರಿ! ಹಾಗೆಯೇ ಬದುಕಿ ತಮ್ಮ ಬದುಕನ್ನು ಶಕ್ತಿಗೆ ಅನುಸಾರ ಜೋಪಾನ ಮಾಡಿಕೊಂಡು ಜೀವಿಸುತ್ತಿರುತ್ತಾರೆ.

ಜೀವನ ಚಕ್ರ ತಿರುಗುತ್ತಿರಲೇ ಬೇಕು. ಕತ್ತಲು ಕಳೆದ ಮೇಲೆ ಬೇಳಕು ಬರಲೇ ಬೇಕು. ಇಂದು ಇದ್ದ ದಿನಗಳು ನಾಳೆ ಹೀಗೆ ಇರಲಾರವು. ಬದಲಾವಣೆಯೇ ಜೀವನದ ನಿಯಮ. ಗಡಿಯಾರದ ಮುಳ್ಳು ಎಂದು ನಿಲ್ಲಲಾರದು. ಅದು ನಿರಂತರವಾಗಿ ತಿರುಗುತ್ತಿರುವಂತೆ ನಾವುಗಳು ನಮ್ಮ ಬದುಕಿನ ಎಲ್ಲಾ ಘಟ್ಟಗಳಲ್ಲು ಹೆಜ್ಜೆ ಇಡುತ್ತಾ ಸಾಗುತ್ತಿರಲೇ ಬೇಕು.

ಯಾಕೆಂದರೇ ಈ ಬದುಕು ಯಾರಿಗೂ ಎಂದು ಕಾಯುವುದಿಲ್ಲ. ಇರುವಷ್ಟು ದಿನ ಅದನ್ನು ಅನುಭವಿಸುವವನೇ ಶ್ರೀಮಂತ.

ಆದರೂ ಹೀಗೆ ಸಾಗುತ್ತಿರುವಾಗ ಎಷ್ಟು ವಿಷಯ, ವಸ್ತು, ಸ್ನೇಹ, ಸಂಪತ್ತು, ಗುಣ, ಅವಗುಣ, ಒಳ್ಳೆದು, ಕೆಟ್ಟದ್ದು ಹೀಗೆ ಪ್ರತಿಯೊಂದರ ಮೊಟೆಯನ್ನು ಹೊತ್ತು ಕೊಂಡೇ ನಾವುಗಳು ಮುಂದಿನ ಜೀವನದ ದಾರಿಯನ್ನು ಕ್ರಮಿಸುತ್ತಾ ಸಾಗುತ್ತಿರುತ್ತೇವೆ.

ಇಂಥ ಸಮಯದಲ್ಲಿಯೇ ಈ ಜೀವನ ಅಂದರೇ ಇಷ್ಟೇಯಾ ಎಂದು ಅನಿಸಲಾರಂಬಿಸುತ್ತದೆ. ಎಲ್ಲಾ ಗಳಿಸಿದರೂ ಯಾಕೋ ಏನೂ ಇಲ್ಲವಲ್ಲವೆನಿಸುತ್ತದೆ. ಎಲ್ಲಾ ಕಳೆದುಕೊಂಡರೂ ಸಹ ಹಾಗೆಯೇ ಯಾಕೋ ಏನೂ ಗಳಿಸಲಿಲ್ಲವಲ್ಲ.. ಎಂದುಕೊಳ್ಳುತ್ತೇವೆ.

ಇದು ಕೇವಲ ಓಡುವ ಬದುಕೇ? ಹೀಗೆಯೇ ಬದುಕಬೇಕಾ ಅನಿಸುತ್ತದೆ.

ಯಾಕೇ ಹೀಗೆ ಪ್ರತಿಯೊಬ್ಬರೂ ಬದುಕುವ ರೀತಿಯಲ್ಲಿಯೇ ನಾವುಗಳು ಬದುಕುತ್ತಿದ್ದೇವೆಲ್ಲವೆಂದುಕೊಳ್ಳುತ್ತೇವೆ. ಹೀಗೆ ಒಂದಲ್ಲ ಒಂದು ಪ್ರಶ್ನೆ ಮನದಲ್ಲಿ ಮೂಡಿಯೇ ಮೂಡುತ್ತದೆ.

ಆ ಕ್ಷಣ ಯಾಕೋ ಜೀವನವೇ ನಿರರ್ಥಕವೆನಿಸುತ್ತದೆ. ಹೇಗೆ ಬಾಳಿದರೇ ಉತ್ತಮವೆಂದು ಕ್ರಮಿಸಿದ ದಾರಿಯನ್ನು ಪುನಃ ತಿರುಗಿ ನೋಡಲಾರಂಬಿಸುತ್ತೇವೆ.

ಉಫ್ ಎಷ್ಟು ಬೇಗ ೪೦ಕ್ಕೆ ಕಾಲಿಟ್ಟೆ! ಮನ್ನೆ ಮದುವೆಯಾಗಿದ್ದು ಅನಿಸುತ್ತದೆ. ಮರೆತೆ ಇಲ್ಲ ಇದೀಗ ತಾನೆ ಕಾಲೇಜು ಮೆಟ್ಟಿಲು ಇಳಿದಿರುವುದು ಅನಿಸುತ್ತದೆ. ಆದರೇ ಎಷ್ಟು ಬೇಗ ಸುಸ್ತು ಅನಿಸುತ್ತದೆ. ಜೀವನದ ದುಡಿತದಲ್ಲಿ ಅಕ್ಕ ಪಕ್ಕ ಏನೂ ಜರುಗುತ್ತಿತ್ತು ಎಂಬುವುದನ್ನೇ ಗಮನಿಸಲಾರದಷ್ಟು ಅಸೂಕ್ಷ್ಮಮತಿಯಾಗಿದ್ದೆನಲ್ಲಾ ಎಂದು ಪರಿತಪಿಸುವೆವು.

ಯಾವುದೋ ಒಂದು ಹುದ್ದೆಗಾಗಿ, ಯಾವುದೋ ಒಂದು ಮೊತ್ತದ ಸಂಪತ್ತಿಗಾಗಿ ನನ್ನ ಈ ಒಂದು ಅಮೊಲ್ಯವಾದ ವಯಸ್ಸನ್ನೇ ಹೀಗೆ ಕಳೆದೆನಲ್ಲಾ? ನಾನು ಮಾಡಿದ ಈ ಸಾಧನೆಯೇ ಕೊನೆಯೇ? ನಾನು ಈಗ ಹಿಂದೆ ಇದ್ದೆ ಇದ್ದ ರೀತಿಯಲ್ಲಿಯೇ ಇದ್ದೀನಾ ಅಥವಾ ಏನಾದರೂ ಬದಲಾವಣೆಯ ಚರ್ಯೆ ಕಾಣಿಸುತ್ತಿದಿಯಾ ಎಂದು ಅದೇ ಬೆರಳಿನ ದಪ್ಪ ಗಾಜನ್ನು ಸರಿಸಿ ಕನ್ನಡಿ ನೋಡಿಕೊಂಡಂತಾಗುತ್ತದೆ.

ದೇಹವೇ ಬಸವಳಿದ ಮನಸ್ಸಿನ ಸ್ಥಿತಿಯಲ್ಲಿ ದಿಗ್ಬ್ರಮೆಯಾಗುವುದು ನಿಜ!

