ಮಂಗಳವಾರ, ಫೆಬ್ರವರಿ 28, 2012

ಸ್ತ್ರೀ ಅಂದರೇ......!

ಸ್ತ್ರೀ ಅಂದರೇ ತತ್ ಕ್ಷಣ ಕಣ್ಣ ಮುಂದೆ ಬರುವ ಪಾತ್ರ ಅಂದರೇ ಅದು ಅಮ್ಮ ಮಾತ್ರ. ಹೆಣ್ಣು ಅಂದರೇ ಕರುಣಾಮಹಿ, ಮಮತೆಯ ಮಡಿಲು, ಅಸರೆಯ ಅಂಗೈ ಎಂಬೆಲ್ಲಾ ನಂಬಿಕೆಗಳು ತಮ್ಮ ತಮ್ಮ ತಾಯಂದಿರನ್ನು ನೋಡಿದ ಮೇಲೆ ಮನಸ್ಸಿನಲ್ಲಿ ಸ್ಥಾಯಿಯಾಗಿ ನಿಂತಿರುತ್ತದೆ.

ಯಾರನ್ನಾದರೂ ಕೇಳಿ "ನಿಮ್ಮ ಮೇಲೆ ಪರಿಣಾಮ ಬೀರಿದ ಒಂದೇ ಒಂದು ಹೆಣ್ಣನ್ನು ಹೆಸರಿಸಿ" ಅಂದರೇ. ಹಿಂದೆ ಮುಂದೆ ನೋಡದೆ ತನ್ನ ತಾಯಿಯ ಹೆಸರನ್ನು ಹೇಳೇ ಹೇಳಿರುತ್ತೇವೆ. ಅಷ್ಟರ ಮಟ್ಟಿಗೆ ನಮ್ಮ ಜೀವವಿರುವವರೆಗೂ ಅಮ್ಮನನ್ನು ಬಿಟ್ಟರೆ ಯಾರೂ ಅಲ್ಟಿ ಮೆಟ್ ಆದ ಮತ್ತೊಬ್ಬ ಹೆಣ್ಣು ಪಾತ್ರ ಪ್ರಪಂಚ ಪೂರ್ತಿ ಹುಡುಕಿದರೂ ಸಿಗಲಾರದೇನೋ?

ಇಂದಿನ ನಮ್ಮ ಈ ಮುಂದುವರೆದ ಯುಗದಲ್ಲಿ ಹೆಣ್ಣು ಕೆಲಸ ಮಾಡದ ರಂಗವಿಲ್ಲ. ಅಡಿಗೆ ಮನೆಯಿಂದ ಹಿಡಿದು ಆಕಾಶದಲ್ಲಿ ವಿಮಾನವನ್ನು ಚಾಲನೆ ಮಾಡುವವರೆಗೂ ಅಗಾಧವಾಗಿ ಗಂಡಸರಿಗಿಂತ ಒಂದು ಕೈ ಮೇಲಾಗಿ ದಾಪುಗಾಲನ್ನಿಟ್ಟು ನಡೆಯುತ್ತಿದ್ದಾಳೆ. ಅಪಾರ ಬುದ್ಧಿಮತ್ತೆ ಮತ್ತು ಜಾಣತನದಿಂದ ಪ್ರತಿಯೊಂದನ್ನು ಸೂಕ್ಷ್ಮವಾಗಿ ತನ್ನದನ್ನಾಗಿ ಮಾಡಿಕೊಳ್ಳುತ್ತಿದ್ದಾಳೆ.

ಪ್ರತಿಯೊಬ್ಬರಿಗೂ ತಾಯಿಯೇ ಮೊದಲ ಗುರು. ಅವಳು ಹಾಕಿಕೊಟ್ಟ ದಾರಿಯಲ್ಲಿಯೇ ಪ್ರತಿಯೊಬ್ಬರ ಜೀವನದ ಚಕ್ರ ಚಲಿಸುವುದು.

ಗಮನಿಸಿ ಮನೆಯಲ್ಲಿ ಅಮ್ಮ ಅಂದರೇ ಒಂದು ನಿರ್ಧಿಷ್ಟ ವ್ಯಾಖ್ಯಾನವನ್ನು ಪದಗಳಲ್ಲಿ ಕಟ್ಟಿಕೊಡುವುದಂತೂ ದುರ್ಲಬ.

ಅವಳೇ ಎಲ್ಲಾ ಮುಂಜಾನೆಯಿಂದ ಎಲ್ಲಾರೂ ತಮ್ಮ ತಮ್ಮ ಹಾಸಿಗೆಗೆ ಹೋಗುವವರೆಗೂ ಅವಳ ಶಕ್ತಿವಂತಹ ದುಡಿಮೆಯನ್ನು ಯಾವ ರೀತಿಯಲ್ಲೂ ಅಳೆಯಲು ಸಾಧ್ಯವಿಲ್ಲ.

ನನಗೆ ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ. ಆ ದೇವರು ಈ ಅಮ್ಮ ಎಂಬ ಜೀವಕ್ಕೆ ಇಷ್ಟೊಂದು ಶಕ್ತಿಯನ್ನು ಜೀವಂತಿಕೆಯನ್ನು ಇಟ್ಟಿರುವುದಾದರೂ ಎಲ್ಲಿ? ಅಂತಾ. ಗೊತ್ತಿಲ್ಲ ಬಿಡಿ ಅವಳ ಒಲುಮೆ, ನಲಿಮೆ,ಪ್ರೀತಿ,ಸಹಕಾರ,ಅಕ್ಕರೆ ಈ ಎಲ್ಲಾ ಮೊಲಗಳನ್ನು ತನ್ನ ಮಡಿಲಲ್ಲಿ ಅಗಾಧವಾಗಿ ಇಟ್ಟುಕೊಂಡಿರುವುದರಿಂದಲೇ ಬೇಸರವಿಲ್ಲದ ಮನೆಯಲ್ಲಿನ ದುಡಿತ, ಹೊರಗಡೆಯ ಕೆಲಸ ಒಂದೇ ಎರಡೇ ಪ್ರತಿಯೊಂದನ್ನೂ ಅಷ್ಟೇ ಅಕ್ಕರೆಯಿಂದ ಮಾಡುವಳು.




ಅಮ್ಮ ಮಾಡುವ ಒಂದು ಕೆಲಸವನ್ನು ಪ್ರೀತಿಯಿಂದ ಅಚ್ಚುಕಟ್ಟಾಗಿ ಗಂಡು ಎಂದು ಎದೆ ತಟ್ಟುವ ಯಾವ ಪ್ರಾಣಿಯು ಮಾಡಲಾರದೂ. ಅದೇ ಗೊಣಗಾಟ ಮತ್ತು ಅದೇ ಸಿಟ್ಟು ಸೇಡವು ಕೆಲಸ ಮುಗಿಯುವಷ್ಟೊತ್ತಿಗೆ. ಅಲ್ಲವಾ?

ಪ್ರತಿಯೊಬ್ಬ ಸಾಧಕನ ಹಿಂದೆ ಒಂದು ಹೆಣ್ಣು ಜೀವ ಇರಲೇಬೇಕು ಎಂಬ ನಾಣ್ಣುಡಿಯಂತೆ. ಹೆಣ್ಣು ಇಲ್ಲದ ಗೆಲುವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ಅನ್ನಿಸುತ್ತೇ!

ಗಮನಿಸಿ ನಮ್ಮ ಮನೆಯ ಮುಂದೆ ಮಾಡುವ ನಮ್ಮ ಸ್ತ್ರೀಯರ ಸೂಪ್ಪು, ತರಕಾರಿ, ಹಣ್ಣು ಹಂಪಲುಗಳ ಖರೀದಿಯನ್ನು ಯಾವ ಬ್ಯುಸಿನೇಸ್ ಸ್ಕೋಲಲ್ಲೂ ಹೇಳಿಕೊಡಲಾಗದಂತಹ ವ್ಯಾಪಾರದ ಮಹಿಮೆಯನ್ನು ಪ್ರದರ್ಶಿಸುತ್ತಾರೆ. ಇದಕ್ಕಾಗಿ ಅವರುಗಳು ಎಲ್ಲಿಯು ಓದಿರಲಾರರು ಮತ್ತು ತಿಳಿದಿರಲಾರರು. ಅಂದರೇ ಇದು ಅವರಲ್ಲಿ ಸ್ವಾಭಾವಿಕವಾಗಿ ಬಂದಿರುತ್ತದೇನೂ?

ಹೆಣ್ಣಾಸರೆಯಿಲ್ಲದ ಮನೆ ಮನೆಯಲ್ಲಾ! ಇದು ನಾವುಗಳು ಇಲ್ಲಿ ಬ್ಯಾಚಲರ್ ಆಗಿ ಜೀವಿಸುತ್ತಿರುವ ರೋಮ್ ಗಳನ್ನು ಗಮನಿಸಿದರೇ ತಿಳಿದೇ ತಿಳಿಯುತ್ತದೆ. ಎಷ್ಟೊಂದು ಕೆಟ್ಟದಾಗಿ ಇಟ್ಟುಕೊಂಡಿರುತ್ತೇವೆ ಅಂದರೇ ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲಾ ಬಿಡಿ. ಇದು ಸ್ತ್ರೀ ಇಲ್ಲದ ಮನೆಯೆಂಬುದನ್ನು ಸಾವಿರ ಸಾವಿರ ಬಾರಿ ನಿರೂಪಿಸಿರುತ್ತದೆ.

ಇನ್ನೂ ಬೆಂಗಳೂರಿನಂತಹ ನಗರಗಳಲ್ಲಿ ಮನೆಯ ವಾರಸುದಾರರು ಮನೆ ಬಾಡಿಗೆಗೆ ಕೊಡುವಾಗ ಕೇಳುವ ಸಾಮಾನ್ಯ ಪ್ರಶ್ನೆ ಬ್ಯಾಚುಲರಾ..? ಮನೆ ಸಿಗಲ್ಲ ಬಿಡಿ! ಎನ್ನುತ್ತಾರೆ. ಅಂದರೇ ಅವರುಗಳಿಗೆ ಗೊತ್ತು. ನಮ್ಮ ಮನೆಯನ್ನು ಅಬ್ಬೇಪಾರಿಗಳಾದ ಈ ಹುಡುಗರಿಗೆ ಕೊಟ್ಟರೆ ಯಾವ ಸ್ಥಿತಿಗೆ ತರುವವರು ಎಂಬುದು. ಅಷ್ಟರ ಮಟ್ಟಿಗೆ ಹೆಣ್ಣಿನ ಹಿರಿಮೆ ಸ್ಥಾಪಿತವಾಗಿದೆ.

