ಮಂಗಳವಾರ, ಜುಲೈ 27, 2010

ನಾವೇಲ್ಲಿ ಇದ್ದೀವಿ!!

ಮೂನ್ನೆ ನಾನು ಕಳೆದ ವಾರದ ಪ್ರಜಾವಾಣಿ ಪತ್ರಿಕೆಗಳನ್ನು ತಿರುವಿ ಹಾಕುವ ಸಮಯದಲ್ಲಿ ಸವಣೂರಿನಲ್ಲಿ ನಡೆದ ಮಲವನ್ನು ಮೈ ಮೇಲೆ ಸುರಿದು ಕೊಂಡ ಘಟನೆಯ ಚಿತ್ರ-ವರದಿಯನ್ನು ಓದಿದಾಗ ನಿಜವಾಗಿಯೂ ನಾವು ಯಾವ ಜಗತ್ತಿನಲ್ಲಿ ಇದ್ದೀವಿ ಎಂದು ನನ್ನ ಮನಸ್ಸು ಕಸಿವಿಸಿಯಾಯಿತು. ಯಾರೇ ಆಗಲಿ ಮನುಷ್ಯತ್ವವಿರುವವರು ಬೇಸರ ಪಡುವ ಮತ್ತು ಮರುಗುವ ಘಟನೆ ಇದಾಗಿದೆ.

ನಾವುಗಳು ನಮ್ಮ ನಮ್ಮಲ್ಲಿಯೇ ನಾವು ಹಾಗೇ ಮುಂದುವರಿದ್ದೀವಿ. ಹೀಗೆ ಪ್ರಪಂಚದಲ್ಲಿಯೇ ನಮ್ಮ ಭಾರತ ಮತ್ತು ಕರ್ನಾಟಕ ಮಿಂಚಿನಂತೆ ಸೆಳೆಯುವ ಚಮತ್ಕಾರಗಳನ್ನು ಮಾಡಿಬಿಟ್ಟಿವಿ ಅಂದು ಕೊಳ್ಳುವ ಸಮದಲ್ಲಿಯೇ ಈ ರೀತಿಯ ಅನಾಗರೀಕತೆಯ ಮುಂದುವರಿಕೆಯೇನೋ ಎಂಬಂತೆ ಎಲ್ಲರೂ ತಲೆ ತಗ್ಗಿಸುವಂತೆ ಇರುವ ಸಮಾಜಿಕ ಅನಿಷ್ಟ ಪದ್ಧತಿಗಳು ಜೊತೆ ಜೊತೆಯಲ್ಲಿಯೇ ಸಾಗುತ್ತಿರುವುದು ವಿಪರ್ಯಾಸ.

ಹಾಯ್ ಬೆಂಗಳೂರಿನಲ್ಲಿ ಬಂದಿರುವ ರವಿಬೆಳೆಗೆರೆಯವರ ಲೇಖನವನ್ನು ಸಮಾಜದ ಎಲ್ಲಾ ಬುದ್ಧಿವಂತರು, ರಾಜಕರಣಿಗಳು, ಅಧಿಕಾರಿಗಳು, ಚಿಂತನ ಜೀವಿಗಳು ಓದುವುದು ಒಳಿತು."ರಾಮ ಭಕ್ತ ರಾಜ್ಯ ಕಂಡ ಮಲ ಸ್ನಾನ" ಅಗ್ರ ಲೇಖನ ಮತ್ತು "ರಾಜಕೀಯ ನಾಯಕರ ತಟ್ಟೆಗಳಲ್ಲಿ ಕಾಣಿಸಿದ್ದು ಸವಣೂರಿನ ಭಂಗಿಗಳ ಮಲ" ಸಂಪಾದಕೀಯದಲ್ಲಿ ಅವರು ತೋಡಿಕೊಂಡಿರುವ ನೋವು ಮತ್ತು ಕಳಕಳಿ ಎಲ್ಲಾ ನಾಗರಿಕರುಗಳಿಗೂ ಉಂಟಾಗಬೇಕು.

ನಾವು ನಮ್ಮ ಜೀವನದ ಉನ್ನತ ಮಟ್ಟವನ್ನು ಕೇವಲ ಎಲ್ಲಾ ಸೌಕರ್ಯಗಳನ್ನು ಹೊಂದಿರುವ ಕೆಲವೇ ಕೆಲವು ಪಟ್ಟಣಗಳನ್ನು ನೋಡಿ ನಿರ್ಧರಿಸಬಾರದು. ಇನ್ನೂ ಅದೇಷ್ಟೋ ಕುಗ್ಗ್ರಾಮಗಳು ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ ಅದು ನಮ್ಮ ಸರ್ಕಾರದ ಕಣ್ಣಿಗೆ ಬಿಳದ ರೀತಿಯಲ್ಲಿ ಅದೇ ಕಷ್ಟ ನಷ್ಟಗಳಲ್ಲಿ ಹಳ್ಳಿಯ ಜೀವನದಲ್ಲಿ ನರಳುತ್ತಿರುವುವೇನೋ ಬಲ್ಲವರಿಲ್ಲ. ಈ ರೀತಿಯ ಘಟನೆಗಳ ಮೂಲಕ ಅವುಗಳು ನಮ್ಮ ಕಣ್ಣಿಗೆ ಬಿಳುತ್ತವೆ.

ನಮ್ಮ ಸಮಾಜದಲ್ಲಿ ನಾವುಗಳು ಎಲ್ಲರೂ ಸುಖವಾಗಿರಬೇಕು ಎಂದು ಸರ್ಕಾರ ವಿವಿಧ ಯೋಜನೆಗಳ ಮಹಾಪೂರವನ್ನೇ ಹರಿಸಿದರೂ ಅವುಗಳ ಪ್ರಯೋಜನ ಯೋಗ್ಯರಿಗೆ ಸಮಯಕ್ಕೆ ಸರಿಯಾಗಿ ಸಿಗದೇ ಇರುವುದು, ಈ ರೀತಿಯ ಪದ್ಧತಿಗಳು ಇನ್ನೂ ಜೀವಂತವಾಗಿ ಜಾರಿಯಾಗಿ ಇರಲು ಸಾಧ್ಯ.

ನಾವುಗಳು ನಮ್ಮ ಸಾಕ್ಷರತೆಯನ್ನು ನೂರಕ್ಕೆ ನೂರು ಹಿಡೇರಿಸಿದ್ದೇವೆ ಎಂದು ಬಡಾಯಿ ಕೊಚ್ಚಿಕೊಂಡರೇ ಹಳ್ಳಿಗಳಲ್ಲಿ ಇನ್ನೂ ಅದೇಷ್ಟೋ ಮಕ್ಕಳು ವಿವಿಧ ಕಾರಣದಿಂದ ಶಾಲೆಯ ಮುಖವನ್ನೇ ಕಾಣದ ಸ್ಥಿತಿಯಲ್ಲಿ ಇರುವುದು ಬಹುಮುಖ್ಯ ಸಮಸ್ಯೆ.