ಹೀಗೆ ಯಾವುದು ಮಾಡಿದರೂ ಇದೇ ಶ್ರೇಷ್ಠ ಅನಿಸುತ್ತಿಲ್ಲ. ನಾವೇನಾದರೂ ಬೇರೆಯವರಿಗೆ ಒಂದು ಸಣ್ಣ ಉಪಕಾರ ಮಾಡಿದ್ದಿವಾ ಅಂದರೇ ಅದು ಇಲ್ಲ. ನಾನು ದುಡಿದದ್ದು ಕೇವಲ ನನ್ನ ಈ ಒಂದು ಸಂಸಾರಕ್ಕೆ ಮಾತ್ರ. ನಾನು ಇವರಿಗಾಗಿ ದುಡಿಯಲೇ ಬೇಕಾಗಿತ್ತಾ? ಅವರಾದರೂ ನನ್ನ ಬಗ್ಗೆ ಏನೂ ಹೇಳುತ್ತಾರೋ ಎಂದು ಕೇಳುವಷ್ಟು ಸ್ವಾರ್ಥಮಯ ಈ ಬದುಕಾ ಎಂದು ಪೀಲ್ ಆಗುತ್ತದೆ.

ಏಕೆ ನಾವುಗಳು ಎಲ್ಲಾರಿಗಿಂತ ಬಿನ್ನವಾಗಿ ಜೀವಿಸಲಾರೆವು. ಪ್ರತಿಯೊಂದರಲ್ಲೂ ಪಾಲೊ ಪಾಲೊ ಅವರು ಇವರನ್ನು,ಇವರು ಅವರನ್ನಾ.. ಇದೇ ಮನುಷ್ಯ ಜೀವಿಯ ಜೀವಿತ ಪರಿಯಾ? ಯೋಚಿಸಿದರೇ ಉತ್ತರವೇ ಇಲ್ಲದಂತಾಗುತ್ತಾದೆ. ಯಾವುದೋ ಗೊತ್ತಿದ್ದು ಗೊತ್ತಿಲ್ಲದವರಂತೆ ಯಾಂತ್ರಿಕವಾಗಿ ಸಾಗುತ್ತಿದ್ದೆವೆಂದು ಅನಿಸುವುದಿಲ್ಲವಾ?

ಇಚ್ಚೆ ಇರಲಿ ಇಲ್ಲದಿರಲಿ, ನೆಮ್ಮದಿ ಇರಲಿ ಇಲ್ಲದೇ ಇರಲಿ ಯಾವುದಾದರೂ ಸರಿಯೆಂದು ಬಿಡಲಾರದೆ ಓದನ್ನು ಒದುತ್ತೇವೆ, ಕೆಲಸ ಮಾಡುತ್ತೇವೆ, ಒಟ್ಟಿಗೆ ಜೀವಿಸುತ್ತೇವೆ. ಯಾವುದರಲ್ಲೂ ಪ್ಯಾಶನ್ ಎನ್ನುವುದೆ ಇಲ್ಲ! ಬಿಡಲು ಸಾಧ್ಯವಿದ್ದರೂ ಬಿಡಲು ಆಗುತ್ತಿಲ್ಲವೆಂದು ಒದ್ದಾಡುವುದೇ ಬದುಕಾಗಿದೆ. ಎಲ್ಲದರಲ್ಲೂ ಗೊಣಗಾಟ. ಖುಷಿಯೆಂಬುದು ಪುಸ್ತಕದ ಬದನೆ ಕಾಯಿಯಾಗಿದೆ.

ಇಂಥ ಸಮಯದಲ್ಲಿ ಸಂಯಮವಾಗಿ ನಾವು ಸಾಗುತ್ತಿರುವ ದಾರಿ ಸರಿಯೇ? ಸ್ವಲ್ಪ ಬದಲಾವಣೆ ಬೇಕಾಗಿತ್ತು ಎಂದು ಬೆಳಕಿನ ಚಿಕ್ಕ ಕಿರಣ ಕಾಣಿಸುತ್ತದೆ. ಯಾವುದಾದರೂ ಮನಸ್ಸು ಮೆಚ್ಚುವ, ಪರರಿಗೆ ಉಪಕಾರಿಯಾಗುವ ಯೋಜನೆ/ಯೋಚನೆ ಯಾಕೇ ಮಾಡಬಾರದು?

ಈ ಐಡಿಯಾ ಜೀವನದ ಅರ್ಧ ಮೈಲೇಜು ಮುಗಿದ ಮೇಲೆ ಬರುತ್ತಿದಿಯಲ್ಲಾ ಅದೇ ವಿಪರ್ಯಾಸ! 

ಶುಕ್ರವಾರ, ಮಾರ್ಚ್ 18, 2016

ಮನುಷ್ಯರೊಂದಿಗಿಲ್ಲ ಗೊಗಲ್ ಉತ್ತರವೇನು?

ಡಾ ಡಾ ಬಾ ಆಟ ಆಡೋಣ.

ಅಮ್ಮಾ ನನ್ನ ಎತ್ತಿಕೋ.

ಅಕ್ಕ ಬಾ ಮುದ್ದು ಮಾಡು. ಆ ಎದ್ದು ನಿಲ್ಲು. ಆಂ ನನ್ನ ಮೇಲೆ ತೂರು.

ಮಗು ದ ದಾ ಎಂದು ಏನು ಏನೋ ಮಾಡುತ್ತದೆ.

ಅದೆ ಅಪ್ಪ / ಅಮ್ಮನ ಮುಖ ನೋಡಿ ಚಪ್ಪಾಳೆ ತಟ್ಟಿ ಮುಖ ಅರಳಿಸಿ ನಗುತ್ತದೆ. ಜೋರಾಗಿ ಕೇಕೆ ಹಾಕುತ್ತದೆ.

ಅದಕ್ಕೆ ತನ್ನನ್ನು ಪ್ರೀತಿಸುವವರ ಮೆಚ್ಚುಗೆಯ ನೋಟ ಬೇಕು. ಇಷ್ಟೇ ಮಗು ತನ್ನವರಿಂದ ಅಪೇಕ್ಷಿಸುವುದು.

ಆದರೇ ನಿತ್ಯ ಪ್ರಜ್ವಲವಾಗಿರುವ ಮಗುವಿನ ಮನಸ್ಸಿನಂತೆ ನಮ್ಮ ವಯಸ್ಸಾದವರ ಮನಸ್ಸು ಇರಬೇಕಲ್ಲ? ಮಗು ಘಳಿಗೆ ಘಳಿಗೆಗೂ ಹೊಸತನದ ಎನರ್ಜಿಯಿಂದ ಏಕ್ ದಮ್ ಸುಂದರ ಹಚ್ಚ ಹಸುರಿನ ನಗುವಿನಿಂದ ಕಂಗೊಳಿಸುತ್ತದೆ. ಆದರೆ ನಮ್ಮ ದಣಿವಿನ ಜಂಜಾಟದ ಬದುಕಿನಿಂದ ಆ ಮುಗ್ಧ ಮಗುವಿನ ಜೊತೆ ಒಂದು ನಿಮಿಷವು ಎಲ್ಲ ಮರೆತು ಅದು ಆಡುವ ಒಂದು ಚಿಕ್ಕ ಆಟವನ್ನು ಖುಷಿಯಿಂದ ನಾವು ಅನುಭವಿಸಲು ಸಾಧ್ಯವಾಗುತ್ತಿಲ್ಲ.