ಇದು ನಮ್ಮ ಪುರಾತನದಿಂದ ಚಾಲ್ತಿಯಲ್ಲಿರುವ ನಡಾವಳಿ ಅಥಾವ ಕಲಿಕೆಯೋ ಗೊತ್ತಿಲ್ಲಾ. ಮನೆಯಲ್ಲಿ ಅಕ್ಕ-ತಂಗಿ-ತಮ್ಮಂದಿರು-ಅಣ್ಣಂದಿರು ಇದ್ದರೇ ಅಂದರೇ ಅಲ್ಲಿ ಹೆಚ್ಚಾಗಿ ಚಿಕ್ಕ ವಯಸ್ಸಿನಿಂದ ಮನೆಗೆಲಸವನ್ನು ಮಾಡಲು ಹೆತ್ತವರು ಹಚ್ಚುವುದು ಹೆಣ್ಣು ಮಕ್ಕಳಿಗೆ ಮಾತ್ರ. ಇದು ಅವರನ್ನು ಯಾವ ಯಾವ ಪರಿಯಲ್ಲಿ ನಿಪುಣತೆಯನ್ನು ಕಲಿಸುತ್ತದೆ ಅಂದರೇ ಒಂದಷ್ಟು ವಯಸ್ಸಿಗೆ ಇಡೀ ಸಂಸಾರವನ್ನೇ ತೂಗಿಕೊಂಡು ಹೋಗುವಷ್ಟರ ಮಟ್ಟಿಗೆ. ಅದೇ ಈ ಗಂಡು ಜೀವಗಳನ್ನು ಕೇಳಿ ಉಂಡಾಡಿ ಗುಂಡರಾಗಿರುತ್ತಾರೆ.ಜವಬ್ದಾರಿಯಿಲ್ಲದವರುಗಳು!!

ಶಿಕ್ಷಣ ರಂಗದಲ್ಲಿ ಸ್ತ್ರೀಯರ ಮೇಲುಗೈಯನ್ನು ಪ್ರತಿ ವರುಷ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪಲಿತಾಂಶಗಳು ಧೃಡಪಡಿಸುತ್ತಿದೆ. ಹೆಣ್ಣು ಮುಂದೆ ಅವರ ಹಿಂದೆ ಈ ಗಂಡು ಹುಡುಗರು!

ನಗಬೇಡಿ ಮಾರಾಯ್ರೇ! ಇದೇ ನಿಜಾವದ ಪ್ಯಾಕ್ಟ್!

ನೀವು ನಿಮ್ಮ ಬಾಲ್ಯದಲ್ಲಿ ಓದಿರಬಹುದು. ದಾನಕ್ಕೆ ಹೆಸರಾದ ದಾನಚಿಂತಾಮಣಿ ಅತ್ತಿಮಬ್ಬೆ ಯಾವ ರೀತಿಯಲ್ಲಿ ತನ್ನ ಸಂಸ್ಥಾನದಲ್ಲಿ ಕವಿಪುಂಗರುಗಳಿಗೆ ಅಸರೆಯಾಗಿ ಉತ್ತಮೋತ್ತಮ ಕೃತಿ ರತ್ನಗಳ ಜನನಕ್ಕೆ ಕಾರಣಿಭೂತಳಾಗಿದ್ದಳು. ೧೨ ನೇ ಶತಮಾನದ ಅಕ್ಕಮಹಾದೇವಿಯ ವಚನಗಳು ಮತ್ತು ಅಲ್ಲಿನ ಭಕ್ತಿ ರಸವನ್ನು ಯಾರೂ ಮೀರಿಸಲಾರರೂ. ಕಿತ್ತೂರು ಚೆನ್ನಮ್ಮನಂತಹ ವೀರ ಮಹಿಳೆಯನ್ನು ಈ ನಾಡು ಕಂಡಿದೆ. ಸಾಮಾನ್ಯ ಮಹಿಳೆಯಾದ ಓಬವ್ವ ದೇಶ ರಕ್ಷಣೆಗಾಗಿ ಒನಕೆಯನ್ನು ಆಯುಧವಾಗಿ ಉಪಯೋಗಿಸಿ ಕನ್ನಡ ನಾಡಿನಲ್ಲಿ ಹೆಸರಾದದ್ದೂ. ಕರುಣೆಗೆ ಮತ್ತೊಂದು ಹೆಸರಾದ ಮದರ್ ಥೇರೆಸಾ. ಗಂಡಸರು ಹುಬ್ಬೇರಿಸುವಂತೇ ದೇಶವನ್ನೂ ಆಳಿದ ಇಂದಿರಾಗಾಂಧಿ. ಕ್ರೀಡಾ ರಂಗದಲ್ಲಿ ಎಲ್ಲಾರ ಬಾಯಿಯಲ್ಲೂ ಇಂದಿಗೂ ಯಾರಾದರೂ ಜೋರಾಗಿ ಓಡಿದರೆ ಏ ಯಾಕೆ ಪಿ.ಟಿ ಊಷಾ ರೀತಿಯಲ್ಲಿ ಓಡುತ್ತಿಯಾ ಎಂದು ನಿತ್ಯ ನೆನೆಯುವಂತೆ ಮಾಡಿರುವ ಊಷಾ.

ಹೀಗೆ ಇತಿಹಾಸದೊದ್ದಕ್ಕೂ ಇಂದಿಗೂ ಎಲ್ಲಾ ರಂಗದಲ್ಲೂ ಮಹಿಳೆಯರು ನಾವುಗಳು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನೂ ನಿತ್ಯ ನಿರೂಪಿಸುತ್ತಿದ್ದಾರೆ.

ಆದರೂ ಈ ಭಾರತದಲ್ಲಿ ಹೆಣ್ಣು ಎಂದರೇ ಅದೂ ಯಾಕೋ ಒಂದು ಕೀಳರಿಮೆಯನ್ನು ನಮ್ಮ ಸಮಾಜ ಹಿಂದಿನಿಂದಲೂ ಮೌಢ್ಯಯುತವಾಗಿ (ಗುಟ್ಟಾಗಿ?) ಇಟ್ಟುಕೊಂಡು ನಿತ್ಯ ಮಹಿಳೆಯರನ್ನು ಕಷ್ಟಕ್ಕೆ ದೂಡುತ್ತಿದ್ದಾರೆ. ಪುರುಷರ ದಬ್ಬಾಳಿಕೆಯನ್ನು ಸ್ತ್ರೀ ನಿತ್ಯ ಅನುಭವಿಸುತ್ತಿದ್ದಾಳೆ. ನಮ್ಮ ನಿಮ್ಮ ಅಮ್ಮನಂತಹ, ಅಕ್ಕನಂತಹ, ತಂಗಿಯಂತಹ, ಗೆಳತಿಯಂತಹ ಸಾವಿರಾರು ಮಹಿಳೆಯರು ಪುರುಷರ ಪೌರುಷಕ್ಕೆ ಬಲಿಯಾಗಿ ತಮ್ಮ ಜೀವವನ್ನು ಅರ್ಪಿಸುತ್ತಿದ್ದಾಳೆ. ಇದು ಯಾಕೇ?

ನಾವುಗಳು ಹೆಮ್ಮೆಪಡುವ ರೀತಿಯಲ್ಲಿ ಅವಳು ಎಲ್ಲಾದರಲ್ಲೂ ಮುಂದಿರುವವಂತೆ ಕಂಡರೂ ಅವಳನ್ನು ಇನ್ನೂ ಹಿಂದಕ್ಕೆ ದೂಡುವ ಅಸಹ್ಯ ಬೆಳವಣಿಗೆಗಳನ್ನು ಕಾಣದ ಕೈಗಳು ಮಾಡುತ್ತಲೇ ಇದ್ದಾವೆ. ಈ ರೀತಿಯ ದೋರಣೆಯನ್ನು ಪುರುಷ ಸಮಾಜ ನಿಲ್ಲಿಸುವಂತಾಗಬೇಕು.

ಗಮನಿಸಿ ವರ್ತಮಾನ ಪತ್ರಿಕೆಗಳ ಎರಡು ಮತ್ತು ಮೂರನೇಯ ಪುಟದಲ್ಲಿ ನಿತ್ಯ ಒಂದು ವರದಕ್ಷೀಣೆ ಸಾವಿನ ಸುದ್ಧಿ ಓದುತ್ತಲೇ ಇರುತ್ತೇವೆ..!

ನಮ್ಮ ನಮ್ಮ ಮನೆಯಲ್ಲಿಯೇ ಹೆಣ್ಣಿಗೆ ರಕ್ಷಣೆ ಇಲ್ಲದಿದ್ದರೇ ಇನ್ನೂ ಎಲ್ಲಿ ಸಿಗುವುದು ಯೋಚಿಸಿ.




ಗಾಂಧಿ ಹೇಳುತ್ತಿದ್ದರು "ಎಂದು ಒಬ್ಬ ಮಹಿಳೆ ನಿರ್ಭಯವಾಗಿ ಮದ್ಯರಾತ್ರಿ ಒಂಟಿಯಾಗಿ ನಮ್ಮ ರಸ್ತೆಯಲ್ಲಿ ಓಡಾಡುವಂತಾದರೇ ಮಾತ್ರ ನಿಜವಾಗಿಯು ಭಾರತ ಸ್ವಾತಂತ್ರ್ಯ ಗಳಿಸಿದಂತೇ ಎಂದು". ಇದು ಇಂದಿಗೂ ನಮ್ಮಲ್ಲಿ ಯಾಕೆ ಸಾಧ್ಯವಾಗಿಲ್ಲಾ?