ಹೌದು, ಈ ರೀತಿಯ ಅನಿಷ್ಟ ಪದ್ಧತಿಗಳ ಜೀವಂತಿಕೆಗೆ ನಮ್ಮ ಜನಗಳಲ್ಲಿ ಸಮಯಕ್ಕೆ ಸರಿಯಾಗಿ ಅರಿವು ಮೂಡದಿರುವುದು ಒಂದು ಕಾರಣ. ಅವರಲ್ಲಿ ಅರಿವು ಬರಬೇಕು ಅಂದರೆ ಅವರಲ್ಲಿ ಶಿಕ್ಷಣದ ಕ್ರಾಂತಿಯನ್ನು ಮೂಡಿಸಬೇಕಾದದ್ದು, ನಮ್ಮ ಸರ್ಕಾರ ಮತ್ತು ನಮ್ಮ ಬುದ್ಧಿವಂತ ಜನಗಳ ಕರ್ತವ್ಯ. ಇಲ್ಲವಾದರೇ ಅವರುಗಳಿಗೆ ತಾವು ಜೀವಿಸುತ್ತಿರುವುದೇ ಅಮೂಲ್ಯ ಬದುಕು ಎಂಬ ರೀತಿಯಲ್ಲಿ ಯಾವುದೇ ರೀತಿಯ ದಬ್ಬಾಳಿಕೆಯನ್ನು ಮತ್ತು ಅನಿಷ್ಟಕಾರಿ ಕೆಲಸಗಳನ್ನು ವಂಶಪಾರಂಪರ್ಯವಾಗಿ ಸಾಗಿಸಿಕೊಂಡು ಬದುಕುತ್ತಾರೆ. ಮತ್ತು ಅವರ ಮುಂದಿನ ಸಂತತಿಯು ಸಹ ಇಂದಿನ ಈ ಮುಂದುವರೆದ ಯುಗದಲ್ಲಿ ಬದುಕಲು ಅರ್ಹರಲ್ಲವೇನೋ ಎಂಬಂತೆ ಸಾವಿರ ವರ್ಷದ ಹಿಂದಿನ ಬದಕನ್ನು ಸಹನೀಯವಾಗಿ ಜೀವಿಸುವಂತಾಗುತ್ತದೆ.

ಮನುಷ್ಯನ ತಿಳುವಳಿಕೆ ಮತ್ತು ತನ್ನ ಸುತ್ತಲಿನ ಸಮಾಜದಲ್ಲಿನ ಈ ರೀತಿಯ ನೋವು ನಲಿವುಗಳನ್ನು ತಿಳುವಳಿಕೆ ಇರುವ ಮಂದಿಗಳು ಸರಿಪಡಿಸಲು ಕೈಲಾದ ಸಹಾಯ ಮಾಡಬೇಕಾದದ್ದು ಕರ್ತವ್ಯ. ಅಲ್ಲಿನ ಊರಲ್ಲಿ ಅಲ್ಲಿನ ಜನಗಳು ತಮ್ಮ ಜೊತೆಯಲ್ಲಿರುವ ತಮ್ಮ ಜನಗಳಿಂದಲೇ ತಮ್ಮ ಮಲವನ್ನು ಹೊರುವಂತೆ ಮಾಡಿಕೊಂಡಿರುವ ಪದ್ಧತಿಯನ್ನು ಕಂಡರೇ ನಿಜವಾಗಿಯೂ ನಾವುಗಳು ಯಾವ ರೀತಿಯಲ್ಲಿ ಬದುಕುತ್ತಿದ್ದೇವೆ ಎಂದಾಂತಾಗುತ್ತದೆ ಅಲ್ಲವಾ?

ನಮ್ಮಲ್ಲಿರುವ ಚಿಕ್ಕ ಚಿಕ್ಕ ಸಮಸ್ಯೆಗಳನ್ನೇ ದೊಡ್ಡದು ಮಾಡಿಕೊಂಡು ಬಡಿದಾಡುತ್ತಿರುವ ನಮ್ಮ ಜನಗಳು ಇಂಥ ರೀತಿಯ ನೋವುಗಳಿಗೆ ಸ್ಪಂದಿಸುವ ಮನಸ್ಸನ್ನು ಮಾಡಬೇಕು. ಮನುಷ್ಯರನ್ನು ಮನುಷ್ಯರಾಗಿ ನೋಡುವಂತಾಗಬೇಕು. ಆಗ ಮಾತ್ರ ಸುಖಿ ಸಮಾಜದ ಕನಸು ನನಸಾಗಲು ಸಾಧ್ಯ.

ಬುಧವಾರ, ಜುಲೈ 21, 2010

ಆಷಾಢದ ಮನ


ಒಂದು ತಿಂಗಳೂ ಆಷಾಢ ಹೊಸದಾಗಿ ಮದುವೆಯಾದ ಜೋಡಿಗಳಿಗೆ ಬೇರೆಯಾಗಿರಬೇಕಾದ ವಿರಹ. ಸಡಗರದಿಂದ ಮದುವೆಯಾಗಿ ಹೊಸ ಕ್ಷಣಗಳಿಗಾಗಿ ಕಾತುರತೆಯಿಂದ ಕಾದದ್ದು ಈ ಮಾಸಕ್ಕಾಗಿಯೇ ಎಂಬಂತೆ ತನ್ನ ಮನದನ್ನೆಯನ್ನು ತವರು ಮನೆಗೆ ಬಿಟ್ಟು ಬಂದು, ಪುನಃ ಹಳೆಯ ಬ್ಯಾಚಲರ್ ಲೈಪ್ ಎಂಬ ಜೀವನವನ್ನು ಕಳೆಯಬೇಕಾದ ಬೇಜಾರು. ಇದಕ್ಕೆ ಕೂಳ್ಳಿ ಇಡುವಂತೆ ಮೈ ಮನವನ್ನು ತಣ್ಣಾಗಿಸುವ ಚಳಿ. ಮನೆಯಲ್ಲಿ ಯಾವುದೇ ಸಡಗರವಿಲ್ಲದೆ ಮುಂಜಾನೆ ಎಷ್ಟು ಸಮಯದವರೆಗಾದರೂ ಮಲಗೋಣ ಎಂಬ ಸೋಮಾರಿತನ. ಯಾಕಾದರೂ ಈ ತಿಂಗಳು ಬರುತ್ತದೋ ಎಂಬ ಹುಸಿ ಮುನಿಸು. ಹಿರಿಯರ ಕಟ್ಟಾಪ್ಪಣೆ "ಏನಿದ್ದರೂ ಒಂದು ತಿಂಗಳು ಆದ ಮೇಲೆ" ಎಂಬ ಮಾತು. ಅವರುಗಳಿಗೆ ಖುಷಿ ಇಲ್ಲಿ ಇವನ/ಇವಳ ಮನದಲ್ಲಿ ಸುಮ್ಮನೆಯ ಸಣ್ಣ ನೋವು.






ಆಫೀಸ್ ಗೆ ಹೋದರೆ ಎಲ್ಲರ ಆಶ್ಚರ್ಯಕರ ನೋಟ. "ಇಷ್ಟು ಬೇಗ ಹೇಗೆ ನಿನ್ನ ಮದುವೆಯ ಎಲ್ಲಾ ಸಡಗರ ಮುಗಿದು ಹೋಯ್ತಾ?" ಎಂಬ ಮಾತು. "ಹನಿಮೊನ್ ಇಲ್ವ? ಇಷ್ಟು ಬೇಗ ವಾಪಸ್ಸ ಬಂದು ಬಿಟ್ಯಾ?" "ಇಷ್ಟು ಬೇಗ ಹೆಂಡ್ತಿ ಬೋರ್ ಆದಳಾ" ಎಂಬ ಪ್ರಶ್ನೇ. ಅವರಿಗೇನೂ ಗೊತ್ತು ಇವಳ/ಇವನ ತಳಮಳ, ಮನದಲ್ಲಿಯೇ ಕನಸು. ಹೀಗೆ ಹೊಸದಾಗಿ ಮದುವೆಯಾದ ಯುವತಿ/ಯುವಕರು ಈ ಒಂದು ತಿಂಗಳು ಅನುಭವಿಸುವ ಕಷ್ಟ ನಷ್ಟಗಳು ಯಾರಿಗೂ ಬೇಡಾ ಅನಿಸುವುದಿಲ್ಲವಾ? ನನಗೆ ಗೊತ್ತಿಲ್ಲಾ. ನಿಮಗೇ?