ಅದೇ ನಿತ್ಯ ನೂರು ತೊಂದರೆ ತಾಪತ್ರಾಯಗಳ ಯೋಚನೆಯಲ್ಲಿ ಅಪ್ಪ ಅಮ್ಮ ಕ್ಷಣ ಕ್ಷಣವು ಮುಳುಗೇಳುತ್ತಿರುತ್ತಾರೆ.

ಇವರುಗಳಿಗೆ ಮುಂಜಾನೆ ರಾತ್ರಿ ಎನ್ನುವ ವ್ಯತ್ಯಾಸವಿಲ್ಲ.

ಮಗು ಮುಂಜಾನೆ ಮುಂಜಾನೆ ಹಾಸುಗೆಯಲ್ಲಿಯೇ ಹೊಸ ದಿನದೊಟ್ಟಿಗೆ ಪುಟಿಯುತ್ತಿರುತ್ತದೆ. ಅದಕ್ಕೆ ತಕ್ಷಣ ತಾನು ನಿನ್ನೆ ಎಲ್ಲಿಗೆ ನಿಲ್ಲಿಸಿದ ಆ ಆಟವನ್ನು ಪ್ರಾರಂಭ ಮಾಡುವ ಸಂಭ್ರಮ!

ಅದು ಏನೆಂದರೂ ಕಾಯುವುದಿಲ್ಲ. ಹಾಸಿಗೆಯಲ್ಲಿ ಆಗತಾನೆ ನಿದ್ರೆಯ ಸವಿಯನ್ನು ಸವಿಯುತ್ತಿರುವ ಅಪ್ಪ ಅಮ್ಮನನ್ನು ಒದ್ದೂ ಎದ್ದೇಳಿಸುತ್ತದೆ. ಮುಚ್ಚಿಕೊಂಡಿರುವ ಮುಸುಕನ್ನು ಸರಿಸಿ ಹಾಯ್ ಎನ್ನುತ್ತದೆ.

ಇವರುಗಳಿಗೆ ಆದರ ಮುಖ ನೋಡಿದರೇ.. ಆದರ ತೂದಲು ನುಡಿಯನ್ನು ಕೇಳಿಸಿಕೊಂಡರೇ.. ಮುಂಜಾನೆಯ ದೇವರ ಸುಪ್ರಭಾತವೇ ಸರಿ.. ಆದರೇ ನಿನ್ನೇ ಸರಿ ರಾತ್ರಿ ಎಷ್ಟೋ ಹೊತ್ತಿಗೆ ಇವರುಗಳಿಗೆ ನಿದ್ರೆ ಬಂದಿರುತ್ತದೆ. ಆಗಲೇ ಈ ಮಗು ಎಚ್ಚರವಾಗಿಬಿಟ್ಟಿದಿಯಲ್ಲಪ್ಪಾ ಎಂದು ಮನದಲ್ಲಿಯೇ ನುಡಿದು ಇಷ್ಟವಿಲ್ಲದಿದ್ದರೂ ಮಗುವಿಗೆ ಸಾಥ್ ಕೊಡಬೇಕಾಗುತ್ತದೆ.

ಇದುವೇ ನಮ್ಮಗಳ ಭಾರದ ಸುಸ್ತು ಜೀವನ!

ಒಂದು ದಿನವು ಹೊಸತನವಿಲ್ಲದ ಅದೇ ಗಡಿಯಾರದ ಮುಳ್ಳು ಮುಂದೋಡುವಂತೆ ಓಡುತ್ತಿರುವ ಧಾವಂತದ ಓಟವಾಗಿದೆ.

ನಮ್ಮ ಕೊಸುಗಳಿಗೂ ಪ್ರೀತಿಯ ಒಂದು ಕ್ಷಣವನ್ನು ಮೀಸಲಿಡಲಾರದಷ್ಟು ಕೆಲಸ ಕೆಲಸ ಬರೀ ಕೆಲಸ!

ಈ ಮಗುವಿನ ಜೋಶ್ ನಮ್ಮಗಳಿಗೆ ಇಲ್ಲವಲ್ಲ ಎಂದು ಮನಸ್ಸು ಮುಲಾಜಿಗೆ ಜಾರುತ್ತದೆ.

ಯಾಕೋ ಇದ್ದು ಇಲ್ಲದ ಅನುಭಾವದ ಅಂತರ್ ತಳಮಳ.

ಯಾಕಾದರೂ ದೊಡ್ಡವರಾದೇವೋ ಎಂದು ನಮ್ಮ ಮನಸ್ಸೆ ಒಮ್ಮೆ ಪ್ರಶ್ನೆ ಮಾಡುತ್ತದೆ.

ಯಾವುದನ್ನು ತೃಪ್ತಿಯಾಗಿ ಸಂತೋಷಿಸಲಾರೆವು.

ಯೋಚಿಸಿದರೇ ಹತ್ತು ಹಲವು ಯೋಚನೆಗಳು. ಬೆಳೆಯುತ್ತ ಬೆಳೆಯುತ್ತಾ ಯೋಚನೆಯ ಮೊಟೆಯನ್ನೇ ಹೊತ್ತು ಹೊರುತ್ತಾ ಭಾರವದ ಹೆಜ್ಜೆಗಳನ್ನು ಇಡುತ್ತಿರುವೆವೆಂದು ಅನಿಸುತ್ತದೆ.

ಯಾರೊಂದಿಗೂ ನಾಲ್ಕು ಜೀವಂತ ಮಾತುಗಳನ್ನು ಆಡಿರಲಾರೆವು. ಪ್ರತಿಯೊಂದು ಚಿಕ್ಕ ವಿಷಯಕ್ಕೂ ರೇಗುವಂತಾಗುತ್ತದೆ. ಮುಖದ ಮೇಲೆ ನಗುವಿನ ಗೆರೆ ಮಾಯವಾಗಿ ಎಷ್ಟೋ ದಿನಗಳಾಗಿರುತ್ತವೆ.

ಇಷ್ಟೊಂದು ಒತ್ತಡದ ಬದುಕು ಇದುವೇ ಅನಿಸುತ್ತದೆ.

ಯಾರದೋ ಸಿಟ್ಟನ್ನು ಇನ್ಯಾರದೋ ಮೇಲೆ ಧಾರಕಾರವಾಗಿ ಚೆಲ್ಲಿರುತ್ತೇವೆ.

ಹೆಚ್ಚು ಸಿಟ್ಟನ್ನು ಪ್ರೀತಿ ಪಾತ್ರರರ ಮೇಲೆಯೆ ಎರಚಿರುತ್ತೇವೆ.

ಜೀವನದ ಹೆಚ್ಚು ಸಮಯವನ್ನು ಕಳೆಯುವ ಆಫೀಸ್ ಎಂಬುವುದು ಯಾವುದೇ ರೀತಿಯಲ್ಲೂ ನಲ್ಮೆಯ ಜಾಗ ಎಂದು ಕೊನೆಯವರೆಗೂ ಅನಿಸುವುದಿಲ್ಲ. ಇಲ್ಲಿ ಎಲ್ಲಾ ಬರೀ ಕೃತಕತೆ ಎಂದು ಅನಿಸುತ್ತದೆ.