"ಎಲ್ಲಿ ಸ್ತ್ರೀಯರನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ" ಎಂದು ಬೋಧಿಸಿದ ನಾಡಿನಲ್ಲಿ ಇನ್ನೂ ಹೆಣ್ಣಿಗೆ ಸರಿಯಾದ ರಕ್ಷಣೆ ಗೌರವ ಸಿಕ್ಕಿಲ್ಲಾ ಅಂದ್ರೇ ನಾವುಗಳು ನಾಚಿಕೆಪಡುವಂತಹ ವಿಷಯ ಎಂದು ಯಾಕೆ ನಾವುಗಳೆಲ್ಲಾ ಚಿಂತಿಸುತ್ತಿಲ್ಲಾ.

ಹಿಂದೆ ಇದ್ದಂತಹ ನಂಬಿಕೆಗಳೇ ಇಂದಿಗೂ ವಿದ್ಯಾವಂತರು, ನಾಯಕರುಗಳು, ಯೋಜನೆಗಳನ್ನು ರೂಪಿಸುವವರ ಮನದಲ್ಲಿ ಮಹಿಳೆಯೆಂದರೇ ಅವಳು ನಾಲ್ಕು ಗೋಡೆಯಲ್ಲಿ ಮಾತ್ರ ಇರಬೇಕಾದವಳು. ಗಂಡಸರು ಹೇಳಿದಂತೆ ಕೇಳುತ್ತಾ ಅವರುಗಳಿಗೆ ದಾಸಿಯಾಗಿ ಸೇವೆ ಮಾಡತಕ್ಕವಳು ಎಂಬ ಮನೋಭಾವದಲ್ಲಿಯೇ ಪುರುಷರುಗಳು ನೋಡುತ್ತಿದ್ದಾರಲ್ಲಾ ಏಕೆ?

ಅವಕಾಶ ಸಿಕ್ಕಿದ ಕಡೆಯೆಲ್ಲಾ ಹೆಣ್ಣಿನ ಮೇಲೆ ವಿವಿಧ ರೀತಿಯಲ್ಲಿ ನೋವನ್ನುಂಟು ಮಾಡುವುದಕ್ಕೇ ಹೆಣ್ಣು ಮತ್ತು ಗಂಡಸರು ಒಟ್ಟಿಗೆ ಸೇರಿ ನಿಲ್ಲುವವರಲ್ಲಾ ಏಕೆ?

ಹೆಣ್ಣಿಗೆ ಹೆಣ್ಣು ಶತ್ರು ಎಂಬ ರೀತಿಯಲ್ಲಿ ಮನೆಗೆ ಬಂದಂತಹ ಸೂಸೆಯಂದಿರನ್ನು ಅತ್ತೆಯಂದಿರು ಕಾಣುವ ರೀತಿ. ಸೂಸೆಯಂದಿರು ಅತ್ತೆಯನ್ನು ಕಾಣುವ ರೀತಿ ಏನನ್ನೂ ನಿದರ್ಶಿಸುತ್ತದೆ?

ಆದರೂ ಗಂಡು ಹೆಣ್ಣನ್ನೂ ಯಾವ್ಯಾವ ರೀತಿಯಲ್ಲಿ ದುರುಪಯೋಗಪಡಿಸಿಕೊಂಡರೂ, ಅವಳು ಮಾತ್ರ ಅವನ ಏಳ್ಗೆಗೆ, ಬಾಳ್ವೆಗೆ, ತನ್ನ ಜೀವನ ಮುಂದುವರಿಕೆಗೆ ಇತ್ಯಾದಿ ಅಗತ್ಯತೆಗಳಿಗೆ ಬೇಕೇ ಬೇಕು.

ಒಂದು ಕಡೆ ಅವಳನ್ನು ಪಡೆಯಲು ಮಾಡುವ ಪರಿ ಪರಿ ಸಾಧನೆಗಳು. ಹಾಗೆಯೇ ಅವಳನ್ನು ನೋಯಿಸುವ ಸರಮಾಲೆ ಇನ್ನೊಂದು ಕಡೆ.

ಇದು ಕೊಂಚ ಬದಲಾವಣೆಗೊಳ್ಳಬೇಕು. ಚಿಂತಿಸುವ ಪರಿಯಲ್ಲಿ ಪ್ರತಿಯೊಬ್ಬರೂ ನವೀನತೆಯನ್ನು ತಂದುಕೊಳ್ಳಬೇಕು. ಪ್ರತಿಯೊಬ್ಬರೂ ಆ ಸ್ತ್ರೀ ಎಂಬ ಅಮ್ಮನೊಡಲಿನಿಂದಲೇ ಈ ಜಗತ್ತಿಗೆ ಕಾಲು ಇಟ್ಟಿರುವುದು. ಪ್ರತಿ ಹೆಣ್ಣಿನಲ್ಲೂ ಆ ಅಮ್ಮನಂತಹ ಸೆಲೆ ಇದ್ದೇ ಇರುತ್ತದೆ. ಗಂಡಿನಲ್ಲೂ ಸಹ! ಅವಳಿಗೆ ನೋಯಿಸುವವಂತಹ ನಡಾವಳಿ ಇನ್ನಾದರೂ ನಿಲ್ಲಲೇ ಬೇಕು.

ವಿಶ್ವ ಮಹಿಳಾ ದಿನಾಚಾರಣೆಯ ಶುಭಾಶಯಗಳು!!!

ಶನಿವಾರ, ಫೆಬ್ರವರಿ 25, 2012

ವಿದೇಶ ಪ್ರವಾಸವೆಂದರೇ....

ವಿದೇಶ ಪ್ರವಾಸ ಇಂದಿನ ದಿನಗಳಲ್ಲಿ ನಮ್ಮ ಯುವಕ ಯುವತಿಯರುಗಳಿಗೆ ಇಲ್ಲಿಯೇ ಹತ್ತಿರದ ಪಕ್ಕದ ಕೇರಿಗಳಿಗೆ ಹೋಗಿ ಒಂದು ಸುತ್ತು ಹಾಕಿಕೊಂಡು ಬಂದಂತಾಗಿದೆ. ಮುಂಚೆ ಇದ್ದಂತೆ ವಿದೇಶ ಪ್ರವಾಸವೆಂದರೇ ಸಾಕು ಸಾಲು ಸಾಲು ಹುಬ್ಬುಗಳು ಹುಬ್ಬೇರುತ್ತಿದ್ದವು. ಇದಕ್ಕೆಲ್ಲಾ ನಾವುಗಳು ಜೈ ಅನ್ನಬೇಕಾಗಿರುವುದು ಐ.ಟಿ, ಬಿ.ಟಿ ಮತ್ತು ಬಿ.ಪಿ.ಓ ಕಂಪನಿಗಳಿಗೆ.

ಸಾವಿರಾರು ಮೈಲಿ ದೂರದಲ್ಲಿರುವ ದೇಶಗಳಿಗೆ ನಮ್ಮ ಹುಡುಗ/ಹುಡಿಗಿಯರನ್ನು ಸಾವಿರಾರು ರೂಪಾಯಿಗಳು ವೆಚ್ಚವನ್ನು ಭರಿಸುತ್ತಾ ಕಳಿಸುತ್ತಿದ್ದಾರೆ. ಇಡೀ ಜಗತ್ತನ್ನೇ ತನ್ನ ಸರ್ವೀಸ್ ನಲ್ಲಿ ಒಂದು ಸುತ್ತು ಹಾಕಿಬಿಟ್ಟಿರುತ್ತಾನೆ/ಳೆ.

ಇದು ಒಂದು ರೀತಿಯಲ್ಲಿ ನಮ್ಮಗಳಿಗೆ ಅಪರೂಪದ ಸದಾವಕಾಶ.

ಯೋಚಿಸಿ ನಮ್ಮ ಅಪ್ಪ/ಅಮ್ಮ ಅವರುಗಳು ಜೀವಮಾನದಲ್ಲಿ ಕೇವಲ ಅಂದರೇ ಪಕ್ಕದ ಒಂದು ಹೊರ ರಾಜ್ಯಕ್ಕೆ ಹೋಗಿರಬಹುದು. ವಿಮಾನಯಾನ ಅಂದರೇ ಅಶ್ಚರ್ಯಕರವಾಗಿ ಕಣ್ ಕಣ್ ಬಿಟ್ಟು ಕೇಳುತ್ತಾರೆ. ಅವರುಗಳು ಕೆಲಸ ಮಾಡುವ ಜಾಗದಲ್ಲಿ ಈ ರೀತಿಯ ವ್ಯವಸ್ಥೆ ಏನಂದರೂ ಬರುವುದಕ್ಕೆ ಅವಕಾಶವಿಲ್ಲ ಬಿಡಿ. ಯಾಕೆಂದರೇ ಅವರುಗಳು ಕೆಲಸ ಮಾಡುವುದು ತಮ್ಮ ದೇಶಕ್ಕಾಗಿ. ನಾವುಗಳು ಮಾಡುವುದು.........? ಬೇಡ ಬಿಡಿ ಗೊತ್ತಿದೆಯೆಲ್ಲಾ.

ಮೂರು ಮೂರು ತಿಂಗಳಿಗೂ ಒಂದೊಂದು ದೇಶ ಸುತ್ತುವ ಜನಗಳು ನಮ್ಮ ಸುತ್ತ ಮುತ್ತ ಇದ್ದಾರೆ. ಪಾಸ್ ಪೋರ್ಟನ ಪುಟಗಳ ಯಾವುದೇ ಒಂದು ಚಿಕ್ಕ ಮೊಲೆಯು ಖಾಲಿ ಇರದ ರೀತಿಯಲ್ಲಿ ಸ್ಟಾಂಪಿಂಗ್ ಆಗಿಬಿಟ್ಟಿರುತ್ತದೆ. ಇದಕ್ಕೆಲ್ಲಾ ಅವರುಗಳು ಕೆಲಸ ಮಾಡುವ ಕಂಪನಿಗಳಿಗೆ ಹೇಳಿ ಜೈ ಜೈ!!

ಇಲ್ಲಿ ಮಾಡುವ ಕೆಲಸವನ್ನೇ ಅಲ್ಲಿ ಮಾಡಿ ಡಾಲರ್, ಯುರೋ ರೂಪಾಯಿಗಳಲ್ಲಿ ಸಂಬಳ ಎಂದು ಎಣಿಸಿಕೊಳ್ಳುತ್ತಾರೆ. ಬಂದಂತಹ ಸಂಬಳವನ್ನು ರೂಪಾಯಿಯಿಂದ ಗುಣಿಸಿಕೊಂಡು ಹೆಮ್ಮೆ ಪಡುತ್ತಾರೆ. ಹೀಗೆ ಹೊರ ದೇಶದಲ್ಲಿ ಮಾಡುವ ಕೆಲಸವನ್ನು ಇನ್ನೂ ಹತ್ತು ವರ್ಷ ಮಾಡಿದ್ದರೂ ಇಷ್ಟೊಂದು ದುಡ್ಡು ಶೇಕರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಆನಂದ ಪಡುತ್ತಾರೆ. ಗ್ರೇಟ್!