ಅದರೂ ಈ ಒಂದು ತಿಂಗಳು ಪ್ರಕೃತಿ ಒಂದು ಕ್ಷಣ ಬಿರು ಬೇಸಿಗೆಯ ಬೆವರು ಹನಿಗಳಿಗೆ ತಂಪು ತರುವಂತೆ ಎಲ್ಲೇ ಮೀರಿ ಕಾವುಗೊಂಡ ಮನಸುಗಳಿಗೆ ಪನ್ನೀರನ್ನು ಚೆಲ್ಲುವಂತೆ ಮಾಡಿ ಹಾಯ್ ಎನಿಸುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಈ ಒಂದು ತಿಂಗಳು ಹೊಸ ಅನುಭವವನ್ನು ಕೊಡುತ್ತದೆ.


ಪ್ರಕೃತಿ ತನ್ನ ಋತು ಚಕ್ರದಲ್ಲಿ ಯಾವುದನ್ನು ಚಾಚೂ ತಪ್ಪದೇ ಸಮಯಕ್ಕೆ ತಕ್ಕ ಹಾಗೇ ತನ್ನ ತನವನ್ನು ತನ್ನ ಜೀವನ ಮರ್ಮವನ್ನು ತೋರಿಸುತ್ತಾ ಸಾಗುತ್ತದೆ. ಅದಕ್ಕೆ ತಕ್ಕ ಹಾಗೇ ನಾವುಗಳು ಹೆಜ್ಜೆ ಹಾಕಬೇಕಾದದ್ದು ನಮ್ಮ ಕರ್ತವ್ಯ ಅಷ್ಟೇ.
ಬೆಚ್ಚಗೆ ಹಾಸಿಗೆಯ ಮೇಲೆ ಮಲಗಲು ಮುಂಜಾನೆಯನ್ನು ಕಳೆದು ಮದ್ಯಾನದವರೆಗೂ ನಿದ್ದೆಯ ಸವಿಯನ್ನು ಸವಿಯಲು ಸೊರ್ಯದೇವನ ಯಾವುದೇ ಅಡ್ಡಿ ಆಡಚಣೆಗಳು ಇರುವುದಿಲ್ಲ. ಯಾಕೆಂದರೆ ಅವನು ಸಹ ತನ್ನ ಸವಿ ನಿದ್ದೆಯ ಮಂಪರಿನಲ್ಲಿ ಜಗತ್ತನ್ನು ನೋಡುತ್ತಾ, ತನ್ನ ಕಾರ್ಯವನ್ನು ಮಾಡಬೇಕಲ್ಲಾ ಎಂಬಂತೆ ಕಪ್ಪು ಮೊಡಗಳ ಮರೆಯಲ್ಲಿ ಕಣ್ಣ ಮುಚ್ಚಾಲೆಯಾಡುತ್ತಾ ನಮಗೆಲ್ಲಾ ಸಹಕರಿಸುತ್ತಾನೆ.


ಈ ವಾತವರಣಕ್ಕೆ ಸ್ವಲ್ಪ ಮೆರಗನ್ನು ನೀಡೋಣವೇನೋ ಎಂಬಂತೆ ಅಲ್ಲಿ ಇಲ್ಲಿ ಇರುವ ಚಿಕ್ಕ ಚಿಕ್ಕ ಮೊಡಗಳು ಕರಗಿ ತುಂತುರು ಮಳೆಯ ಆಟವನ್ನಾಡುತ್ತಾವೆ. ನಿಜವಾಗಿಯೊ ಎನ್-ಜಾಯ್ ಮಾಡಲು ಇದಿಷ್ಟು ಸಾಕು ಎನಿಸುತ್ತದೆ. ಎನಾದರೂ ಸರಿ ಸ್ಪಲ್ಪ ಹಾಟ್ , ಬಿಸಿ ಬಿಸಿ ಇದ್ದರೆ ಸಾಕು ಅನ್ನುತ್ತಾ ಯಾವಗಲೂ ಬಾಯಿಯನ್ನು ಆಡಿಸುತ್ತಿರೋಣ ಎಂದು ಚುರುಕು ಮುರುಕು ತಿನ್ನುವುದು.
ಈ ಒಂದು ತಿಂಗಳು ಯಾವುದೇ ರೀತಿಯ ಹಬ್ಬ ಹರಿ ದಿನಗಳು ಇಲ್ಲದೇ ಯಾವುದೇ ಒಂದು ಕಾರ್ಯ ಕೆಲಸಗಳಿಗೂ ಒಂದು ತಿಂಗಳ ಚಿಕ್ಕದಾದ ಬ್ರೇಕ್.

ಆದರೂ ನಮ್ಮ ಹಳ್ಳಿಗಳ ಜನ ಬಹಳ ಬುದ್ಧಿವಂತರು ಕಣ್ರೀ! ಅವರು ಎಲ್ಲಾ ತಿಂಗಳಲ್ಲೂ ಒಂದು ಒಂದು ರೀತಿಯಲ್ಲಿ ಒಂದು ಹಬ್ಬ ಆಚರಣೆಗಳನ್ನು ಪ್ರತಿ ಮಾಸದಲ್ಲೂ ಜಾರಿಯಲ್ಲಿ ಇಟ್ಟು ಕೊಂಡಿರುತ್ತಾರೆ. ಹಾಗೆಯೇ ಈ ಆಷಾಡದ ಮಾಸದಲ್ಲೂ ಒಂದು ಹಬ್ಬವನ್ನು ಆಚರಿಸುತ್ತಾರೆ ಅದೆಂದರೇ "ಏಕಾದಸಿ". ಇಲ್ಲಿ ನಮ್ಮ ಪೇಟೆಯ ಜನಗಳಿಗೆ ಏಕಾದಸಿ ಅಂದರೇ ಉಪವಾಸ. ಆದರೆ ಅಲ್ಲಿ ಈ ತಿಂಗಳಲ್ಲಿ ಏಕಾದಸಿಯ ಹಬ್ಬದಲ್ಲಿ ಹುರಿ ಹಿಟ್ಟಿನಿಂದ ಮಾಡಿದ ಉಂಡೆಗಳ ಭಾರಿ ಬೋಜನ. ಆ ಉಂಡೆಗಳನ್ನು ಹೊಡೆಯಲು ಈ ತಿಂಗಳು ಹೇಳಿ ಮಾಡಿಸಿದ ತಿಂಗಳು. ಈ ಚಳಿಯಲ್ಲಿ ಅವುಗಳನ್ನು ತಿನ್ನುವುದೇ ಒಂದು ಖುಷಿಯ ವಿಚಾರ. ಏಕೆಂದರೆ ಅವುಗಳನ್ನು ಅಷ್ಟೊಂದು ಗಟ್ಟಿಯಾಗಿ ಬಾಯಿಂದ ಮುರಿಯಲು ಸಾಧ್ಯವಾಗುವುದಿಲ್ಲವೇನೋ ಎಂಬ ರೀತಿಯಲ್ಲಿ ಬೆಲ್ಲದ ಪಾಕದಿಂದ ಹದವರಿತು ತಯಾರಿಸುತ್ತಾರೆ. ಈ ವಿವರಣೆಯನ್ನು ಕೇಳಿ ಬಾಯಲ್ಲಿ ನೀರು ಬಂದಿತೇ? ಹಾಗದರೆ ಮರಳಿ ಹಳ್ಳಿಯ ಕಡೆ ಒಮ್ಮೆ ಬನ್ನಿ.