ಇಷ್ಟ ಇರಲಿ ಇಲ್ಲದೇ ಇರಲಿ ಇರಲೇಬೇಕಲ್ಲ ಎಂಬಂತೆ ಇರುತ್ತೇವೆ.

ವರುಷದ ಪ್ರತಿ ಕ್ಷಣವನ್ನು ಅದೇ ಕುರ್ಚಿ, ಟೇಬಲ್, ಕಂಪ್ಯೂಟರ್ ಎಂದು ಭಾವನೆಯೇ ಇಲ್ಲದ ಸ್ಪರ್ಶದಲ್ಲಿ ಕಳೆದಿರುತ್ತೇವೆ. ಇಷ್ಟವಿಲ್ಲದಿದ್ದರೂ ಇಷ್ಟವಿರುವ ರೀತಿಯಲ್ಲಿ, ಸಿಟ್ಟು ಬಂದರೂ ಸಿಟ್ಟೇ ಇಲ್ಲದವರಂತೆ ಮಾತನ್ನಾಡುತ್ತಿರುತ್ತೇವೆ.

ಯಾಕೆಂದರೇ ಇದು ಪ್ರೊಪೇಶನಲ್ ಲೈಫ್. ಇಲ್ಲಿ ಎಲ್ಲದಕ್ಕೂ ಒಂದು ಚೌಕಟ್ಟು ಇದೆ. ಚೌಕಟ್ಟು ಮೀರದ ಕಾರ್ಯ ಕೌಶಲ ನೈಪುಣ್ಯತೆಗೆ ಇಲ್ಲಿ ಅರ್ಹತೆ.

ಮನೆಯಲ್ಲಿ ಎದ್ದೇಳುವುದು ಆಪೀಸ್ ಗೆ ಹೋಗಲು ತಯಾರಿ. ತಿನ್ನುವ ತಿನಿಸು ಕೇವಲ ತಿನಿಸು ಮಾತ್ರ. ರುಚಿಯೇ ಇಲ್ಲದ ಊಟ! ತಿನ್ನುವುದಕ್ಕೂ ಟೈಂ ಇಲ್ಲವೇನೋ ಎಂಬಂತ ಬಾಳ್ವೆ.  ರಾತ್ರಿ ಬೇಗ ಹಾಸಿಗೆಗೆ ಹೋದರೇ ನಿದ್ದೆ ಎಂಬುದು ಪೂರ್ಣವಾಗಿ ನಮ್ಮ ಕಟ್ಟ ವಿರೋಧಿ ಎಂಬಂತೆ ಅದರ ಸುಳಿವೇ ಇಲ್ಲ. ಅದು ಬಿಟ್ಟು ಬೇರೆ ಎಲ್ಲಾ ಇಂದಿನ, ಪುರಾತನ, ಭವಿಷ್ಯತ್ ನದೇ ಚಿಂತೆಯ ಪಿಕ್ಚರ್!

ಕೆಲಸ ಮಾಡುವ ಸಹ ಉದ್ಯೋಗಿಗಳ ಜೊತೆಯಲ್ಲಿ ಎಷ್ಟು ಚೆನ್ನಾಗಿ ಅದೇ ಸವೆದ ಪದಗಳ ಬಳಕೆಯಲ್ಲಿ ರೈಸ್ ಕುಕರ್ ನಲ್ಲಿಯ ಕುದಿಯುತ್ತಿರುವ ಅನ್ನದೊಪಾದಿಯಲ್ಲಿ ವಿಶಲ್ಲೇ ಇಲ್ಲದೇ ಅನ್ನವಾಗುವಂತ ಮಾತು-ಕತೆ.

ಅದೇ ಸಮಯದಲ್ಲಿ ನಮ್ಮ ಪ್ರೀತಿ ಪಾತ್ರರಾದ ಮಕ್ಕಳು, ಮಡದಿಯರು, ಹೆತ್ತವರು ಯಾರದರೂ ಏನದರೂ ಕೇಳಿದರೇ ಎಷ್ಟು ಬೇಗ ಸರ್ರ್ ಎಂದು ರೇಗುವೆವು. ಇದೆ ಎರಡು ನಿಮಿಷಕ್ಕೂ ಮುಂಚೆ ಇವರೇನ  ಯಾವುದೋ ಆಪೀಸ್ ಕಾಲ್ ನಲ್ಲಿ ಹೇಗೆಲ್ಲಾ ನಕ್ಕು ನಗುತ್ತಾ ಮಾತನ್ನಾಡಿದ್ದೂ? ಎಂದು ಆ ಚಿಕ್ಕ ಮಗುವು ಅಪ್ಪನ ಮುಖವನ್ನು ಎರಡು ಬಾರಿ ಪ್ರಶ್ನಾತ್ಮಕವಾಗಿ ನೋಡುತ್ತದೆ.

ಯೋಚಿಸಿದರೇ ನಿಜವಾಗಿಯೂ ಭಯವಾಗುತ್ತದೆ. ಇದುವೆನಾ ನಮ್ಮ ಇಂದಿನ ಜೀವನ ಶೈಲಿ ಅನಿಸುತ್ತದೆ.

ಯಾಕೆ ಹೀಗೆ? ಯಾವುದಕ್ಕೂ ವ್ಯವಧಾನವಿಲ್ಲ. ಯಾವುದಕ್ಕೂ ಸಮಧಾನವಿಲ್ಲ. ಯಾವುದಕ್ಕೂ ತೃಪ್ತಿ ಇಲ್ಲ!

ವೇಗ ವೇಗ!

ಅತಿ ಬೇಗ ಬಳಲಿಕೆಯಲ್ಲಿ ಬೇಯುತ್ತಿದ್ದೇವೆ. ಎಲ್ಲಾ ಇದೆ. ಬದುಕಿದರೇ ಹೀಗೆ ಬದುಕಬೇಕು ಅಂದುಕೊಂಡಿದ್ದೇಲ್ಲಾ ಇದೆ. ಆದರೇ ನೆಮ್ಮದಿ ಎಂಬುದು ಪುಸ್ತಕಗಳಲ್ಲಿ ಹುಡುಕುವಂತಾಗಿದೆ.

ನಮ್ಮ ಮುಂದಿರುವ ಚಿಕ್ಕ ಕುಡಿಗಳನ್ನು ನೋಡಿದಾಗ ಅವರ ಮುಂದೆ ನಾವುಗಳು ಅತಿ ವೇಗವಾಗಿ ಮುದುಕರಾಗಿಬಿಟ್ಟಿದ್ದೇವೆನೋ ಎಂದೆನಿಸುತ್ತದೆ. ಜೀವವೇ ಇಲ್ಲದಂತಾಗಿದೆ. ಬದುಕುತ್ತಿರುವುದು ಕೇವಲ ಕೆಲಸ ಮಾಡಲು ಮಾತ್ರವೇ?

ಕೆಲಸ ಏನಕ್ಕೆ?

ದುಡಿಯುವುದು ಚೆನ್ನಾಗಿ ಮತ್ತು ಸಂತೋಷವಾಗಿ ಬದುಕಲು ಅಲ್ಲವಾ? ಆದರೇ ದುಡಿಯುವುದು ಒಂದು ಬಿಟ್ಟು ಬೇರೆಲ್ಲಾ ನಗಣ್ಯವನ್ನಾಗಿ ಮಾಡಿಕೊಂಡಿದ್ದೇವೆ.