"ಅಮೇರಿಕಾದಲ್ಲಿ ಗೂರೂರು" ಪ್ರಸಿದ್ಧ ಕನ್ನಡ ಪ್ರವಾಸ ಕಥನವನ್ನು ತಿರುಗ ಮುರುಗ ಲೆಕ್ಕವಿಲ್ಲದಷ್ಟು ಭಾರಿ ಓದುವ ರುಚಿಯಿರುವವರು ಓದಿರಬಹುದು. ಅಷ್ಟೊಂದು ಕುತೂಹಲ ಹೊರದೇಶದ ಬಗ್ಗೆ? ಯಾವುದಾದರೂ ಸಿನಿಮಾದಲ್ಲಿ ಹೊರದೇಶದ ಸೀನರಿಗಳಿದ್ದರೇ ನಾವುಗಳು ಫುಲ್ ಚಿತ್ತ್! "ಏನಾಮ್ಮ ಹೀಗೂ ಉಂಟಾ.. ಏನ್ ರೋಡ್ ಗಳು, ಏನ್ ಜನಗಳು ಎಲ್ಲಾ ಕ್ಲೀನ್ ವೈಟ್.. ಸುಪರ್ ಕಣೋ.." ಎಂಬ ಉದ್ಗಾರ!

ಈ ರೀತಿಯ ಅಚ್ಚರಿಯ ಜಗತ್ತಿಗೆ ತಾನೇ ಕಾಲಿರಿಸಿಬಿಟ್ಟರೇ.. ಕೇಳಬೇಕೆ? ಸ್ವರ್ಗಕ್ಕೆ ಮೂರು ಗೇಣು.

ವಿಮಾನಯಾನವು ಸಹ ಸ್ವರ್ಗಕ್ಕೆ ತೀರ ಹತ್ತಿರವಿದೆ ಎಂಬ ಭಾವನೆಯನ್ನು ಪ್ರತಿಯೊಬ್ಬರೂ ವಿಮಾನದಲ್ಲಿ ಕುಳಿತು ಆಕಾಶದಲ್ಲಿ ಪ್ರಯಾಣಿಸುವಾಗ ಅನುಭವಿಸಿರುತ್ತಾರೆ.

ವಿದೇಶಕ್ಕೆ ಹೋಗುತ್ತಿದ್ದೀಯಾ ಎಲ್ಲಾ ಪ್ಯಾಕಿಂಗ್ ಅಯ್ತಾ? ವಿಸಾ, ಪಾಸ್ ಪೋರ್ಟ್ ಪೇಪರ್ಸ್ ಎಲ್ಲಾ ಸರಿಯಾಗಿ ಇಟ್ಟುಕೊಂಡಿದ್ದೀಯಾ. ಒಂದಷ್ಟು ಅಕ್ಕಿ ಜಾಸ್ತಿನೇ ತೆಗೆದುಕೊಂಡು ಹೋಗು. ಅಲ್ಲಿ ಯಾಕೆ ಡಾಲರ್ ನಲ್ಲಿ ಖರೀದಿಸ್ತಿಯಾ? ಏ ಬರುವಾಗ ಅಲ್ಲಿಂದ ನಮಗೆಲ್ಲಾ ಏನಾದರೂ ಗಿಫ್ಟ್ ತೆಗೆದುಕೊಂಡು ಬರಬೇಕು. ಇಲ್ಲಾ ಅಂದ್ರೇ ಸಾಯಿಸಿ ಬಿಡ್ತಿವಿ. ಎಂದು ಹೆದರಿಸುವ ಗೆಳೆಯರು/ಹೆತ್ತವರು/ಸಂಬಂಧಿಕರುಗಳು. ಪ್ರತಿಯೊಬ್ಬರಿಂದ ಶುಭಾಶಯಗಳ ಸುರುಮಳೆ.

ಹೆತ್ತವರಿಗೆ ಒಂದಷ್ಟು ಗೇಣು ಮೇಲಕ್ಕೆ ಹೋದ ಅನುಭವ.




ಹೌದು! ಸಾವಿರಾರು ರೂಪಾಯಿಗಳ ವೆಚ್ಚದಲ್ಲಿ, ಸಾವಿರಾರು ಮೈಲು ದೂರದ ಜಾಗಕ್ಕೆ, ಜೀವ ಮಾನದಲ್ಲಿ ಎಂದು ಕಾಣದ ಜಗತ್ತಿಗೆ ಕಾಲಿಡುತ್ತಿದ್ದಾನೇ ಎಂದರೇ ಎಂಥವರಿಗೂ ಅಭಿಮಾನ! ಕಾಣದ ಜಗತ್ತು ಹೇಗೋ ಏನೋ ಎಂಬ ಕುತೂಹಲ?

ಈ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಂಡು ಬರುವ ವಿದೇಶ ಪ್ರಯಾಣಿಗನಿಗೆ ಮೊದಲು ದಿಕ್ಕು ತಪ್ಪುವ ಅನುಭವವೆಂದರೇ ಅಲ್ಲಿಯ ಟ್ರಾಪಿಕ್, ಕಾರ್ ನಲ್ಲಿ ಎಡಗಡೆಯಲ್ಲಿ ಡ್ರೈವರ್ ಸೀಟ್, ಬಲಗಡೆಯಲ್ಲಿ ಎಲ್ಲಾ ವಾಹನಗಳು ಚಲಿಸಬೇಕು. ರಸ್ತೆಯಲ್ಲಿ ನಮ್ಮ ದೇಶದಲ್ಲಿ ಇರುವಂತಹ ಯಾವೊಂದು ಗುಂಡಿ, ಗಲಿಜು, ಜನ ಜಂಗುಳಿಯಿಲ್ಲ, ರಸ್ತೆಗೆ ಅಡ್ಡ ಬರುವವರಿಲ್ಲ.ಪ್ರತಿಯೊಬ್ಬರೂ ಬಹು ಸ್ಟ್ರೀಕ್ಟಾಗಿ ಸಿಗ್ನಲ್ ಪಾಲೋ ಮಾಡೋ ಪರಿ.

ಇಲ್ಲಿಂದ ಪ್ರಾರಂಭವಾಗುತ್ತದೆ ನೋಡಿ. ಏನ್ ದೇಶಾ ರ್ರೀ! ಪ್ರತಿಯೊಂದು ಎಂಥ ನೀಟ್. ಎಂಥ ಜನರ್ರೀ.. ಎಷ್ಟೊಂದು ಅಚ್ಚುಕಟ್ಟು. ಎಲ್ಲಾದರೂ ಏನಾದರೂ ಕಸ ಗಿಸ ಕೇಳಬೇಡಿ. ಜನಗಳೆ ಕಮ್ಮೀ ಬಿಡಿ ಇಲ್ಲಿ. ಅಂದುಕೊಂಡು ಒಮ್ಮೆ ಒಂದು ಉಸಿರನ್ನು ತೆಗೆದುಕೊಂಡು ಹಾಗೆ ಕರಗಿಬಿಡುತ್ತಾನೆ/ಳೆ.

ಈ ಒಂದು ಕುತೂಹಲ ವಾರ ತಿಂಗಳವರೆಗೂ ಇರುತ್ತದೆ. ಯಾಕೆಂದರೇ ಎಲ್ಲಾದೂ ಹೊಸದು ತೀರಾ ಹೊಸದು. ಪ್ರತಿಯೊಂದು ನಮಗಿಂತಹ ಬಿನ್ನ ಮತ್ತು ವಿಭಿನ್ನ.

ತಾನು ಕಾಣುತ್ತಿರುವುದೇ ಹೊಸ ಸಂಸ್ಕೃತಿ. ಕೇವಲ ಇಂಗ್ಲೀಷ್ ಸಿನಿಮಾದಲ್ಲಿ ಕಾಣುತ್ತಿದ್ದ ನೋಟವನ್ನು ತಾನೇ ಕಣ್ಣಾರೆ (೩ ಡಿ) ಹತ್ತಿರದಿಂದ ನೋಡುತ್ತಾನೆ.

ಏನ್ ಬಿಲ್ಡಿಂಗ್ಸ್, ಏನ್ ಶಾಫಿಂಗ್ ಮಾಲ್ಸ್, ದೂಳೇ ಇಲ್ಲದ ಗಾಳಿ, ಜನರೇ ಇಲ್ಲದ ರಸ್ತೆಗಳು, ಗಲಾಟೆಯೇ ಇಲ್ಲದ ರೈಲ್ವೆ ನಿಲ್ದಾಣಗಳು ಮತ್ತು ಬಸ್ಸುಗಳು. ಇಷ್ಟೊಂದು ನಿಶಬ್ಧ ಕಲ್ಪನೆಗೂ ಸಹ ನಿಲುಕಲಾರದಾಗಿರುತ್ತದೆ.

ಎಲ್ಲಾ ರಂಗದಲ್ಲೂ ಹೈ ಕ್ಲಾಸ್ ಲೆವಲ್ಲಿಗೆ ಇರುವಂತಹ ವಸ್ತುಗಳು, ರೂಢಿಗಳು, ವ್ಯವಸ್ಥೆಗಳು. ತನ್ನ ಕನಸಿಗೆ ಒಂದು ಇಂಬು ಕೊಡುವಂತಹ ದರ್ಶನ.

ಇಲ್ಲಿಯೆ ಇದ್ದರೇ ನಿಜವಾಗಿಯೂ ಏನ್ ಬೇಕಾದರೂ ಸಾಧಿಸಬಹುದು ಎಂಬ ಭರವಸೆ.