ಈ ರೀತಿಯ ವಿವಿಧ ಮಹತ್ವವನ್ನು ಹೊಂದಿರುವ ಈ ಮಾಸದಲ್ಲಿ, ಪ್ರಚಲಿತವಾಗಿ ಈಗಿನ ರಾಜಕೀಯ ದಿನ ಮಾನಗಳಲ್ಲಿ ಬೆಂಗಳೂರಲ್ಲಿ ಸಣ್ಣದಾಗಿ ನಮ್ಮ ಜನಪ್ರತಿನಿಧಿಗಳು ತಮ್ಮ ತಮ್ಮಲ್ಲಿಯೇ ತಲ್ಲಣಗೊಂಡಿದ್ದಾರೆ. ಗಣಿ ದಣಿಗಳು, ಗಣಿ ಹಗರಣಗಳು, ಅವುಗಳನ್ನು ಧೂಳು ಧೊಳ್ ಮಾಡೋಣ ಎಂಬಂತೆ ಪ್ರತಿಪಕ್ಷದವರು ಬೆಂಗಳೂರ್ ಟು ಬಳ್ಳಾರಿ ಪಾದಯಾತ್ರೆಯನ್ನು ಈ ಚುಮು ಚುಮು ಚಳಿಯಲ್ಲಿ ಹಾಕಿಕೊಂಡಿರುವುದು ಆರೋಗ್ಯಕರ. ಪ್ರಕೃತಿಯೇ (?) ಅವರ ಮನಸ್ಸಿಗೆ ಪ್ರೇರಣೆಯನ್ನು ಕೊಟ್ಟಿರುವಂತೆ ಇದೆ. ಅವರುಗಳು ಸಹ ಸಕತ್ತಾಗಿ ಸಂಭ್ರಮಿಸಿಕೊಳ್ಳಬಹುದು.


ಈ ರೀತಿಯ ಚಿಕ್ಕ ಚಿಕ್ಕ ಸಂತೋಷಗಳೇ ಜನ ಸಾಮಾನ್ಯರಿಗೆ ಪ್ರಕೃತಿಯಿಂದ ದೊರೆಯುವ ಚಿನ್ನದ ದಿನಗಳು. ಅದನ್ನು ನೋಡುವ ಮತ್ತು ಅದರ ಜೊತೆ ಸೇರಿ ಅನುಭವಿಸುವ ಮನಸ್ಸು ಮಾತ್ರ ನಮಗೆ ಬೇಕಾದಾದ್ದು. ಋತುಮಾನಗಳು ಯಾವ ರೀತಿಯಲ್ಲೂ ಬದಲಾವಣೆಯಾಗುವುದಿಲ್ಲ. ನಾವುಗಳು ಮಾತ್ರ ಬದಲಾಗಬಹುದು ಅಷ್ಟೇ. ಆದರೂ ಮನುಷ್ಯನ ಅತಿಯಾದ ದುರಾಸೆಯ ಫಲದಿಂದ ಈ ರೀತಿಯ ಉನ್ನತವಾದ ಪ್ರಕೃತಿಯ ಕೊಡುಗೆಗಳಿಗೆ ಧಕ್ಕೆ ತರುತ್ತಿರುವುದು ನಿಲ್ಲಬೇಕು. ಪರಿಸರ ಪ್ರೀತಿ ಇರಬೇಕು. ಅವುಗಳು ಯಾವ ಯಾವ ರೀತಿಯಲ್ಲಿ ಇರುವುದೂ ಆ ರೀತಿಯಲ್ಲಿಯೇ ನಾವುಗಳು ಅರ್ಪಿಸಿಕೊಳ್ಳಬೇಕು. ಆಗ ಮಾತ್ರ ನಾವುಗಳು ನಮ್ಮ ಸುತ್ತಲೂ ಇರುವ ಎಲ್ಲಾರೂ ಒಂದಾಗಿ ನಮ್ಮ ಪರಿಸರದಲ್ಲಿ ಒಂದಾಗಬಹುದು. ಅಲ್ಲವಾ?

ಮಂಗಳವಾರ, ಜುಲೈ 13, 2010

ಕೆಲವೇ ಸಜ್ಜನರುಗಳು




ನಮ್ಮ ಜನ ಯಾರನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಅವರುಗಳಿಗೆ ಮರೆವು ಜಾಸ್ತಿ. ಸಮಾಜ ಮುಖಿ ಚಿಂತನೆ ಇಲ್ಲವೇ ಇಲ್ಲ. ತಾವುಗಳು ಬರಿ ತಮ್ಮ ಬಗ್ಗೆ ಮಾತ್ರ ಯೋಚಿಸಿತ್ತಾರೆ.. ಇತ್ಯಾದಿ ಇತ್ಯಾದಿ ಅಭಿಪ್ರಾಯಗಳನ್ನು ನಮ್ಮ ಸಮಾಜದ ಬಗ್ಗೆ ನಮ್ಮ ದಿನ ನಿತ್ಯ ಮಾತನ್ನಾಡುತ್ತಾ ಇರುತ್ತೇವೆ.



ಈ ಮೇಲಿನ ನಮ್ಮೆಲ್ಲಾರ ನಂಬಿಕೆಗಳನ್ನು ಸುಳ್ಳು ಮಾಡುವ ರೀತಿ ಕಳೆದೆರಡು ವಾರಗಳಲ್ಲಿ ನಮ್ಮ ಜನ ತಮ್ಮ ಹಿತಾಸಕ್ತಿ ಏನೂ ಎಂಬುದನ್ನು ಪ್ರತಿಪಾದಿಸಿದ್ದಾರೆ. ಅದಕ್ಕೆ ಕಾರಣಕತೃಗಳು ನಮ್ಮ ನಿಮ್ಮೆಲ್ಲಾರ ಜನಪ್ರಿಯ ಅಧಿಕಾರಿಗಳಾದ ಲೋಕಾಯುಕ್ತ ಸಂತೋಷ ಹೆಗಡೆ. ಅವರುಗಳು ರಾಜೀನಾಮೆಯನ್ನು ಕೊಟ್ಟ ದಿನದಿಂದ ಪುನಃ ವಾಪಸ್ಸು ಪಡೆಯುವವರೆಗೆ ಪ್ರತಿಯೊಬ್ಬರು ಯಾವ ರೀತಿ ಕಳ ಕಳಿಯನ್ನುಂಟು ಮಾಡಿದರು ಎಂದರೆ. ಪುನಃ ನಮ್ಮ ಸಮಾಜದಲ್ಲಿ ಒಂದು ರೀತಿಯ ಆಶದಾಯಕವಾದ ವಾತವರಣದ ನಂಬಿಕೆಯನ್ನು ಬಲಿಷ್ಟ ಮಾಡಲು ಸಹಕಾರಿಯಾಯಿತು.