ಮಗುವಿನ ಒಂದು ಮಾತನ್ನು ಆಲಿಸದಾರದಷ್ಟು ಪೇಶನ್ಸ್ ಇಲ್ಲವಾಗಿದೆ. ಯಾವುದಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದೇವೆ? ನಮ್ಮ ಜೀವನದ ಅತಿ ಅಮುಲ್ಯ ಕ್ಷಣಗಳನ್ನು ಗೊತ್ತಿಲ್ಲದ ರೀತಿಯಲ್ಲಿ ಯಾವುದಕ್ಕೇ ಮುಡಿಪಿಟ್ಟಿದ್ದೇವೆ?

ಗೊತ್ತಾಗುತ್ತಿಲ್ಲ!

ನಾವು ನೆಮ್ಮದಿಯ ಜೀವನವನ್ನು ಸಾಗಿಸುತ್ತಿಲ್ಲ. ನಮ್ಮನ್ನು ಅವಲಂಬಿಸಿರುವ ನಮ್ಮವವರಿಗೂ ಶಾಂತಿಯನ್ನು ಕೊಡುತ್ತಿಲ್ಲ. ಇದು ಯಾಕೋ ಭ್ರಮೆಯ ಲೋಕದ ಒಂದು ಭ್ರಮಣೆಯಲ್ಲಿ ಸುತ್ತುತ್ತಿದ್ದೇವೆಂದು ಅನಿಸುತ್ತದೆ.

ಎಲ್ಲೇಲ್ಲೂ ಹೋಗಬೇಕು. ಮುಂದಿನ ವಾರದ ವಿಕೇಂಡ್ ನಲ್ಲಿ ಹೊಸ ಜಾಗಕ್ಕೆ ಹೋಗಬೇಕು. ವಿಕ್ ಡೇಸ್ ನೆನಪಿಗೆ ಗೋಲಿ ಮಾರೋ! ಎಂದೇಳಿ ಹೊಸ ಸ್ಥಳಗಳಿಗೆ ಹೋದರೂ ಬಿಡದೇ ಕಾಡುವ ಪೀಡೆಯಂತೆ ಮತ್ಯಾವೂದೋ ವಿಷಯಗಳು ಕಾಡುತ್ತವೆ. ಅಲ್ಲಿಯು ನಲಿಯುವುದಿಲ್ಲ, ಉಲಿಯುವುದಿಲ್ಲ.. ಥೋತ್ ತೇರಿಕೆ.........?

ಜನರೊಡನೆ ಬಾಯಿಬಿಟ್ಟು ಹೆಚ್ಚು ಮಾತನಾಡುವುದಕ್ಕಿಂತ ಪುಟ್ಟ ಮೊಬೈಲ್ ನಲ್ಲಿರುವ ಪೇಸಬುಕ್, ವಾಟ್ಸಾಪ್, ಎಸ್.ಎಂ.ಎಸ್ ಗಳು ತುಂಬ ಅಪ್ಯಾಯಮಾನವಾಗಿವೆ. ಅದರಲ್ಲಿಯೇ ತಮ್ಮನ್ನು ಬ್ಯುಸಿಯಾಗಿ ಇಟ್ಟುಕೊಳ್ಳೊಣವೆಂದೆನಿಸುತ್ತದೆ.

ಇಂಟರ್ ನೆಟ್ ಇರುವ ಮೊಬೈಲ್ ಇದ್ದರೇ ಜಗತ್ತೇ ಬೇಡವೆಂದೆನಿಸುತ್ತದೆ. ಎಲ್ಲರಿಂದ ದೂರ ಇರೋಣ ಎಂಬಂತೆ ಇಂದಿನ ಜನರೇಶನ್ ಮುಂದಡಿಯಿಡುತ್ತಿರುವುದು ವ್ಯವಸ್ಥೆಯ ದುರ್ಬಲತೆಯನ್ನು ಎತ್ತಿ ತೋರಿಸುತ್ತಿದೆ.

ಮನುಷ್ಯನ ಸಂಬಂಧಗಳು ಅತಿ ವಿರಳತೆ-ಜಾಳತೆಯಾಗಿ ಕಾಣುತ್ತಿದೆ. ಹೆಚ್ಚು ಹೆಚ್ಚು ಮಾನವ ಸಂಬಳ್ವೆ ಸಮಯ ಹಾಳು ಎಂಬಂತಾಗಿದೆ. ಏನಾದರೂ ನೀ ಒಬ್ಬನೇ ನಿರ್ವಹಿಸು ಎನ್ನುವಂತಾಗಿದೆ. ಹೆಚ್ಚು ಸಾಧಕನಾಗಬೇಕೆಂದರೇ ಯಾರ ಕೈಗೂ ನೀ ಸಿಗದ ರೀತಿಯ ನಿನ್ನ ಬದುಕು ಕಟ್ಟಿಕೊಳ್ಳುವಂತನಾಗು ಎನ್ನುವಂತಾಗಿದೆ.

ಹೋಗಲಿ ಮನೆಯಲ್ಲಿರುವವರೊಂದಿಗಾದರೂ ದಿನದ ಒಂದು ಗಂಟೆ ಯಾವುದೇ ಪೇಸ್ ಬುಕ್, ಕಾಲ್, ವಾಟ್ಸ್ ಆಪ್, ಟಿ.ವಿ ಇವುಗಳ ಒಡನಾಟವಿಲ್ಲದೇ ಕೇವಲ ಮನುಷ್ಯರೊಂದಿಗೆ ಕಳೆಯುವುದೇ ದುರ್ಲಬ ಮತ್ತು ಕಷ್ಟಕರ ವಿಷಯವೆಂದರೇ ಅತಿಶಯೋಕ್ತಿಯಲ್ಲ.

ನೆನಸಿಕೊಂಡರೇ ಮೈ ಜುಂ ಅನಿಸುತ್ತದೆ.

ನಾವೇಕೆ ಇಷ್ಟೊಂದು ಯಾಂತ್ರಿಕರಾಗಿದ್ದೇವೆ...? ಹೀಗೆ ಮುಂದುವರಿದರೇ ಇದು ಎಲ್ಲಿಗೆ ಹೋಗಿ ನಿಲ್ಲುವುದೋ?

ಸ್ವಲ್ಪ ಗೂಗಲ್ ಮಾಡಿ ಉತ್ತರ ಕಂಡುಕೊಳ್ಳಬಹುದೇನೋ?

ಯೋಚಿಸಿ.

ಶನಿವಾರ, ಮಾರ್ಚ್ 5, 2016

ಹೆತ್ತ ತಾಯಿಯು ಒಂದು ಹೆಣ್ಣಲ್ಲವಾ?

ಹೆಣ್ಣು ಕಣ್ಣು.

ಪ್ರತಿಯೊಬ್ಬರಿಗೂ ನಾರಿಯ ಓಡನಾಟ ಯಾವುದಾದರೂ ಒಂದು ರೀತಿಯಲ್ಲಿ ಸ್ವ ಅನುಭವವಾಗಿರುತ್ತದೆ.