ಕಣ್ಣ ಮುಂದೆ ಕಾಣುವ ಸುಂದರವಾದ ನೋಟದೊಡನೆ ತನ್ನ ಭಾರತದಲ್ಲಿ ಕಾಣುವ ದೂಳ್ ದೂಳ್ ಚಿತ್ರಣವನ್ನು ಕಂಪೇರ್ ಮಾಡಿ ಅತಿ ಹೆಚ್ಚು ಅಂಕಗಳನ್ನು ತಾನು ಕಾಲೂರಿರುವ ಪರದೇಶದ ನಗರ ವ್ಯವಸ್ಥೆಗೆ ಕೊಟ್ಟು ಬಿಡುತ್ತಾನೆ.

ಆಕರ್ಷಣೆ ಎಂದರೇ ಇದೆ. ಹೊಸದಾಗಿ ನಮ್ಮ ಹಳ್ಳಿಯಿಂದ ಬಂದಂತಹ ಹುಡುಗ ಬೆಂಗಳೂರು ಕಂಡು ಹೇಗೆ ಬೆಕ್ಕಸ ಬೆರಗಾಗಿ ಇಲ್ಲಿಯೇ ಒಂದು ಮನೆ ಕಟ್ಟಬೇಕು ಎಂಬ ಛಲವನ್ನು ಮಾಡುತ್ತಾನೋ ಅದೇ ರೀತಿಯಲ್ಲಿ ಪರದೇಶದಲ್ಲಿ ಒಮ್ಮೆ ಮಾಡಿಕೊಳ್ಳುತ್ತಾನೆ.

ಈ ರೀತಿಯಾಗಿ ನಮ್ಮ ಉದ್ಯೋಗಿಗಳು ಮಾರು ಹೋಗಿಬಿಟ್ಟು ಅಲ್ಲಿಯೇ ತಮ್ಮ ವಾಸ್ತವ್ಯವನ್ನು ಮಾಡಿಕೊಳ್ಳಲು ನಿರ್ಧರಿಸಿಬಿಡುತ್ತಾರೆ. ಯಾಕೆಂದರೇ ಅಲ್ಲಿ ಎಲ್ಲಾ ಸುಖವಾಗಿ ಕಾಣುತ್ತದೆ. ಡಾಲರ್, ಯುರೋ ಗಳು ಗರ್ರನೇ ತಿರುಗಿಸಿಬಿಡುತ್ತವೆ.

ಗುಣಕಾರವಾ? ಕಾರಣ ಗೊತ್ತಿಲ್ಲಾ!

ಒಂದು ರೀತಿಯಲ್ಲಿ ಎಲ್ಲಾವೂ ಮಾಯಾಬಜಾರಿನಂತೆ ಕಂಗೊಳಿಸುತ್ತವೆ.

ನಮ್ಮ ದೇಶ ಈ ಮಟ್ಟಕ್ಕೆ ಬರಬೇಕೆಂದರೇ ಇನ್ನೂ ಶತಮಾನ ಬೇಕು ಕಣ್ರೀ! ಅಂತಾ ಮಾತನಾಡುತ್ತಾನೆ. ನಮ್ಮಲ್ಲಿ ಕಾನೂನಿಗೆ ಬೆಲೆನೇ ಇಲ್ಲಾರ್ರೀ! ಬರೀ ರಾಜಕೀಯ! ಏನಂದ್ರೂ ಉದ್ಧಾರ ಆಗೊಲ್ಲ. ಎಂದು ಒಂದು ಶರಾ ಬರೆದುಬಿಡುತ್ತಾನೆ.

ನಾನೊಂತೂ ವಿದೇಶದಲ್ಲಿ ಓದಲಿಲ್ಲ. ನನ್ನ ಮಕ್ಕಳಾದರೂ ಸುಖವಾಗಿ ಇಲ್ಲಿ ವ್ಯಾಸಂಗ ಮಾಡಲಿ. ಎಷ್ಟು ದುಡಿದರೂ ಇಂಡಿಯಾದಲ್ಲಿ, ಕೆಲವೆ ವರುಷಗಳಲ್ಲಿ ಇಲ್ಲಿ ಸಂಪಾಧಿಸಿದ್ದನ್ನೂ ಅಲ್ಲಿ ಸಂಪಾಧಿಸಲೂ ಸಾಧ್ಯವಿರುತ್ತಿರಲ್ಲಿಲ್ಲ. ಎಂದು ಆನಂದಪಡುತ್ತಾನೆ.

ಈ ರೀತಿಯ (ಕ್ಷಣದ?) ಆಕರ್ಷಣೆ ಜೀವನವನ್ನು ಪಾಶ್ಚಾತ್ಯ ಸಂಸ್ಕೃತಿಗೆ ಒಗ್ಗಿಕೊಳ್ಳುವಂತೆ, ಚಿಂತಿಸುವಂತೆ ಮಾಡಿ ಅದೇ ಉಸಿರಾಗುವಂತಾಗುತ್ತದೆ.

ಈ ಸೆಳೆತ ಸಾಮಾನ್ಯವಾದಂತಹ ಕಷ್ಟದಿಂದ ಸುಖದ ಕಡೆಗೆ ಪಯಣ ಎಂಬಂತೆ.. ಹಳತರಿಂದ ಹೊಸತನದೆಡೆಗೆ ಎಂಬಂತೆ.. ಒಂದು ಮಾಮೂಲು ಬದಲಾವಣೆ ಮಾತ್ರ. ಅಲ್ಲಿ ದೇಶ.. ಪರಂಪರೆ.. ಭಕ್ತಿ.. ಹಿರಿಮೆ ಯಾವುದೂ ಗಣನೆಗೆ ಬರುವುದಿಲ್ಲ ಅನಿಸುತ್ತದೆ.

ಏನಂತಿರೀ?





ಲೈಫ್ ಎನಜಾಯ್ ಮಾಡಬೇಕು.. ಲೈಫ್ ನಲ್ಲಿ ಸೇಟ್ಲ್ ಆಗಬೇಕು ಇದೇ ತುಡಿತ ಪ್ರತಿಯೊಬ್ಬರಿಗೂ ಆ ಸಮಯಕ್ಕೆ ಪ್ರಾಮುಖ್ಯವಾಗಿರುತ್ತದೆ.

ಹೌದು ಅಂತಾ ಅನಿಸುತ್ತಾ? ಅಲ್ಲಾ ಅಂತಾ ಅನಿಸುತ್ತಾ? ನೀವೇ ಹೇಳಬೇಕಪ್ಪಾ!!

ಗುರುವಾರ, ಫೆಬ್ರವರಿ 23, 2012

ನೀತಿ ನಿಯತ್ತುಗಳು ಪುಸ್ತಕದ ಬದನೇಕಾಯಿ!

ನಾವುಗಳು ನಮ್ಮ ಶಾಲೆಯ ದಿನಗಳಲ್ಲಿ ತುಂಬುತ್ತಿದ್ದ ಅರ್ಜಿಗಳನ್ನು ಗಮನಿಸಿ ಅಲ್ಲಿ ಜಾತಿ, ಉಪಪಂಗಡ ಇತ್ಯಾದಿ ಜಾಗಗಳು ಇರುತ್ತಿದ್ದವು. ಅವುಗಳನ್ನು ಭರ್ತಿ ಮಾಡುವಾಗ ನಮಗೆಲ್ಲಾ ಒಂದು ರೀತಿಯ ಏನೋ ಅಪರಾಧಿ ಅನುಭವ. ಇದು ಏಕೆ ಅಂದರೇ ಒಂದೊಂದು ಜಾತಿಗೂ ಒಂದೊಂದು ರೀತಿಯ ಅನುಕೂಲಗಳು ಮತ್ತು ಸವಲತ್ತುಗಳು. ಹಿಂದುಳಿದವರಿಗಾಗಿ ಸಂವಿಧಾನದಲ್ಲಿ ಏನೂ ರೀಯಾಯಿತಿಗಳನ್ನು ಕೊಟ್ಟಿದ್ದರು. ಅವುಗಳ ಸದುಪಯೋಗವನ್ನು ಪಡೆಯಲು ಶಾಲಾ ದಿನಗಳಲ್ಲಿ ನಾವುಗಳು ಮತ್ತು ನಮ್ಮ ಸ್ನೇಹಿತರುಗಳು ಈ ರೀತಿಯ ವಿವರಗಳನ್ನು ಭರ್ತಿ ಮಾಡುತ್ತ ಇದ್ದೇವು.

ಚಿಕ್ಕ ಚಿಕ್ಕ ವಯಸ್ಸಿನಲ್ಲಿ ಇದು ಯಾವುದು ಗಣನೆಗೆ ಮತ್ತು ಯೋಚನೆಗೂ ಸಹ ಬರುತ್ತಿರಲಿಲ್ಲ. ಆದರೂ ಎಲ್ಲೋ ಒಂದು ಮನದ ಮೂಲೆಯಲ್ಲಿ ಅವನು ಆ ಜಾತಿಯವನು ಎಂಬ ಒಂದು ಕಾರಣಕ್ಕಾಗಿ ಎಲ್ಲಾ ಸವಲತ್ತುಗಳು ಪಡೆಯುತ್ತಿದ್ದಾನೆ ಎಂಬ ಮಾತು ನಮ್ಮ ನಮ್ಮಲ್ಲಿಯೆ ಹಾಗೆ ಸುಮ್ಮನೇ ಹಾದು ಹೋಗಿರುತ್ತದೆ.

ಹಾಗೆಯೇ ಈ ರೀತಿಯ ಸರ್ಕಾರದ ನೀಲುವು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರುವ ರೀತಿಯದು ಅನಿಸುತ್ತಿತ್ತು. ನಿಜವಾಗಿಯೂ ಹಿಂದುಳಿದವರಿಗೆ ಸರಿಯಾದ ಉಪಯೋಗಗಳು ಸಿಗುತ್ತಿಲ್ಲವೆಂಬುದು ನಮ್ಮ ಚಿಕ್ಕ ಚಿಕ್ಕ ಮನಸ್ಸುಗಳಿಗೆ ಕಾಣುತ್ತಿರುತ್ತದೆ. ಎಷ್ಟೇ ಉತ್ತಮವಾಗಿ ಜೀವನ, ಹಣ ಸಂಪಾಧಿಸಿದ್ದರು ಅವನು ಆ ಜಾತಿಯವನು ಎಂಬುದುವರಿಂದ ಈ ಎಲ್ಲಾ ಅನುಕೂಲಗಳನ್ನು ಪಡೆಯುತ್ತಿದ್ದನು. ಹಾಗೆಯೇ ನಿಕೃಷ್ಟ ಬದುಕನ್ನು ನಿತ್ಯ ಕಾಣುತ್ತಿದ್ದರೂ ನೀನು ಈ ಜಾತಿಯಲ್ಲಿ ಹುಟ್ಟಿರುವ ಕಾರಣದಿಂದ ಈ ಎಲ್ಲಾ ಸೌಕರ್ಯಗಳು ನಿನಗೆ ಸಿಗುವುದಿಲ್ಲ ಎಂಬ ಹಿರಿಯರ ಬುದ್ಧಿ ಮಾತು!