ನಮ್ಮ ಯೋಚನೆ ಮತ್ತು ನಾವುಗಳು ನಿರೀಕ್ಷಿಸುವುದು ಯಾವುದನ್ನು ಎಂಬುದನ್ನು ಪ್ರತಿಯೊಬ್ಬರಿಗೂ ಗೊತ್ತು ಮಾಡಿ ಕೊಟ್ಟಂತಾಯಿತು. ವ್ಯಕ್ತಿಯ ಒಳ್ಳೆಯತನವನ್ನು, ಒಳ್ಳೆಯ ಕೆಲಸವನ್ನು ಎಂದು ಮರೆಯಲಾಗುವುದಿಲ್ಲ. ಜನ ತಾವು ಅಂದುಕೊಂಡ ಆಸೆ ಆಕಾಂಕ್ಷೆಗಳನ್ನು ನಮಗೆ ಗೊತ್ತಿರುವವರು ನೆರವರಿಸುತ್ತಿದ್ದಾರೆ ಎಂದರೆ ಆ ಕ್ಷಣ ನಮಗೆ ಉಂಟಾಗುವ ಆನಂದ ನಿರಿಕ್ಷೆಗೂ ಮೀರಿದ್ದು. ಅದಕ್ಕೆ ಅಂದು ನಾವುಗಳು ಎಸ್. ಪಿ. ಸಾಂಗ್ಲಿಯಾನ ಎಂದರೆ ಸಾಕು ಒಂದು ರೀತಿಯ ಯಾವುದು ನೆಮ್ಮದಿ ಮತ್ತು ಹೆಮ್ಮೆ. ಅದಕ್ಕೆ ಆ ಹೆಸರಿನ ಚಲನಚಿತ್ರ ಕನ್ನಡ ನೆಲದಲ್ಲಿ ಸುಪ್ರಸಿದ್ಧಿಗೂಂಡಿದ್ದು. ಸಾಂಗ್ಲಿಯಾನ ಹಾಗೇ ಮಾಡುತ್ತಾರಂತೆ, ಹೀಗೆ ಬರುತ್ತಾರಂತೆ.. ಈ ರೀತಿಯ ಊಹಾ ಪೊಹಾವಾದ ಮಾತು ಕತೆಗಳು ಅವರನ್ನು ಆ ಮಟ್ಟಕ್ಕೆ ನಿಲ್ಲಿಸಿದ್ದವು.



ಹೀಗೆ ಸರ್ಕಾರಿ ಕೆಲಸದಲ್ಲಿ ಇದ್ದು ಕೊಂಡು ಆ ಮಟ್ಟಿಗೆ ಒಂದು ಸಿನಿಮಾದ ಕಥೆಯಾಗುವ ಮಟ್ಟಕ್ಕೆ ನಮ್ಮ ಜನ ಅವರ ಕೆಲಸಗಳನ್ನು ನೆನಪಿಸಿಕೊಳ್ಳುತ್ತಾ ಇದ್ದರು.



ಚುನಾವಣೆ ಆಯೋಗ ಎಂಬುದು ಒಂದು ಇದೆ ಎಂಬುದು ನಮಗೆಲ್ಲಾ ಗೊತ್ತಾಗಿದ್ದು, ಚುನಾವಣೆ ಆಯೋಗಕ್ಕೆ ಟಿ. ಎನ್. ಶೇಷನ್ ರವರು ಬಂದಾಗ. ಹೀಗೆ ಪ್ರತಿಯೊಂದು ಅಧಿಕಾರದ ಸ್ಥಳಗಳು ವ್ಯಕ್ತಿಗಳ ನಡಾವಳಿಗಳಿಂದ ಜನರುಗಳಿಗೆ ಹೆಚ್ಚು ಹೆಚ್ಚು ಹತ್ತಿರವಾಗಿವೆ. ಅದಕ್ಕೆ ಕಾರಣ ಅವರುಗಳು ತೆಗೆದುಕೊಳ್ಳುವ ಜನಪರ ನಿರ್ಧಾರಗಳು ಮತ್ತು ಯೋಜನೆಗಳು.



ಐ.ಪಿ.ಎಸ್ ಎಂಬುದು ಒಂದು ಇದೆ ಎಂಬುದು ಗೊತ್ತಾಗಿದ್ದು ಕಿರಣ್ ಬೇಡಿ ಎಂಬ ಕೆಚ್ಚದೆಯ ಮಹಿಳೆಯ ಪೋಲಿಸ್ ಕಾರ್ಯಚರಣೆಯಿಂದ. ರಾಷ್ಟ್ರಪತಿಗಳು ಹೀಗೆ ಇರುತ್ತಾರೆ ಎಂಬುದು ತಿಳಿದಿದ್ದು, ಸರ್ವಪಳ್ಳಿ ರಾಧಕೃಷ್ಣರವರು ಮತ್ತು ನಮ್ಮ ನೆಚ್ಚಿನ ಅಬ್ದುಲ್ ಕಲಾಂ ರವರಿಂದ. ಹೀಗೆ ಕೆಲವರುಗಳು ತಮ್ಮ ಇತಿ ಮಿತಿಯಲ್ಲಿ ಅಯಸ್ಕಾಂತದ ರೀತಿಯಲ್ಲಿ ಜನ ಮನದಲ್ಲಿ ಸ್ಥಿರಸ್ಥಾಯಿಯಾಗಿ ನೆಲಸುತ್ತಾರೆ. ಅವರುಗಳನ್ನು ಒಂದು ಇಡೀ ಜನಾಂಗ ದಿನ ನಿತ್ಯ ಅವರುಗಳು ಇದ್ದಾಗ ಹೀಗೆ ಇತ್ತು ಗೊತ್ತಾ ಎಂದು ತಮ್ಮ ತಮ್ಮಲ್ಲಿಯೇ ಮಾತನ್ನಾಡಿ ಕೊಳ್ಳುತ್ತಾರೆ.



ಸಾರ್ವಜನಿಕ ರಂಗದಲ್ಲಿ ಹೆಸರು ಮಾಡುವುದು ಸುಲಭ ಮತ್ತು ಕಷ್ಟ. ಅದರೆ ತಮ್ಮ ವಿಭಿನ್ನ ರೀತಿಯ ಬುದ್ಧಿವಂತಿಕೆ ಮತ್ತು ನೆರ ನಡೆ ನುಡಿಯಿಂದ ಅಪರೂಪವಾದ ಕೆಲಸಗಳಿಂದ ಒಂದು ರೀತಿಯ ಸಂಚಲನವನ್ನು ಕೆಲವೇ ವ್ಯಕ್ತಿಗಳು ಮಾಡುತ್ತಾರೆ ಅದು ಸದ್ದಿಲ್ಲದೆ. ಆ ರೀತಿಯ ಅವರ ಕಾರ್ಯಗಳು ಜನರುಗಳಿಗೆ ಪರಿಮಳೂಪಾದಿಯಲ್ಲಿ ಪಸರಿಸುತ್ತದೆ.



ಅದಕ್ಕೆ ಇರಬೇಕು ನಮ್ಮ ನಿತ್ಯ ಬದುಕಿನಲ್ಲಿ ಹಲವಾರು ಬದಲಾವಣೆಗಳನ್ನು ಕಂಡರು ಮತ್ತು ನಿರಾಸೆಯನ್ನು ಹೊಂದಿದರು ಅಪರೂಪಕ್ಕೆ ಇಂಥ ವ್ಯಕ್ತಿಗಳ ಆಗಮನ ಸರಿ ಸಮಯದಲ್ಲಿ ಸಮಾಜಕ್ಕೆ ಸಿಗುತ್ತಿರುತ್ತದೆ ಮತ್ತು ಬೇಕಾಗುತ್ತದೆ .



ಈ ರೀತಿಯ ದಕ್ಷ ಮತ್ತು ಉತ್ತಮ ಅಧಿಕಾರಿಗಳ ಸಂಖ್ಯೆ ಹೆಚ್ಚು ಹೆಚ್ಚು ಬೆಳೆಯಲಿ ಎಂಬುದು ನಮ್ಮೆಲ್ಲಾರ ಆರೈಕೆ.