ಹುಟ್ಟುತ್ತ ತಾಯಿಯಾಗಿಯೋ, ಬೆಳೆಯುತ್ತಾ ಅಕ್ಕ ತಂಗಿಯಾಗಿಯೋ, ಪ್ರವರ್ಧಮಾನಕ್ಕೆ ಬಂದ ನಂತರ ಜೊತೆಗಾತಿಯಾಗಿಯೋ... ಗೆಳತಿಯಾಗಿಯೋ ಹೆಣ್ಣಿನ ಬಗ್ಗೆ ನಮ್ಮ ಭಾವನೆಯ ಒಂದು ಜಾಗವನ್ನು ತನ್ನದಾಗಿಸಿಕೊಂಡಿರುತ್ತಾಳೆ.

ಮಹಿಳೆಯರು ಸಮಾಜದ ಒಂದು ಅಂಗ. ಅವರುಗಳ ಸಮರ್ಪಣೆ ಮತ್ತು ಕೊಡುಗೆ ಒಂದು ಕುಟುಂಬದಿಂದ ಶುರುವಾಗಿ ಸಮಾಜದ ಎಲ್ಲಾ ರಂಗದಲ್ಲೂ ತನ್ನದೆಯಾದ ಛಾಪನ್ನು ಕಾಪಾಡಿಕೊಂಡಿದ್ದಾರೆ.

ಇಂದಿನ ದಿನದಲ್ಲಿ ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ಯಾರೂ ಹೆಣ್ಣೆಂದು ಕೇವಲವಾಗಿ ಕಾಣುವ ಮಾತಿಲ್ಲ.

ಮಹಿಳೆಯರು ಪುರುಷರು ಮಾಡುವ ಪ್ರತಿಯೊಂದು ಕೆಲಸ, ಕಲಿಕೆ, ಸಾಧನೆ, ಕಾಳಜಿ ಹೀಗೆ ಪ್ರತಿಯೊಂದರಲ್ಲೂ ತಾನು ಒಂದು ಕೈ ಮೇಲೆ ಎಂದು ನಿರೂಪಿಸಿದ್ದಾಳೆ.

ಮಹಿಳೆ ಕೇವಲ ಮನೆ ಅಥವಾ ಅಡಿಗೆ ಮನೆಗೆ ಮಾತ್ರ ಸೀಮಿತವಾಗಿಲ್ಲ. ಅವಳು ಬೇರೆಯವರಂತೆ ಮನೆಯಿಂದ ಹೊರಗೂ ಸಹ ದುಡಿಯಬಲ್ಲಳು.  ಅವಳು ಪುರುಷರ ಜೊತೆಗೂಡಿ ತನ್ನ ಜಾಣ್ಮೆ ಮತ್ತು ಶಕ್ತಿಯನ್ನು ತೋರಿಸಬಲ್ಲವಳಾಗಿದ್ದಾಳೆ.

ಮಹಿಳೆ ಅಬಲೆ ಎಂಬ ಮಾತು ಇಂದು ತುಂಬ ಸವಕಲಾಗಿದೆ.

ಎಲ್ಲಾ ಕ್ಷೇತ್ರಗಳಲ್ಲೂ ಅವಳು ತನ್ನ ಪಾಲನ್ನು ತೆಗೆದುಕೊಂಡು ತನ್ನನ್ನು ತಾನು ಏನೂ ಎಂಬುದನ್ನು ಜಗತ್ತಿಗೆ ಜಗಜ್ಜಾಹೀರು ಮಾಡಿದ್ದಾಳೆ.

ಹಿಂದೆ ಇದ್ದಂತೆ ಇಂದು ಕೇವಲ ಅಡಿಗೆ ಮನೆಯಲ್ಲಿ ಸೌಟು ಹಿಡಿದುಕೊಂಡು, ಮಕ್ಕಳು ಮರಿಗಳನ್ನು ಆಡಿಸಿಕೊಂಡು ದಿನಕಳೆಯುವ ದಿನಮಾನಗಳು ಯಾವಾಗಲೇ ಇತಿಹಾಸ ಸೇರಿದ್ದಾವೆ.

ಅವಳು ಹಗಲು ರಾತ್ರಿ ಪುರುಷರ ರೀತಿಯಲ್ಲಿ ಆಪೀಸ್ ನಲ್ಲಿ ದುಡಿಯ ಬಲ್ಲಳಾಗಿದ್ದಾಳೆ. ಇಂದು ಪುರುಷರಿಗೆ ಮಾತ್ರ ಈ ಕೆಲಸ ಎನ್ನುವುದೆಲ್ಲವನ್ನು ತಾನು ಮಾಡುತ್ತಿದ್ದಾಳೆ.

ಮಹಿಳೆಯರಿಗ್ಯಾಕೇ ಈ ಉಸಾಬರಿ ಎಂದು ಅಪ್ಪಿ ತಪ್ಪಿ ಮಾತನ್ನಾಡದಂತೆ ಮಾಡಿದ್ದಾಳೆ.

ಹುಡುಗರೇ ಸ್ವಲ್ಪ ಹುಷಾರು!

ಅವಳ ಜಾಣ್ಮೆ ಏನು? ತಾನೆಷ್ಟು ಬುದ್ಧಿವಂತಳು ಎಂಬುದನ್ನು ತಾನು ವಿದ್ಯಾಭ್ಯಾಸ ಮಾಡುವ ದಿನಗಳಲ್ಲೆ ನಿರೂಪಿಸಿದ್ದಾಳೆ.ಪುರುಷರ ಸರಿಸಮಾನ ಪ್ರತಿಯೊಂದು ಕಾರ್ಯಗಳನ್ನು ಹೆಚ್ಚು ಶ್ರದ್ಧೆ ಮತ್ತು ಅಸಕ್ತಿಯಿಂದ ಮಾಡಿ ಸಾಧನ ಶಿಖರವನ್ನೆ ಏರುತ್ತಿದ್ದಾಳೆ.

ತೊಟ್ಟಿಲು ತೂಗುವ ಕೈ ದೇಶ ಆಳುವುದು ಎಂಬುದನ್ನು ನಿಜ ಮಾಡುವಂತೆ, ನಮ್ಮ ದೇಶದಲ್ಲಿಯೇ ಹಿಂದೆ ಮತ್ತು ಪ್ರಸ್ತುತ ಸಾಕಷ್ಟು ಮಹಿಳಾ ಮಣಿಗಳು ಆಡಳಿತ ಚುಕ್ಕಾಣಿಯನ್ನು ತಮ್ಮ ಕೈಲ್ಲಿ ಹಿಡಿದುಕೊಂಡಿದ್ದಾರೆ.

ದೇಶದ ಆಡಳಿತವನ್ನೇ ತನ್ನ ಕೈಯಲ್ಲಿಡಿದುಕೊಂಡು ಹಲವು ವರುಷ ಸಲೀಸಾಗಿ ಸರ್ಕಾರವನ್ನು ನಿರ್ವಹಿಸಿದ ಕೀರ್ತಿ ಹಿಂದಿನ ಪ್ರಧಾನಿ ಇಂದಿರಾ ಗಾಂಧಿಗೆ ಸಲ್ಲಬೇಕಾಗಿದೆ.