ಹೀಗೆ ನಮ್ಮ ನಮ್ಮಲ್ಲಿಯೇ ಕಂದರವನ್ನು ಸೃಷ್ಟಿ ಮಾಡುವ ಒಂದು ಪದ್ಧತಿ ಚಿಕ್ಕ ವಯಸ್ಸಿನಿಂದಲೇ ಅದೂ ಅ,ಆ,ಇ.. ಕಲಿಯುವ ವಿದ್ಯಾ ಮಂದಿರದಿಂದ ಪ್ರಾರಂಭವಾಗಿ ನಾವುಗಳು ಬೆಳೆದು ದೊಡ್ಡವರಾಗಿ ಅಲ್ಲಿ ಇಲ್ಲಿ ಬದುಕು ಜಟಕಾ ಬಂಡಿಯನ್ನು ಸಾಗಿಸುವ ತನಕ ನಿತ್ಯ ನೂತನವಾಗಿ ಇಂದು ಜೊತೆಯಲ್ಲಿದೆ.

ಆದರೇ ಸಂವಿಧಾನದಲ್ಲಿ ಸರ್ವರು ಸಮಾನರು ಎಂಬ ನೀತಿ ಒಂದು ಕಡೆ. ಜಾತ್ಯಾತೀತ ರಾಷ್ಟ್ರ ನಾವೆಲ್ಲಾ ಒಂದೇ ಎಂಬ ಘೋಷಣೆ ಮತ್ತೊಂದು ಕಡೆ. ಪ್ರತಿಯೊಂದು ರಾಜಕೀಯ ಪಕ್ಷಗಳ ಮೊಲ ಸೆಲೆ ಜಾತಿ ಮಾತ್ರ. ಇಂದು ನಾವುಗಳು ಇವರುಗಳು ಸ್ಪರ್ಧಿಸುವ ಚುನಾವಣೆಯನ್ನು ನೋಡಿದಾಗ, ಅದರ ವಿವರಗಳನ್ನು ಓದಿದಾಗ ತಿಳಿಯುತ್ತಿದೆ.

ಇದು ಇನ್ನಾದರೂ ತೊಲಗಲಿ ಎಂದರೇ ಅದು ಎಷ್ಟರ ಮಟ್ಟಿಗೆ ನಮ್ಮೆಲ್ಲಾರಲ್ಲಿ ಸದ್ದಿಲ್ಲದೆ ಹುದುಗಿದೆ ಅಂದರೇ, ಅದು ಇಲ್ಲದೇ ಏನೂ ಇಲ್ಲಾ ಎನ್ನುವಷ್ಟರ ಮಟ್ಟಿಗೆ.




ಇದಕ್ಕಾಗಿ ಪ್ರತಿಯೊಂದು ಜಾತಿಯ ಮುಖಂಡರ ಹೋರಾಟ. ನಮ್ಮ ಜಾತಿ ಹೀಗೆ ಹೀಗೆ ಹಿಂದುಳಿದಿದೆ. ಹೀಗೆ ಹೀಗೆ ಸರ್ಕಾರಿ ಅನುಕೂಲಗಳು ಸಿಗಲೇ ಬೇಕು. ಆ ವರ್ಗಕ್ಕೆ ಈ ವರ್ಗಕ್ಕೆ ನಮ್ಮನ್ನು ಸೇರಿಸಿ ಎಂಬ ಸಿಪಾರಸುಗಳ ಸರಮಾಲೆ ನಿತ್ಯ ಅರ್ಪಣೆ.

ಗಾಂಧಿ ಕಂಡ ರಾಮರಾಜ್ಯದ ಕನಸು ಎಂದೆಂದಿಗೂ ಕನಸಾಗಿಯೇ ಇರುವಂತಾಗಿದೆ.

ಎಲ್ಲೇಲ್ಲಿ ನೋಡಿದರು ಜಾತಿವಾರು ಪಕ್ಷಗಳು, ಮುಖಂಡರುಗಳು, ಮಠ ಮಾನ್ಯಗಳು, ಅವರದೇಯಾದ ಸಮಾರಂಭಗಳು, ಅಲ್ಲಿ ಅವರದೆಯಾದ ಜನರುಗಳು. ಎಷ್ಟರ ಮಟ್ಟಿಗೆ ಸಮಾಜದಲ್ಲಿ ಅಂತರವನ್ನು ನಾವುಗಳು ನಿತ್ಯ ಸೃಷ್ಟಿ ಮಾಡುತ್ತಿದ್ದೇವೆ ಅಂದರೇ ಅದನ್ನು ಮುಂದೆ ಯಾರಿಂದಲೂ ಮುಚ್ಚಲು ಮತ್ತು ಸರಿಪಡಿಸಲಾರದಷ್ಟು.

ಒಂದು ರಾಜಕೀಯ ಪಕ್ಷ ಅಂದರೇ ಅಲ್ಲಿ ಹತ್ತು ಹಲವು ಮಂದಿಗಳು ಇರುತ್ತಾರೆ. ಹಾಗೆ ಇದ್ದರೂ ಅವರ ಧ್ಯೇಯ ಒಂದೆ ಆಗಿರಬೇಕು. ಒಟ್ಟಾಗಿ ದೇಶದ ಏಳ್ಗೆಯ ಬಗ್ಗೆ ಚಿಂತನೆ ಮಾಡಬೇಕು. ಅದು ಬಿಟ್ಟು ಅವರುಗಳ ಲೆಕ್ಕಾಚಾರ ಕೇವಲ ಮತಗಳನ್ನು ಹೇಗೆ ಹೆಚ್ಚಿಗೆ ಗಳಿಸುವುದು, ಎಷ್ಟು ಬೇಗ ಸರ್ಕಾರದ ಅತಿ ಉನ್ನತ ಹುದ್ದೆಗಳನ್ನು ಅಲಂಕರಿವುದು ಎಂಬುದಾಗಿದೆ.

ಅದಕ್ಕಾಗಿ ಅವರುಗಳು ಮಾಡುವ ಚಿಲ್ಲರೆ ರಾಜಕೀಯವನ್ನು ದೇವರಾಣೆ ಇಡೀ ಪ್ರಪಂಚದಲ್ಲಿ ನಮ್ಮ ಭಾರತವನ್ನು ಬಿಟ್ಟರೆ ಬೇರೆಲ್ಲೂ ಮಾಡುವುದಿಲ್ಲ. ಒಂದೇ ಪಕ್ಷದಲ್ಲಿ ಇದ್ದರೂ ಇವನನ್ನು ಕಂಡರೇ ಅವನಿಗೆ ಆಗುವುದಿಲ್ಲ. ಅವನನ್ನು ಕಂಡರೇ ಇವನಿಗೆ ಆಗುವುದಿಲ್ಲ. ಅವರುಗಳಿಗೆ ಅವರದೇಯಾದ ಮನಸ್ಸಿನ ಕುರಿಯಂತಹ ಹಿಂಬಾಲಕರುಗಳು. ಒಂದೇ ಪಕ್ಷ ಒಂದೇ ಅಜೀಂಡಾದಲ್ಲಿ ಗೆದ್ದು ಬಂದಿದ್ದರು ಅವರುಗಳ ಒಳ ಅಜೀಂಡಾವೇ ಬೇರೆಯದಾಗಿರುತ್ತದೆ. ಒಂದೇ ಒಂದು ಅಂಶದ ಯೋಜನೆಯೆಂದರೇ ಅದಷ್ಟು ಸುಲಭವಾಗಿ ಮಂತ್ರಿಯೂ, ಮುಖ್ಯಮಂತ್ರಿಯೊ ಆಗಬೇಕು. ಅದಕ್ಕಾಗಿ ಜಾತಿಯ ಸಿಂಬಲ್ ನ್ನು ಧಾರಾಳವಾಗಿ ಬಳಸುತ್ತಾರೆ.

ಆದರೇ ಅವರುಗಳು ಸಿಡಿಸುವ ಭಾಷಣ,ಘೋಷಣೆ ಎಂಬ ಕಿಲುಬುಕಾಸಿನ ಮಾತುಗಳಲ್ಲಿ ನಮ್ಮದು ಜಾತ್ಯಾತೀತ ಪಕ್ಷ, ಕೋಮುವಾದವಲ್ಲದ ಪಕ್ಷ, ಸಮಾನತೆಗಾಗಿ ಹೋರಾಡುವ ಪಕ್ಷ ಇತ್ಯಾದಿ ಅಂಗೈಯಲ್ಲಿ ಆರಮನೆಯನ್ನೇ ತೋರಿಸುತ್ತಾರೆ. ಇದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯವೇ ಅದರೂ ಅವರುಗಳನ್ನು ಆಯ್ಕೆ ಮಾಡಲೇಬೇಕಾದ ಅನಿವರ್ಯತೆ ನಮ್ಮಗಳಿಗೆ.

ಎಲ್ಲದಕ್ಕೂ ರಾಜಕಾರಣವೇ ಮೊಲ ಎನ್ನುವಂತಾಗಿದೆ. ಪ್ರತಿಯೊಂದು ಜಾತಿಯವರು ದಾರಾಳವಾಗಿ (ಹೆಮ್ಮೆಯಿಂದ?) ಹೇಳಿಕೊಳ್ಳುತ್ತಾರೆ.. ಇವನು ನಮ್ಮ ಜಾತಿಯವನೇ ಕಣ್ರೀ! ನಮ್ಮನೇ ಆ ಜಾಗದಲ್ಲಿ ಇರುವುದು! ನಮ್ಮ ಜಾತಿಯದೇ ಗೌರ್ನಮೆಂಟ್! ಏನೂ ಬೇಕು ಹೇಳಿ?