ಇವರುಗಳ ಮಾರ್ಗದರ್ಶನ ಮತ್ತು ಅವರುಗಳು ತೋರಿಸಿದ ಹಾದಿ ಯುವ ಜನಾಂಗಕ್ಕೆ ದಾರಿ ದೀಪವಾಗಲಿ ಮತ್ತು ಅವರ ಆದರ್ಶ ನಮ್ಮೆಲ್ಲಾರ ಮಂತ್ರವಾಗಲಿ. ಇದಕ್ಕೆ ಉತ್ತೇಜನ ಎಂಬ ರೀತಿಯಲ್ಲಿ ನಮ್ಮ ಎಲ್ಲಾ ಯುವಕರುಗಳು, ವಿದ್ಯಾರ್ಥಿಗಳು ಇಂದು ನಮ್ಮ ರಾಜಕೀಯ, ಸಮಾಜಿಕ, ಆರ್ಥಿಕತೆ, ಭ್ರಷ್ಟತೆ, ದಬ್ಬಾಳಿಕೆ ಇತ್ಯಾದಿ ಯಾದ ವಿಚಾರಗಳ ಬಗ್ಗೆ ತಮ್ಮದೆಯಾದ ಚಿಂತನೆಯನ್ನು ಯೋಚನೆಯನ್ನು ಮತ್ತು ವಿಚಾರವನ್ನು ಹೊಂದಿರುವುದು ಆಶದಾಯಕ. ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು ಎಂಬ ರೀತಿಯಲ್ಲಿ ಮುಂದಿನ ಉತ್ತಮ ಬಾಳ್ವೆಗೆ ಇವರುಗಳ ಇಂದಿನ ಚಿಂತನೆ ಬೆಳಕಾಗಲಿ.



ನಾವುಗಳು ಯಾವ ರೀತಿಯಲ್ಲಿ ಸಜ್ಜನರುಗಳ ಬಗ್ಗೆ ಇಂದು ಅಪಾರವಾದ ನಂಬಿಕೆ ಮತ್ತು ವಿಶ್ವಾಸವನ್ನು ಇಟ್ಟುಕೊಂಡಿದ್ದೆವೂ ಅದನ್ನು ಉಳಿಸುವ ಸಲುವಾಗಿ ಪ್ರತಿ ಕುಟುಂಬದಲ್ಲಿ ಸಾಮಾಜಿಕ ಕಳ ಕಳಿಯ ಬೆಳಕು ಪ್ರತಿಯೊಂದು ಮಗುವಿಗೂ ದೊರೆಯಲಿ. ಮಗು ಕೆವಲ ಪುಸ್ತಕದ ಹುಳುವಾಗದೆ ತನ್ನ ಸುತ್ತಲಿನ ಜನ ಮನ ಮತ್ತು ರಾಜ್ಯ, ದೇಶದ ಆಗೂ ಹೋಗುಗಳ ಬಗ್ಗೆ ತಿಳುವಳಿಕೆಯನ್ನು ಹೊಂದುವಂತೆ ಮಾಡಬೇಕಾದ್ದು ಹೆತ್ತವರ ಕರ್ತವ್ಯ.



ಚಿಕ್ಕಂದಿನಲ್ಲಿ ಕಂಡ ಒಳ್ಳೆಯತನ ಮತ್ತು ಕೆಟ್ಟದ್ದು ಇವುಗಳೆ ಮುಂದೆ ಆ ಮಗುವಿಗೆ ಹೇಗೆ ತಾನು ತನ್ನ ಸಮಾಜಕ್ಕೆ ನೆರವು ಆಗಲಿ ಮತ್ತು ಮುಂದೆ ತಾನು ಇರುವ ರಂಗದಲ್ಲಿಯೇ ಹೇಗೆ ಹೊಸತನವನ್ನು, ಕೆಲವರಿಗೆ ಉಪಯೋಗವನ್ನುಂಟು ಮಾಡಬಹುದು ಎಂಬುದರ ಕಲ್ಪನೆಯ ಬೀಜವನ್ನು ಬಿತ್ತಿದಂತಾಗುತ್ತದೆ. ಆಗ ಮಾತ್ರ ನಾವುಗಳು ಹೆಚ್ಚು ಹೆಚ್ಚು ಭರವಸೆಯ ಇಂಥ ವ್ಯಕ್ತಿಗಳನ್ನು ಮುಂದೆ ನಿರಂತರವಾಗಿ ಕಾಣುತ್ತಿರಬಹುದು. ಅಲ್ಲವಾ?

ಶುಕ್ರವಾರ, ಜುಲೈ 2, 2010

ಯಾವ ಮೋಹನ ಮುರಳಿ ಕರೆಯಿತು

"ಮನವು ಮಲಗಿತ್ತು ಚಿತೆಯ ಮೇಲೆ "- ಹಿಮಗಿರಿ ಕಂದರ. ಪುಟ ೩

"ಸುಖ ದುಃಖ ಸಂಗಮವಾಟದ ಹೃದ್ ರಂಗವು ಪಾವನೆವೆಂಬೆನು ಎಂದೆಂದಿಗೂ" - ಸಖಿಗೀತ - ಬೇಂದ್ರೆ. ಪುಟ ೩

"ನಾನು ತಲೆ ತಗ್ಗಿಸುವುದು ಎರಡೇ ಸ್ಥಾನಗಳಲ್ಲಿ - ಒಂದು ನನ್ನ ಸಂಕಲ್ಪಕ್ಕೆ ಮತ್ತು ಸಾಧನೆ ಇವುಗಳ ನಡುವಿನ ಅಂತರಕ್ಕೆ ಮತ್ತು ಇನ್ನೊಂದು ಬೇಂದ್ರೆಯವರ ಪಾದಕ್ಕೆ". ಪುಟ ೪

"ಕಟ್ಟುವೆವು ನಾವು ಹೊಸ ನಾಡೊಂದನ್ನು, ರಸದ ಬೀಡೊಂದನ್ನು". ಪುಟ ೬

"ನಿನಗೆ ನೀನೇ ಗೆಳೆಯ, ನಿನಗೆ ನೀನೇ". ಪುಟ ೮

"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ". ಪುಟ ೯

"ಜಗತ್ತಿನಲ್ಲಿ ಧರ್ಮವೂ ಅಧರ್ಮವನ್ನಲಂಬಿಸದೇ ಗೆಲ್ಲಲಾರದು". ಪುಟ ೨೨

"ನೆನಪಿಗೆ ಭಾವನೆಯ ಬಲವಿದ್ದಾಗ ವಿವರಗಳ ಹಂಗೇಕೆ "- ಯಶವಂತ ಚಿತ್ತಾಲ. ಪುಟ ೩೮

"ಅಹಂಕಾರಕ್ಕೆಲ್ಲಿ ನಿಜದ ಪರಿವೆ" - ಯಶವಂತ ಚಿತ್ತಾಲ. ಪುಟ ೩೯

"ನನಗೆ ಒಳ್ಳೆಯದ್ದು ಕೆಟ್ಟದ್ದು ಇವುಗಳ ಬಗ್ಗೆ ವಿವೇಕ ಜ್ಞಾನ ಇಲ್ಲವೆಂದಲ್ಲ ಒಳ್ಳೆಯದರಲ್ಲಿ ನನಗೆ ರುಚಿಯಿಲ್ಲ "- ದುರ್ಯೊಧನ. ಪುಟ ೪೨