ಅವರ ಹಾದಿಯಂತೆ ಅನೇಕ ರಾಜಾಕೀಯ ನಾಯಕಿಯರು ಇಂದಿಗೂ ಸರ್ಕಾರದ ಬಹುಮುಖ್ಯ ಸ್ಥಾನಗಳನ್ನು ಅಲಂಕರಿಸಿ ಪುರುಷಪುಂಗರಿಗಿಂತ ನಾವೇನು ಕಮ್ಮಿ ಇಲ್ಲ ಎಂಬುದನ್ನು ಮತ್ತೆ ಮತ್ತೆ ಸತ್ಯ ಮಾಡುತ್ತಿದ್ದಾರೆ.

ಹೀಗೆ ಪ್ರತಿಯೊಂದು ರಂಗದಲ್ಲೂ ಅಸಮಾನ್ಯ ಸಾಧನೆಗಳನ್ನು ಸ್ರ್ತೀಯರು ಮಾಡಿದ್ದಾರೆ.

ನಮ್ಮ ಭಾರತ ಹೆಣ್ಣಿಗೆ ಮಹತ್ವವಾದ ಸ್ಥಾನವನ್ನು ಕೊಟ್ಟಿರುವ ದೇಶ ಮತ್ತು ಸ್ರ್ತೀಯರನ್ನು ದೇವತೆಗಳಂತೆ ಕಂಡ ಭೂಮಿ.

ಇಂದು ಮಹಿಳೆಯರು ಮಾಡುವ ಕೆಲಸಗಳನ್ನು ಪುರುಷರು ಮಾಡಬಲ್ಲರು. ಯಾವುದೇ ಬೇದ ಭಾವವಿಲ್ಲದ ಪ್ರತಿಯೊಬ್ಬರೂ ಪ್ರತಿಯೊಂದು ಕೆಲಸವನ್ನು ಶೇರ್ ಮಾಡಿಕೊಂಡು ಮಾಡುವ ಕಲೆಯನ್ನು ಪ್ರತಿ ಕುಟುಂಬದಲ್ಲೂ ಕಾಣಬಹುದು.

ಕೇವಲ ಮಕ್ಕಳಿಗೆ ಜನ್ಮ ನೀಡುವ ಕಾಯಕ ಹೆಣ್ಣಿನದು ಎಂಬ ಹಣೆ ಪಟ್ಟಿ ಇಂದು ಕಳಚಿದೆ. ಮಕ್ಕಳ ಪಾಲನೆ ಪೋಷಣೆ ಗಂಡ ಹೆಂಡತಿ ಇಬ್ಬರದು ಎಂಬ ಪಾಠ ಪ್ರತಿಯೊಂದು ಕುಟುಂಬಕ್ಕೂ ಗೊತ್ತಾಗಿದೆ.

ಯಾಕೆಂದರೇ ಇಂದಿನ ಪಾಸ್ಟ್ ಲೈಫ್ ಯುಗದಲ್ಲಿ ಮತ್ತು ಚಿಕ್ಕ ಕುಟುಂಬದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ದುಡಿಯುತ್ತಿದ್ದಾರೆ. ಆದ್ದರಿಂದ ಸಂಸಾರದ ಚಕ್ರ ಸುಗಮವಾಗಿ ಚಲಿಸಬೇಕೆಂದರೇ ಇಬ್ಬರೂ ತಮ್ಮ ತಮ್ಮ ಕೆಲಸವನ್ನು ಸಮನಾಗಿ ಹಂಚಿಕೊಂದು ರ್ವಹಿಸುವ ಜರೂರತು ಇಂದು ಇದೆ.

ಇದು ನೀನೇ ಮಾಡಬೇಕು ಎಂಬ ರೂಲ್ಸ್ ಏನು ಇಲ್ಲ. ಅವಳು ಹೊರಗಡೆ ದುಡಿಯುತ್ತಾಳೆ. ಇವನು ಹೊರಗಡೆ ದುಡಿಯುತ್ತಾನೆ. ಆದ್ದರಿಂದ ಇವನು ಇವನು ಮನೆಯೊಳಗೆ ಕೈ ಅಸರೆಯಾಗಬೇಕು.

ನಮ್ಮ ಮಹಿಳೆಯರು ದೇಶ ವಿದೇಶದಲ್ಲೂ ತಮ್ಮ ಜಾಣ್ಮೆಯ ಮಹಿಮೆಯನ್ನು ತೋರಿಸಿದ್ದಾರೆ.

ಸಾಪ್ಟವೇರ್ ಕ್ಷೇತ್ರಗಳಲ್ಲಿರುವ ಮಹಿಳೆಯರು ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಅಲ್ಲಿ ನಮ್ಮದಲ್ಲದ ಜಾಗದಲ್ಲಿ ಅಷ್ಟೊಂದು ಧೈರ್ಯದಿಂದ ತಮ್ಮ ಕೆಲಸವನ್ನು ಮಾಡುತ್ತಿರುವುದು ನೋಡಿದರೇ ಎಷ್ಟೊಂದು ಹೆಮ್ಮೆ ಅನಿಸುತ್ತದೆ.

ಹಿಂದೆ ಮಹಿಳೆಯರು ಹೊರಗಡೆ ಹೆಜ್ಜೆ ಇಡುವುದೇ ಅಪರೂಪ ಅನಿಸಿತ್ತು. ಆದರೇ ಬದಲಾದ ಕಾಲಮಾನ ಮಹಿಳೆಯರ ಕೌಶಲವನ್ನು ನಾನ ರೀತಿಯಲ್ಲಿ ಬಳಸಿಕೊಳ್ಳುತ್ತಿರುವುದು ಸಮಾಜದ ಬಂಧನವನ್ನು ಇನ್ನೂ ಗಟ್ಟಿ ಮಾಡಿದೆ ಅಂದರೇ ಅತಿಶಯೋಕ್ತಿಯಲ್ಲ.

ಆದರೂ ಪ್ರತಿ ಮಹಿಳಾ ದಿನಾಚಾರಣೆಯ ಸಮಯದಲ್ಲಿ ಮಹಿಳೆಯರ ಹಕ್ಕು, ಅವರ ಶ್ರೇಯೋಭಿವೃದ್ಧಿಯ ಬಗ್ಗೆ ಜಗತ್ತಿನಲ್ಲೆಡೆ ಪುನಃ ಮಾತು ಕತೆಗಳು ಚರ್ಚೆಗಳು ನಡೆಯುತ್ತವೆ.

ಯಾಕೆಂದರೇ ಇಷ್ಟೆಲ್ಲ ರೀತಿಯಲ್ಲಿ ಸ್ರ್ತೀಯರು ನಾವ್ಯಾರಿಗೂ ಸಾಠಿಯಿಲ್ಲ ಎಂದು ನಿರೂಪಿಸಿದರೂ, ಯಾಕೋ ಅಲ್ಲಿ ಇಲ್ಲಿ ನಿತ್ಯ ಸ್ತ್ರೀಯರ ಮೇಲೆ ತಿಳಿದೋ ತಿಳಿಯದೋ ದೌರ್ಜನ್ಯ ಮತ್ತು ಅವರನ್ನು ನೋಯಿಸುವಂತ ಘಟನೆಗಳು ಘಟಿಸುತ್ತಲೇ ಇರುತ್ತವೆ.