ಇದೇ ಏನೂ ಸ್ವಾಮಿ ಪ್ರಜಾಪ್ರಭುತ್ವವೆಂದರೇ?

ಇದು ಎಷ್ಟರಮಟ್ಟಿಗೆ ನಮ್ಮನಮ್ಮಲ್ಲಿ ಬೇರು ಇಳಿದುಬಿಟ್ಟಿದೆ ಎಂದರೇ ಈ ಐ.ಟಿ, ಬಿಟಿ ಎಂದು ಮಾತನ್ನಾಡುತ್ತಾ ಮಾತನ್ನಾಡುತ್ತಾ ನಾವುಗಳು ಹದಿನೆಂಟನೇಯ ಶತಮಾನಕ್ಕೂ ಹಿಂದಕ್ಕೆ ಹೋಗಿ ಜೀವಿಸುತ್ತಿದ್ದೇವೆ.

ಇದಕ್ಕೆ ಕೊನೆಗಾಲವೇ ಇಲ್ಲಾ ಎನಿಸುತ್ತದೆ. ಸ್ವಜನ ಪಕ್ಷಪಾತವೇ ಮನೆಯಾಗಿದೆ. ಅವನಿಗೆ ಹತ್ತಿರ ಇರುವವರೆಗೆ ಮಾತ್ರ ಎಲ್ಲಾ ಸವಲತ್ತು. ಮುಂದುವರಿದವನು ನಿತ್ಯ ಮುಂದುವರಿಯುತ್ತಲೇ ಇರುತ್ತಾನೆ. ಬಡವರು ಹಿಂದುಳಿದವರು ಇನ್ನೂ ಹಿಂದಕ್ಕೆ ಹೋಗುತ್ತಲೇ ಇದ್ದಾರೆ. ಇದು ಮತ್ತೊಂದು ವಂಶಪಾರಂಪರ್ಯವಾದ ಆಡಳಿತವೆನ್ನುವಂತಾಗಿದೆ. ಅಪ್ಪನಂತರ ಮಗ, ಮೊಮ್ಮಗ, ಮರಿಮಗ.. ನಿತ್ಯ ಅವರುಗಳ ಸಂಸಾರದ ಮುಖಗಳನ್ನೇ ಬಡ ಮತದಾರ ಕಾಣಬೇಕು!

ಇದು ನಮ್ಮಲ್ಲಿರುವ ದೊಡ್ಡ ಸಾಮಾಜಿಕ ನ್ಯಾಯ. ಒಂದೊಂದು ಪಂಗಡಕ್ಕೂ ಒಬ್ಬೊಬ್ಬ ನಾಯಕ, ಉಪನಾಯಕ ಮತ್ತು ಹಿಂಬಾಲಕರೂ.

ಇದು ಮತ್ತೇ ಅದೇ ಹಿಂದೆ ಇದ್ದಂತಹ ಸಣ್ಣ ಸಣ್ಣ ರಾಜ್ಯಗಳಾಗಿ ಹೊಡೆದು ಆಳುತ್ತಿದ್ದ ನೀತಿಯಂತೆ. ಹೀಗೆಯೆ ಆದರೇ ಒಗ್ಗಟ್ಟು, ದೇಶದ ಸಮಗ್ರತೆ ಎಲ್ಲಿ ಸ್ವಾಮಿ?

ಹೇಳುವುದು ಒಂದು ಮಾಡುವುದು ಇನ್ನೊಂದು. ಮಾತಿಗೂ ಕ್ರೀಯೆಗೂ ಯಾವ ರೀತಿಯಲ್ಲೂ ಸಂಬಂಧವಿಲ್ಲ. ನೀತಿ ನಿಯತ್ತುಗಳು ಪುಸ್ತಕದ ಬದನೇಕಾಯಿಗಳಾಗಿವೆ!

ಈ ರೀತಿ ಮಾಡುತ್ತಿರುವವರೆಲ್ಲಾ ನಮ್ಮ ನಾಯಕರು, ದೇಶ ಕಟ್ಟುವ ಜನಗಳು, ಅಭಿವೃದ್ಧಿ ಪ್ರಾಯೋಜಕರು...




ಇದನ್ನೇಲ್ಲಾ ನಮ್ಮ ಮಹಾ ತಾಯಿ ಭಾರತಾಂಭೆ ಮತ್ತು ಮಗಳು ಕನ್ನಡಾಂಭೆ ಎಷ್ಟು ದಿನಗಳವರೆಗೆ ನೋಡುತ್ತಿರಬೇಕೋ....!

ಮಂಗಳವಾರ, ಫೆಬ್ರವರಿ 14, 2012

ಕಾಯಿಸುವುದು ಕಾಯುವುದು ಈ ಪ್ರೇಮಿಗಳ ಪಾಲಿಗೆ

ಬೆಚ್ಚನೆಯ ಭಾವವನ್ನು ಸೂಚಿಸುವ ಈ ದಿನಗಳಲ್ಲಿ ಈ ಪ್ರೀತಿಯ ದಿನವನ್ನು ಸ್ವಾಗತಿಸುವುದಕ್ಕೆ ಕಾತುರನಾಗಿರುವೆನು ಗೆಳತಿ.

ನೀ ಇಲ್ಲದೆ ಕಳೆದ ಈ ಒಂದು ವಾರವನ್ನು ನಾನು ಹೇಗೆ ಕಳೆದೆನೋ ನನಗೆ ತಿಳಿಯದು. ಪ್ರೇಮಿಗಳ ದಿನದಂದೂ ಮತ್ತೇ ಒಂದಾಗೋಣ ಎಂಬ ನಿರ್ಧಾರದೊಂದಿಗೆ ನೀನು ನಿನ್ನ ದಾರಿ ಹಿಡಿದೆ. ನಾನು ನಿನ್ನ ನೆನಪಿನ ಮಳೆಯಲ್ಲಿ ತೊಯುತ್ತಾ ನೆನಯುತ್ತಾ ನಡುಗಿಬಿಟ್ಟೇ.

ಪ್ರೀತಿಯ ಈ ಜಾದುವನ್ನು ಯಾವ ಮಹಾನ್ ಬಾವ ಕಂಡು ಹಿಡಿದನೋ ತಿಳಿಯದಾಗಿದೆ. ತಿಳಿಯುವ ಕುತೂಹಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತೇ. ಆದರೆ ಅದರಲ್ಲಿ ಸಿಲುಕಿಕೊಂಡು ಮಮ್ಮಲು ಸುಖವನ್ನು ಅನುಭವಿಸುವವರೆಗೂ ದೇವರಾಣೆಗೂ ಪ್ರೀತಿ ಅಂದರೇ ಏನೂ ಎಂಬುದು ಎಂಥ ವಿದ್ವಾಂಸನಿಗೂ ತಿಳಿಯದು.

ನಿನ್ನ ಜೊತೆಯಲ್ಲಿ ಇದ್ದಾಗ ನನ್ನನ್ನು ನಾನೇ ಮರೆತ ಕ್ಷಣಗಳು. ನಿನ್ನ ಆ ನುಣ್ಣನೆಯ ಕೂದಲಿನಲ್ಲಿ ನನ್ನ ಕೈ ಬೆರಳನ್ನು ಹಾಗೇ ಆಡಿಸಿದಾಗ ಆಗುವ ಆ ರೋಮಾಂಚನವನ್ನು ಮತ್ತೇ ಮತ್ತೇ ಸವಿಯಬೇಕು ಅನಿಸುತ್ತದೆ. ನಾನು ನಿನ್ನನ್ನು ಮೊದಲು ಇಷ್ಟಪಟ್ಟಿದ್ದು ಆ ನಿನ್ನ ಕಿರಲಾದ ಮುಗ್ಧ ದ್ವನಿಗೆ. ಒಂದು ದಿನ ಆ ದ್ವನಿ ನನ್ನ ಕಿವಿಗೆ ಬಿಳದಿದ್ದರೇ ಏನೋ ಕಳೆದುಕೊಂಡ ಅನುಭವ.

ನೂರಾರು ಹುಡುಗಿಯರ ದ್ವನಿಯನ್ನು ಈ ನನ್ನ ಕಿವಿ ಕೇಳಿದೆ.. ಆದರೇ ಆ ನಿನ್ನ ದ್ವನಿಯ ಜಾದು ನನಗಂತು ಮೋಡಿ ಮಾಡಿದೆ. ಆ ದ್ವನಿಯಲ್ಲಿಯ ನಿಷ್ಕಲ್ಮಶವಾದ ಭಾವ, ಪ್ರೀತಿ, ಅಕ್ಕರೆ, ಕಕ್ಕುಲಾತಿಯನ್ನು ಎಷ್ಟು ನೆನಸಿದರೂ ಕೊನೆಯಿಲ್ಲ.

ಗೆಳತಿ! ಗೊತ್ತಾ? ನೀ ಒಬ್ಬಳು ನನ್ನ ಜೊತೆಯಲ್ಲಿ ಇದ್ದರೇ ಸಾಕು ಇಡೀ ಜಗತ್ತೇ ಶೂನ್ಯವಾದರೂ ನನಗೇನೂ ನೋವಾಗುವುದಿಲ್ಲ. ಅಷ್ಟರಮಟ್ಟಿಗೆ ಆ ನಿನ್ನ ಭರವಸೆಯ ಮಾತು, ಅಸರೆ, ಕಾಳಜಿಯ ಆ ನಗು ನನ್ನನ್ನು ಮಂತ್ರ ಮುಗ್ಧನಾಗಿಸುತ್ತದೆ.

ಈ ಜಗತ್ತಿನಲ್ಲಿ ಪ್ರೀತಿಪಟ್ಟು ಜೊತೆಯಲ್ಲಿ ಸಾವಿರಾರು ವರುಷ ಜೀವಿಸಿದ ಕುರುಹುಗಳನ್ನು ಕಾಣದಾದರೂ, ಆ ಪ್ರೀತಿಯಲ್ಲಿ ಬಿದ್ದು ಎದ್ದು ಜಯಿಸಿದ ಸಾವಿರಾರು ಅಮರ ಪ್ರೇಮಿಗಳ ಕಥೆಗಳು ಈ ನಮ್ಮ ಪ್ರೀತಿಗೆ ಸ್ಪೂರ್ತಿಯೇ ಸರಿ. ಒಂದೊಂದು ಕಥೆಯು ನಮ್ಮದೇ ಅನಿಸುತ್ತದೆ.