"ಚಟಕ್ಕಿರುವ ರುಚಿ ತಿಳುವಳಿಕೆಗೆ ಇಲ್ಲ". ಪುಟ


ಯಾವಾಗ ಅಂಥ ಗೊತ್ತಿಲ್ಲ ನಾನು ಗೋಪಾಲ ಕೃಷ್ಣ ಅಡಿಗರ ಬಗ್ಗೆ ತಿಳಿದಿದ್ದು. ಅವರ "ಯಾವ ಮೋಹನ ಮುರಲಿ ಕರೆಯಿತು, ದೂರ ತೀರಕೆ ನಿನ್ನನು" ಕವನವನ್ನು ರತ್ನಮಾಲ ಪ್ರಕಾಶರವರ ಕಂಠದಿಂದ ಹೊಮ್ಮಿದ ದ್ವನಿ ಸುರಳಿಯನ್ನು ಕೇಳಿದಾಗ ಬಹಳ ಇಷ್ಟವಾಯಿತು. ನಾಗತಿಹಳ್ಳಿ ಚಂದ್ರಶೇಖರವರ "ಅಮೆರಿಕಾ ಅಮೆರಿಕಾ " ಚಲನ ಚಿತ್ರದಲ್ಲಿ ಈ ಹಾಡಿಗೆ ದೃಶ್ಯ ಕಾವ್ಯವನ್ನು ಎಣೆದಾಗ ಇನ್ನೂ ತುಂಬ ಪ್ರೀತಿಯಾಯಿತು. ಇದೀಷ್ಟು ಅಡಿಗರ ಹೆಸರು ನನ್ನ ಮನದಲ್ಲಿ ನೆಲೆಸಲೂ ಕಾರಣವಾಯಿತು. ಅವಾಗ ಅವಾಗ ಈ ಒಂದು ಹಾಡನ್ನು ಸಮಯ ಸಿಕ್ಕಾಗೆಲ್ಲಾ ತಲ್ಲಿನನಾಗಿ ಕಿವಿ ತುಂಬಿಸಿಕೊಂಡು ಕವಿಯ ಕಾವ್ಯ ಚಮತ್ಕಾರವನ್ನು ಕಂಡು ಹರ್ಷಿಸಿಸುತ್ತಿದ್ದೆ.


ಇಷ್ಟು ಮಾತ್ರ ತಿಳಿದಿದ್ದು ಅವರು ದೊಡ್ಡ ಕವಿಯೆಂದು. ಅವರ ಬಗ್ಗೆ ಅಲ್ಲಿ ಇಲ್ಲಿ ಬಿಡಿ ಬಿಡಿ ಲೇಖನಗಳಲ್ಲಿ ಮಾತ್ರ ಓದಿದ್ದು ನೆನಪು. ಪುನಃ ಇತ್ತೀಚೆಗೆ ಟಿ. ಎನ್. ಸೀತರಾಮ್ ರವರ "ಮುಕ್ತ ಮುಕ್ತ" ಮೆಗಾ ದಾರವಾಹಿಯಲ್ಲಿ ಅವರ ಕವಿತೆಗಳನ್ನು ಕೇಳುವಂತಾಯಿತು.


ಸಾಹಿತ್ಯ ಲೋಕದ ನವ್ಯದ ಹರಿಕಾರರು ಇವರು ಎಂಬುದು ಸ್ವಲ್ಪ ಗೊತ್ತಾಯಿತು. ಇವರ ಪದ್ಯಗಳನ್ನು ನನ್ನ ಶಿಕ್ಷಣ ಸಮಯದಲ್ಲಿ ಕನ್ನಡ ಪಠ್ಯದಲ್ಲಿ ಓದಿರಬಹುದು, ಅದರೆ ಆಗ ಅದರ ಬಗ್ಗೆ ನನಗೆ ಮನನ ಮತ್ತು ಮಹತ್ವ ಆಗಿರಲಿಕ್ಕಿಲ್ಲ. ಆದರೆ "ಯಾವ ಮೋಹನ ಮುರಲಿ" ಹಾಡು ಅವರ ಪಕ್ಕ ಪ್ಯಾನ್ ಆಗುವಂತೆ ಮತ್ತು ಅವರ ಬಗ್ಗೆ ಕುತೂಹಲದಿಂದ ಸಾಹಿತ್ಯದಲ್ಲಿ ಹುಡುಕುವಂತೆ ಮಾಡಿತು.
ಆದರೆ ಅವರ ಬಗ್ಗೆ ಸಮಗ್ರವಾಗಿ ಅರಿವು ಉಂಟು ಮಾಡಿದ ಪುಸ್ತಕ ಎಂದರೆ, ಇತ್ತೀಚೆಗೆ ಎನ್. ವಿದ್ಯಾಶಂಕರ್, ಎಂ. ಜಯರಾಮ ಅಡಿಗ ರವರ ಸಂಪಾದಕತ್ವದಲ್ಲಿ ನುಡಿ ಪ್ರಕಾಶನದಿಂದ ಪ್ರಕಟಿತ "ಮೋಹನ ಮುರಲಿ" ಪುಸ್ತಕ.


ಇಷ್ಟೊಂದು ದೊಡ್ಡ ದೈತ್ಯ ಪ್ರತಿಭೆಯಾಗಿ ಕನ್ನಡ ಸಾಹಿತ್ಯ ರಂಗದಲ್ಲಿ ಹೊಸ ಅಲೆಯನ್ನು ಉಂಟು ಮಾಡಿದರು ಎಂಬುದನ್ನು ನಮ್ಮ ನಾಡಿನ ವಿವಿಧ ಸಾಹಿತಿಗಳು, ಗಣ್ಯರು ತಮ್ಮ ಆ ದಿನಗಳ ಅವರ ಜೊತೆ ಕಳೆದ ನೆನಪಿನ ಬುತ್ತಿಯನ್ನು ಈ ಪುಸ್ತಕದಲ್ಲಿ ಬಿಚ್ಚಿದಾಗ.
ಅವರ ಆತ್ಮೀಯ ಸುವರ್ಣ ಘಳಿಗೆಗಳನ್ನು ದ.ಬಾ. ಕುಲಕರ್ಣಿ, ಗೌರಿಶ್ ಕಾಯ್ಕಣಿ, ಯು.ಆರ್. ಅನಂತಮೂರ್ತಿ, ಪಿ. ಲಂಕೇಶ್, ಯಶವಂತ ಚಿತ್ತಾಲ ಇತ್ಯಾದಿಯವರಿಂದೊಡಗೂಡಿ ಶ್ರೀಶ್ರೀ ರವಿಶಂಕರವರಗಳು ಅವರ ಬಗ್ಗೆ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.


ಅವರ ಮತ್ತು ಅವರ ಒಡನಾಟದಲ್ಲಿ ಬಂದ, ಮೈಸೂರು, ಸಾಗರ, ಬೆಂಗಳೂರು, ಕಾಫಿ ಹೌಸ್, ಸೆಂಟ್ರಲ್ ಕಾಲೇಜು ಇತ್ಯಾದಿ ಸ್ಥಳಗಳು ಅವರಿಂದ ಇಂದು ಐತಿಹಾಸಿಕ ಜಾಗಗಳೇನೂ ಎಂಬಂತೆ ಒಬ್ಬ ಮಹಾನ್ ಕವಿಯೂಡನೆ ಹೇಗೆಲ್ಲಾ ಗುರುತಿಸಿಕೊಂಡು ಬಿಂಬಿತವಾಗುತ್ತವೆ ಎಂಬುದನ್ನು ತುಂಬ ಖುಷಿಯಾಗಿ ಓದಿಸಿಕೊಂಡು ಸ್ವಲ್ಪ ಅಡಿಗರ ಬಗ್ಗೆ ನನ್ನ ಮನದಲ್ಲಿ "ಅಡಿಗೆರೆ" ಎಳೆಯುವಂತಾಯಿತು.