ಇದು ಹೊರಗಡೆ ಮಾತ್ರ ಎಂದಲ್ಲ. ನಮ್ಮ ನಮ್ಮ ಮನೆಯಂಗಳದಲ್ಲಿಯೇ ನಮ್ಮ ಹತ್ತಿವರಿಂದಲೇ ಅನ್ಯಾಯಕ್ಕೆ, ದಬ್ಬಾಳಿಕೆಗಳಿಗೆ ನಮ್ಮ ನಿಮ್ಮ ಸ್ತ್ರೀ ಜೀವಗಳು ಬಲಿಯಾಗುತ್ತಿರುವುದು ಅತ್ಯಂತ ಅವಮಾನಕರ ಸಂಗತಿ.

ನಮ್ಮದೇ ಮನೆಯಲ್ಲಿ ನಮ್ಮದೇ ತಾಯಿ, ಮಗಳು, ತಂಗಿ, ಅಕ್ಕ, ಅತ್ತಿಗೆ, ಅಜ್ಜಿ ಇತ್ಯಾದಿ ಹೆಣ್ಣು ಜೀವಗಳನ್ನು ಅದು ಯಾಕೋ ಒಂದು ರೀತಿಯಲ್ಲಿ ಗೊತ್ತೊ ಗೊತ್ತಿಲ್ಲದೋ ಹೆಣ್ಣು ಮನಸ್ಸಿಗೆ ದಕ್ಕೆ ಬರುವಂತೆ ನೋವುಂಟು ಮಾಡುತ್ತಿದ್ದೇವೆ.

ಇದು ನಿಲ್ಲಬೇಕು.

ಒಂದು ಮನೆಯೆಂದರೇ.. ಅದು ಸುಂದರ ಮನೆಯೆಂದರೇ.. ಅದು ಕೇವಲ ಬೌತಿಕ ವಸ್ತುಗಳು ತುಂಬಿರುವ ಮನೆಯಲ್ಲ! ಅಲ್ಲಿ ಸ್ತ್ರೀಯೊಬ್ಬಳಿದ್ದಾಳೆಂದರೇ ಅಲ್ಲಿಯ ಒಟ್ಟು ಭಾವಪರಿತ ವಾತವರಣವೇ ಆಹ್ಲಾದಕವಾಗಿರುತ್ತಾದೆ. ಪುನಃ ಅದು ಸ್ತ್ರೀ ಮೊಲವಾದ ತಾಯಿ, ತಂಗಿ, ಗೆಳತಿ, ಮಗಳು  ಮನದ ರಾಗ ರಂಜನೆಯಿಂದ ಕೊಡಿರುತ್ತದೆ.

ಇಂಥ ಒಂದು ಒಟ್ಟು ಭಾವ ಪ್ರಫುಲತೆ ಮತ್ತು ಕರುಣ ಬಂಧನ ರಸ ಹೆಣ್ಣು ಜೀವದಿಂದ ಮಾತ್ರ ಹರಿಯಬೇಕು.

ಅವಳು ಎಷ್ಟೇ ಓದಿದ್ದರೂ, ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಎಷ್ಟೇ ದೊಡ್ಡ ಸಾಧನೆಯ ಶಿಖರವೇರಿದ್ದರೂ ಕುಟುಂಬವೆನ್ನುವ ಮನೆಯೊಳಗೆ ಹೆಜ್ಜೆ ಇಟ್ಟಳೆಂದರೇ ಅವಳ ಭಾವನೆಗಳ ಓಡನಾಟ ಅವಳ ಸುತ್ತಲಿನವರೆಲ್ಲರಿಗೂ ಪಸರಿಸುತ್ತದೆ.  ಅದು ಹೇಗೂ ಒಂದು ರೀತಿಯಲ್ಲಿ ಶಬ್ಧದಲ್ಲಿ ವರ್ಣಿಸಲಾರದ ಅನುಬಂಧನವನ್ನು ಪ್ರತಿಯೊಬ್ಬರಿಗೂ ಕೊಟ್ಟಿರುತ್ತದೆ.

ಅದಕ್ಕೆ ಹೇಳುವುದು ಮನೆ ಎನ್ನುವುದು, ಅದೇ ನೆಮ್ಮದಿಯ ಗೂಡು.

ಹೀಗೆ ಇರುವ ಮಹಿಳೆಯ ಪ್ರಸ್ತುತತೆ ಎಂದು ಬಿಡಿಸಲಾಗದ ನಂಟು ಎಂದರೇ ತಪ್ಪಲ್ಲ.

ಪುರುಷ - ಮಹಿಳೆ ಜೀವನದ ಅತಿ ಮುಖ್ಯ ಎರಡು ಚಕ್ರಗಳು. ಹಲವು ರೂಪದಲ್ಲಿ ಅದು ಸದಾ ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಪಾಡುವ ಪ್ರೀತಿಯ ಮನಸ್ಸು.

ಸ್ರ್ತೀ ಯೆಂದರೇ ತಾಳ್ಮೆ, ಸ್ರ್ತೀಯೆಂದರೇ ಕರುಣೆ, ಸ್ತ್ರೀಯೆಂದರೇ ಪ್ರೀತಿ ಇತ್ಯಾದಿ ನಾನಾ ರೂಪಕಗಳ ಒಟ್ಟು ಸಂಗಮವಾದ ಒಂದು ಜೀವಂತ ಪುತ್ಥಳಿಯನ್ನು ಗೌರವಯುತವಾಗಿ ಪ್ರತಿಯೊಬ್ಬರೂ ಪ್ರತಿ ಜಾಗದಲ್ಲೂ ಕಾಣಬೇಕೆಂಬಂತೆ.

ನಮ್ಮ ಹಿರಿಯರು ಹೇಳಿದ ಮಾತು ಎಂದೆಂದಿಗೂ ಅಜರಾಮರ ’ಎಲ್ಲಿ ಸ್ರ್ತೀಯರನ್ನು ಗೌರವಿಸುತ್ತಾರೊ ಅಲ್ಲಿ ದೇವತೆಗಳು ನೆಲಸಿರುತ್ತಾರೆ’.

ಈ ಮಾತು ಅವರು ಯಾಕೇ ಹೇಳಿದರೂ ಎಂಬುದು ಪ್ರತಿಯೊಬ್ಬರಿಗೂ ಗೊತ್ತು. ಹಿಂದಿನಿಂದಲೂ ಎಷ್ಟೇ ಸುಧಾರಣೆಯ ಹೊಸ ಗಾಳಿ ಬೀಸಿದ್ದರೂ ನಮ್ಮ ಪುರುಷ ಸಮಾಜ ಸ್ರ್ತೀಯರನ್ನು ಅದೇ ಹಳೆಯ ಜಾಡಿನಂತೆ ಕೇವಲವಾಗಿ ಕಾಣುತ್ತಿರುವುದು ದೌರ್ಬಗ್ಯದ ಸಂಗತಿ.

ಪ್ರತಿಯೊಬ್ಬರೂ ಕಣ್ಣು ಮನವನ್ನು ತೆರೆದು ನೋಡುವಂತಾಗಬೇಕು. ಯಾಕೆಂದರೇ ಪ್ರತಿಯೊಬ್ಬರೂ ಆ ಹೆಣ್ಣೆಂಬ ಹೆತ್ತಮ್ಮನಿಂದ ಜನ್ಮ ತಾಳಿರಿರುವವರು. ನಮ್ಮ ಮೊಲ ಬೇರಿರುವುದು ತಾಯಿಯಲ್ಲಿ.

ಹೆತ್ತ ತಾಯಿಯು ಒಂದು ಹೆಣ್ಣಲ್ಲವಾ?