ನೀನು ನನ್ನನ್ನು ಏನಕ್ಕಾಗಿ ಇಷ್ಟಪಟ್ಟಿಯು ಆ ದೇವನಿಗೆ ಗೊತ್ತು. ಅಂಥ ಸುಂದರಾಂಗನಂತೂ ನಾನು ಅಲ್ಲ. ನಾನೇ ನಿನಗೆ ಹೇಳಿದ್ದೀನಿ ಎಷ್ಟೋ ಭಾರಿ... ಹೇ ನಮ್ಮ ಜೊಡಿಯಲ್ಲಿ ಏನೋ ಕೂರತೆಯಿದೆ. ನಾನು ನೀನು ಹೀಗೆ ಜೊತೆಯಲ್ಲಿ ನಡೆದಾಡಿದಾಗ ಯಾರದರೂ ಅಂದುಕೊಳ್ಳುತ್ತಾರೆ. ಇಂಥ ಸುಂದರ ಹುಡುಗಿಗೆ ಇಂಥ ನಾಲಾಯ್ಕ್ ಕೊಡಂಗಿ ಜೊತೆಗಾರನೇ? ಎಂದು. ಆಗ ನೀನು ನನ್ನನ್ನು ಬಿಗಿಯಪ್ಪಿ ಕೆನ್ನೆಗೆ ಕೊಟ್ಟ ಆ ಬಿಸಿ ಮುತ್ತು ಇಂದು ಸಹ ಹಾಗೆಯೇ ಈ ನನ್ನ ಕೆನ್ನೆಯ ಮೇಲೆ ಕಾಣಿಸುತ್ತಿದೆ.

ಪ್ರತಿಯೊಬ್ಬರಿಗೂ ಆ ದೇವರು ಒಬ್ಬೊಬ್ಬ ಜೀವನ ಸಂಗಾತಿಯನ್ನು ಸೃಷ್ಟಿ ಮಾಡಿ ಈ ಭೂಮಿಗೆ ಕಳಿಸಿರುತ್ತಾನೆ ಅನಿಸುತ್ತದೆ.

ಎಲ್ಲೋ ಎಲ್ಲೋ ಇರುವ ಎರಡು ಜೀವಗಳು ಯಾವುದೋ ಮಾಯೆಯಲ್ಲಿ ಒಂದಾಗಿಬಿಡುತ್ತವೆ. ಬಿಟ್ಟಿರಲಾರದಷ್ಟು ಗಟ್ಟಿಯಾದಂತಹ ಬಂಧನವನ್ನು ತಮ್ಮ ತಮ್ಮಲ್ಲಿಯೇ ಏರ್ಪಡಿಸಿಕೊಳ್ಳುತ್ತವೆ. ಎರಡು ದೇಹಗಳಾದರೂ ಉಸಿರಾಟ ಒಂದಾಗಿರುತ್ತದೆ. ಇಬ್ಬರೂ ತಮ್ಮ ತಮ್ಮ ಹೃದಯವನ್ನು ಕೊಡುಕೊಳ್ಳುವಿಕೆಯಲ್ಲಿ ತಮ್ಮತಮ್ಮಲ್ಲಿಯೇ ಬಚ್ಚಿಟ್ಟುಕೊಳ್ಳುತ್ತಾರೆ.

ಇವನು ಕಷ್ಟಪಟ್ಟರೆ ಅವಳು ಮರುಗುತ್ತಾಳೆ. ಇವಳು ನಿಟ್ಟುಸಿರುಬಿಟ್ಟರೆ ಇವನು ನೋಯುತ್ತಾನೆ. ಹೀಗೆ ಬಂಧಿಸುವ ಆ ಜೀವ ಸೆಲೆ ಯಾವುದು ಗೆಳತಿ?

ನೀನೂ ಏನೋ ಮಾಡಿದರೂ ಅದು ನನಗೆ ಒಂದು ಸುಂದರ ಬಣ್ಣದ ಚಿತ್ರದಂತೆ ಕಾಣುತ್ತದೆ.

ಆ ನಿನ್ನ ನಗು. ಆ ನಿನ್ನ ಸಿಟ್ಟು. ಆ ನಿನ್ನ ಮಾತು. ಆ ನಿನ್ನ ನೋಟ. ಒಂದೇರಡಲ್ಲಾ ನಿನ್ನ ಪ್ರತಿಯೊಂದು ಹೆಜ್ಜೆಯು ಸಹ ಸವಿಯಾದ ಹೆಜ್ಜೇನಿನಂಥೆ ಪ್ರೀತಿಯಾಗಿ ಪ್ರೀತಿಸಲ್ಪಡುತ್ತದೆ.

ಕಟ್ಟಿಕೊಂಡವನಿಗೆ ಕೊಂಡಗಿನೂ ಮುದ್ದು ಎಂದು ಹಿರಿಯರು ಗಾದೆ ಮಾತು ಏನೇ ಹೇಳಿದ್ದರೂ, ನೀನೇ ನನ್ನ ಜೀವವಾಗಿರುವಾಗ ನಿನ್ನ ಪ್ರತಿಯೊಂದು ಉಸಿರು ನನ್ನದಾಗಿರುವಾಗ ನನಗೆ ಎಲ್ಲವೂ ಇಷ್ಟವಾಗಲೇ ಬೇಕು ಅಲ್ಲವಾ?

ಗೊತ್ತಾ ನೀನಗಾಗಿ ಈ ಪ್ರೇಮಿಗಳ ದಿನದ ಪ್ರೀತಿಯ ಉಡುಗೊರೆಯನ್ನು ತರುವುದಕ್ಕಾಗಿ ಸುತ್ತಾಡಿದ ಜಾಗವಿಲ್ಲ.

ಎಲ್ಲರೂ ಮಾಮೊಲಿಯಾಗಿ ಕೊಡುವ ಗ್ರೀಟಿಂಗ್ಸ್, ಡ್ರೇಸ್, ಚಾಕೊಲೇಟ್, ಡಾಲ್ ಹೀಗೆ ಸಾಮಾನ್ಯವಾದ ಗಿಪ್ಟ್ ನ್ನು ಕೊಡುವುದಕ್ಕೆ ಮನಸ್ಸೇ ಬರುತ್ತಿಲ್ಲ. ಸುಂದರವಾದ ಅಪರೂಪವಾದ ಏನೊಂದು ವಸ್ತುಗಳು ಸಿಗಲಿಲ್ಲ ಈ ನಿನ್ನ ಗೆಳೆಯನಿಗೆ.

ಅದಕ್ಕಾಗಿಯೇ ನಾನೇ ನನ್ನ ಕೈಯಾರ ಚಿತ್ರಿಸಿದ ಆ ನನ್ನ ಕಲ್ಪನೆಯ ನಿನ್ನ ಮುಖಾರವಿಂದವಿರುವ ಒಂದು ನೆನಪಿನ ಪ್ರೀತಿಯ ಕೋಲಾಜ್ ನ್ನು ಬಣ್ಣಗಳ ಮೇಳದಲ್ಲಿ ಪ್ರೀತಿಯ ಕ್ಯಾನ್ ವಾಸ್ ಮೇಲೆ ಬರೆದಿದ್ದೇನೆ. ಇದನ್ನು ಸುಂದರವಾದ ಗೋಲ್ಡ್ ನ್ ಪ್ರೇಮ್ ನಲ್ಲಿ ಇಟ್ಟಿದ್ದೇನೆ. ಸತ್ಯವಾಗಿಯೂ ಈ ಒಂದು ಉಡುಗೂರೆ ನಿನ್ನ ಮನಸ್ಸನ್ನು ಇನ್ನೇಲ್ಲಿಗೂ ಕರೆದುಕೊಂಡು ಹೋಗದಿದ್ದರೇ ನನ್ನಾಣೆ.

ಇನ್ನೇನೂ ನಾಳೆ ಪುನಃ ನಿನ್ನನ್ನು ಹತ್ತಿರದಿಂದ ನೋಡುವ ದಿನ. ಕಾಯಿಸದೇ ಸರಿಯಾದ ಸಮಯಕ್ಕೆ ಬಂದುಬಿಡು.

ಕಾಯಿಸುವುದು ಕಾಯುವುದು ಈ ಪ್ರೇಮಿಗಳ ಪಾಲಿಗೆ ಬಂದಿರುವ ನಿಜವಾದ ಪಾಡು. ಗೆಳೆಯ ಗೆಳತಿಗಾಗಿ ಪರಿತಪಿಸುವುದು. ಒಂದು ಗಂಟೆಯನ್ನು ಒಂದು ವರ್ಷವಾಗಿ ನೋಡುವುದು. ಜೀವನವೇ ನಶ್ವರ ಎಂದುಕೊಳ್ಳುವುದು.

ಉಫ್! ಪ್ರೇಮಿಗಳ ಪಾಡನ್ನು ಕೇಳುವುವರು ಯಾರು ಗುರು?

ಪ್ರತಿ ವರುಷವು ಈ ಪೆಬ್ರವರಿ ೧೪ ಬರುತ್ತದೆ. ಪ್ರೀತಿಯ ಮಾತುಕತೆ ನಿವೇದನೆಗಳು ವಿನಿಮಯಗಳಾಗುತ್ತವೆ. ಒಂದು ಮೈಲುಗಲ್ಲಾಗಿ ಒಂದು ವರುಷದ ಪ್ರೇಮದ ನಲಿವು, ನಲ್ಮೆಯ ಸಂಕಲನ, ವ್ಯವಕಲನವನ್ನು ಜೀವನದಲ್ಲಿ ಮಾಡಿಕೊಂಡು ತಮ್ಮ ಪ್ರೇಮವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುತ್ತಾ.. ಜೀವನದ ಈ ಪಯಣದಲ್ಲಿ ಕಾಣದ ತಿಳಿಯದ ಭವಿಷ್ಯತ್ ಕಡೆಗೆ ಭರವಸೆಯ ಮುಖವನ್ನು ಇಡೋಣ!

ಹ್ಯಾಪಿ ವ್ಯಾಲೇಂಟೈನ್ಸ್ ಡೇ!!