ಆ ದಿನಮಾನದಲ್ಲಿ ಅಂಥವರ ಒಡನಾಟವನ್ನು ಅನುಭವಿಸಿದ ಈ ಎಲ್ಲಾ ಶಿಷ್ಯೊತ್ತಮರು ಅವರ ಸಕಾಲೀಕ ಮಾರ್ಗದರ್ಶನದಿಂದ ಇಂದು ಪ್ರಸಿದ್ಧ ಉತ್ತಮ ಕನ್ನಡ ಸಾಹಿತಿಗಳಾಗಿದ್ದಾರೆ ಎಂದರೇ ಅವರ ಪ್ರಭಾವ ಎಷ್ಟು ಇತ್ತು ಎಂಬುದು ನಮ್ಮ ಅರಿವಿಗೆ ಬರುವುದು. ಅಂದು ಈ ರೀತಿಯ ಗುರುಗಳು ಕಾಲೇಜುಗಳಲ್ಲಿ ಇದ್ದರು ಎಂದರೆ ನನಗೆ ಈಗ ಹೊಟ್ಟೆ ಕಿಚ್ಚು ಬರುತ್ತದೆ. ಏನೇ ಹೇಳಲಿ ಆ ದಿನಗಳಲ್ಲಿ ಅವರ ಸಂಪರ್ಕವನ್ನು ಹೊಂದಿದ ಎಲ್ಲಾ ಕನ್ನಡಪ್ರಿಯರು ಧನ್ಯರು.


ಈ ಪುಸ್ತಕ ಅಡಿಗರನ್ನು, ಅವರ ಜೀವನ ಪ್ರೀತಿಯನ್ನು, ಮಾನವೀಯತೆಯನ್ನು, ಸಾಮಾಜಿಕ ಕಳಕಳಿ, ದೇಶ ಪ್ರೇಮ, ಕನ್ನಡದ ಬಗ್ಗೆ ಇರುವ ದೋರಣೆಯನ್ನು, ಅವರಲ್ಲಿರುವ ತಿಳಿ ಹಾಸ್ಯ ಪ್ರಜ್ಞೆ ಮತ್ತು ಕಿರಿಯರ ಬಗ್ಗೆ ಇರುವ ಕಾಳಜಿಯನ್ನು ಹಲವಾರು ನಿದರ್ಶನಗಳ ಮೂಲಕ ತಿಳಿಯುವಂತಾಗುತ್ತದೆ. ಅವರ ಒಂದೊಂದು ಕಾವ್ಯಗಳು ಕನ್ನಡದಲ್ಲಿನ ಒಂದೊಂದು ರತ್ನಗಳೇ ಸರಿ. ಕನ್ನಡ ಸಾಹಿತ್ಯ ಲೋಕ ಇರುವವರೆಗೂ ಅವರ ಕೊಡುಗೆ ಇರುತ್ತದೆ ಮತ್ತು ಅವರ ಹೆಸರನ್ನು ಕನ್ನಡ ಪ್ರೇಮಿಗಳು ನೆನಪಿಸಿಕೊಳ್ಳುವವರು.
ನಮಗೆ ಯಾವಾಗಲೂ ನೆನಪಿಗೆ ಬರುವುದು ದೊಡ್ಡ ದೊಡ್ಡ ಪ್ರಶಸ್ತಿ, ಬಿರುದಾವಳಿಗಳನ್ನು ಪಡೆದವರು ಮಾತ್ರ. ಪ್ರಶಸ್ತಿ ಪ್ರಸಿದ್ಧಿಯ ಅಬ್ಬರವಿಲ್ಲದೆ ತಮ್ಮ ನೇರವಂತಿಕೆಯಿಂದ ಸುತ್ತಲಿನ ಇಡೀ ಒಂದು ಸಮೂಹವನ್ನು ಮಂತ್ರ ಮುಗ್ಧರನ್ನಾಗಿ ಮಾಡಿ ತಮ್ಮತ್ತಾ ಸೆಳೆದ ಅಡಿಗರ ಶಕ್ತಿಯನ್ನು ವರ್ಣಿಸಲು ಅಸಾಧ್ಯ.


ಈ ಹೊತ್ತಿಗೆ ನನಗೆ ಪುನಃ ಅವರ ಕವನ ಸಂಕಲನಗಳಾದ ಚಂಡೆ ಮದ್ದಾಳೆ, ಭಾವತರಂಗ, ಕಟ್ಟುವೆವು ನಾವು, ಭೂಮಿಗೀತ ಇತ್ಯಾದಿ ಓದುವಂತೆ ಪ್ರೇರಪಿಸಿತು ಎಂದರೇ ಅತಿಶಯೋಕ್ತಿಯಲ್ಲ.


ನಾವುಗಳು ನಾವು ಮೆಚ್ಚಿ ಓದುವ ಕೃತಿ ಕತೃವಿನ ಬಗ್ಗೆ ಅವರ ದಿನ ನಿತ್ಯದ ಖಾಸಗಿ ಜೀವನದ ಬಗ್ಗೆ ತುಂಬ ಕುತೂಹಲವನ್ನು ಹೊಂದಿರುತ್ತೇವೆ. ಅವರ ನಡಾವಳಿ, ಅವರು ಮನೆಯಲ್ಲಿ ತಮ್ಮ ಮಡದಿ ಮತ್ತು ಮಕ್ಕಳೊಂದಿಗೆ ಹೇಗೆ ಇರುವವರು ಎಂದು ತಿಳಿಯುವ ಆಸೆ ಬಲವಾಗಿರುವುದು. ಇದಕ್ಕೆ ಪೂರಕವಾಗಿದೆಯೇನೂ ಎಂಬಂತೆ, ಅಡಿಗರ ಮಕ್ಕಳಾದ ವಿದ್ಯಾಕೃಷ್ಣರಾಜ, ಅಂಜನಾರವರ ಲೇಖನಗಳು ಅಡಿಗರ ಇನ್ನೊಂದು ಅರ್ದ್ರ ಮುಖವನ್ನು ದರ್ಪಣ ಮಾಡಿರುವುದು ತುಂಬ ಮೆಚ್ಚುವಂತದ್ದು.


ನವ್ಯಕ್ಕೆ ಅಡಿಗಲ್ಲು ಇಟ್ಟ ಈ ಮಹಾನ್ ವ್ಯಕ್ತಿಯ ಬಗ್ಗೆ ಎಷ್ಟು ಓದಿದರೂ ಇನ್ನೂ ಓದಬೇಕು ಎನಿಸದೇ ಇರಲಾರದು. ಇಂದು ಈ ರೀತಿಯ ವ್ಯಕ್ತಿಗಳು ಕನ್ನಡ ನೆಲದ ಮೇಲೆ ಓಡಾದಿದ್ದಾರೆ ಎಂದರೇ ನಂಬಲಾರದಂತ ಸ್ಥಿತಿ ಇಂದು ನಿರ್ಮಿತವಾಗಿದೆ. ಅಂಥ ಒಳ್ಳೆಯ ಶಿಕ್ಷಕರು, ಶಿಕ್ಷಣ ಸಂಸ್ಥೆಗಳು, ಸ್ನೇಹ ಕೂಟ ಇಂದಿನ ದಿನಮಾನದಲ್ಲಿ ಕಲ್ಪನೆಗೂ ನಿಲುಕಲಾರದು ಅಲ್ಲವಾ?